ಚಾಮರಾಜನಗರ : ಕದಳಿ ಮಹಿಳಾ ವೇದಿಕೆ ವತಿಯಿಂದ ರಾಮಸಮುದ್ರ ಬಡಾವಣೆಯ ಬಡವಿದ್ಯಾರ್ಥಿ ಪುನೀತ್ ರಾಜು ಓದಿಗೆ ಧನ ಸಹಾಯ ಮಾಡಲಾಯಿತು.
ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆಯ ಸಭೆಯಲ್ಲಿ ವಿದ್ಯಾರ್ಥಿಯ ಪೋಷಕರು ಮಗನ ಓದಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ರೋಟರಿ ಸಂಸ್ಥೆಯ ಸಹಕಾರದಲ್ಲಿ ಕದಳಿ ಮಹಿಳಾ ವೇದಿಕೆಯು ವಿದ್ಯಾರ್ಥಿಯ ಓದಿಗೆ ಧನಸಹಾಯ ಮಾಡಿತು.
ಧನ ಸಹಾಯ ಮಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಸಂತಮ್ಮ ನಂಜುಂಡಸ್ವಾಮಿ ಮಾತನಾಡಿ, ನಮ್ಮ ವೇದಿಕೆಯ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದ್ದು, ಅದರಂತೆ ವಿದ್ಯಾರ್ಥಿ ಪುನೀತ್ ರಾಜು ಓದಿಗೆ ಧನ ಸಹಾಯ ಮಾಡಲಾಗಿದೆ ಎಂದರು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಕದಳಿ ಮಹಿಳಾ ವೇದಿಕೆಯು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದ ಅದೇ ರೀತಿಯಲ್ಲಿ ರೋಟರಿ ಮನವಿ ಸ್ಪಂದಿಸಿ ಬಡವಿದ್ಯಾರ್ಥಿ ಓದಿಗೆ ಸಹಾಯ ಮಾಡಿರುವುದು ತುಂಬಾ ಸಂತಸವಾಗಿದ್ದು ಮುಂದಿನ ದಿನಗಳಲ್ಲೂ ನಮ್ಮ ಸಂಸ್ಥೆ ಗೆ ಇದೇ ರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿ, ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು, ರೋಟರಿ ಸಂಸ್ಥೆಯ
ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಆರ್.ಎಂ.ಸ್ವಾಮಿ, ಪಿಡಿಜಿ ಡಾ.ನಾಗರಾಜ ಪದಾಧಿಕಾರಿಗಳು ಹಾಜರಿದ್ದರು.