ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡಿ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವ ಸಲುವಾಗಿ ಕಲಾಪ್ರತಿಭೋತ್ಸವವನ್ನು ಏರ್ಪಡಿಸಲಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಬಾಲ ಪ್ರತಿಭೆ/ಕಿಶೋರ ಪ್ರತಿಭೆ ವಿಭಾಗದಲ್ಲಿ ಏಕ ವ್ಯಕ್ತಿ ಸ್ಪರ್ಧೆಯ ಕಲಾ ಪ್ರಕಾರಗಳಿವೆ. ಶಾಸ್ತ್ರೀಯ ನೃತ್ಯ (10 ನಿಮಿಷ), ಚಿತ್ರಕಲೆ (120 ನಿಮಿಷ) ಹಾಗೂ ಸುಗಮ ಸಂಗೀತ, ಜನಪದ ಗೀತೆ, ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ (7 ನಿಮಿಷ) ಸ್ಪರ್ಧೆಗಳಿವೆ.
ಯುವ ಪ್ರತಿಭೆ ಸ್ಪರ್ಧೆ ವಿಭಾಗದಲ್ಲಿ ಏಕ ವ್ಯಕ್ತಿಯ ಕಲಾ ಪ್ರಕಾರಗಳಿವೆ. ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ), ಸುಗಮ ಸಂಗೀತ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತಗಳಿಗೆ (7 ನಿಮಿಷ) ಹಾಗೂ ಶಾಸ್ತ್ರೀಯ ನೃತ್ಯ (10 ನಿಮಿಷ), ಚಿತ್ರಕಲೆ (120 ನಿಮಿಷ) ಸ್ಪರ್ಧೆಗಳಿವೆ. ಯುವ ಪ್ರತಿಭೆ ವಿಭಾಗದಲ್ಲಿ ಸಮೂಹ ಸ್ಪರ್ಧೆಯಿದ್ದು, ನಾಟಕ (45 ನಿಮಿಷ) ಕಲಾ ಪ್ರಕಾರಕ್ಕೆ ಅವಕಾಶವಿದೆ.
ಬಾಲ ಪ್ರತಿಭೆ ವಿಭಾಗದ ಸ್ಪರ್ಧೆಗೆ 8 ವರ್ಷ ತುಂಬಿರಬೇಕು ಹಾಗೂ 14 ವರ್ಷದೊಳಗಿರಬೇಕು. ಕಿಶೋರ ಪ್ರತಿಭೆ ವಿಭಾಗದ ಸ್ಪರ್ಧೆಗೆ 14 ವರ್ಷ ತುಂಬಿರಬೇಕು ಹಾಗೂ 18 ವರ್ಷದೊಳಗಿರಬೇಕು. ಯುವ ಪ್ರತಿಭೆ ವಿಭಾಗದ ಸ್ಪರ್ಧೆಗೆ 18 ವರ್ಷ ತುಂಬಿರಬೇಕು ಹಾಗೂ 30 ವರ್ಷಕ್ಕಿಂತ ಕಡಿಮೆ ಇರಬೇಕು. ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರನ್ನು ವಲಯಮಟ್ಟಕ್ಕೆ ಕಳುಹಿಸಿ ಕೊಡಲಾಗುವುದು. ವಲಯಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು. (ಜಿಲ್ಲಾ ಮತ್ತು ವಲಯಮಟ್ಟದಲ್ಲಿ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ, ವಲಯ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸುವವರಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುವುದು).
ಜಿಲ್ಲಾಮಟ್ಟದ ಸ್ಪರ್ಧೆ ನಡೆಯುವ ದಿನಾಂಕವನ್ನು ತಿಳಿಸಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ವಯಸ್ಸಿನ ದೃಢೀಕರಣಕ್ಕಾಗಿ ದಾಖಲೆಗಳನ್ನು ತಾವು ವ್ಯಾಸಂಗ ಮಾಡುತ್ತಿರುವ ವಿದ್ಯಾ ಸಂಸ್ಥೆಯಿಂದ ಪಡೆದು ಅರ್ಜಿಯ ಜೊತೆಗೆ ಲಗತ್ತಿಸಬೇಕು. ಅರ್ಜಿಗೆ ನಿಗದಿತ ನಮೂನೆ ಇರುವುದಿಲ್ಲ, ಬಿಳಿ ಹಾಳೆಯಲ್ಲಿ ಸ್ವವಿವರಗಳನ್ನು ಬರೆದಿರಬೇಕು. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.
ಚಿತ್ರಕಲಾ ಸ್ಪರ್ಧಿಗಳು ಬೇಕಾದ ಬಣ್ಣ ಇತ್ಯಾದಿಗಳನ್ನು ತಾವೆ ತರಬೇಕು. ನೃತ್ಯ ಪ್ರದರ್ಶನವನ್ನು ಲೈವ್ ಅಥವಾ ರೆಕಾರ್ಡ್ ಮೂಲಕ ಪ್ರದರ್ಶಿಸಬಹುದು. (ಪೆನ್ ಡೈವ್ ಅಥವಾ ಸಿ.ಡಿ.ಯನ್ನು ತಾವೇ ತರಬೇಕು. ಮೊಬೈಲ್ ಗೆ ಜಾಕ್ ಸೌಲಭ್ಯವನ್ನು ಒದಗಿಸಲಾಗುವುದು). ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಒಬ್ಬರಿಗೆ ಒಂದು ಕಲಾ ಪ್ರಕಾರದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ. ಶಾಲಾ ಮುಖ್ಯಸ್ಥರು ತಮ್ಮ ಶಾಲಾ ಮೂಲಕ ಸ್ಪರ್ಧಿಗಳು ಅರ್ಜಿ ಸಲ್ಲಿಸುವಾಗ ಪ್ರತಿ ಪ್ರಕಾರ (ಸಂಗೀತ, ನೃತ್ಯ ಇತರೆ) ಹಾಗೂ ಪ್ರತಿ ವಿಭಾಗದ ಸ್ಪರ್ಧಿಗಳ ಜನ್ಮ ದಿನಾಂಕವನ್ನು ದೃಢೀಕರಿಸಿ, ಪಟ್ಟಿಯನ್ನು ಪ್ರತ್ಯೇಕವಾಗಿ ಕಳುಹಿಸಬೇಕು.
ಖಾಸಗಿ ಸ್ಪರ್ಧಿಯಾಗಿದ್ದಲ್ಲಿ ಶಾಲಾ ಕಾಲೇಜಿನ ಜನ್ಮ ದಿನಾಂಕ ದೃಢೀಕರಣ ಪತ್ರ ಅಥವಾ ಪಂಚಾಯಿತಿ, ಪುರಸಭೆ, ನಗರಸಭೆಗಳಿಂದ ನೀಡುವ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ರಾಜ್ಯಮಟ್ಟದ ಸ್ಪರ್ಧಿಗಳಲ್ಲಿ ಪ್ರತಿ ಪ್ರಕಾರದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನವಾಗಿ ತಲಾ 15 ಸಾವಿರ, 10 ಸಾವಿರ, 7500 ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಯುವ ಪ್ರತಿಭೆ ಸ್ಪರ್ಧೆಯ ಸಮೂಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಇರಬೇಕು ಮತ್ತು ಗರಿಷ್ಠ 15 ಅನ್ನು ಮೀರಬಾರದು. ರಾಜ್ಯಮಟ್ಟದ ಅಂತಿಮ ಸಮೂಹ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ (ತಂಡಕ್ಕೆ) ಕ್ರಮವಾಗಿ 50 ಸಾವಿರ, 40 ಸಾವಿರ ಹಾಗೂ 30 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಸ್ಪರ್ಧೇಗಳಿಗೆ ಭಾಗವಹಿಸುವವರು ಅರ್ಜಿಯನ್ನು ನವೆಂಬರ್ 3ರ ಸಂಜೆ 5 ಗಂಟೆಯೊಳಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಹಾಯಕ ನಿರ್ದೇಶಕರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ 08226-222210 ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.