- ರಾಷ್ಟ್ರೀಯ ಹೆದ್ದಾರಿ ತಡೆದು ಖಾಲಿಡಬ್ಬ ಪ್ರದರ್ಶಿಸಿ ಅಕ್ರೋಶ
- ಖಾಲಿ ಡಬ್ಬ ರಾಜ್ಯ ಸರ್ಕಾರ : ಶ್ರೀನಿವಾಸಗೌಡ ಆರೋಪ
ಚಾಮರಾಜನಗರ: ರಾಜ್ಯ ಸರ್ಕಾರ ಬಜೆಟ್ನಲ್ಲಿ ಚಾಮರಾಜನಗರ ತಾಲೂಕು, ಜಿಲ್ಲೆಯನ್ನು ಕಡೆಗಣಿಸಿದೆ ಎಂದು ಆರೋಪಿಸಿ ಕರ್ನಾಟಕ ಸೇನಾಪಡೆಯು ನಗರದಲ್ಲಿ ಖಾಲಿಡಬ್ಬ ಹಿಡಿದು ಪ್ರದರ್ಶಿಸುವ ಮೂಲಕ ರಾಜ್ಯ ಬಜೆಟ್ ಖಾಲಿಡಬ್ಬ ಎಂದು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ರಾಜ್ಯ ಬಜೆಟ್ ನಿಂದ ಚಾಮರಾಜನಗರಕ್ಕೆ ಶೂನ್ಯ. ಖಾಲಿ ಡಬ್ಬ ಬಜೆಟ್, ಚಾಮರಾಜನಗರ ಕಡೆಗಣಿಸಿರುವ ಬಜೆಟ್ ಗೆ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರದ ಈ ಸಾಲಿನಲ್ಲಿ ಬಜೆಟ್ನಲ್ಲಿ ಚಾಮರಾಜನಗರ ತಾಲೂಕು, ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿ ಜಿಲ್ಲೆಗೆ ಅನ್ಯಾಯ ಮಾಡಿದೆ ಎಂದರು ಆರೋಪಿಸಿದರು.
ರಾಜ್ಯ ಬಜೆಟ್ನಲ್ಲಿ ಚಾಮರಾಜನಗರ ಜಿಲ್ಲೆ ಕಡೆಗಣಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ಬಜೆಟ್ ಖಾಲಿಡಬ್ಬ ಎಂದು ಆರೋಪಿಸಿ ಇಂದು ಖಾಲಿಡಬ್ಬ ಪ್ರದರ್ಶಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತೆತ್ತಿದ್ದರೆ’ ಚಾಮರಾಜನಗರ ಎನ್ನುತ್ತಾರೆ. ಆದರೆ ಚಾಮರಾಜನಗರಕ್ಕೆ ಯಾವುದೇ ಅನುದಾನವನ್ನು ಬಜೆಟ್ನಲ್ಲಿ ಕೊಟ್ಟಿಲ್ಲ. ಜಿಲ್ಲೆಗೆ ಸೊನ್ನೆ ಕೊಟ್ಟಿದ್ದಾರೆ. ಎಂದು ಆರೋಪಿಸಿದರು.
ನಾಡಿನ ವಿಚಾರದಲ್ಲೂ ಅನ್ಯಾಯ ಮಾಡಿದೆ. ಮೇಕೆದಾಟು `ಯೋಜನೆ ಮಾಡುವುದಾಗಿ ಪಾದಯಾತ್ರೆ ಮಾಡಿದ್ದೀರಿ. ಅದರ ಬಗ್ಗೆ ಬಜೆಟ್ನಲ್ಲಿ ಧ್ವನಿ ಎತ್ತಿಲ್ಲ. ನಿಮಗೆ ನಾಚಿಕೆ ಆಗಬೇಕು. ನೀರಿನ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದ ನೀವು ರಾಜ್ಯಕ್ಕೆ ದ್ರೋಹ ಮಾಡಿದ್ದೀರಿ ಎಂದು ಕಿಡಿಕಾರಿದರು.
ಪ್ರತಿಭಟನೆ ಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದ, ಮುತ್ತು, ಮುತ್ತಿಗೆ ಗೋವಿಂದರಾಜ, ರಾಚಪ್ಪ, ತಾಲಕಾಡು ಮಹದೇವು, ಅಮಚವಾಡಿ ರಾಜು, ಆಟೋ ಲಿಂಗರಾಜು, ಬಸವರಾಜು, ತಾಂಡವಮೂರ್ತಿ, ಜಗದೀಶ್, ಚಂದ್ರು ಹಾಜರಿದ್ದರು.