ನಗರದ ಕಾನೂನು ಕಾಲೇಜು ಕಟ್ಟಡಕ್ಕೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಭೇಟಿ : ಪರಿಶೀಲನೆ

ಚಾಮರಾಜನಗರ: ಚಾಮರಾಜನಗರದ ಸರ್ಕಾರಿ ಕಾನೂನು ಕಾಲೇಜಿಗೆ ಪ್ರಸಕ್ತ ಸಾಲಿನಿಂದಲೇ ಮೂರು ವರ್ಷಗಳ ಎಲ್.ಎಲ್.ಬಿ ಪದವಿ ಕೋರ್ಸ್ ಪ್ರವೇಶಕ್ಕೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಇಂದು ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಕಾಲೇಜಿಗೆ ಭೇಟಿ ನೀಡಿದ ಲೋಕಸಭಾ ಸದಸ್ಯರು ಕಾಲೇಜಿನಲ್ಲಿರುವ ಕೊಠಡಿಗಳು, ಲಭ್ಯವಿರುವ ಪೀಠೋಪಕರಣಗಳನ್ನು ವೀಕ್ಷಿಸಿದರು. 

ಗ್ರಂಥಾಲಯ, ಪುಸ್ತಕಗಳನ್ನು ಇಡಲು ಕಪಾಟು, ಇನ್ನೂ ಬೇಕಿರುವ ಪೀಠೋಪಕರಣಗಳು, ಕುಡಿಯುವ ನೀರು, ಇತರೆ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.  

ಕಾಲೇಜಿಗೆ ಇನ್ನೂ ಅಗತ್ಯವಿರುವ ಸೌಲಭ್ಯಗಳು, ಶೌಚಾಲಯ, ಕಟ್ಟಡ ಮೇಲ್ಚಾವಣಿ ದುರಸ್ತಿ ಹಾಗೂ ಪ್ರಸ್ತುತ ಕಟ್ಟಡಕ್ಕೆ ಆಗಬೇಕಿರುವ ಇತರೆ ಸೌಕರ್ಯಗಳ ಬಗ್ಗೆ ಕಾಲೇಜು ಪ್ರಾಂಶುಪಾಲರಾದ ಕೆ.ಎಸ್. ಲಲಿತಾ ಬಾಯಿ ಅವರಿಂದ ಮಾಹಿತಿ ಪಡೆದರು.  

ಇದೇ ವೇಳೆ ಗ್ರಂಥಾಲಯ ಪುಸ್ತಕಗಳು, ಶುದ್ದ ಕುಡಿಯುವ ನೀರು ಸಂಬಂಧ ಅಗತ್ಯವಿರುವ ಅನುದಾನದ ನೆರವು ನೀಡಲಾಗುವುದೆಂದು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ತಿಳಿಸಿದರು. 

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಕಾಲೇಜು ಕಟ್ಟಡಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಲೋಕಸಭಾ ಸದಸ್ಯರು ಚರ್ಚಿಸಿದರು. 

ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುನೀಲ್ ಬೋಸ್ ಅವರು ಎಲ್ಲರ ಪರಿಶ್ರಮದ ಪ್ರಯತ್ನದ ಫಲವಾಗಿ ಜಿಲ್ಲೆಗೆ ಕಾನೂನು ಕಾಲೇಜಿಗೆ ಅನುಮೋದನೆ ದೊರೆತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ಪದವಿ ಅಧ್ಯಯನ ಮಾಡಲು ಬೇರೆ ಕಡೆ ಹೋಗಬೇಕಿತ್ತು. ಜಿಲ್ಲೆಯಲ್ಲಿಯೇ ಕಾನೂನು ಕಾಲೇಜಿಗೆ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಇತರರು ಈ ಸಂದರ್ಭದಲ್ಲಿ ಇದ್ದರು. 

ಇದಾದ ಬಳಿಕ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

Leave a Reply

Your email address will not be published. Required fields are marked *