ಚಾಮರಾಜನಗರ; ಜಿಲ್ಲಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ಅದ್ಧೂರಿಯಾಗಿದ್ದು ಶಿವ ದೇವಸ್ಥಾನಗಳಲ್ಲಿ ಭಕ್ತರ ಸಾಗರವೇ ಕಂಡು ಬರುತ್ತಿದೆ.
ಬೆಳಗ್ಗೆಯಿಂದ ಶಿವನ ದೇವಸ್ಥಾನಗಳಲ್ಲಿ ಅಭಿಷೇಕ, ರುದ್ರಾಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರುತ್ತಿವೆ. ಶಿವನಾಮ ಸ್ಮರಣೆಯೊಂದಿಗೆ ಜಿಲ್ಲೆಯ ಪ್ರಮುಖ ಶಿವನ ದೇವಸ್ಥಾನಗಳು ಕೂಡ ಜನರಿಂದ ತುಂಬಿ ಹೋಗಿವೆ. ಜಿಲ್ಲೆಯ ಮಲೈಮಹದೇಶ್ವರ ಬೆಟ್ಟ, ನಗರದ ಚಾಮರಾಜೇಶ್ವರ ದೇವಸ್ಥಾನ ಸೇರಿದಂತೆ ಇತರ ಕಡೆಗಳಲ್ಲಿ ಬೆಳಗ್ಗೆಯಿಂದ ಜನ ಸರತಿ ಸಾಲಿನಲ್ಲಿ ನಿಂತು ಶಿವನ ಆರಾಧನೆಯಲ್ಲಿ ತೊಡಗಿದ್ದಾರೆ.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ಹಸಿರುತೋರಣಗಳಿಂದ ಅಲಂಕರಿಸಲಾಗಿದ್ದು, ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆಯಿಂದಲ್ಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪರಶಿವನ ದರ್ಶನ ಪಡೆಯುತ್ತಿದ್ದಾರೆ.

ದೇವಸ್ಥಾನದಲ್ಲಿ ಶ್ರೀಸಹಸ್ರ ಲಿಂಗೇಶ್ವರಸ್ವಾಮಿ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ ನೆರವೇರಿಸಿ ಸುಗಂಧ ದ್ರವ್ಯದಿಂದ ಅಲಂಕಾರ ಮಾಡಲಾಗಿದ್ದು ಗಮನ ಸೆಳೆಯುತ್ತಿದೆ. ಭಕ್ತರು ದರ್ಶನ ಪಡೆದು ಪುನೀತರಾದರು.
ದೇವಸ್ಥಾನ ಆರ್ಚಕ ರಾಮಕೃಷ್ಣ ಭಾರದ್ವಾಜ್ ಮಾತನಾಡಿ, ಪ್ರತಿವರ್ಷ ಮಹಾಶಿವರಾತ್ರಿಯಲ್ಲಿ ಶ್ರೀಸಹಸ್ರ ಲಿಂಗೇಶ್ವರಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗುತ್ತಿತ್ತು ಈ ಬಾರಿಯಲ್ಲಿ ಸ್ವಾಮಿಗೆ ಬೆಳಿಗ್ಗೆ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕವಾಗಿ ಸುಗಂಧದ್ರವ್ಯದಿಂದ ಅಲಂಕಾರ ಮಾಡಲಾಗಿದೆ.ಇದು ವಿಶೇಷವಾದ ಅಲಂಕಾರವಾಗಿದೆ ಎಂದರು.