ಪ್ರವಾಸೋದ್ಯಮ, ಗಣಿಗಾರಿಕೆ ಸ್ಥಳಿತಗೊಳಿಸದಿದ್ದರೆ ವಿಧಾನಸೌಧಕ್ಕೆ ಕಾಡಾಪ್ರಾಣಿಗಳೊಂದಿಗೆ ಮುತ್ತಿಗೆ ಎಚ್ಚರಿಕೆ ಚಾಮರಾಜನಗರ :ಅರಣ್ಯದೊಳಗೆ ಪ್ರವಾಸೋದ್ಯಮ ಸ್ಥಳಿತಗೊಳಿಸಿ ಕೃಷಿ ಪ್ರವಾಸೋದ್ಯಮ ಮಾಡುವ ಮೂಲಕ ರೈತರಿಗೆ ಲಾಭ ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ವಿಶ್ವ ರೈತ ಸಂಘಟನೆಯ ಸದಸ್ಯರು ಹಾಗೂ ಪಾರಂಪರಿಕ ನಾಟಿ ವೈದ್ಯರಾದ ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರೈತರ ತೋಟವೇ ಒಂದು ವಿಶ್ವವಿದ್ಯಾನಿಲಯವಾಗಿದ್ದು ಅಲ್ಲಿ ಹೊಸ ಅನ್ವೇಷಣೆ ಆಗಬೇಕು. ಹಣ್ಣು, ತರಕಾರಿ, ಸಿರಿಧಾನ್ಯ ಬಗ್ಗೆ ಅರಿವು ಮೂಡಿಸಬೇಕು. ಅದನ್ನು ಬಿಟ್ಟು ಕಾಡಿನೊಳಗೆ, ಕಾಡಿನ ಸಮೀಪದಲ್ಲಿ ರೆಸಾರ್ಟ್ ಮಾಡಿ ಮೋಜು, ಮಸ್ತಿ ಮಾಡುವುದರಿಂದ ಕಾಡುಪ್ರಾಣಿಗಳಿಗೆ ತೊಂದರೆ ಉಂಟಾಗಿ ಅವು ನಾಡಿನತ್ತ ಬರುತ್ತಿವೆ. ವೀರಪ್ಪನ್ ಇದ್ದಂತಹ ಸಂದರ್ಭದಲ್ಲಿ ಒಂದು ಕಾಡುಪ್ರಾಣಿಗಳು ನಾಡಿನತ್ತ ಸುಳಿಯುತ್ತಿರಲಿಲ್ಲ. ಕಾಡುಪ್ರಾಣಿಗಳು ರಕ್ಷಣೆಗೆ ಇತ್ತು. ಆಗಾಗಿ ಕಾಡಿನೊಳಗೆ ರೆಸಾರ್ಟ್ ಮಾಡುವುದು ಬೇಡ. ಅನ್ನದಾತರ ಹೊಲದಲ್ಲಿ ಪ್ರವಾಸೋದ್ಯಮ ಮಾಡುವ ಮೂಲಕ ರೈತರಿಗೆ ಲಾಭ ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಉಪಟಳ ವಿಪರೀತವಾಗಿದ್ದು, ಪ್ರಾಣಿ-ಮಾನವ ಸಂಘರ್ಷ ಎದುರಾಗಿದ್ದು, ಜನ, ಜಾನುವಾರು ಪ್ರಾಣ ಕಳೆದುಕೊಂಡಿದ್ದಾರೆ. ಬೇಕಾದಷ್ಟು ರೈತರು ಬೆಳೆ ಬೆಳೆಯ ಆಗಿಲ್ಲ. ಕಾಡುಪ್ರಾಣಿ ಭಯದಿಂದ ಜನರು ತಮ್ಮ ಜಮೀನು ತೋಟಗಳಿಗೆ ಹೋಗಲು ಆಗುತ್ತಿಲ್ಲ. ಜಿಲ್ಲೆಗೆ ಅರಣ್ಯ ಸಚಿವರು, ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆದರೂ ಕೂಡ ಸರ್ಕಾರಗಳು ಇದನ್ನು ತಡೆಗಟ್ಟುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಕೂಡಲೇ ಪ್ರವಾಸೋದ್ಯಮ ಇಲಾಖೆ ಕಾಡಿನೊಳಗೆ ಪ್ರವಾಸೋದ್ಯಮ ನಿಲ್ಲಿಸಬೇಕು. ರೆಸಾರ್ಟ್ ನಿಲ್ಲಿಸಬೇಕು, ಗಣಿಗಾರಿಕೆ ನಿಲ್ಲಿಸಬೇಕು. ಆಗ ಮಾತ್ರ ಕಾಡುಪ್ರಾಣಿಗಳು ಅರಣ್ಯದಲ್ಲಿ ನೆಮ್ಮದಿಯಾಗಿ ಇರುತ್ತವೆ. ಇದರ ಬಗ್ಗೆ ಅರಣ್ಯ ಸಚಿವರು, ಮುಖ್ಯಮಂತ್ರಿಗಳು ಗಮನಹರಿಸಬೇಕು. ಇಲ್ಲದಿದ್ದರೆ ಕಾಡುಪ್ರಾಣಿಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಕೂಡಲೇ ಹಸಿಕಡ್ಲೆ ಖರೀದಿ ಕೇಂದ್ರ ತೆರಯಲು ಆಗ್ರಹ: ಹಸಿಕಡ್ಲೆ ಖರೀದಿ ಕೇಂದ್ರವನ್ನು ಗ್ರಾಮ ಮಟ್ಟದಲ್ಲಿ ಈ ಕೂಡಲೇ ತೆರೆದು ದಳ್ಳಾಳಿಗಳು ಹಾವಳಿ ನಿಲ್ಲಿಸಬೇಕು. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಹಸಿಕಡ್ಲೆ ಗೆ 5875 ರೂ ಬೆಂಬಲ ಬೆಲೆ ನೀಡಿದ್ದು, ರಾಜ್ಯ ಸರ್ಕಾರವು ಕೂಡ ಕನಿಷ್ಠ 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ಜನರಿಗೆ ಮಾರಕವಾಗಿರುವ ಡೆಡ್ಲಿ ಆನ್ ಲೈನ್ ಗೇಮ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಹದೇವಸ್ವಾಮಿ ಹಾಜರಿದ್ದರು.