ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ : ಪುಟ್ಟರಂಗಶೆಟ್ಟಿ
ಚಾಮರಾಜನಗರ: ತಾಲೂಕಿನ ಬಂದಿಗೌಡನಹಳ್ಳಿ ಗ್ರಾಮದ ಅನೇಕ ಮುಖಂಡರು ಬಿಜೆಪಿ ತೊರೆದು ಶಾಸಕ ಪುಟ್ಟರಂಗಶೆಟ್ಟಿ ಸಮ್ಮುಖದಲ್ಲಿ ಕಾಂಗ್ರೆಸ್ಕ್ಕೆ ಸೇರ್ಪಡೆಯಾದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಅವರು ಪಕ್ಷದ ಶಾಲ್ಯ ಹಾಕಿ ಮುಖಂಡರನ್ನು ಸ್ವಾಗತಿಸಿದರು.
ಗ್ರಾಮದ ಮುಖಂಡರಾದ ಸೋಮಶೇಖರ್, ಎನ್. ಮಲ್ಲೇಶ್, ಮಂಜುನಾಥ್, ಮಹೇಶ್, ಆನಂದ, ಬಿ.ಎಂ. ಮಲ್ಲೇಶ್, ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಎಲ್ಲಾ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಬಿಜೆಪಿ ಕೇವಲ ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವ ಮೂಲಕ ಗ್ರಾಮ ಹಾಗೂ ದೇಶದಲ್ಲಿ ಗೊಂದಲ ಮಾಡುತ್ತಾರೆ. ಆದರೆ, ಕಾಂಗ್ರೆಸ್ ತತ್ವ ಸಿದ್ದಾಂತಗಳೊಂದಿಗೆ ಕಳೆದ 75 ವರ್ಷಗಳಿಂದ ರಾಜಕಾರಣ ಮಾಡುತ್ತಿದೆ. ದೀನ ದಲಿತರು, ಬಡವರು ಹಾಗೂ ಎಲ್ಲಾ ವರ್ಗವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಹೋರಾಟ ಮಾಡಿದ ಪಕ್ಷವಾಗಿದೆ ಎಂದರು.
ನೀವೆಲ್ಲರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೀರಿ. ನಿಮ್ಮ ಗ್ರಾಮದ ಸಮಸ್ಯೆಗಳಿದ್ದರೆ ನೇರವಾಗಿ ನನಗೆ ತಿಳಿಸಿ. ಇಲ್ಲವೇ ನಿಮ್ಮ ಗ್ರಾಮದ ಮುಖಂಡರಾದ ಬಿ.ಕೆ. ರವಿಕುಮಾರ್ ಅವರಿಗೆ ಹೇಳಿ. ಈಗಾಗಲೇ ಬಂದಿಗೌಡನಹಳ್ಳಿ ಗ್ರಾಮಕ್ಕೆ ಹೆಚ್ಚಿನ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದೇವೆ. ಸಮುದಾಯ ಭವನ ನಿರ್ಮಾಣ, ರಸ್ತೆಗಳ ಅಭಿವೃದ್ದಿ, ಸೇತುವೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇವೆ. ತಾವೆಲ್ಲರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲವನ್ನು ನೀಡಿ, ನಮ್ಮ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಕಾಂಗ್ರೆಸ್ ಸೇರ್ಪಡೆಯಾದ ಗ್ರಾಮದ ಮುಖಂಡರನ್ನು ಸ್ವಾಗತಿಸಿ ಮಾತನಾಡಿ, ಕಾಂಗ್ರೆಸ್ ಸಮುದ್ರ ಇದ್ದಂತೆ, ಎಲ್ಲರಿಗೂ ಅವಕಾಶಗಳು ದೊರೆಯುತ್ತವೆ. ತಾಳ್ಮೆಯಿಂದ ಕಾಯಬೇಕು. ಕಾಂಗ್ರೆಸ್ದಲ್ಲಿ ತಾ.ಪಂ. ಅಧ್ಯಕ್ಷನಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಅನೇಕ ಹುದ್ದೆಯಲ್ಲಿದ್ದು, ಪಕ್ಷದ ಸಂಘಟನೆಯ ಜೊತೆಗೆ ಶಾಸಕ ಸಿ.ಪುಟ್ಟರಂಗಶೆಟ್ಟರ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ದಿಗೆ ದುಡಿಯುತ್ತಿದ್ದೇವೆ. ಪಕ್ಷದ ಸೇರ್ಪಡೆಯಾಗಿರುವ ತಾವೆಲ್ಲರು ದುಡಿಯುವ ಮೂಲಕ ಇನ್ನು ಹೆಚ್ಚಿನ ರೀತಿಯಲ್ಲಿ ಬಿಸಲವಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಜಿಲ್ಲಾ ಎಸ್ಸಿ ಬ್ಲಾಕ್ ಅಧ್ಯಕ್ಷ ಸೋಮಣ್ಣ, ಕಾರ್ಮಿಕ ವಿಭಾಗದ ಅಧ್ಯಕ್ಷ ಮಹೇಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಬಿಸಲವಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಗ್ರಾ.ಪಂ. ಅಧ್ಯಕ್ಷ ರಮ್ಯ ನಾಗರಾಜು, ಮುಖಂಡರಾದ ಬಿಸಲವಾಡಿ ರವಿ, ಬಸವರಜು, ಪ್ರಭುಸ್ವಾಮಿ, ಲೋಕೇಶ್, ವೀರಣ್ಣ, ಪಿ. ಕುಮಾರ್, ಗಣೇಶ್, ಸ್ವಾಮಿ ಆರಾಧ್ಯ, ನಿಂಗರಾಜು, ರವಿಗೌಡ, ದೊಡ್ಡರಾಯಪೇಟೆ ಮೂರ್ತಿ, ಕೆಂಪರಾಜು, ಹೊಸಹಳ್ಳಿ ಮಧುಸೂಧನ್ ಮೊದಲಾದವರು ಇದ್ದರು.