ಸೂರ್ಯ ನಮಸ್ಕಾರದಿಂದ ಉತ್ತಮ ಆರೋಗ್ಯ : ಕಾಗಲವಾಡಿ ಚಂದ್ರು
ಚಾಮರಾಜನಗರ: ರಥಸಪ್ತಮಿ ಅಂಗವಾಗಿ ನಗರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ, ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ, ಮತ್ತು ಸಂಜೀವಿನಿ ಟ್ರಸ್ಟ್ ಅವರ ಸಂಯುಕ್ತಾಶ್ರಯದಲ್ಲಿ ಬೃಹತ್ ಸಾಮೂಹಿಕ 108 ಸೂರ್ಯ ನಮಸ್ಕಾರ ಭಾನುವಾರ ಮುಂಜಾನೆ ನಡೆಯಿತು.
ನಗರದ ರೋಟರಿ ಭವನದ ಆವರಣದಲ್ಲಿ ನಡೆದ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಸೂರ್ಯ ನಮಸ್ಕಾರವು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಅಭ್ಯಾಸವಾಗಿದೆ ಎಂದರು.
ಈ ಬಾರಿಯ ರಥ ಸಪ್ತಮಿಯು ಇದೇ ಜನವರಿ 25 ರಂದು ಭಾನುವಾರ ಆಚರಿಸಲಾಗುತ್ತದೆ. ಈ ದಿನವು ಸೂರ್ಯನಿಗೆ ಅತ್ಯಂತ ಪ್ರಿಯವಾಗಿದ್ದು, ಸ್ವಾಮಿಯನ್ನು ಆರಾಧಿಸುವುದರಿಂದ ಸಮೃದ್ಧಿ, ಸಂತೋಷ, ಉದ್ಯೋಗದಲ್ಲಿ ಏಳಿಗೆ ಸೇರಿದಂತೆ ಇನ್ನು ಅನೇಕ ಅಶೀರ್ವಾದವನ್ನು ಪಡೆಯಬಹುದು. ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ಹಬ್ಬವು ಸೂರ್ಯನಿಗೆ ಪ್ರಿಯವಾದ ಭಾನುವಾರವೇ ಬಂದಿರುವುದು ವಿಶೇಷವಾಗಿದೆ ಎಂದರು.
108 ಸೂರ್ಯ ನಮಸ್ಕಾರವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಸಾಧಿಸುವ ಶಕ್ತಿಯುತ ಯೋಗಾಭ್ಯಾಸವಾಗಿದೆ. ಇದು ದೇಹದ ಶಕ್ತಿ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸಿ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಮಾನಸಿಕವಾಗಿ, ಇದು ಒತ್ತಡ ಕಡಿಮೆ ಮಾಡಿ, ಏಕಾಗ್ರತೆ ಮತ್ತು ಶಿಸ್ತನ್ನು ವೃದ್ಧಿಸುತ್ತದೆ. ಹಿಂದೂ ಧರ್ಮದಲ್ಲಿ 108 ಪವಿತ್ರ ಸಂಖ್ಯೆಯಾಗಿದ್ದು, ಇದು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಕ್ರಿಯೆಯಾಗಿದೆ ಎಂದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ಡಿ.ಪಿ.ಪ್ರಕಾಶ್ ಮಾತನಾಡಿ ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ನಮ್ಮ ಸಮಿತಿ ವತಿಯಿಂದ
ರಥ ಸಪ್ತಮಿ ಅಂಗವಾಗಿ ಈ ಬಾರಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಥಸಪ್ತಮಿಯು ವಸಂತಕಾಲಕ್ಕೆ ಋತುವಿನ ಬದಲಾವಣೆ ಮತ್ತು ಕೊಯ್ಲು ಋತುವಿನ ಆರಂಭದ ಸಂಕೇತವಾಗಿದೆ. ರಥಸಪ್ತಮಿಯನ್ನು ಸೂರ್ಯ ಜಯಂತಿ ಎಂದೂ ಕರೆಯುತ್ತಾರೆ. 108 ಸೂರ್ಯ ನಮಸ್ಕಾರಗಳ ಅಭ್ಯಾಸದೊಂದಿಗೆ ಆಚರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಸತೀಶ್, ಹಸಿರುಪಡೆ ಅಕ್ಷತಾಜೈನ್, ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಮಾಣಿಕ್ ಚಂದ್ ಸಿರವಿ, ಶ್ರೀಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಪ್ರಧಾನ ಸಂಚಾಲಕ ಯೋಗಪ್ರಕಾಶ್, ಉಪಾಧ್ಯಕ್ಷ ಎನ್.ದೊರೆಸ್ವಾಮಿ, ಸಂಚಾಲಕ ಶ್ರೀನಿವಾಸಮೂರ್ತಿ, ಗೌರವ ಅಧ್ಯಕ್ಷ ಶ್ರೀನಿವಾಸಮೂರ್ತಿ , ರಾಜಶೇಖರಮೂರ್ತಿ, ಭಜನೆ ಮಹೇಶ್, ಮಣಿಕಂಠ, ವಕೀಲ ಸಂತೋಷ ಕುಮಾರ್, ರವಿ,ರಾಜು, ಮಹಾದೇವಸ್ವಾಮಿ, ಎಎಸ್ ಐ ಕುಮಾರ್, ಅಶ್ವನಿ, ನಾಗರತ್ನ, ಪ್ರಭು,
ಇತರರು ಹಾಜರಿದ್ದರು.