ಚಾಮರಾಜನಗರ: ಹಿಂದುಳಿದ ವರ್ಗಗಳ 38 ಮಂದಿ ಮಹಿಳಾ ಫಲಾನುಭವಿಗಳಿಗೆ ಶಾಸಕ ಹಾಗೂ ಎಂಎಸ್ಐಎಲ್ನ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಹೊಲಿಗೆಯಂತ್ರಗಳನ್ನು ವಿತರಣೆ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಭಾನುವಾರ ನಡೆದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ತರಬೇತಿ ಪಡೆದದು ಪ್ರಮಾಣ ಪತ್ರ ಹೊಂದಿರುವ 38 ಮಂದಿ ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಹೊಲಿಗೆ ಯಂತ್ರ ಪಡೆದ ಮಹಿಳೆಯರು ಸ್ವಾವಲಂಬಿಗಳಾಗಿ, ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.
ನಿಗಮಗಳಿಂದ ಸಾಲ ಸೌಲಭ್ಯಗಳು, ರೈತರಿಗಾಗಿ ಗಂಗಾಕಲ್ಯಾಣ, ಅನೇಕ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಮುಂದೆ ಬರುವುದರ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಅವರನ್ನು ಉತ್ತಮಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕಿ ಶೋಭಾ ಎಚ್.ಎ., ಅಭಿವೃದ್ಧಿ ಅಧಿಕಾರಿ ಆರ್.ಚೈತ್ರ, ಎಡಿಒ ಷಣ್ಮುಗ, ಸಿಬ್ಬಂದಿಗಳಾದ ಶಿವಣ್ಣ, ರಾಜೇಂದ್ರ ಮತ್ತಿತರರಿದ್ದರು.