ಚಾಮರಾಜನಗರ: ನಗರದ ಭುವನೇಶ್ವರಿ ವೃತ್ತದ ಬಳಿ ಇರುವ ಶಿಕ್ಷಕರ ಭವನದ(ಗುರು ಭವನದ) ಒಳ ಸಭಾಂಗಣ ನಿರ್ಮಾಣಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ 5 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಶಿಕ್ಷಕರ ಭವನಕ್ಕೆ ಒಳ ಸಭಾಂಗಣ ಇಲ್ಲದೆ ಸಭೆಗಳನ್ನು ನಡೆಸಲು ಸಾಕಷ್ಟು ಸಮಸ್ಯೆಯುಂಟಾಗುತ್ತಿತ್ತು. ಶಿಕ್ಷಕರೆಲ್ಲರೂ ಕೂಡಾ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಕಲಾವತಿ, ಬಿಇಓ ಸೋಮಣ್ಣೇಗೌಡ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ, ಗೌರವಾಧ್ಯಕ್ಷ ಎಂ.ಡಿ.ಮಹದೇವಸ್ವಾಮಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮಹದೇವಸ್ವಾಮಿ, ಜಿಲ್ಲಾ ಸಹಕಾರ್ಯದರ್ಶಿ ವಾಸು, ಖಜಾಂಚಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನಾ, ನಿರ್ಮಿತಿ ಕೇಂದ್ರ ಭೀಮಸಾಗರ್ ಸೇರಿದಂತೆ ಮತ್ತಿತರರಿದ್ದರು.