ಮಲೈ ಮಹದೇಶ್ವರ ಬೆಟ್ಟಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಬೇಟಿ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಹನೂರು: ತಾಲೂಕಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಬೇಟಿ ನೀಡಿದ ಶಾಸಕರಾದ ಎಂ.ಆರ್.ಮಂಜುನಾಥ್ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿದರು.

ತಾಲೂಕಿನ ಧಾರ್ಮಿಕ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಿರುಪತಿ ಮಾದರಿಯಲ್ಲಿ ಕೈಗೊಳ್ಳಲಾಗಿರುವ ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿ ಪ್ರತಿನಿತ್ಯ ಸಾವಿರಾರು ಮಂದಿ ಹಾಗೂ ವಿಶೇಷ ದಿನಗಳಲ್ಲಿ ಲಕ್ಷಾಂತರ ಮಂದಿ ಮಲೈ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಸುರಂಗ ಮಾರ್ಗ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಹಾಗೂ ಕಾಮಗಾರಿ ನಿಗಧಿತ ಅವಧಿಯಲ್ಲಿ ಮುಗಿಸಿ ಬರುವಂತಹ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವಂತೆ ಸಲಹೆ ಸೂಚನೆ ನೀಡಿದರು.

ಅಂತರಗಂಗೆ ಕಲ್ಯಾಣಿ ಪರಿಶೀಲನೆ: ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಅಂತರಗಂಗೆ ಹತ್ತಿರದ ಒಳಚರಂಡಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ಪೌರಕಾರ್ಮಿಕರಿಗೆ ಸೂಚಿಸಿದರು.

ಬಸ್ ನಿಲ್ದಾಣದ ಶೌಚಗೃಹ ಸ್ವಚ್ಛತೆ ಕಾಪಾಡಲು ಸೂಚನೆ: ಸಾರಿಗೆ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶೌಚಾಲಯ ಕಾಮಗಾರಿಯನ್ನು  ವೀಕ್ಷಣೆ ಮಾಡಿದ ಶಾಸಕ ಎಂ. ಆರ್. ಮಂಜುನಾಥ್, ದಿನನಿತ್ಯ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು ಬಸ್ ನಿಲ್ದಾಣ ಬಳಿ ಹೆಚ್ಚು ಪ್ರಯಾಣಿಕರು ಬರುವುದರಿಂದ ಇಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಶೌಚಾಲಯ ಕಾಮಗಾರಿಯನ್ನು ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಸಂಬಂಧ ಪಟ್ಟ ಇಂಜಿನೀಯರ್ ಗೆ ಸೂಚಿಸಿದರು.

ವ್ಯಾಘ್ರರೂಢ ಮಾದಪ್ಪನ ದೀಪದ ಗಿರಿ ಒಡ್ದುಗೆ ಬೇಟಿ: ಮಲೆ ಮಾದಪ್ಪನ ಬೆಟ್ಟದ ಕಳಸ ಪ್ರಾಯವಾಗಿ ದೀಪದ ಗಿರಿ ಒಡ್ಡಿನ ಬಳಿ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಮಂಜುನಾಥ್ ಪರಿಶೀಲನೆ ನಡೆಸಿ ಗುಡ್ಡ ಕುಸಿತ ಉಂಟಾಗದ ರೀತಿಯಲ್ಲಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಂಜಿನಿಯರುಗಳು ಕ್ರಮವಹಿಸಲು ಸೂಚಿಸಿದರು.

ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನನ್, ಇಂಜಿನಿಯರ್ ಸಂತೋಷ್ ಕುಮಾರ್, ಸೇಲ್ವಗಣಪತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್, ಮುಖಂಡರುಗಳಾದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಚಿನ್ನವೆಂಕಟ್, ಡಿಕೆ ರಾಜು, ಡಿ.ಆರ್. ಮಾದೇಶ್, ಸುರೇಶ್, ಗೋಪಾಲ್ ನಾಯಕ, ಶಿವರಾಮು, ಎಸ್.ಆರ್ ಮಹಾದೇವ, ವೆಂಕಟೇಶ್, ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *