

ಮೊದಲಿಗೆ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಲ್ಮೆಯ "ಮೈಸೂರು ಆಕಾಶವಾಣಿ" ನಿಲಯಕ್ಕೆ ಸಮಸ್ತ ಕೇಳುಗರೆಲ್ಲರ ಪರವಾಗಿ ಆತ್ಮೀಯವಾಗಿ ಅಭಿನಂದಿಸುತ್ತೇನೆ.
ನಮ್ಮ ದೇಶದ ಮೊದಲ ಬಾನುಲಿ (ರೇಡಿಯೋ) ಕೇಂದ್ರ ಸ್ಥಾಪನೆ ಯಾಗಿರುವುದು ಮೈಸೂರಿನಲ್ಲಿ!. ಇದೊಂದು ಹೆಮ್ಮೆಯ ವಿಷಯ!!. ಮೈಸೂರು ಅಂದರೆ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಮೈಸೂರಿನ ಜೊತೆಗೆ ಅನೇಕ ಸ್ಥಳ ವಿಶೇಷತೆಗಳು, ವಸ್ತು ವಿಶೇಷತೆಗಳು ಈ ಪದದೊಂದಿಗೆ ಜಂಟಿಯಾಗಿದೆ. ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಪೇಟ, ಮೈಸೂರು ಮಸಾಲ ದೋಸೆ, ಮೈಸೂರು ಸೋಪ್, ಮೈಸೂರು ಶ್ರೀಗಂಧ ಇನ್ನು ಮುಂತಾದವುಗಳೊಂದಿಗೆ ಇದೇ ರೀತಿ ಮೈಸೂರು ಆಕಾಶವಾಣಿಯೂ ಕೂಡ ಜನಮನ್ನಣೆ ಗಳಿಸಿದೆ.
ಮೈಸೂರು ವಿಶ್ವವಿದ್ಯಾಲಯದ ಮನಃಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ ಎಂ. ವಿ. ಗೋಪಾಲಸ್ವಾಮಿ ರವರು 1935ರಲ್ಲಿ ಕೆ. ಆರ್. ಎಸ್. ರಸ್ತೆಯ ತಮ್ಮ ಮನೆ ವಿಠಲ ವಿಹಾರ ದಲ್ಲಿ ಸ್ಥಾಪಿಸಿದರು. ಗೋಪಾಲಸ್ವಾಮಿ ಅವರನ್ನು ಮನಃಪೂರ್ವಕವಾಗಿ ನಾನು ಇಂದು ನೆನಪಿಸಿಕೊಳ್ಳುತ್ತೇನೆ.
1935 ರಲ್ಲಿ ರೇಡಿಯೋ ಅಲೆಅಲೆಯಾಗಿ ತೇಲಿಬಂತು!. ಆ ದ್ವನಿಯನ್ನು ಸ್ವತಹ ಮೈಸೂರಿನ ಮಹಾರಾಜರು ಕೂಡ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು ಕೇಳಿಸಿಕೊಂಡರು!. ರಾಷ್ಟ್ರಕವಿ ಕುವೆಂಪು ರವರ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಈ ಎಲ್ಲ ವಿಷಯಗಳನ್ನು ಕೇಳಿದರೆ ರೋಮಾಂಚನವಾಗುತ್ತದೆ.
ಹೀಗೆ ಏಕ ವ್ಯಕ್ತಿ ಒಬ್ಬರಿಂದ ಆರಂಭವಾದ ದೇಶದ ಮೊದಲ ರೇಡಿಯೋ ಸ್ಟೇಷನ್ ಎಂಬ ಹೆಗ್ಗಳಿಕೆಗೆ ಮುಂದಿನ ದಿನಗಳಲ್ಲಿ ಭಾಜನವಾಯಿತು.
1935ರಿಂದ 1941 ರವರೆಗೆ ಗೋಪಾಲಸ್ವಾಮಿ ರವರ ಮನೆಯಲ್ಲಿಯೇ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು.
ಇಲ್ಲಿ ರೇಡಿಯೋ 49. 46 ಮೀಟರ್ ಶಾರ್ಟ್ ವೇವ್ ನಲ್ಲಿ ಹಾಗೂ 310 ಮೀಟರ್ ಮೀಡಿಯಂ ವೇವ್ ತರಂಗಾಂತರಗಳಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು.
ಮನೆಯಲ್ಲಿ 30 ವ್ಯಾಟ್ ಕಿರು ಸಾಮರ್ಥ್ಯ ಟ್ರಾನ್ಸ್'ಮೀಟರ್ ಒಂದನ್ನು ಸ್ಥಾಪಿಸಿ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿದಿನ ಸಂಜೆ 6 ರಿಂದ 8.30 ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು.
ನಂತರ ಇದನ್ನು 250 ವ್ಯಾಟ್ ಸಾಮರ್ಥ್ಯದ ಪೋಷಕವಾಗಿ (ಟ್ರಾನ್ಸ್'ಮೀಟರ್) ಮೇಲ್ದರ್ಜೆಗೆ ಏರಿಸಿದ್ದರಿಂದ ಮೈಸೂರು ಸುತ್ತಮುತ್ತ 25 ಕಿಲೋ ಮೀಟರ್ ವ್ಯಾಪ್ತಿಯ ವರೆಗೂ ಕಾರ್ಯಕ್ರಮವನ್ನು ಕೇಳಲು ಇದು ಸಹಕಾರಿಯಾಯಿತು.
ಆಕಾಶವಾಣಿ ಎಂಬ ಪದವನ್ನು ಮೊಟ್ಟ ಮೊದಲು ಪ್ರಯೋಗಿಸಿದ್ದು ಕೂಡ ಕರ್ನಾಟಕದ ಹೆಮ್ಮೆ!. ಆಕಾಶವಾಣಿ ಪದವನ್ನು ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ ಹಾಗೂ ಲೇಖಕರಾಗಿದ್ದ ನಾ ಕಸ್ತೂರಿ ಯವರು ಸೂಚಿಸಿದರು. 1943 ರಲ್ಲಿ ಕೇಂದ್ರ ಸರ್ಕಾರ ಇದನ್ನು ಮಾನ್ಯ ಮಾಡಿ "ಮೈಸೂರು ಆಕಾಶವಾಣಿ" ಎಂದು ನಾಮಕರಣ ಮಾಡಿತು. ಮುಂದೆ ಆಲ್ ಇಂಡಿಯಾ ರೇಡಿಯೋ 1956 ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರನ್ನು ಘೋಷಿಸಲಾಯಿತು.
ಇನ್ನು ಮುಂದಿನದ್ದು ಇತಿಹಾಸ!!.
ಅಂದಿನಿಂದ ಇಂದಿನವರೆಗೂ ಸಹ ನನ್ನ ನೆಚ್ಚಿನ "ಮೈಸೂರು ಆಕಾಶವಾಣಿಯು" ದಿನದಿಂದ ದಿನಕ್ಕೆ….. ತಿಂಗಳಿನಿಂದ ತಿಂಗಳಿಗೆ….. ವರ್ಷದಿಂದ ವರ್ಷಕ್ಕೆ…… ಆಬಾಲವೃದ್ಧರಾಗಿ ಒಂದಲ್ಲ ಒಂದು ರೀತಿಯ ಜನಪ್ರಿಯ ಕಾರ್ಯಕ್ರಮಗಳೊಂದಿಗೆ ಕೇಳುಗರ ಮನೆ-ಮನ ತಲುಪಿ, ರೋಮಾಂಚನವನ್ನು ನೀಡಿದೆ.
ಮೈಸೂರಿನ ಹೆಮ್ಮೆಯ ಬಾನುಲಿ ಕೇಂದ್ರ ಆಕಾಶವಾಣಿಯು ತನ್ನ ಕಾರ್ಯಕ್ರಮಗಳ ಗುಣಮಟ್ಟವನ್ನು ಸಹ ಬದಲಾವಣೆ ಮಾಡಿಕೊಳ್ಳುತ್ತಾ ಬಂತು. ಅದರಲ್ಲೂ ಎಫ್ ಎಂ ಶುರುವಾದಾಗಿನಿಂದ ಕಾರ್ಯಕ್ರಮದ ಗುಣಮಟ್ಟ ಮತ್ತಷ್ಟು ಹೆಚ್ಚಿತು. ಮತ್ತಷ್ಟು ದೂರದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.
ಮುಂದುವರಿದು ಈ ಮೂಲಕ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚಾದ್ಯಂತ ಎಲ್ಲಿ ಬೇಕಾದರೂ ಸಹ ಆಕಾಶವಾಣಿಯನ್ನು ಮೊಬೈಲ್ ಮೂಲಕ, ವೆಬ್ ಸ್ಕ್ರೀನ್ ನಲ್ಲಿ ಕೇಳಿ ಆನಂದಿಸಬಹುದು. ಇಲ್ಲಿಯವರೆಗಿನ ತಂತ್ರಜ್ಞಾನದಿಂದ ನಾವು ಆಕಾಶವಾಣಿಯ ವಿವಿಧ ಕಾರ್ಯಕ್ರಮ ಸವಿ ಕೇಳಲು
ನಿಜಕ್ಕೂ ಹೆಮ್ಮೆ ಎಂದೆನಿಸುತ್ತದೆ.
ಆಕಾಶವಾಣಿಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಸೊಗಸು!.
ಇಂದಿಗೂ ಕೂಡ ನನ್ನ ದಿನಚರಿ ಪ್ರಾರಂಭವಾಗುವುದು ಬೆಳಿಗ್ಗೆ 5:55 ಗಂಟೆಯಿಂದ. ಮೈಸೂರು ಆಕಾಶವಾಣಿಯ ಕಾರ್ಯಕ್ರಮವನ್ನು ಕೇಳುವುದರ ಮೂಲಕ. ಕಾರ್ಯಕ್ರಮವನ್ನು ಕೇಳುತ್ತಾ, ಕೇಳುತ್ತಾ ನಮ್ಮ ಇನ್ನಿತರ ಕೆಲಸಗಳನ್ನು ಮಾಡಲು ಒಂದು ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗಿದೆ. "ಬಹುಜನ ಹಿತಾಯ:…. ಬಹುಜನ ಸುಖಾಯ:….".ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಆಕಾಶವಾಣಿಯು ಅಂದಿಗೂ…. ಇಂದಿಗೂ….. ಎಂದೆಂದಿಗೂ…… ಸಹ ನಿತ್ಯ ನೂತನ!. ಜಗದ ಜಗುಲಿ ಈ ಬಾನುಲಿ ಈ ಮೂಲಕ ರಾಜ್ಯದ್ಯಂತ 14 ಆಕಾಶವಾಣಿ ಕೇಂದ್ರಗಳು ಈಗ ಕಾರ್ಯನಿರ್ವಹಿಸುತ್ತಿವೆ.
ರಾಜ್ಯದ ವಿವಿಧ ಆಕಾಶವಾಣಿ ಗಳ ವಿವರ ಈ ಇಂತಿದೆ; ಮೈಸೂರು, ಬೆಂಗಳೂರು,. ಹಾಸನ, ಧಾರವಾಡ, ಚಿತ್ರದುರ್ಗ, ಭದ್ರಾವತಿ, ಮಂಗಳೂರು, ರಾಯಚೂರು, ಕಲಬುರ್ಗಿ, ಬಿಜಾಪುರ, ಹೊಸಪೇಟೆ, ಕಾರವಾರ, ಮಡಿಕೇರಿ, ಬಳ್ಳಾರಿ. ಆಕಾಶವಾಣಿಗಳು.
ಇವುಗಳ ಜೊತೆಜೊತೆಗೆ ಬೆಂಗಳೂರು,. ಕಲಬುರಗಿ, ಧಾರವಾಡ ವಿವಿಧ ಭಾರತಿ ನಿಲಯಗಳು ಇದ್ದು ವಾಣಿಜ್ಯ ಪ್ರಸಾರ ಕ್ಷೇತ್ರಕ್ಕೆ ಮೀಸಲಾಗಿವೆ. ಇನ್ನು ಬೆಂಗಳೂರು ಆಕಾಶವಾಣಿಗೆ ಹೊಂದಿಕೊಂಡ ಬೇರೆ ಬೇರೆ ವಿಭಾಗಗಳಾಗಿ ಇರುವ ವಿವಿಧ ಭಾರತಿ ಬೆಂಗಳೂರು,. ಎಫ್ಎಮ್ ರೇನ್ಬೋ ಕನ್ನಡ ಕಾಮನಬಿಲ್ಲು, ಅಮೃತವರ್ಷಿಣಿ ಇವೆ.
ಇದಲ್ಲದೆ ಭಾರತದ ವಿವಿಧ ರಾಜ್ಯಗಳ, ವಿವಿಧ ಭಾಷೆಗಳ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಸ್ಥಳೀಯ ಆಕಾಶವಾಣಿಯು ಸಹ ಕೆಲವು ಕೆಲಸ ಮಾಡುತ್ತಿವೆ. ಆಯಾಭಾಗದ ಸೊಗಡನ್ನು ಪ್ರಸರಿಸುತ್ತದೆ. ತಾನು ಬೆಳೆದು ಇತರರನ್ನೂ ಸಹ ಬೆಳೆಸುತ್ತಿದೆ. ಎಲ್ಲಾ ಆಕಾಶವಾಣಿಗಳು.
ಈ ನಿಟ್ಟಿನಲ್ಲಿ ಆಕಾಶವಾಣಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಸಹ ಶುಭಾಶಯಗಳನ್ನು ಕೋರುತ್ತೇನೆ.
ಮುಂದಿನ ದಿನಗಳಲ್ಲೂ ಸಹ ಆಕಾಶವಾಣಿಯಿಂದ ವಿನೂತನ ಕಾರ್ಯಕ್ರಮಗಳನ್ನು ನಾವು ನಿರೀಕ್ಷಿಸುತ್ತೇವೆ.
ಎಲ್ಲಾ ಕೇಳುಗರೆಲ್ಲರಿಗೆ ಮತ್ತೊಮ್ಮೆ ನಾನು ತಿಳಿಸುವುದೇನೆಂದರೆ ಆಕಾಶವಾಣಿಯ ಕಾರ್ಯಕ್ರಮಗಳನ್ನು ತಾವು ನಿರಂತರವಾಗಿ ಕೇಳುತ್ತಾ ಬಂದರೆ ಅದರಿಂದ ಪ್ರಯೋಜನ ಹೇಳತೀರದು. ನನ್ನ ಅನುಭವದ ಪ್ರಕಾರ ನನಗೆ ಇಂದು ಆಕಾಶವಾಣಿಯ ಕಾರ್ಯಕ್ರಮವನ್ನು ನಿಯಮಿತವಾಗಿ ಕೇಳಿದ್ದರಿಂದ ತಕ್ಕಮಟ್ಟಿಗೆ ಬರವಣಿಗೆಯನ್ನು ಕಲಿಸಿದೆ…… ಸ್ವಲ್ಪಮಟ್ಟಿಗೆ ಮಾತನಾಡುವುದನ್ನು ಕಲಿಸಿದೆ…… ಅಲ್ಲದೆ ತಾಳ್ಮೆಯಿಂದ ಕೇಳಿಸಿಕೊಳ್ಳುವುದನ್ನು ಕೂಡ ಕಲಿಸಿದೆ!. ಮುಂದುವರಿದು ಆಕಾಶವಾಣಿಯು ನನಗೆ ಹಾಡುವುದನ್ನು ಕೂಡ ಕಲಿಸಿದೆ. ನನಗೆ ಇದು ಗುರುವಿನಂತೆ ನಿತ್ಯವೂ. ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ವಿಷಯಗಳ ಮಹಾಪೂರವನ್ನೇ ಹರಿಸುತ್ತಿದೆ.
ಆಕಾಶವಾಣಿಯ ಜೊತೆಗೆ ಸುಮಧುರ ಬಾಂಧವ್ಯವನ್ನು ಬೆಳೆದಿದೆ ಆಕಾಶವಾಣಿಯ ಕೇಳುಗರ ಬಳಗವಾದ "ಸಮುದ್ಯತಾ ಶ್ರೋತೃ ಸಂಘ".
90 ರ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮೈಸೂರು ಆಕಾಶವಾಣಿಯು ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ "ನುಡಿ- ನಾದ- ಸಂಗಮ" ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.
ಬೆಳಿಗ್ಗೆ (07.03.2025)7:30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆಕಾಶವಾಣಿ ಅವರಿಗೆ ಸೈಕಲ್ ಜಾಥಾ ನಡೆಯಲಿದೆ. ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜು ನೀಡುವರು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಕಾಶವಾಣಿ ಆವರಣದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ ಕೆ ಸವಿತಾ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ವಿವಿಧ ಮಳಿಗೆಗಳನ್ನು ಕೆ ಎಸ್ ಗುರುರಾಜ್ ಉದ್ಘಾಟಿಸಲಿದ್ದಾರೆ. 4:30 ಕ್ಕೆ ವಿವಿಧ ಜನಪದ ಕಲಾತಂಡಗಳಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ನುಡಿನಾದ ಸಂಗಮದ ಮುಖ್ಯ ಕಾರ್ಯಕ್ರಮ ಜರುಗಲಿತು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಆಕಾಶವಾಣಿ ನವದೆಹಲಿ ಸುದ್ದಿ ವಿಭಾಗದ ಮಹಾನಿರ್ದೇಶಕ ಡಾ ಪ್ರಜ್ಞಾ ಪಾಲಿವಾಲ್ ಗೌರ್ ಉದ್ಘಾಟಿಸಲಿದ್ದಾರೆ. ರಾಜ ವಂಶಸ್ಥರಾದ ಪ್ರಮೋದ ದೇವಿ ಒಡೆಯರ್, ಹಿರಿಯ ವಿದ್ವಾಂಸರಾದ ಡಾ ಟಿ ವಿ ವೆಂಕಟಾಚಲ ಶಾಸ್ತ್ರಿ, ಆಕಾಶವಾಣಿಯ ಸಹಾಯಕ ನಿರ್ದೇಶಕ ಟಿ ವಿ ವಿದ್ಯಾಶಂಕರ್, ಸಹಾಯಕ ಅಭಿಯಂತರ ಪಿ ಆನಂದನ್, ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕಾಶವಾಣಿ ಉಪ ನಿರ್ದೇಶಕ ಎಸ್ ಎಸ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 90 ರ ಹುಟ್ಟು ಹಬ್ಬದ ಪ್ರಯುಕ್ತ……..ಮೈಸೂರು ಆಕಾಶವಾಣಿಯೊಂದಿಗೆ ನಿಕಟ ಸಂಪರ್ಕ ಇಟ್ಟು ಕೊಂಡಿರುವ ಡಾ ಎಂ ವಿ ಗೋಪಾಲಸ್ವಾಮಿ ಕುಟುಂಬಸ್ಥರು, ನಾ ಕಸ್ತೂರಿ ಕುಟುಂಬಸ್ಥರು, ಡಾ ಆರ್ ವಿಶ್ವೇಶ್ವರನ್ (ಸಂಗೀತ), ಡಾ. ಮಣಿಕರ್ಣಿಕ (ವೈದ್ಯಕೀಯ), ಡಾ ಪಿ ಕೆ ರಾಜಶೇಖರ್ (ಜಾನಪದ), ಪ್ರೊಫೆಸರ್ ಸಿ ನಾಗಣ್ಣ (ಸಾಹಿತ್ಯ), ಡಾ ಶ್ರೀದೇವಿ ಅನ್ನಪೂರ್ಣ ಸಿಂಗ್ (ವಿಜ್ಞಾನ), ಡಾ ಪುಷ್ಪಾವತಿ (ಶಿಕ್ಷಣ), ಡಾ ಗಾಂಧಿದಾಸ್ (ಸಂಶೋಧನೆ), ರೆ ಫಾ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ (ಸಮಾಜ ಸೇವೆ), ಮಹೇಶ್ ಚಂದ್ರಗುರು (ಗ್ರಾಮೀಣ ಅಭಿವೃದ್ಧಿ), ಸೈಯದ್ ನಾಸಿರ್ ಅಹಮದ್ (ಕೃಷಿ), ಪಿ ರಮೇಶ್ (ಸಹಕಾರ), ಎನ್ ನಾಗೇಂದ್ರ (ನಾಟಕ), ಹಾಗೂ ಸಮುದ್ಯತಾ ಶ್ರೋತೃ ಬಳಗವನ್ನು ಸನ್ಮಾನಿಸಲಾಗುತ್ತದೆ.
ಪ್ರಾರಂಭದಿಂದ ಇವತ್ತಿನವರೆಗೂ ಒಂದು ರೀತಿಯಲ್ಲಿ ಸಾರ್ಥಕತೆಯ ತನ್ನ ಹೆಜ್ಜೆ ಗುರುತುಗಳನ್ನು ಉಳಿಸಿಕೊಂಡು ಹೋಗುತ್ತಿರುವ ಮೈಸೂರು ಆಕಾಶವಾಣಿಯು ಇನ್ನೂ ಒಂದು ದಶಕ ಪೂರೈಸಿದರೇ ನೂರರ ಹುಟ್ಟುಹಬ್ಬದ ಸಂಭ್ರಮ ಬರುತ್ತದೆ!. ಆ ಅಮೃತಘಳಿಗೆಗೆ ನಾವೆಲ್ಲರೂ ಜಾತಕ ಪಕ್ಷಿಯಂತೆ ಕಾಯೋಣ!.
ಮತ್ತೆ ಮೈಸೂರು ಆಕಾಶವಾಣಿಯ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳೋಣ.
ಮತ್ತೊಮ್ಮೆ, ಮಗದೊಮ್ಮೆ ನನ್ನ ನೆಚ್ಚಿನ ಮೈಸೂರು ಆಕಾಶವಾಣಿಗೆ 90 ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್, ಮೈಸೂರು.