“ಸಾಹಿತ್ಯಶತಕ” ಕಾರ್ಯಕ್ರಮದ ಸಂಭ್ರಮದಲ್ಲಿ ಮೈಸೂರು ಸಾಹಿತ್ಯ ದಾಸೋಹ!.


ಮೈಸೂರಿನಲ್ಲಿ ಒಂದು ವಿಶಿಷ್ಟ ಸಾಹಿತ್ಯ ಸುಧೆ ಹರಿಸುತ್ತಿರುವ ಎಂ ಆರ್ ಆನಂದ್ ಮತ್ತು ಪದ್ಮಾ ಆನಂದ್ ದಂಪತಿಗಳು!.


ಈ ಸಾಹಿತ್ಯ, ಸಂಗೀತ, ಇದನ್ನು ಒಳಗೊಂಡಂತೆ ಸದಭಿ ರುಚಿಯ ಹವ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ಮೈಮನಗಳಿಗೆ ಮುದ ನೀಡುತ್ತವೆ. ಎಂದೋ ಕಲಿತ ವಿದ್ಯೆ... , ಎಂದು ಆಸಕ್ತಿ ಬೆಳೆಸಿಕೊಂಡ ಹವ್ಯಾಸಗಳೂ...., 
ಎಂದೋ ಭೇಟಿಯಾದ ಸ್ಥಳಗಳು.... ಎಂದೋ ಪರಿಚಿತರಾದ ವ್ಯಕ್ತಿಗಳು...... ಎಂದೋ ಭಾಗಿಯಾದ ಕಾರ್ಯಕ್ರಮಗಳು..... ಹೀಗೆ ಹಲವು ವರ್ಷಗಳ ನಂತರ ಅವು ಮತ್ತಷ್ಟು ಪ್ರಭಾವಶಾಲಿಯಾಗಿ ನಮ್ಮನ್ನು ಮುಂದಕ್ಕೆ ತರುತ್ತವೆ. 
ಆ ಒಂದು ವಾತಾವರಣ, ಕಾರ್ಯಕ್ರಮ, ಭೇಟಿ, ಆ ಕ್ಷಣಗಳನ್ನೆಲ್ಲ ನಾವು ಬರೀ ನೆನಪು ಮಾಡಿಕೊಳ್ಳುತ್ತಾ ಕೂರದೆ ಕಾರ್ಯರೂಪಕ್ಕೆ ತಂದರೆ ನಾವು ಅಂದುಕೊಳ್ಳುವ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತವೆ.

ಆದರೇ, ನಾವು ಎಲ್ಲರ ಜೊತೆ ಹೇಗೆ ಇರುತ್ತೇವೆ ಅದು ಮುಖ್ಯವಾಗುತ್ತದೆ. ಜೊತೆಗೆ ನಮ್ಮ ಅಭಿರುಚಿಯ ಮೇಲೆ ಅದೆಲ್ಲ ನಿಂತಿರುತ್ತದೆ. ಆದರೆ ಇಲ್ಲಿ ನಿರಂತರ ಪ್ರಯತ್ನ ಮುಖ್ಯ. ಈ ಸೋಲು- ಗೆಲುವು ಇದ್ದದ್ದೆ. ಆದರೆ ಆದರೆ ಸೋಲುಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು. ಜೊತೆಗೆ ನಮ್ಮಲ್ಲಿ ಏಕ ನಿರ್ಧಾರ ಇರಬೇಕು. ಆಗ ಮಾತ್ರ ನಾವು ಹಾಕಿಕೊಂಡ ಯಾವುದೇ ಮಾರ್ಗ ಸುಲಭವಾಗಿರುತ್ತದೆ. ಅದು ಯಶಸ್ವಿ ಕೂಡ ಆಗುತ್ತದೆ. ಇದಕ್ಕೆಲ್ಲ ಸಾಕ್ಷಿ ಮೈಸೂರಿನ ಎಂ ಆರ್ ಆನಂದ್ ಮತ್ತು ಪದ್ಮಾ ಆನಂದ್ ದಂಪತಿಗಳು. 

ಇವರನ್ನು ಮುಖ್ಯವಾಗಿ ಮೈಸೂರಿನಲ್ಲಿ "ಸಾಹಿತ್ಯ ದಾಸೋಹದ ರೂವಾರಿಗಳು" ಎಂದೇ ಎಲ್ಲರೂ ಕರೆಯುತ್ತಾರೆ!.
ಮೈಸೂರು ಸಾಹಿತ್ಯ ದಾಸೋಹ" ಪ್ರಾರಂಭವಾದ ನಂತರ ಮೈಸೂರಿನಲ್ಲಿ ವಿಶಿಷ್ಟ ರೀತಿಯ ಸಾಹಿತ್ಯ ಅಭಿಮಾನಿಗಳು ಸೃಷ್ಟಿಯಾದರು. ಜೊತೆಗೆ ಅವರೆಲ್ಲರೂ ಕೂಡ ತಿಂಗಳಿಗೆ ಒಮ್ಮೆ ಒಂದು ಕಡೆ ಸೇರಿ ಸಾಹಿತ್ಯದ ದಾಸೋಹದ ಜೊತೆಗೆ, ರುಚಿ ದಾಸೋಹವನ್ನು ಕೂಡ ಏಕಕಾಲದಲ್ಲಿ ಸವಿಯುತ್ತಾರೆ!!.

ಇಲ್ಲಿ ಹಿರಿಯರು ಕಿರಿಯರು ಎನ್ನುವ ಭೇದಭಾವವಿಲ್ಲ. ದೊಡ್ಡ ಸಾಹಿತಿ, ಚಿಕ್ಕ ಸಾಹಿತಿ ಎನ್ನುವ ಅಂತರವೂ ಕೂಡ ಇಲ್ಲ. ಎಲ್ಲರೂ ಕೂಡ ಸಮಾನವಾಗಿ ಇದ್ದುಕೊಂಡು ತಾವು ಸೃಷ್ಟಿಸಿದ ಸಾಹಿತ್ಯವನ್ನು ಇಲ್ಲಿ ಓದಬಹುದು. ಅದನ್ನು ಎಲ್ಲರೂ ಕೇಳಿ ವಿಮರ್ಶೆ ಮಾಡುತ್ತಾರೆ. ಅದರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ, ಆ ಕಾರ್ಯಕ್ರಮಕ್ಕೆ ಮೆರೆಗು ನೀಡುತ್ತಾರೆ. ಜೊತೆಗೆ ಇಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳು ಎನ್ನುವ ಸ್ಥಾನಗಳಿಲ್ಲ. ಇಲ್ಲಿ ಎಲ್ಲರೂ ಕೂಡ ಲವಲವಿಕೆಯಿಂದ, ನವನಾವಿನ್ಯತೆಯಿಂದ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.

ಪ್ರತಿ ತಿಂಗಳು ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯದ ವಾತಾವರಣ ಮೈಸೂರಿನಲ್ಲಿ ಸೃಷ್ಟಿಯಾಗುತ್ತದೆ.            
ಬೆಂಗಳೂರಿನ ಸೆಂಟ್ರಲ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂ ಆರ್ ಆನಂದ್ ರವರು

ನಿವೃತ್ತಿಯ ನಂತರ ಬೆಂಗಳೂರು ಸಾಹಿತ್ಯ ದಾಸೋಹದ ಪರಿಚಯ ಬಾಲ್ಯಮಿತ್ರ ಶ್ರೀ.ಕೃಷ್ಣಸುಬ್ಬರಾವ್ ಅವರಿಂದ ಆಯಿತು.
ಆ ಕಾರ್ಯಕ್ರಮಕ್ಕೆ ಸಕ್ರಿಯವಾಗಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಆನಂದ್ ದಂಪತಿಗಳಿಗೆ ಕರೆ ಬಂದಿತು. ಆ ಒಲವಿನ ಕರೆಯ ಸದುಪಯೋಗ ಪಡೆದುಕೊಂಡರು ಈ ದಂಪತಿಗಳು. ಅದನ್ನು ತಾವು ಒಬ್ಬರೇ ಅನುಭವಿಸದೆ ಸಾಹಿತ್ಯದಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಕೂಡ ಒಟ್ಟುಗೂಡಿಸಿದರು.
ಚಿಕ್ಕಂದಿನಲ್ಲಿ ಇದ್ದ ಬರೆಯುವ ಆಸಕ್ತಿ ಮೊದಲು ಆನಂದರಲ್ಲಿ ಹೆಚ್ಚಾಯಿತು. ನಂತರ ಅದನ್ನು ಅನುಸರಿಸಿದ ಪದ್ಮ ಆನಂದ್ ರವರು ಕೂಡ ಅಂತಹ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡರು.


ವಿಶ್ರಾಂತ ಜೀವನಕ್ಕಾಗಿ ಹುಟ್ಟೂರಾದ ಮೈಸೂರನ್ನು ಆರಿಸಿಕೊಂಡಾಗ ಪ್ರತಿ ತಿಂಗಳೂ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಇಲ್ಲಿ ಇವರ ಸಾಹಿತ್ಯದ ಕಾರ್ಯಕ್ರಮದ ಸೆಳೆತವನ್ನು ಗಮನಿಸಬಹುದು.


ಆದರೆ ಪ್ರತಿ ತಿಂಗಳು ಹೋಗಲು ಆಗುತ್ತಿರಲಿಲ್ಲ. ಇದನ್ನರಿತ ದಂಪತಿಗಳಲ್ಲಿ ಬೆಂಗಳೂರು ಸಾಹಿತ್ಯ ಕಾರ್ಯಕ್ರಮದ ಸ್ಪೂರ್ತಿಯಾಗಿ ನಾವು ಮೈಸೂರಿನಲ್ಲಿಯೇ ಒಂದು ಸಾಹಿತ್ಯ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಹೇಗೆ? ಎಂಬ ಪ್ರಶ್ನೆ ಮೂಡಿತು!. ಆ ಪ್ರಶ್ನೆಗೆ ಶೀಘ್ರವಾಗಿ ಉತ್ತರವೂ ಕೂಡ ದೊರೆಯಿತು.


ಆನಂದ ರವರ ಪ್ರಶ್ನೆಗೆ ಪತ್ನಿ ಪದ್ಮರ ಸಹಕಾರ ದೊರಕಿತು. ಅದಕ್ಕೆ ವೇದಿಕೆಯಾಗಿ ನಿರ್ಮಾಣಗೊಂಡಿದ್ದೇ ಈ “ಮೈಸೂರು ಸಾಹಿತ್ಯ ದಾಸೋಹ”!. ಈ ಹೆಸರೇ ಒಂದು ರೀತಿಯಲ್ಲಿ ಮೆರಗು ನೀಡುವಂತದ್ದು.


ಮೈಸೂರಿನ ಸಾಹಿತ್ಯ ದಾಸೋಹಕ್ಕೆ ಮೊದಮೊದಲು ಬೆಂಗಳೂರಿನಿಂದಲೂ ಆಗಮಿಸುತ್ತಿದ್ದರು. ಇವರ ಜೊತೆಗೆ ಮಿತ್ರರುಗಳು ಸೇರ್ಪಡೆಗೊಂಡರು.


ಮೈಸೂರಿನ ಶ್ರೀಕಂಠಗುಂಡಪ್ಪ,(ದಿವಂಗತರು ದಿವಂಗತರು) ಜೊತೆಗೆ ಪತ್ರಕರ್ತ ರಂಗನಾಥ್ ಮೈಸೂರು, ಬಾಲ್ಯಮಿತ್ರ ಪ್ರೊ.ಆರ್. ಎ. ಕುಮಾರ್ ಅವರುಗಳೊಂದಿಗೆ ಮೊದಲ ಹಂತದಲ್ಲಿ ಚರ್ಚೆ ನಡೆಯಿತು. ದಂಪತಿಗಳ ನಿರ್ಧಾರಕ್ಕೆ ಹಸಿರು ನಿಶಾನೆ ದೊರಕಿತು.
ಈ ಸಾಹಿತ್ಯ ದಾಸೋಹದಲ್ಲಿ ಏನೆಲ್ಲಾ ಕಾರ್ಯಕ್ರಮ ರೂಪಿಸಬಹುದು ಎಂಬುದಾಗಿ ಕೂಡ ಚರ್ಚೆ ಮಾಡಲಾಯಿತು. ಇವರೊಟ್ಟಿಗೆ ಇನ್ನೂ ಅನೇಕ ಸಾಹಿತ್ಯ ಆಸಕ್ತ ಮಿತ್ರರು ಕೂಡ ಸೇರ್ಪಡೆಗೊಂಡರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲರಲ್ಲೂ ಕೂಡ ಸಮಾನ ಆಸಕ್ತಿ ಇತ್ತು.

ಅದರಿಂದಾಗಿ ಆ ತಂಡದಲ್ಲಿ ಏನೇ ನಿರ್ಧಾರ ಕೈಗೊಂಡರು ಕೂಡ ಎಲ್ಲರೂ ಒಗ್ಗಟ್ಟಾಗಿ ಒಪ್ಪಿಗೆ ನೀಡಿದರು. ಆ ಒಪ್ಪಿಗೆ ಯನ್ನು ಎಲ್ಲರೂ ಅಪ್ಪಿಕೊಂಡು ಮುಂದೆ ಮುಂದೆ ಸಾಗಿದರು. ಸಾಹಿತ್ಯಕ್ಕೂ ಒಂದು ದಾಸೋಹ ತಂಡ ಇದೆ ಎಂಬುದನ್ನು ಉದ್ಯಾನ ನಗರಿ ಮೈಸೂರಿನಲ್ಲಿ ಬಿತ್ತಿದರು. ಕಡಿಮೆ ಅವಧಿಯಲ್ಲಿಯೇ ಬಿತ್ತಿದ ಬೀಜ ಮೊಳಕೆಯೊಡೆಯಿತು. ಆ ಮೊಳಕೆ ಚಿಗುರಿ ಚಿಕ್ಕ ಗಿಡವಾಯಿತು. ಅಂದಿನ ಗಿಡ ಇವತ್ತಿಗೆ ಹೆಮ್ಮರವಾಗಿ, ವಿಶಾಲವಾದ ಆಲದ ಮರದಂತೆ ಟಿಸಿಲೊಡೆದು ಈಗ ನೂರಾರು ಸಾಹಿತ್ಯದ ಮಂದಿಗೆ ಆಶ್ರಯ ತಾಣವಾಗಿದೆ!.


ಪ್ರತಿ ತಿಂಗಳು 40 ರಿಂದ 50 ಸಾಹಿತ್ಯ ಪ್ರತಿಭೆಗಳು ಒಂದೆಡೆ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಎಂ ಆರ್ ಆನಂದ್ ದಂಪತಿಗಳು ತಮ್ಮ ದಾಸೋಹ ತಂಡ ಪ್ರಾರಂಭವಾದ ದಿನವನ್ನು ನೆನಪಿಸಿಕೊಳ್ಳುತ್ತಾರೆ…… ಬನ್ನಿ ಅವರ ನೆನಪಿನ ನಿನಾದಕ್ಕೆ ನಾವು ಕೂಡ ಕಿವಿಯಾಗೋಣ, ಆ ಕ್ಷಣಗಳನ್ನು ಮೈದುಂಬಿಸಿಕೊಳ್ಳೋಣ.


ದಿನಾಂಕ 17.11.2015 ರಂದು ಮೈಸೂರಿನ ವಿವೇಕಾನಂದನಗರ ಕೇಂದ್ರ ಗ್ರಂಥಾಲಯದ ಮಹಡಿಯ ಮೇಲಿನ ಆವರಣದಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡ ಈ ಸಂಸ್ಥೆ ಮೈಸೂರಿನಲ್ಲಿ ಮೊದಲ ಹೆಜ್ಜೆ ಗುರುತು ಮೂಡಿಸಿತು. ಇದು ʼಆರಂಭಶೂರತ್ವʼ ಎನ್ನುವ ನುಡಿಗಟ್ಟನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅನವರತವಾಗಿ 100 ತಿಂಗಳುಗಳನ್ನು ಪೂರೈಸಿದೆ. ಎಂದರೆ ಅಂದು ಹಾಕಿದ ಬೀಜದ ಗುಣಮಟ್ಟ ದ ಬಗ್ಗೆ ನಾವು ಚಿಂತಿಸಬಹುದು.


ಯಾವುದೇ ಮೊದಲುಗಳು ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಅಂದು ಶ್ರೀ.ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.


ಹಲವಾರು ದಿನಗಳು ಮನೆ- ಮನೆಯಲ್ಲಿ ಮಾತ್ರ ನಡೆಯುತ್ತಿದ್ದ ಸಾಹಿತ್ಯ ದಾಸೋಹಗಳು, ಸ್ವಲ್ಪ ತಿಂಗಳುಗಳ ನಂತರ ಹಲವಾರು ಕಾರ್ಯಕ್ರಮಗಳು ಆನಂದ ರವರ ತಂಗಿ ಶ್ರೀಮತಿ ಪದ್ಮಾ ಮತ್ತು ಭಾವ ದಿ.ಶಾತಾರಾಂ ಅವರ “ಕನಸು” ಮನೆಯಲ್ಲಿ ನಡೆಯತೊಡಗಿತು.
ಈ ಸಾಹಿತ್ಯ ದಾಸೋಹದಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಯ ಸಾಹಿತಿಗಳೂ, ಉದಯೋನ್ಮುಖರೂ ಇದ್ದಾರೆ. ಮೈಸೂರು ಸಾಹಿತ್ಯ ದಾಸೋಹದಿಂದಲೇ ಬರೆಯಲು ಪ್ರಾರಂಭಿಸಿ ಪುಸ್ತಕಗಳನ್ನು ಪ್ರಕಟಿಸಿದವರುಗಳೂ ಇದ್ದಾರೆ.


ತಪ್ಪದೇ ಪ್ರತೀ ತಿಂಗಳೂ ಸಾಹಿತ್ಯದ ಎಲ್ಲ ಪ್ರಕಾರಗಳ ಸೃಷ್ಟಿಗಳಾಗುತ್ತಿವೆ. ಸಾಧಾರಣವಾಗಿ ತಿಂಗಳ ಸಾಹಿತ್ಯದಲ್ಲಿ 25 ರಿಂದ 30 ಪ್ರಸ್ತುತಿಗಳು ಇರುತ್ತವೆ. ಅವುಗಳಲ್ಲಿ 20– 25 ಹೊಸ ಸಾಹಿತ್ಯ ಸೃಷ್ಠಿಗಳು ಇರುತ್ತವೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ.


ಎಲ್ಲೋ ಕೆಲವೊಮ್ಮೆ ಲೇಖಕರಿಗೆ ತಾವು ಹಿಂದೆಯೇ ಬರೆದಿದ್ದ ಸಾಹಿತ್ಯ ಪ್ರಕಾರವನ್ನು ಬಳಗದ ಸದಸ್ಯರುಗಳಿಗೆ ಕೇಳಿಸಬೇಕೆಂಬ, ಅವರುಗಳ ಪ್ರತಿಕ್ರಿಯೆಯನ್ನು ಅರಿಯಬೇಕೇಂದೆನಿಸದಾಗ, ಒಮೊಮ್ಮೆ ಮಾತ್ರ ಹಿಂದೆಂದೋ ಬರೆದ್ದುದನ್ನು ಪ್ರಸ್ತುತಪಡಿಸುವುದೂ ಉಂಟು, ಆದರದು ಅಪರೂಪಕ್ಕೆ.

ಮೈಸೂರು ಸಾಹಿತ್ಯ ದಾಸೋಹದ ಜೋಳಿಗೆಯಲ್ಲಿ ಐದು ಪುಸ್ತಕ ಪ್ರಕಟಣೆಗಳೂ ಗರಿ ಮೂಡಿಸುವೆ.
ಕೇವಲ ಉದ್ಯಾನ ನಗರಿ ಮೈಸೂರಿನಲ್ಲಿ ಕಾರ್ಯಕ್ರಮಗಳು ನಡೆದಿಲ್ಲ ಮೈಸೂರಿನ ಆಚೆಯೂ ಕೂಡ ನಡೆದಿವೆ. ಹಾಸನ, ನಂಜನಗೂಡು, ಮೇಲುಕೋಟೆ, ಸಾಹಿತಿ ಮಳಲಿ ವಸಂತಕುಮಾರ್ ಅವರ ಭೂಮಿ ತಾಯಿಯ ತೋಟ, ನಂಜನಗೂಡು ಜಿಲ್ಲೆಯ “ಕಳಲೆ” ಗ್ರಾಮ, ಹೀಗೆ ಹಲವಾರು ಪ್ರವಾಸೀ ಸಾಹಿತ್ಯ ದಾಸೋಹಗಳ ಸಿಹಿ ನೆನಪುಗಳು ಇವೆ. ಮೈಸೂರಿಂದ ಆಚೆಯೂ ಕೂಡ ಸಾಹಿತ್ಯದ ಸೃಷ್ಟಿ ಆಗಿರುವುದು ಗಮನಿಸಬೇಕಾದ ಅಂಶ.


ಅಲ್ಲದೆ ಕೇವಲ ಸ್ನೇಹಿತರೊಟ್ಟಿಗಿನ ಸಾಹಿತ್ಯದ ವಾತಾವರಣದ ಇಲ್ಲಿ ಮುಂದುವರೆಯಲಿಲ್ಲ ಮತ್ತಷ್ಟು ಸಾಹಿತ್ಯ ಸುಧೆಯನ್ನು ಹರಿಸಲು ಕೂಡ ಬಳಗದಲ್ಲಿ ಚರ್ಚಿಸಲಾಯಿತು. ಹೊಸ ಹೊಸ ಕಾರ್ಯಕ್ರಮಗಳ ಬಗ್ಗೆ ಚಿಂತಿಸಲಾಯಿತು.


ಅದರ ಫಲವಾಗಿಯೇ ಸುಪ್ರಸಿದ್ಧ ಕಥೆಗಾರ, ಕಾದಂಬರಿಗಾರ, ಅಂಕಣಬರಹಗಾರ, ಲೇಖಕ ಶ್ರೀ.ಸಂತೋಷ್ ಕುಮಾರ್ ಮೆಹಂದಳೆಯವರ ಸಮರ್ಥ ನಿರ್ದೇಶನದಲ್ಲಿ ಕಥಾ ಕಮ್ಮಟ, “ಕಥಾಯಾನ-೧೧” ಯಶಸ್ವೀ ಕಾರ್ಯಕ್ರಮವನ್ನು ಆಯೋಜಿಸಿ, ಇದರಲ್ಲಿ ಕೇವಲ ಮೈಸೂರಿನ ಸಾಹಿತ್ಯ ಪ್ರತಿಭೆಗಳು ಅಲ್ಲದೆ ವರ ಜಿಲ್ಲೆಗಳಿಂದಲೂ ಕೂಡ ಬಂದವರು ಅನೇಕರು. ಎಲ್ಲರ ಕೊಡುಕೊಳ್ಳುವಿಕೆ ಇಲ್ಲಿ ನಡೆಯಿತು ಕಥಾ ರಚನೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಯಿತು. ಎಲ್ಲರೂ ಕೂಡ ಪರಸ್ಪರ ಸ್ನೇಹಿತರಾದರು. ಒಂದು ಸಾರ್ಥಕ ಕಾರ್ಯ ಕ್ರಮವಾಗಿ ಬಹುಕಾಲ ನೆನಪಿನಲ್ಲಿ ಉಳಿಯುವಂತಾಯಿತು.


25ನೇ ಸಾಹಿತ್ಯ ದಾಸೋಹ ವನ್ನು ಎಲ್ಲರೂ ಕೂಡ ಸ್ವಾಗತಿಸಿದರು. ಬೆಳ್ಳಿಹಬ್ಬದ ಸಂಭ್ರಮಕ್ಕಾಗಿ ಎಲ್ಲ ಲೇಖಕ-ಲೇಖಕಿಯರ ಬರಹಗಳನ್ನೊಳಗೊಂಡ “ಸಾಹಿತ್ಯ ಸಂಭ್ರಮ” ಕೃತಿ ಹೊರಬಂದಿದೆ. ಅದನ್ನು ಕನ್ನಡದ ಪೂಜಾರಿ ಶ್ರೀ.ಹಿರೇಮಗಳೂರು ಕಣ್ಣನ್ ಅವರು ಲೋಕಾರ್ಪಣೆಗೊಳಿಸಿದರು. ಶ್ರೀ.ಕಳಲೆ ಗುರುಸ್ವಾಮಿಯವರು ಕೃತಿ ಕುರಿತಂತೆ ಮಾತಾಡಿದರು. ಅಂದೇ ಶ್ರೀಯುತ ಕಣ್ಣನ್ ಅವರ ಸಾರರ್ಥ್ಯದಲ್ಲಿ ಬಳಗದ ಸದಸ್ಯರುಗಳು ಭಾಗವಹಿಸಿದ್ದ “ಹರಟೆ” ಕಾರ್ಯಕ್ರಮವೂ ನಡೆಯಿತು.


ಪ್ರತೀ ನವೆಂಬರ್ ತಿಂಗಳಲ್ಲಿ ಆಮಂತ್ರಿತ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಂಸ್ಥೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.


ಮತ್ತೆ, ಬೆಳ್ಳಿ ಹಬ್ಬದ ಸಂಭ್ರಮದ ಜೊತೆ ಜೊತೆಗೆ 50 ರ ಸಂಭ್ರಮಕ್ಕಾಗಿ “ಸಾಹಿತ್ಯ ಸುವರ್ಣ” ಕೃತಿಯ ಲೋಕಾರ್ಪಣೆಯನ್ನು ಸುಪ್ರಸಿದ್ಧ ನಟ, ನಾಟಕಕಾರ, ಶ್ರೀ.ಮಂಡ್ಯ ರಮೇಶ್ ಅವರು ಆಗಮಿಸಿ, ಶುಭಕೋರಿ ನೆರವೇರಿಸಿಕೊಟ್ಟರು. ಬೆಂಗಳೂರಿನಿಂದ ಶ್ರೀ ಕೆ.ಎನ್. ಮಹಾಬಲ ಅವರು ಆಗಮಿಸಿ ಅಧ್ಯಕ್ಷತೆ ವಹಿಸಿದ್ದರು. ನಮ್ಮ ನೆಚ್ಚಿನ ರಾಷ್ಟಾಧ್ಯಕ್ಷರಾಗಿದ್ದ ದಿ.ಡಾ.ಎ. ಜಿ. ಅಬ್ದುಲ್ ಕಲಾಂ ಅವರ ಸಂಪರ್ಕಾಧಿಕಾರಿಗಿದ್ದ, ಲೇಖಕ ಶ್ರೀ.ಜಯಪ್ರಕಾಶ್ ರಾವ್ ಪುತ್ತೂರ್ ಅವರು ಕೃತಿಯನ್ನು ಕುರಿತಂತೆ ಅಂದು ಮಾತನಾಡಿದರು.


75ರ ವೇಳೆಗೆ ಕರೋನಾ ಮಾರಿ ಕಾಲಿಟ್ಟಿದ್ದರಿಂದ ಈ ಸಂಭ್ರಮ ನೆರವೇರಲಿಲ್ಲ ಇದರಿಂದಾಗಿ ಪುಸ್ತಕ ಹೊರತರಲಾಗಲಿಲ್ಲ. ಆಗಲೂ ಕೂಡ ಸುಮ್ಮನೆ ಕೂರದೆ ಕೋವಿಡ್ ಮಹಾಮಾರಿಯನ್ನು ನಾಚಿಸುವಂತೆ ವಾಟ್ಸಾಪ್ಪಿನಲ್ಲೇ ಎಲ್ಲ ಸದಸ್ಯರ ಪರಿಚಯ, ಸಾಧನೆ, ಪ್ರಶಸ್ತಿ, ಪುರಸ್ಕಾರಗಳನ್ನು ಅನಾವರಣಗೊಳಿಸಲಾಯಿತು.


ಯಾವಾಗಲೂ ಮೈಸೂರು ಸಾಹಿತ್ಯ ದಾಸೋಹವನ್ನು ತುಂಬು ಮನದಿಂದ ಪ್ರೋತ್ಸಾಹಿಸಿ ಅಭಿಮಾನದಿಂದ ಕಾಣುತ್ತಿದ್ದ ದಿ.ಪ್ರೊ.ಭೈರವಮೂರ್ತಿಯವರ ಆಶಯನುಡಿಗಳನ್ನು ರೆಕಾರ್ಡ್ ಮಾಡಿಕೊಂಡು ಸದಸ್ಯರೊಂದಿಗೆ ಹಂಚಿಕೊಳ್ಳಲಾಯಿತು.


ಕರೋನಾ ಸಮಯದಲ್ಲಿ ವಾಟ್ಸಾಪ್ ದಾಸೋಹಗಳನ್ನು ನಡೆಸಿದರೂ ಸ್ವಲ್ಪವೇ ವಾತಾವರಣ ತಿಳಿಯಾದರೂ ಮುಖತಃ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತೆ ಕರೋನಾ ತೀವ್ರತೆಗೆ ಹೆದರಿ ಹಿಂದಕ್ಕೆ ಹೋಗುವಂತೆ ಆಗುತ್ತಿತ್ತು. ನಡೆಸಿದ್ದು ಕೇವಲ 17 ವಾಟ್ಸಾಪ್ ಸಾಹಿತ್ಯ ದಾಸೋಹಗಳು ಮಾತ್ರ.


ಈಗಿನ ಸಾಹಿತ್ಯ ದಾಸೋಹ ಕಾರ್ಯಕ್ರಮಗಳೂ ಜಯನಗರದ ʼನೇಗಿಲಯೋಗಿʼ ಸಭಾಂಗಣದಲ್ಲಿ ಏರ್ಪಡಿಸಲಾಗುತ್ತಿದೆ. ಸಾಹಿತ್ಯ ದಾಸೋಹ ಎಂಬ ಹೆಸರು ಸಾಹಿತ್ಯದ ದಾಸೋಹ ಎಂಬರ್ಥದಲ್ಲಿ ಹಿರಿಯರಿಂದ ಇಡಲ್ಪಟ್ಟಿದ್ದರೂ, ಮೈಸೂರಿನಲ್ಲಿ “ಸಾಹಿತ್ಯ ಮತ್ತು ದಾಸೋಹ ಎಂಬಂತಾಗಿಬಿಟ್ಟಿದೆ!.
ಪ್ರತೀ ಕಾರ್ಯಕ್ರಮದ ನಂತರ

ವೂ ಸಿಹಿಯನ್ನೊಳಗೊಂಡ ಭೋಜನ ವ್ಯವಸ್ಥೆ ಆಗಿಬಿಟ್ಟಿರುತ್ತದೆ.
ಮತ್ತಷ್ಟು ಸಾಹಿತ್ಯ ದಾಸೋಹದ ನೆನಪುಗಳು ಇಲ್ಲಿವೆ. “ಹೊಯ್ಸಳ ಕನ್ನಡ ಸಂಘ” ಮತ್ತು “ಸವಿಗನ್ನಡ” ಪತ್ರಿಕಾ ಬಳಗದ ಸಹಯೋಗದೊಂದಿಗೆ ಕರೋನಾ ಸಮಯದಲ್ಲಿದ್ದ ವಾರ್ಷಿಕೋತ್ಸವದಲ್ಲಿ ಆಯೋಜಿಸಿದ್ದ ಕವನ ಸ್ಪರ್ಧೆ, 7ನೇ ವಾರ್ಷಿಕೋತ್ಸವದಲ್ಲಿ ಮತ್ತು 2024ರ ಹೊಸವರ್ಷಾಚರಣೆಯ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಬಿ. ಆರ್. ನಾಗರತ್ನ ಅವರು ನಡೆಸಿಕೊಟ್ಟ ರಸಪ್ರಶ್ನೆ ಕಾರ್ಯಕ್ರಮ, 8ನೇ ವಾರ್ಷಿಕೋತ್ಸವದ ʼಕನ್ನಡ ನಾಡು- ನುಡಿ ಕುರಿತಾದ, ಅಚ್ಛ ಕನ್ನಡದ ಸ್ವಚ್ಛ ಮಾತುಗಳುʼ ಸ್ಪರ್ಧೆಗಳು, ಬಹುಮಾನಗಳು, ಪ್ರತೀ ತಿಂಗಳ ಸಾಹಿತ್ಯ ಸೃಷ್ಠಿಯ ಏಕತಾನತೆಯಿಂದ ಹೊರಬಂದು, ಹರ್ಷೋತ್ಸವಗಳ ಆಚರಣೆಯ ಕಾರ್ಯಕ್ರಮಗಳು ಮುದ ನೀಡುತ್ತವೆ.


ಮಧ್ಯದಲ್ಲೊಮ್ಮೆ “ಅಧಿಕ” ಎಂಬ ವಿಷಯವನ್ನು ಕೊಟ್ಟು ಅದರ ಬಗ್ಗೆಯೇ ವಿವಿಧ ಪ್ರಕಾರಗಳ ಸಾಹಿತ್ಯ ಸೃಷ್ಠಿಯಾಗಲಿ ಎಂಬ ಪ್ರಯೋಗಕ್ಕೆ ಸಿಕ್ಕ ಸ್ಪಂದನೆಯನ್ನು ʼರಸದೌತಣʼ ಎಂದೆ ಬಣ್ಣಿಸಬಹುದು.


ಈಗ ಶತಕೋತ್ಸವದ ಸಂಭ್ರಮ. “ಸಾಹಿತ್ಯಶತಕ” ಕೃತಿಯ ಲೋಕಾರ್ಪಣೆಗೆ ಬಳಗ ಸಿದ್ಧವಾಗಿದೆ. ಶ್ರೀ.ಬೆಂ. ಶ್ರೀ. ರವೀಂದ್ರ ಅವರಿಂದ ಕಾರ್ಯಕ್ರಮದ ಉದ್ಘಾಟನೆಯಾಗಲಿದೆ.


ನಮ್ಮೆಲ್ಲರ ಆದರಣೀಯ ಬರಹಗಾರರು, ನಗೆ ಭಾಷಣಕಾರರಾದ ಶ್ರೀ ಎಂ ಎಸ್. ನರಸಿಂಹಮೂರ್ತಿ ಅವರಿಂದ ನಗೆ ಭಾಷಣ ಕಾರ್ಯಕ್ರಮ ಇದೆ.


ಹಿರಿಯ ವಿಜ್ಞಾನ ಬರೆಹಗಾರರೂ, ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗಕ್ಕಾಗಿ, ಪೂಜ್ಯರಾದ ಡಾ.ಜಿ.ವಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದ, ಬಳಗದ ಸದಸ್ಯ ಶ್ರೀಯುತ ಎಸ್. ರಾಮಪ್ರಸಾದ್ ಅವರು ನಮ್ಮ ಮೈಸೂರು ಸಾಹಿತ್ಯ ದಾಸೋಹಕ್ಕಾಗಿ ವಿನ್ಯಾಸಗೊಳಿಸಿಕೊಟ್ಟಿರುವ ʼಲೋಗೋʼ ಮತ್ತು “ಸಾಹಿತ್ಯಶತಕ” ಕೃತಿಯು ಲೋಕಾರ್ಪಣೆಗೊಳ್ಳಲಿದೆ.


ಮೈಸೂರು ಸಾಹಿತ್ಯ ದಾಸೋಹದ “ಶತಕೋತ್ಸವ” ಸಮಾರಂಭ ಮತ್ತು “ಸಾಹಿತ್ಯ ಶತಕ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಇದೇ 18.02.2024 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ, ವಿಜಯನಗರ, ಮೈಸೂರು ಇಲ್ಲಿ ನಡೆಯಲಿದೆ.
ಆ ಕ್ಷಣಕ್ಕಾಗಿ ಎಲ್ಲಾ ಸಾಹಿತ್ಯ ಆಸಕ್ತರು ಕಾಯುತ್ತಿದ್ದಾರೆ. ಏನೇ ಆಗಲಿ ಮೈಸೂರು ಸಾಹಿತ್ಯ ದಾಸೋಹ ಮೈಸೂರಿನಲ್ಲೇ ಅಲ್ಲದೆ ಹೊರ ಜಿಲ್ಲೆಗಳನ್ನು ಕೂಡ ಬಹಳ ಪ್ರಸಿದ್ಧಿ ಪಡೆದಿದೆ.


ತಾವು ಬೆಳೆದು ಎಲ್ಲರನ್ನೂ ಬೆಳೆಸುತ್ತಿರುವ ಎಂ ಆರ್ ಆನಂದ್ ಮತ್ತು ಪದ್ಮಾ ಆನಂದ್ ದಂಪತಿಗಳು ಈ ನಿಟ್ಟಿನಲ್ಲಿ ಅಭಿನಂದನಾರ್ಹರು.
ಮೈಸೂರಿನಲ್ಲಿ ಪ್ರಾರಂಭಿಸಬೇಕು ಎನ್ನುವ ಅವರ ಒಂದು ಚಿಂತನೆ ಇಂದು ಹೆಮ್ಮರವಾಗಿದೆ. ಫಲ ಕೊಡಲು ಶುರು ಮಾಡಿದೆ. ಈ ಸಾಹಿತ್ಯ ದಾಸೋಹದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ವಿಶೇಷ ಅಭಿನಂದನೆಗಳು. ಇಂತಹ ಸಾಹಿತ್ಯ ದಾಸೋಹಗಳಲ್ಲಿ ಯುವಜನತೆಯೂ ಕೂಡ ಭಾಗವಹಿಸುವಂತಾಗಬೇಕು. ಸಾಹಿತ್ಯದ ಕುರಿತಾಗಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂಬುದೇ ಎಲ್ಲರ ಆಶಯ.

-ಕಾಳಿಹುಂಡಿ ಶಿವಕುಮಾರ್, ಮೈಸೂರು.
9844883581.

Leave a Reply

Your email address will not be published. Required fields are marked *