ನಾಡಿನ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಬೆಂಗಳೂರು ನಗರವು ಇಂದು ಬೃಹಧಾಕಾರವಾಗಿ ಬೆಳೆದಿದ್ದು, ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ ಎಂದು ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ‘ಕೆಂಪೇಗೌಡರ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಕೆಂಪೇಗೌಡರು ವಿಜಯನಗರದ ಜನಪರ ಆಡಳಿತ, ವೈಭವಯುತವಾಗಿ ನಡೆಯುತ್ತಿದ್ದ ವಿಜಯದಶಮಿಯನ್ನು ಕಣ್ತುಂಬಿಕೊಂಡು ವಿಜಯನಗರದಂತಹ ಮತ್ತೊಂದು ನಗರವನ್ನು ಕಟ್ಟಬೇಕೆಂದು ಪಣತೊಟ್ಟು 500 ವರ್ಷಗಳ ಹಿಂದೆಯೇ ಅಡಿಗಲ್ಲು ಹಾಕಿದ್ದರು. ಕರ್ನಾಟಕದ ಕಳಶಪ್ರಾಯವಾಗಿರುವ ಬೆಂಗಳೂರು ಪ್ರಗತಿಗೆ ನಾಡಪ್ರಭು ಕೆಂಪೇಗೌಡರ ಆಡಳಿತ ಕಾರ್ಯವೈಖರಿ ನಮ್ಮೆಲ್ಲರಿಗೂ ಮಾದರಿಯಾಗಿದೆ. ಭಾರತ ಎಂದರೇ ಬೆಂಗಳೂರು ಎನ್ನುವಷ್ಟರಮಟ್ಟಿಗೆ ಬೆಂಗಳೂರು ಬೆಳೆದಿದೆ ಎಂದರು.

ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 1510 ಜೂನ್ 27ರಂದು ಜನಿಸಿದ ನಾಡಪ್ರಭು ಕೆಂಪೇಗೌಡ ಅವರು ಸಣ್ಣ ಪಟ್ಟಣವಾಗಿದ್ದ ಬೆಂಗಳೂರನ್ನು ಇಂದು ಪ್ರಪಂಚದಲ್ಲಿ ಅತ್ಯುತ್ತಮ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಳ್ಳುವ ಮಟ್ಟಿಗೆ ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರಿನಾದ್ಯಂತ ಅನೇಕ ಕೆರೆಕಟ್ಟೆಗಳು, ಉದ್ಯಾನವನಗಳು, ಸಾಕಷ್ಟು ದೇವಸ್ಥಾನಗಳನ್ನು ನಿರ್ಮಿಸಿದ ಕೆಂಪೇಗೌಡ ಅವರ ಜನಪರ ಯೋಜನೆಗಳ ಸಾಧನೆಗಳನ್ನು ಪರಿಗಣಿಸಿ ಸರ್ಕಾರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರನ್ನಿಟ್ಟಿದೆ. ಇದು ಕೆಂಪೇಗೌಡ ಅವರಿಗೆ ಸಲ್ಲುವ ಗೌರವವಾಗಿದೆ ಎಂದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಎಂ.ಜಿ. ಮಂಜುನಾಥ್ ಅವರು ಮಾತನಾಡಿ ಬುದ್ಧ, ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ ಅವರಂತೆ ನಾಡಪ್ರಭು ಕೆಂಪೇಗೌಡ ಅವರು ಸಮಾಜದ ಎಲ್ಲಾ ವರ್ಗಗಳ ಜನರನ್ನು ಸರ್ವಸಮನ್ವಯದಿಂದ ಕಂಡರು. ಎಲ್ಲಾ ಸ್ತರಗಳ ಜನರಿಗೂ ಬೆಂಗಳೂರಿನಲ್ಲಿ ಆಶ್ರಯ ನೀಡಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಿಕೊಟ್ಟು ಜನಸಾಮಾನ್ಯರ ಏಳಿಗೆಗೆ ಕಾರಣರಾದರು. ವ್ಯಾಪಾರದ ಅಭಿವೃದ್ಧಿಗಾಗಿ ಬಳೇಪೇಟೆ, ಚಿಕ್ಕಪೇಟೆ, ಮಂಡಿಪೇಟೆ, ಕಾಟನ್ ಪೇಟೆ ಸೇರಿದಂತೆ 35 ಪೇಟೆಗಳನ್ನು ತೆರೆದರು. ಕುಡಿಯುವ ನೀರು ಹಾಗೂ ರೈತಾಪಿ ವರ್ಗದವರ ಕೃಷಿ ಅನುಕೂಲಕ್ಕಾಗಿ 200 ಕೆರೆಗಳನ್ನು ನಿರ್ಮಿಸಿದ ಕೆಂಪೇಗೌಡರು ಬೆಂಗಳೂರಿನ ಅಸ್ತಿತ್ವವಿರುವವರೆಗೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದರು.

ರಕ್ಷಣಾ ವಾಸ್ತುಶಿಲ್ಪಶಾಸ್ತ್ರ ಪಾರಂಗತರಾಗಿದ್ದ ಕೆಂಪೇಗೌಡರು ನಾಡಿನ ರಕ್ಷಣೆಗಾಗಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿಯೂ ನಿರ್ಮಿಸಿದ ವೀಕ್ಷಣಾಗೋಪುರಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿವೆ. ಈಗಿನ ಮಳೆನೀರು ಕೊಯ್ಲು ಯೋಜನೆ ಕೆಂಪೇಗೌಡರ ದೂರದೃಷ್ಠಿ ಯೋಜನೆಯಾಗಿದೆ. ಮಳೆಗಾಲದಲ್ಲಿ ನೀರು ವ್ಯರ್ಥವಾಗದಂತೆ ಮಳೆನೀರು ಕೊಯ್ಲು ಮಾಡಿ ಬೆಟ್ಟಗಳಿಂದ ಇಳಿಯುವ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಉಪಯೋಗಿಸಲು ಅನುಕೂಲ ಮಾಡಿಕೊಟ್ಟ ಕೆಂಪೇಗೌಡರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೆ ಮಾದರಿ ಆಡಳಿತಕ್ಕೆ ಚಿರಸ್ಮರಣೀಯರಾಗಿದ್ದಾರೆ. ಹಲವು ಕವಿಗಳಿಗೂ ಆಶ್ರಯ ನೀಡಿದ್ದ ಕೆಂಪೇಗೌಡರ ಆಸ್ಥಾನ ಕವಿ ಹೊನ್ನಪ್ಪ ಅವರು ಕೀರ್ತನೆಗಳ ಮೂಲಕ ಕೆಂಪೇಗೌಡರ ಜೀವನ ಚರಿತ್ರೆಯನ್ನು ಚಿತ್ರಿಸಿದ್ದಾರೆ. ಕೆಂಪೇಗೌಡರ ಇತಿಹಾಸ ಸಾರುವ 100 ಶಾಸನಗಳು ಲಭ್ಯವಿವೆ ಎಂದು ಡಾ. ಎಂ.ಜಿ. ಮಂಜುನಾಥ್ ಅವರು ಹೇಳಿದರು.

ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ನಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡ ಅವರು ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು. ಪರಿಸರ ಸಂರಕ್ಷಣೆಗೂ ಮಹತ್ವ ನೀಡಿದ್ದರು. ಎಲ್ಲಾ ಧರ್ಮದ ಜನರನ್ನು ಸಮಾನತೆಯಿಂದ ಕಾಣುತ್ತಿದ್ದ ಕೆಂಪೇಗೌಡ ಅವರ ಮೌಲ್ಯಯುತ ಆದರ್ಶ ಗುಣಗಳು ಅನುಕರಣೀಯವಾಗಿವೆ. ವಿಶ್ವಭೂಪಟದಲ್ಲಿ ಬೆಂಗಳೂರು ಚಿರಸ್ಥಾಯಿಯಾಗಲು ಸಮಾಜಮುಖಿಯಾಗಿದ್ದ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ ಎಂದರು.

ನಗರಸಭೆ ಉಪಾಧ್ಯಕ್ಷರಾಧ ಹೆಚ್.ಎಸ್. ಮಮತ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಸಮಾಜದ ತಾಲ್ಲೂಕು ಅಧ್ಯಕ್ಷರಾದ ಸುದರ್ಶನಗೌಡ ಅವರು ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಮಾತನಾಡಿದರು.

ಇದೇ ವೇಳೆ ನಾಡಪ್ರಭು ಕೆಂಪೇಗೌಡ ಅವರ ಜೀವನ ಸಾಧನೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸಿ ಪಸರಿಸುವ ಸಲುವಾಗಿ ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ಗಾಯನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸ್ಮರಣಿಕೆ, ಪ್ರಮಾಣಪತ್ರ, ನಗದು ಬಹುಮಾನ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ತಹಶೀಲ್ದಾರ್ ಗಿರಿಜಾ, ಸಮಾಜದ ಮುಖಂಡರಾದ ಪುಟ್ಟಸ್ವಾಮಿಗೌಡ, ಚಿನ್ನಮುತ್ತು, ಸೋಮಶೇಖರ್, ನಾಗೇಂದ್ರಗೌಡ, ಚಾ.ರಂ. ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *