5ನೇ ಸೀನಿಯರ್ ರಾಜ್ಯ ಮಟ್ಟದ ನೆಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ
ಗೌರವಾಧ್ಯಕ್ಷೆ ನರ್ಗೀಸ್ಬಾನು ಅವರಿಂದ ಕ್ರೀಡಾಪಟುಗಳಿಗೆ ಅಭಿನಂದನೆ
ಚಾಮರಾಜನಗರ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ನೆಟ್ಬಾಲ್ ಪಂದ್ಯಾವಳಿಯಲ್ಲಿ 3ನೇ ಸ್ಥಾನ ಪಡೆದ ಚಾಮರಾಜನಗರ ಜಿಲ್ಲೆಯ ಕ್ರೀಡಾಪಟುಗಳನ್ನು ಗೌರವಾಧ್ಯಕ್ಷೆ ನರ್ಗೀಸ್ ಬಾನು ಅವರು ಅಭಿನಂದಿಸಿದರು.
ಬೆಂಗಳೂರಿನ ಚಾಮರಾಜಪೇಟೆಯ ಜಿಂಕೆ ಪಾರ್ಕ್ ಎದುರಿರುವ ರಾಜೀವ್ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಮೇ 18 ಮತ್ತು 19ರಂದು ನಡೆದ 5ನೇ ಸೀನಿಯರ್ ರಾಜ್ಯ ಮಟ್ಟದ ನೆಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿ, 3ನೇ ಸ್ಥಾನ ಗಳಿಸಿದರು. ಈ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ಇಂದು ಆಗಮಿಸಿದ ಕ್ರೀಡಾಪಟುಗಳನ್ನು ಚಾಮರಾಜೇಶ್ವರ ದೇವಸ್ಥಾನದ ಬಳಿ ಜಿಲ್ಲಾ ನೆಟ್ಬಾಲ್ ಅಸೋಸಿಯೇಷನ್ನ ಗೌರವಾಧ್ಯಕ್ಷೆ ನರ್ಗೀಸ್ ಬಾನು ಅವರು ಅಭಿನಂದಿಸಿದರು.
ನಂತರ ಮಾತನಾಡಿದ ಅವರು, ಅಮೆಚೂರ್ ನೆಟ್ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಯೂನಿಕ್ಸ್ ಸ್ಪೋರ್ಟ್ಸ್ ಆಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ 5ನೇ ಸೀನಿಯರ್ ರಾಜ್ಯ ಮಟ್ಟದ ನೆಟ್ಬಾಲ್ ಪಂದ್ಯಾವಳಿಯಲ್ಲಿ ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಪಾಲ್ಗೊಂಡು 3ನೇ ಸ್ಥಾನ ಪಡೆದಿರುವುದು ಸಂತಸದ ವಿಷಯ ಎಂದರು.
16 ಜಿಲ್ಲೆಯಿಂದ 32 ಟೀಮ್ನ ಪುರುಷ ಹಾಗೂ ಮಹಿಳೆಯರ ತಂಡಗಳು ಆಗಮಿಸಿತ್ತು. ಇವುಗಳಲ್ಲಿ ಹಲವು ತಂಡಗಳೊಂದಿಗೆ ಸೆಣಸಾಟ ನಡೆಸಿ, ಕ್ವಾಟರ್ ಫೈನಲ್ನಲ್ಲಿ ಬೆಳಗಾವಿ ಜಿಲ್ಲೆಯೊಂದಿಗೆ ನಡೆದ ರೋಚಕ ಪಂದ್ಯಾಟದಲ್ಲಿ ಅವರನ್ನು ಮಣಿಸಿ ಸೆಮಿಫೈನಲ್ಗೆ ಪಾದಾರ್ಪಣೆ ಮಾಡಿದರು.
ನಂತರ ಸೆಮಿಫೈನಲ್ನಲ್ಲಿ ಬೆಂಗಳೂರು ನಗರ ತಂಡದ ಮೇಲೆ ನಡೆದ ರೋಚಕ ಪಂದ್ಯದಲ್ಲಿ 22-23 ರ ಅಂತರದ ಅಂತಿಮ ಹಣಾಹಣಿಯಲ್ಲಿ 1 ಅಂಕದಿಂದ ಪರಾಜಿತಗೊಂಡು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು ಎಂಬ ಮಾಹಿತಿ ನೀಡಿದರು.
ಜಿಲ್ಲೆಯ ಅಭಿನಾಯಕ್ಗೆ ಅತ್ಯುತ್ತಮ ಗೋಲು ರಕ್ಷಕ ಪ್ರಶಸ್ತಿ : ನೆಟ್ಬಾಲ್ ಚಾಂಪಿಯನ್ ಶಿಪ್ನಲ್ಲಿ ನಡೆದ ಲೀಡ್ನಲ್ಲಿ 3 ಪಂದ್ಯಟ, ಕ್ವಾಟರ್ಫೈನಲ್ನಲ್ಲಿ 1 ಪಂದ್ಯಾಟ, ಸೆಮಿಫೈನಲ್ನಲ್ಲಿ 1 ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ನಮ್ಮ ಜಿಲ್ಲೆಯ ಅಭಿನಾಯಕ್ಗೆ ಅತ್ಯುತ್ತಮ ಗೋಲು ರಕ್ಷಕ (ಬೆಸ್ಟ್ ಗೋಲ್ ಡಿಫೆಂಡರ್) ಪ್ರಶಸ್ತಿಯನ್ನು ಅಮೆಚೂರ್ ನೆಟ್ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಯೂನಿಕ್ಸ್ ಸ್ಪೋರ್ಟ್ಸ್ ಆಕಾಡೆಮಿ ವತಿಯಿಂದ ನೀಡಿ ಗೌರವಿಸಲಾಯಿತು ಎಂದರು.
ಜಿಲ್ಲಾ ನೆಟ್ಬಾಲ್ ಅಸೋಷಿಯೇಷನ್ನ ಅಧ್ಯಕ್ಷರಾದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ನಮ್ಮ ತಂಡವು ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕ್ರೀಡೆಯಲ್ಲಿ ಯಶಸ್ಸು ಸಾಧಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಕ್ರೀಡಾಪಟುಗಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಅತ್ಯುತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುತ್ತಿರುವ ತರಬೇತುದಾರರಾದ ಮಹದೇವ ಪ್ರಸಾದ್ ಅವರ ಪರಿಶ್ರಮ ಹಾಗೂ ಅವರ ಮಾರ್ಗದರ್ಶನವೂ ಕೂಡಾ ಪ್ರಶಸ್ತಿಗಳಿಸಲು ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಇನ್ನೂ ಹೆಚ್ಚಿನ ಕೀರ್ತಿ ಯಶಸ್ಸನ್ನು ತರಲೆಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರರಾದ ಮಹದೇವ ಪ್ರಸಾದ್, ಸಹಾಯಕ ತರಬೇತುದಾರರಾದ ಸೋಮಶೇಖರ್, ವ್ಯವಸ್ಥಾಪಕ ಮಾದೇಶ್, ಕ್ರೀಡಾಪಟುಗಳಾದ ತಂಡದ ನಾಯಕ ಚಂದು, ಸದಸ್ಯರಾದ ಸಂದೀಪ್ ಎಸ್., ದಿನೇಶ್.ಎಂ., ಅಭಿ.ಎಸ್., ಅಭಿನಾಯಕ್ .ಡಿ., ಸಂಯಕ್, ಚೇತನ್, ಪವನ್ಕುಮಾರ್, ದಿಲೀಪ್, ಪ್ರಜ್ವಲ್ಕುಮಾರ್, ನಿತಿನ್ನಾಯಕ್, ಮಹದೇವ ಇದ್ದರು.
ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆ ಕೊರಗಾಂವ್ನ ಬೋರವ ಜವಾಹರ್ಲಾಲ್ ನೆಹರೂ ಇನ್ಟಿಟ್ಯೂಟ್ನಲ್ಲಿ ನಡೆದ 36ನೇ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ನ ಬಾಲಕಿಯರ ವಿಭಾಗದಲ್ಲಿ 2ನೇ ರನ್ನರ್ ಅಪ್, ಮತ್ತು ಫಾಸ್ಟ್ 5 ಜೂನಿಯರ್ ಚಾಂಪಿಯನ್ ಶಿಪ್ನ ಬಾಲಕರ ವಿಭಾಗದಲ್ಲಿ 2ನೇ ರನ್ನರ್ ಅಪ್ ಪ್ರಶಸ್ತಿಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.