
ಹರವೆಯಲ್ಲಿ ಅಂತರರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಜಾಗೃತಿ ಜಾಥಾ

ಹರವೆ: ವಿದ್ಯಾರ್ಥಿ ದೆಸೆಯಿಂದ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆ ಮತ್ತು ವ್ಯಸನ ಬಗ್ಗೆ ಅರಿವು ಮೂಡಿಸುವ ಮೂಲಕ ಪೋಷಕರು ಮಕ್ಕಳ ವಿದ್ಯಾಭ್ಯಾಸ ಜೊತೆಗೆ ಅವರ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶೇಷಾದ್ರಿ ತಿಳಿಸಿದರು.
ಹೋಬಳಿ ಕೇಂದ್ರ ಹರವೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ, ಹರವೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವ್ಯಸನಕ್ಕೆ ಹೆಚ್ಚಾಗಿ ಯವಕರು, ಯುವತಿಯರು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆ ಅಪರಾಧವಾಗಿದ್ದು, ಇದೊಂದು ಯುವ ಜನಾಂಗವನ್ನು ನಾಶ ಮಾಡುವ ಮತ್ತು ಮುಗ್ಧ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತದೆ. ಮಾದಕ ವ್ಯಸನ ಮೊದಲು ಮೋಜು ಮಸ್ತ್ಗೆ ಬಳಸಲಾಗುತ್ತಿದೆ. ಇದಕ್ಕೆ ಒಂದು ಬಾರಿ ದಾಸರಾದರೆ, ಜೀವನ ಪರ್ಯಾಂತ ಸೇವನೆ ಮಾಡಬೇಕಾಗುತ್ತದೆ. ಇದರಿಂದ ಅಮೂಲ್ಯವಾದ ಜೀವನ ಹಾಳುತ್ತದೆ. ಅವರು ಮನೆ ಮತ್ತು ಕುಟುಂಬಕ್ಕೆ ಶಾಪವಾಗುವುದಿಲ್ಲ. ಇಡೀ ಸಮಾಜ ಮತ್ತು ದೇಶಕ್ಕೆ ಇಂಥ ಮಾದಕ ವ್ಯಸನಿಗಳು ಕಂಟಕವಾಗುತ್ತದೆ. ಹೀಗಾಗಿ ಮಕ್ಕಳು ಇದರ ಬಗ್ಗೆ ಜಾಗೃತರಾಗಬೇಕು ಎಂದರು.
ವಿದ್ಯಾರ್ಥಿಗಳಾದ ತಾವುಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಹಾನಗರದಂತಹ ಪಟ್ಟಣಗಳಿಗೆ ಹೋದಾಗ ಇಂಥ ಕರಾಳ ದಂಧೆಗಳು ನಿಮಗೆ ಸವಾಲಾಗುತ್ತಿದೆ. ಮಾದಕ ವಸ್ತುಗಳ ಸೇವನೆ ಮಾಡುವುದು ಮತ್ತು ದಂಧೆಗಳಿಗೆ ಪ್ರೋತ್ಸಾಹ ನೀಡುವಂತಹ ಪ್ರಕರಣಗಳು ನಿಮಗೆ ಗೋಚರವಾಗುತ್ತದೆ. ವಿದ್ಯಾಭ್ಯಾಸ ನಿಮ್ಮ ಮೊದಲ ಅದ್ಯತೆಯಾಗಬೇಕು. ನಿಮಗೆ ಅರಿವು ಇಲ್ಲದೇ ವ್ಯಸನಿಕ್ಕೆ ದಾಸರಾಗವವರು ಇರುತ್ತದೆ. ಇದರ ಬಗ್ಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ತಜ್ಞರ ಸಲಹೆ ಸೂಚನೆಗಳನ್ನು ಪಡೆದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ ಎಂದು ಶೇಷಾದ್ರಿ ತಿಳಿಸಿದರು.
ಜಾಗೃತಿ ಜಾಥಾ: ಇದಕ್ಕು ಮುನ್ನಾ ಹರವೆ ಬಸ್ ನಿಲ್ದಾಣದಿಂದ ಸರ್ಕಾರಿ ಪದವಿ ಪೂರ್ವ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಮಾದಕ ವ್ಯಸನ ತಡೆ ದಿನಾಚರಣೆ ಜಾಗೃತಿ ಜಾಥಾ ನಡೆಯಿತು. ಮಾದಕ ವ್ಯಸನದಿಂದ ದೂರವಿಡಿ, ಯುವಕರಿಗೆ ಮಾದಕ ವ್ಯಸನ ನಿಮ್ಮ ಜೀವನವೇ ಅಂತ್ಯ ಎಂಬಿತ್ಯಾದಿ ಭಿತ್ತಪತ್ರಗಳನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ನಂತರ ಹೊರ ವಲಯದ ನಿತ್ಯಶ್ರೀ ಕಲ್ಯಾಣ ಮಂಟಪದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ, ಮೋರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಸವಿತಾ, ಪ್ರೌಢಶಾಲೆಯ ಶಿಕ್ಷಕ ರೇವಣ್ಣ, ಪೊಲೀಸ್ ಸಿಬ್ಬಂದಿಗಳಾದ ಹೊಸೂರು ಕುಮಾರ್, ಆಶೋಕ್ ಮುಂತಾದವರು ಇದ್ದರು.