ಚಾಮರಾಜನಗರ: ಕ್ರೀಡೆಗಳಲ್ಲಿ ಭಾಗವಹಿಸುವವರು ಶಕ್ತಿಶಾಲಿಯಾಗುವುದರೊಂದಿಗೆ ಕ್ರೀಡಾ ನೈಪುಣ್ಯತೆ ಹೊಂದಿರಬೇಕು ಎಂದು ಎಂಎಸ್ ಐಎಲ್ ಅಧ್ಯಕ್ಷ , ಶಾಸಕ ಸಿ.ಪುಟ್ಟರಂಗಶೆಟ್ಟಿ ಆಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ವೆಂಕಟಯ್ಯನ ಛತ್ರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಸಂಜೆ ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆ ವತಿಯಿಂದ ಆಯೋಜಿಸಿರುವ ಚಾಮರಾಜನಗರ ಜಿಲ್ಲಾಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಈಚಿನ ವರ್ಷಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ತೀಯ ಮಟ್ಟದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹೆಸರು ಕೀರ್ತಿ ಸಂಪಾದಿಸಿದ್ದಾರೆ. ಜಿಲ್ಲೆಯ ವೆಂಕಟಯ್ಯನಛತ್ರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಗ್ರಾಮೀಣ ಕ್ರೀಡೆಯಾದ ಖೊಖೊ ಕ್ರೀಡೆಯನ್ನು ಪ್ರದರ್ಶಿಸುತ್ತ ಬಂದಿರುವುದು ಸಂತಸದ ಸಂಗತಿ, ಖೊಖೊವನ್ನು ಸಣ್ಣ ಬಾಲಕ, ಬಾಲಕಿಯರು ಆಡಬಹುದು, ಕಬ್ವಡ್ಡಿಯನ್ನು ಶಕ್ತಿವಂತವರು ಮಾತ್ರ ಆಡಲು ಸಾಧ್ಯ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿರುವ ಕ್ರೀಡಾಪಟುಗಳು ಉತ್ತಮವಾಗಿ ಆಟವಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆಯ ಅಧ್ಯಕ್ಷ ಎಚ್.ಬಿ.ಶಮಿತ್ ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಈಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚಿನಮಟ್ಟದಲ್ಲಿ ಆಯೋಜನೆಯಾಗುತ್ತಿವೆ. ಖೊಖೊ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದ ಕ್ರೀಡಾಪಟು ಚೈತ್ರಾಳಿಗೆ ಸರಕಾರ ೫ ಲಕ್ಷ ರೂ. ಪುರಸ್ಕಾರ ನೀಡಿ, ಗೌರವಿಸಿದೆ.ಅವರಿಗೆ ೫೦ ಲಕ್ಷ ರೂ. ಪ್ರೋತ್ಸಾಹಕ ಬಹುಮಾನ ನೀಡಬೇಕಿತ್ತು. ಕ್ರೀಡಾಪಟುಗಳಿಗೆ ಜನಪ್ರತಿನಿಧಿಗಳು ಸೇರಿದಂತೆ ಕ್ರೀಡಾ ಇಲಾಖಾಧಿಕಾರುಗಳು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್ ಮಾತನಾಡಿ, ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಒಂದೇ ನಾಣ್ಯದ ಒಂದೇ ಮುಖಗಳು, ಎರಡರಲ್ಲೂ ಸಾಧನೆ ಮಾಡಬೇಕಾದರೆ ಪರಿಶ್ರಮ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಸಾಧಕರನ್ನು ಸನ್ಮಾನಿಸಲಾಯಿತು.
ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆಯ ಅಧ್ಯಕ್ಷ ಶಮಿತ್ ಕುಮಾರ್ ಟಾಸ್ ಚಿಮ್ಮಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಗೌರವಾಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ನಟರಾಜು,ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಲ್ಲೇಶ್, ಸರ್ಕಾರಿ ಪ್ರೌಡಶಾಲೆ ಉಪಪ್ರಾಂಶುಪಾಲೆ ನಾಗರತ್ನ ಎಸ್ಡಿಎಂಸಿ ಆಧ್ಯಕ್ಷ ಶಶಿಕುಮಾರ್, ಗ್ರಾಪಂ ಸದಸ್ಯ ಶಿವಮಲ್ಲು ಜಿ,ಪಂ ಮಾಜಿ ಸದಸ್ಯ ರಮೇಶ್, ತಾ,ಪಂ ಮಾಜಿ ಸದಸ್ಯ ಎಚ್,ಎಂ ಮಹದೇವಶೆಟ್ಟಿ, ಚಿಕ್ಕಮೋಳೆ ಮಹೇಶ್, ರಾಜು ಹೊಸೂರು, ಸೇರಿದಂತೆ ಚಾಮರಾಜನಗರ ಜಿಲ್ಲಾ ಖೊಖೊ ಸಂಸ್ಥೆ ಪದಾಧಿಕಾರಿಗಳು ಹಾಗೂ ಸದಸ್ಯರು ೧೬ ತಂಡಗಳ ಕ್ರೀಡಾಪಟುಗಳು ಹಾಜರಿದ್ದರು.