ಚಾಮರಾಜನಗರ: ಸಾರಿಗೆ ಇಲಾಖೆಯು ವಾಹನಗಳಿಗೆ ಎಚ್ಎಸ್ಆರ್ಪಿ ನಾಮಫಲಕ ಅಳವಡಿಸಲು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಹಾಗೂ ಕನ್ನಡ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸಾರಿಗೆ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕನ್ನಡ ಸಂಘಟನೆ ಕಾರ್ಯಕರ್ತರು ಸಾರಿಗೆ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗಡಿನಾಡು ಕನ್ನಡ ರಕ್ಷಣ ಹೋರಾಟ ವೇದಿಕೆ ಅಧ್ಯಕ್ಷ ಚಾ.ರಂ.ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಜನರಿಗೆ ಹೊರೆಯಾಗುವಂತಹ ಹೆಚ್ಎಸ್ಆರ್ಪಿ ನಾಮಫಲಕ ಅಳವಡಿಕೆ ನಿಯಮವನ್ನು ಕೂಡಲೇ ಹಿಂಪಡೆಯಬೇಕು. ಈಗಾಗಲೇ ಸಾರ್ವಜನಿಕರು ತಮ್ಮ ವಾಹನಗಳಿಗೆ ಶುಲ್ಕವನ್ನು ಪಾವತಿಸಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಾರ್ವಜನಿಕರು ಹಣವಿಲ್ಲದೆ ಪರದಾಡುವಂತಹ ಸ್ಥಿತಿ ತಲುಪಿದ್ದಾರೆ. ಇಂತಹ ಸಂದರ್ಭದಲಿ ಸಾರ್ವಜನಿಕರಿಗೆ ಹೊರೆಯಾಗುವಂತಹ ಇಂತಹ ನಿಯಮ ಜಾರಿಗೆ ಮುಂದಾಗಬಾರದು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ಇಂತಹ ನಿಯಮವನ್ನು ತರಬಾರದು. ನಿಯಮ ಹಿಂಡೆಯುವವರೆಗೂ ಸಹ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಸ್ಥಳಕ್ಕೆ ಬಂದ ಇಲಾಖೆ ಅಧಿಕಾರಿಗಳ ಮೂಲಕ ಸಾರಿಗೆ ಸಚಿವರಿಗೆ ತಮ್ಮ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ವೀರಭದ್ರ, ನಂಜುಂಡಶೆಟ್ಟಿ, ಗು.ಪುರುಷೋತ್ತಮ್, ರವಿಚಂದ್ರ, ಆಟೋ ನಾಗೇಶ್, ಮಹೇಶ್ಗೌಡ ಮತ್ತಿತರರಿದ್ದರು.