ಮಾನವ-ವನ್ಯಜೀವಿ ಸಂಘರ್ಷ ತಡೆಗೆ 157 ಕೋಟಿ. ರೂ.: ಸಂಪುಟ ಅನುಮೋದನೆ- ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟ: : ಕಾವೇರಿ ವನ್ಯಜೀವಿ ಧಾಮ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಅರಣ್ಯದ ಸುತ್ತಮುತ್ತ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರೂ. ಹೆಚ್ಚುವರಿಯಾಗಿ ನೀಡಲು ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 88 ಕಿ.ಮೀ. ರೈಲ್ವೆ ಬ್ಯಾರಿಕೇಡ್, 53 ಕಿ.ಮೀ. ಆನೆ ಕಂದಕ, 50 ಕಿ.ಮೀ. ಸೌರ ತೂಗು ಬೇಲಿ (ಸೋಲಾರ್ ಟೆಂಟಕಲ್ ಫೆನ್ಸಿಂಗ್) ನಿರ್ಮಾಣಕ್ಕೆ ಈ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಮಾನವ ವನ್ಯಜೀವಿ ಅದರಲ್ಲೂ ಆನೆಗಳಿಂದ ಬೆಳೆಹಾನಿ, ಜೀವಹಾನಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವನ್ಯಜೀವಿಧಾಮಗಳಲ್ಲಿ ಲಂಟನಾ, ಸನ್ನಾ ಕಳೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಆನೆಗಳು ಮತ್ತು ಸಸ್ಯಹಾರಿ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುತ್ತಿದೆ. ಕೂಡಲೇ ದೊಡ್ಡ ಪ್ರಮಾಣದಲ್ಲಿ ಲಂಟನಾ, ಸನ್ನಾ ತೆರವಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಸಲು ಹಾಗೂ ಡಿಗ್ರೇಡ್ ಆಗಿರುವ ಅರಣ್ಯದಲ್ಲಿ ಸ್ಥಳೀಯ ಪ್ರಭೇದದ ಗಿಡ ಬೆಳೆಸಲು ಮತ್ತು ಅರಣ್ಯದೊಳಗಿರುವ ಜಲಗುಂಡಿಗಳಲ್ಲಿ ಶೇಖರವಾಗಿರುವ ಹೂಳು ತೆಗೆಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಕ್ರಮ ವಹಿಸಲು ಸಚಿವರು ಸೂಚಿಸಿದರು.

ಸೆಕ್ಷನ್ 4 ಪ್ರಕರಣ ಇತ್ಯರ್ಥಕ್ಕೆ ಸೂಚನೆ: ಕೊಳ್ಳೆಗಾಲ ವಲಯದಲ್ಲಿ ಕರ್ನಾಟಕ ಅರಣ್ಯ ಕಾಯಿದೆಯಡಿ ಸೆಕ್ಷನ್ 4 ಆಗಿರುವ ಎಲ್ಲ 14 ಪ್ರಕರಣಗಳನ್ನು 3 ತಿಂಗಳ ಒಳಗಾಗಿ ಇತ್ಯರ್ಥಪಡಿಸಲು ಅರಣ್ಯ ಸಂಸ್ಥಾಪನಾಧಿಕಾರಿ (ಎಫ್.ಎಸ್.ಓ.) ಜೊತೆ ಸಹಕರಿಸುವಂತೆ ಆದರೆ, ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿರುವವರನ್ನು ತೆರವು ಮಾಡಿಸಲು ತತ್ ಕ್ಷಣವೇ ಕ್ರಮ ವಹಿಸುವಂತೆ ಸೂಚಿಸಿದರು.

ಅರಣ್ಯ ವಿಸ್ತರಣೆ ಮತ್ತು ಅರಣ್ಯ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಹಾಗೂ 2015ರ ಸರ್ಕಾರದ ನಡಾವಳಿಯಂತೆ ಜೀವನೋಪಾಯಕ್ಕೆ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವವರಿಗೆ ತೆರವು ಮಾಡದಂತೆ ಸೂಚಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅರಣ್ಯ ಭೂಮಿ ಗುತ್ತಿಗೆ ಪಡೆದಿರುವ ಕೆಲವು ಕಂಪನಿಗಳು ಇಲಾಖೆಗೆ ಗುತ್ತಿಗೆ ಹಣವನ್ನೂ ಪಾವತಿಸುತ್ತಿಲ್ಲ, ಗುತ್ತಿಗೆ ಅವಧಿ ಪೂರ್ಣಗೊಂಡರೂ ಮರಳಿ ಇಲಾಖೆಗೆ ನೀಡಿಲ್ಲ. ಈ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸರ್ಕಾರಿ ವಕೀಲರಿಗೆ ಸೂಕ್ತ ದಾಖಲೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಡು ಹಂದಿ ಸಾಯಿಸಲು ಕಚ್ಚಾ ಬಾಂಬ್ ಬಳಕೆ ನಿಗ್ರಹಕ್ಕೆ ಸೂಚನೆ: ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಹಂದಿಯನ್ನು ಸಾಯಿಸಲು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್ ತಯಾರಿಸಿ ಇಡಲಾಗುತ್ತಿದ್ದು, ಇದನ್ನು ತಿಂದು ಜಾನುವಾರುಗಳು ಮತ್ತು ವನ್ಯಜೀವಿಗಳುವ ಸಾವಿಗೀಡಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕೂಡಲೇ ಈ ಬಗ್ಗೆ ನಿಗಾ ಇಟ್ಟು, ಕಚ್ಚಾ ಬಾಂಬ್ ಇಡುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.

ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಆದೇಶ: ಚಾಮರಾಜನಗರ ಜಿಲ್ಲೆಯ 620 ಕೆರೆಗಳ ಪೈಕಿ 100 ಕೆರೆಗಳ ನೀರು ಕಲುಷಿತವಾಗಿರುವುದು ಪರೀಕ್ಷೆಯಿಂದ ದೃಢವಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ ಜಲ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಎ.ಪಿ.ಸಿ.ಸಿಎಫ್.ಗಳಾದ ಕುಮಾರ್ ಪುಷ್ಕರ್, ಲಿಂಗರಾಜ್, ಸಿಸಿಎಫ್ ಹೀರಾಲಾಲ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *