ಚಾಮರಾಜನಗರ: ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸಲಿದ್ದು, ಜೀವಸಂಕುಲದ ಉಜ್ವಲ ಭವಿಷ್ಯಕ್ಕಾಗಿ ಪ್ರಕೃತಿಯನ್ನು ನಾವೆಲ್ಲರೂ ಉಳಿಸಬೇಕಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊರೆರಾಜು ಅವರು ತಿಳಿಸಿದರು.
ನಗರದ ಜೆ.ಎಸ್.ಎಸ್ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರಿನ ಕೆಸಿಟಿಯು ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಎಂ.ಎಸ್.ಎಂ.ಇ. ಗಳ ಕಾರ್ಯಕ್ಷಮತೆ ಹೆಚ್ಚಿಸಿ ವೇಗಗೊಳಿಸುವ (ಆರ್.ಎ.ಎಂ.ಪಿ) ಯೋಜನೆಯಡಿ ಇ.ಎಸ್.ಎಂ. ಯೋಜನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಪರಿಮಿತವಾಗಿ ವ್ಯರ್ಥವಾಗುವ ಶಕ್ತಿಯ ಮೂಲಗಳನ್ನು ಉಳಿಸಿ ಪರಿಸರದಲ್ಲಿ ಸಮತೋಲನ ಕಾಪಾಡುವುದು ಪರಿಸರ ಮತ್ತು ಸಾಮಾಜಿಕ ನಿರ್ವಹಣೆ ಯೋಜನೆಯ ಸದುದ್ದೇಶವಾಗಿದೆ. ಈ ಯೋಜನೆಯಡಿ ನವಉದ್ಯಮ ಆರಂಭಿಸುವವರಿಗೆ ಪರಿಸರ, ಸಾಮಾಜಿಕ ಕಳಕಳಿಯ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಎಂದರು.
ಇ.ಎಸ್.ಎಂ. ಯೋಜನೆಯು ಮುಖ್ಯವಾಗಿ ಕಾರ್ಖಾನೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಅಥವಾ ಕೊಳಚೆ ಸಂಸ್ಕರಣಾ ಘಟಕ (ಇ.ಟಿ.ಪಿ.) ಸ್ಥಾಪಿಸಿ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಪರಿಸರಕ್ಕೆ ಬಿಡುವ ಮೊದಲು ಅದನ್ನು ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ. ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ತೆಗೆದು ನೀರಿನ ಗುಣಮಟ್ಟವನ್ನು ಸುಧಾರಿಸಿ ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಹಾನಿಯಾಗುವುದನ್ನು ತಡೆದು ನೀರನ್ನು ಪುನರ್ಬಳಕೆ ಮಾಡುವುದೇ ಆಗಿದೆ ಎಂದು ತಿಳಿಸಿದರು.
ವೇಸ್ಟ್ ಮ್ಯಾನೇಜ್ಮೆಂಟ್ ಯೋಜನೆಯಡಿ ಕಸ ಸಂಗ್ರಹಿಸಿ, ವಿಂಗಡಿಸಿ, ಸಂಸ್ಕರಿಸುವುದು ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ಅಥವಾ ಮರುಬಳಕೆ ಮಾಡಲಾಗುತ್ತದೆ. ಪರಿಸರ ಮತ್ತು ಸಾಮಾಜಿಕ ನಿರ್ವಹಣೆಯಲ್ಲಿ ಶ್ರೀಮಂತ, ಬಡವ ಎಂಬುದಿಲ್ಲ. ಸ್ವಂತ ಕಾರ್ಖಾನೆ ಅಥವಾ ಉದ್ಯಮ ಸ್ಥಾಪಿಸಲು ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯಗಳು ದೊರೆಯುತ್ತಿವೆ. ಜೊತೆಗೆ ಮಹಿಳೆಯರಿಗೆ ಶೇ. 33ರಷ್ಟು ವಿಶೇಷ ಸೌಲಭ್ಯಗಳಿವೆ. ಉದ್ಯಮಗಳು ಸ್ಥಾಪನೆಯಾದರೆ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಕಣ್ಮರೆಯಾಗಲಿದೆ ಎಂದು ದೊರೆರಾಜು ಅವರು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಬಿ. ವಿಜಯಕುಮಾರ್ ಮಾತನಾಡಿ ಸರ್ಕಾರವು ಎಂ.ಎಸ್.ಎಂ.ಇ ಯೋಜನೆ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆಯಲ್ಲಿ 16 ಬಗೆಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ನವಉದ್ಯಮಿಗಳಿಗೆ ಸರ್ಕಾರದಿಂದ ಶೇ. 30ರಷ್ಟು ಸಹಾಯಧನ ನೀಡಲಾಗುತಿದ್ದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ವಯಂ ಉದ್ಯೋಗಿಯಾಗಲು ಉದ್ಯಮ ಸ್ಥಾಪನೆ ಬಗೆಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಜನರೇಶನ್ ಪೆÇ್ರೀಗ್ರಾಮ್ ಮೂಲಕ ನವಉದ್ಯಮಿಗಳು ಇನ್ವೆಸ್ಟ್ ಕರ್ನಾಟಕ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಆಲ್ ಇಂಡಿಯಾ ಗ್ರಾನೈಟ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಜಿ.ಎಂ ಹೆಗಡೆ ಅವರು ಮಾತನಾಡಿ ಸರ್ಕಾರವು ಪರಿಸರ ಸಂರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೈಗಾರಿಕೆ ವಲಯದಲ್ಲಿ ತನ್ನದೇ ಆದ ನೀತಿ ನಿಯಮಗಳನ್ನು ರೂಪಿಸಿದೆ. ಪರಿಸರವನ್ನು ಸಂರಕ್ಷಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಪರಿಸರದ ಕಾಳಜಿ ಮತ್ತು ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಉಪ ಪರಿಸರ ಅಧಿಕಾರಿ ಡಾ. ಶೃತಿ ಮತ್ತು ಸ್ಟಾಕ್ ಮಾರ್ಕೆಟಿಂಗ್ ನಿರ್ದೇಶಕರಾದ ಎಸ್.ಎಸ್. ಮೂರ್ತಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.