ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗುತ್ತಿವೆ. ಪರೀಕ್ಷೆಗೆ ಎಲ್ಲ ರೀತಿಯ ತಯಾರಿ ಸಿದ್ದತೆಗಳನ್ನು ಮಾಡಿಕೊಂಡು ಪರೀಕ್ಷೆ ಬರೆಯಲು ಸಿದ್ದರಾಗಿರುವ ಎಲ್ಲ ಮಕ್ಕಳಿಗೂ ಒಳ್ಳೆದಾಗಲಿ. ನಿಮ್ಮ ಶ್ರದ್ದೆ ಮತ್ತು ಫಲಿತಾಂಶಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಲಿ, ಪರೀಕ್ಷೆ ಎನ್ನುವುದು ದೊಡ್ಡ ಯುದ್ಧ ಎನ್ನುವ ಭಾವನೆಯನ್ನು ಮಕ್ಕಳು ಮೊದಲು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು. ಪ್ರತಿಯೊಬ್ಬ ಮಕ್ಕಳು ಆತ್ಮವಿಶ್ವಾಸದಿಂದ ತಮ್ಮ ಪರೀಕ್ಷೆಯನ್ನು ಬರೆಯಬೇಕು ಯಾವುದೇ ರೀತಿಯ ಭಯಕ್ಕೆ ಒಳ ಪಡದೆ ಆತ್ಮವಿಶ್ವಾಸದಿಂದ ಧೈರ್ಯವಾಗಿ ಪರೀಕ್ಷೆಯನ್ನು ಬರೆಯಬೇಕು. ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒತ್ತಡದ ಕಾಲವೆಂದೆ ಹೇಳಬಹುದು. ವರ್ಷಗಳಲ್ಲಿ ಕಲಿತ ನೂರಾರು ಪಾಠಗಳು ವಿಷಯಗಳು ತರಗತಿಯಲ್ಲಿ ಕೇಳಿ ಅನುಭವಿಸಿದ, ಮರೆತ ಹಲವಾರು ವಿಷಯಗಳು ಹಾಗೂ ಜ್ಞಾಪಿಸಿಕೊಳ್ಳುತ್ತಿರುವ ವಿಷಯಗಳು ಅಂತಿಮವಾಗಿ ನೆನಪಿಸಿಕೊಳ್ಳುವ ಕ್ಷಣಗಣನೆ ಪ್ರಾರಂಭವಾಗುತ್ತಿದೆ. ವರ್ಷವಿಡೀ ಕಲಿತ ಪಾಠಗಳು ವಿಷಯಗಳನ್ನು ಪ್ರದರ್ಶಿಸುವ ಮಾರ್ಗವೇ ಬರವಣಿಗೆಯ ಮೂಲಕ. ಮಕ್ಕಳ ಪರೀಕ್ಷೆಯು ಪ್ರಾಥಮಿಕ ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ಈ ಒತ್ತಡವು ಬೋರ್ಡ್ ಪರೀಕ್ಷೆಯನ್ನು ಬರೆಯುವಾಗ ಇನ್ನಷ್ಟು ಹೆಚ್ಚಾಗುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭನೇ ಈ ಒತ್ತಡ ಯಾಕೆ ಹೆಚ್ಚುತ್ತದೆಂದರೆ ಇದರಲ್ಲಿ ಉತ್ತಮ ಅಂಕ ಪಡೆದರೆನೇ ಮುಂದಿನ ಜೀವನದ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಚೆನ್ನಾಗಿ ಓದಿದ್ದರು ಸಹ, ಪರೀಕ್ಷೆ ಪ್ರಶ್ನೆಪತ್ರಿಕೆ ಹೇಗಿರುತ್ತೋ ಏನೋ, ಎಲ್ಲಾನು ನೆನಪಾಗುತ್ತೋ ಇಲ್ಲವೋ ಎನ್ನುವ ಸಹಜ ಆತಂಕ, ಭಯ ಪ್ರತಿಯೊಬ್ಬ ಮಕ್ಕಳಲ್ಲಿಯೂ ಇದ್ದೆ ಇರುತ್ತದೆ. ಆದರೆ ಈ ವೇಳೆ ಮಕ್ಕಳು ಈ ರೀತಿ ಭಯ ಪಡಬಾರದು. ಬದಲಾಗಿ ದೃಢವಾದ ಆತ್ಮವಿಶ್ವಾಸ ದಿಂದ ಪ್ರತಿಯೊಬ್ಬ ಮಕ್ಕಳು ಕೂಡ ಪರೀಕ್ಷೆ ಬರೆಯಬೇಕು.
ಶಾಲಾ ಜೀವನವು ಮಕ್ಕಳ ಜೀವನದಲ್ಲಿ ಅತ್ಯಂತ ಅವಿಸ್ಮರಣೀಯ ನೆನಪುಗಳಾಗಿರುತ್ತವೆ. ಸಮಾಜೀಕರಣದ ಮೊದಲ ಪಾಠಗಳನ್ನು ಕಲಿಯುವ ಸಮಯ ಇದು. ಆಗಾಗ್ಗೆ ಜನರು ತಮ್ಮ ಹೃದಯದಿಂದ ಅಳುವ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಎರಡು ಸಂದರ್ಭಗಳಲ್ಲಿ ಅವರು ಮೊದಲು ಶಾಲೆಗೆ ಪ್ರವೇಶಿಸಿದ ಸಮಯ ಮತ್ತು ಅವರು ಶಾಶ್ವತವಾಗಿ ಶಾಲೆಯನ್ನು ತೊರೆದ ಸಮಯ. ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅವರ ಚಟುವಟಿಗೆಗಳನ್ನು ರೂಪಿಸುವತ್ತ ಗಮನ ಹರಿಸುತ್ತಿರುವವರು ಅತಿ ವಿರಳ. ಪ್ರತಿ ಮಗುವಿನಲ್ಲೂ ತನ್ನದೇ ಆದ ವಿಶಿಷ್ಟ ಗುಣಗಳು ಸಾಮರ್ಥ್ಯಗಳಿರುತ್ತವೆ. ಆದ್ದರಿಂದ ಬೇರೆ ಮಗುವಿನೊಂದಿಗೆ ತುಲನೆ ಮಾಡುವದು ಮೂರ್ಖತನ. ಒಬ್ಬರು ಹಾಡುಗಾರಿಕೆಯಲ್ಲಿ, ಮತ್ತೊಬ್ಬರು ಚಿತ್ರಕಲೆಯಲ್ಲಿ, ಕೆಲವೊಬ್ಬರು ಕ್ರೀಡೆಯಲ್ಲಿ, ಮತ್ತೆ ಕೆಲವರು ವಿಜ್ಞಾನದಲ್ಲಿ ಹೀಗೆ ಮಕ್ಕಳ ಅಭಿರುಚಿ ಭಿನ್ನ ಭಿನ್ನವಾಗಿರುತ್ತದೆ. ಎಲ್ಲರಲ್ಲೂ ನೂರಕ್ಕೆ ನೂರರಷ್ಟು ಅಂಕ ಗಳಿಸುವ ಸಾಮರ್ಥ್ಯ ಇರಬೇಕೆಂದು ಬಯಸುವದು ಎಷ್ಟು ಸಮಂಜಸ?
ಶಿಕ್ಷಣದ ಒಂದು ಘಟ್ಟವನ್ನು ನಿರ್ಣಯಿಸುವುದರಿಂದ ಹತ್ತನೇ ತರಗತಿಯ ಪರೀಕ್ಷೆಗಳಿಗೆ ಹೆಚ್ಚು ಮಹತ್ವ. ಹಾಗೆಂದೇ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಲ್ಲಿ ಆತಂಕ ಮನೆಮಾಡಿರುತ್ತದೆ. ಮೊದಲೇ ಪರೀಕ್ಷೆಯ ಒತ್ತಡದಲ್ಲಿರುವ ಮಕ್ಕಳ ಮೇಲೆ ಪೋಷಕರ ಆತಂಕ ಮತ್ತಷ್ಟು ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳು ವಿಚಲಿತಗೊಂಡು, ಪರೀಕ್ಷೆ ಬರೆಯುವಾಗ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟೂ ಪೋಷಕರು ಪರೀಕ್ಷಾ ದಿನಗಳಲ್ಲಿ ಸಮಾಧಾನದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಪರೀಕ್ಷಾಭಯ ಮತ್ತು ಆತಂಕದಿಂದ ಕೆಲವು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ತಲೆ ನೋವು ಮತ್ತು ಜ್ವರ ಪರೀಕ್ಷೆಯ ಸಮಯದ ಸಾಮಾನ್ಯ ಸಮಸ್ಯೆಗಳು. ಇದು ದೈಹಿಕ ಕಾಯಿಲೆಯಾಗಿರದೆ, ಮಾನಸಿಕ ಬಳಲಿಕೆಯಿಂದ ಬರುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸಮಸ್ಯೆಯ ಮೂಲವನ್ನು ಗುರುತಿಸದೆ ಮಕ್ಕಳಿಗೆ ಮದ್ದು ನುಂಗಿಸಿ ಮತ್ತೊಂದು ಸಮಸ್ಯೆಗೆ ಕಾರಣವಾಗಬೇಡಿ. ಮಕ್ಕಳನ್ನು ಮೊದಲು ಭಯದಿಂದ ಹೊರತನ್ನಿ. ನಿಮ್ಮ ಸಾಂತ್ವನವೇ ಮಕ್ಕಳ ಮನಸ್ಸಿಗೆ ಸೂಕ್ತ ಮದ್ದಾಗಬಲ್ಲದು. ಈ ಸಂದರ್ಭದಲ್ಲಿ ನೀವು ಮಾಡಲೇಬಾರದ ಕೆಲಸವೆಂದರೆ – ಹೋಲಿಕೆ. ಮಕ್ಕಳು ಆಯಾ ದಿನದ ಪರೀಕ್ಷೆ ಬರೆದು ಮನೆಗೆ ಬಂದಾಗ ಅವರನ್ನು ನೀನು ಹೇಗೆ ಬರೆದಿದ್ದೀಯ ಎಂದು ವಿಚಾರಿಸುವುದು ಸರಿ. ಆದರೆ ಅದರ ಜೊತೆಗೆ ಮಕ್ಕಳ ಸಹಪಾಠೀಗಳ ಹೆಸರುಗಳನ್ನು ಉಲ್ಲೇಖಿಸಿ ಅವರು ಹೇಗೆ ಮಾಡಿದ್ದಾರೆ, ಇವರು ಹೇಗೆ ಮಾಡಿದ್ದಾರೆ. ಎಂದೆಲ್ಲ ವಿಚಾರಿಸುವುದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳು ಪರೀಕ್ಷೆ ಬರೆಯುವುದು ತಮ್ಮ ಪ್ರಗತಿಗಾಗಿ ಹೊರತು ಮತ್ತೊಬ್ಬರ ಜೊತೆ ಸ್ಪರ್ಧಿಸಲಿಕ್ಕಲ್ಲ ಅನ್ನುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಮತ್ತು ಬೇರೆಯವರ ಜೊತೆ ಹೋಲಿಸುತ್ತಾ ಮಕ್ಕಳ ಮೇಲೆ ಒತ್ತಡ ಹೇರಲು ಹೋಗಬಾರದು. ಪರೀಕ್ಷೆಗಳನ್ನು ಶಿಕ್ಷೆ ಎಂದು ಪರಿಗಣಿಸದೇ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಗತ್ಯದ ಪ್ರಕ್ರಿಯೆ ಎಂದು ಭಾವಿಸಬೇಕು. ಉದ್ದೇಶ ರಹಿತ ಕಲಿಕೆಯಲ್ಲ ಉದಾಸೀನದ ಕಲಿಕೆಯಲ್ಲ. ಉದ್ದೇಶ ಸಹಿತ, ಆಸಕ್ತಿದಾಯಕ ಜವಾಬ್ದಾರಿಯುತ ಕಲಿಕೆ ಆಗಬೇಕು.ಅದಕ್ಕೆ ಪರೀಕ್ಷೆ ಬೇಕೇ ಬೇಕು.
ಪರೀಕ್ಷೆ ಎನ್ನುವುದು ದೊಡ್ಡ ಯುದ್ಧ ಎನ್ನುವ ಭಾವನೆಯನ್ನು ಮಕ್ಕಳು ಮೊದಲು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು. ಆತಂಕ-ಭಯ ಬಿಟ್ಟು ಅತ್ಯಂತ ಸಮಾಧಾನದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಬೇಕು. ಪರೀಕ್ಷೆಗೂ ಮುನ್ನ ಓದಿದ್ದನ್ನು ಹೆಚ್ಚು ಹೆಚ್ಚು ಪುನರಾವರ್ತನೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪರೀಕ್ಷೆಗೂ ಮುನ್ನ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಪರೀಕ್ಷೆಯೇ ಕೊನೆ, ಬದುಕೇ ಮುಗಿಯಿತು ಎನ್ನುವ ಭಯ ಬೇಡ. ಭವಿಷ್ಯ ಬಹಳಷ್ಟಿದೆ ಎಂಬುದನ್ನು ಅರಿತು ಮಕ್ಕಳು ಪರೀಕ್ಷೆ ಎದುರಿಸಬೇಕು. ಎಲ್ಲಕ್ಕಿಂತ ಬದುಕು ಬಹಳ ದೊಡ್ಡದು. ಹೀಗಾಗಿ, ಅತ್ಯಂತ ಖುಷಿ, ಆರಾಮವಾಗಿ ಮಕ್ಕಳು ಪರೀಕ್ಷೆ ಎದುರಿಸಬೇಕು.
- ರಾಣಪ್ಪ ಡಿ ಪಾಳಾ ಕಲಬುರಗಿ