
ಮೈಸೂರು: ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕೆಜೆ ಕುಮಾರ್ ಸಿನಿಮಾ ಬರಹಗಳಿಗೆ ಹೆಸರಾಗಿದ್ದರು.
ಬುಧವಾರ ಮಧ್ಯಾಹ್ನದ ವೇಳೆಗೆ ಎದೆನೋವು ಕಾಣಿಕೊಂಡ ಹಿನ್ನೆಲೆಯಲ್ಲಿ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಹೃದಯಾಘಾತದಿಂದ ಮೃತಪಟ್ಟರಿವುದಾಗಿ ವೈದ್ಯರು ತಿಳಿಸಿದರು.
ಚಿತ್ರರಂಗದ ಸುದ್ದಿಗಳನ್ನು ಹಲವು ವರ್ಷಗಳ ಕಾಲ ವರದಿ ಮಾಡಿದ್ದ ಕೆ.ಜೆ. ಕುಮಾರ್ ಅವರು ಮೈಸೂರಿನ ಪತ್ರಿಕಾ ವಲಯದಲ್ಲಿ ಪರಿಚಿತರು. ತಮಿಳುನಟ ರಜನಿಕಾಂತ್, ದಿ.ಅಂಬರೀಶ್ ಅವರ ಜತೆಗೆ ಆತ್ಮೀಯ ಒಡನಾಟ ಹೊಂದಿದ್ದ ಕೆ.ಜೆ.ಕುಮಾರ್, ಸಿನಿತಾರೆಯರಿಗೆ ಆತ್ಮೀಯರಾಗಿದ್ದರು.
ಉದಯವಾಣಿ, ವಿಜಯ ದಿನಪತ್ರಿಕೆ, ಹೊಸ ದಿಗಂತ ಪತ್ರಿಕೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದು ಮಾತ್ರವಲ್ಲ, ಹಾಯ್ ಬೆಂಗಳೂರು ಸೇರಿದಂತೆ ಅನೇಕ ಜನಪ್ರಿಯ ಪತ್ರಿಕೆ, ಮ್ಯಾಗಜೀನ್ ಗಳ ಏಜೆನ್ಸಿ ಪಡೆದು ಓದುಗರಿಗೆ ತಲುಪಿಸುದ್ದು ಇವರ ಹೆಗ್ಗಳಿಕೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕ್ರಿಯಾಶೀಲ ಪತ್ರಕರ್ತರಾಗಿದ್ದು ಹಾಲಿ ಸದಸ್ಯರಾಗಿದ್ದರು.
ಸೌಮ್ಯ ಸ್ವಭಾವ ಹಾಗೂ ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಸಹೋದ್ಯೋಗಿಗಳ ನಡುವೆ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನ ಸುದ್ದಿ ತಿಳಿದು ಪತ್ರಕರ್ತರು, ಸಿನಿ ಕ್ಷೇತ್ರದ ಗಣ್ಯರು ಹಾಗೂ ಸ್ನೇಹಿತರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಮಾರ್ ಅವರ ಅಗಲಿಕೆಯಿಂದ ಪತ್ರಿಕಾ ಹಾಗೂ ಸಿನಿ ವಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.