ಚಾಮರಾಜನಗರ: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಮಹಿಳೆಯರು, ವಿದ್ಯಾರ್ಥಿನಿಯವರು, ಲಿಂಗತ್ವ ಅಲ್ವಸಂಖ್ಯಾತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಮಹಿಳೆಯರು, ವಿದ್ಯಾರ್ಥಿನಿಯರು, ದೂರದ ಪಟ್ಟಣ, ಶಾಲಾ-ಕಾಲೇಜುಗಳಿಗೆ ಯಾವುದೇ ಪ್ರಯಾಣ ದರ ನೀಡದೇ ಉಚಿತವಾಗಿ ಶೂನ್ಯ ಮೊತ್ತದ ಟಿಕೆಟ್ ಪಡೆದು ಹೋಗಿ ಬರಲು ಶಕ್ತಿ ಯೋಜನೆಯಡಿ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ.
2023ರ ಜೂನ್ 11 ರಂದು ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆ ಜಾರಿಯಾದ ದಿನದಿಂದ 2025ರ ಏಪ್ರಿಲ್ವರೆಗೆ ಚಾಮರಾಜನಗರ ವಿಭಾಗದಲ್ಲಿ 14,82,71,026 ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 9,08,26,299 ಮಹಿಳಾ ಪ್ರಯಾಣಿಕರೇ ಆಗಿದ್ದಾರೆ. ಕೆ.ಎಸ್.ಆರ್.ಟಿ.ಸಿ ಗೆ ಒಟ್ಟಾರೆ 5515986205 ರೂ. ಗಳ ಆದಾಯ ಬಂದಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರು ಸಂಚರಿಸಿದ ಫಲವಾಗಿ ಬಂದ ಆದಾಯ 328,16,38,236 ರೂ. ಗಳಾಗಿವೆ.
ಉದ್ಯೋಗ, ಶಿಕ್ಷಣ, ಪ್ರವಾಸಿತಾಣಗಳು, ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು ಸೇರಿದಂತೆ ಇನ್ನಿತರ ಕಡೆ ಪ್ರಯಾಣ ಬೆಳೆಸಲು ಶಕ್ತಿ ಯೋಜನೆಯಡಿ ಅನುಕೂಲವಾಗಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ರಾಜ್ಯಾದ್ಯಾಂತ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶವಾಗಿದೆ. ಪ್ರಯಾಣದ ವೆಚ್ಚ ಉಳಿತಾಯ ವಾಗುತ್ತಿರುವುದರಿಂದ ಮಹಿಳೆಯರ ಬದುಕಿಗೆ ಹೆಚ್ಚಿನ ಶಕ್ತಿ, ಆರ್ಥಿಕ ಬಲ ಬಂದಿದೆ.
ಶಕ್ತಿ ಯೋಜನೆ ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ನೆರವಾಗುತ್ತಿದೆ. ಖಾಸಗಿ ಕಂಪನಿ, ಸಣ್ಣಪುಟ್ಟ ಉದ್ದಿಮೆ, ಅಂಗಡಿಗಳಲ್ಲಿ ಕೆಲಸ ಮಾಡಲು ಬೇರೆ ಸ್ಥಳಗಳಿಗೆ ಹೋಗಿ ಬರಲು ಬಸ್ ಪ್ರಯಾಣಕ್ಕಾಗಿ ತಿಂಗಳ ವೇತನದಲ್ಲಿ ಹೆಚ್ಚು ವೆಚ್ಚ ಮಾಡಬೇಕಿತ್ತು. ಸರ್ಕಾರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವುದರಿಂದ ಬಸ್ ಪ್ರಯಾಣದ ಟಿಕೆಟ್ ವೆಚ್ಚದ ಹಣ ಉಳಿತಾಯವಾಗುತ್ತಿದ್ದು, ಇದರಿಂದ ಕುಟುಂಬದ ಆರ್ಥಿಕ ಹೊರೆ ಭರಿಸಲು ಸಹಾಯವಾಗಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ, ಯಳಂದೂರು ತಾಲೂಕಿನ ಬಿಳಿಗಿರ ರಂಗನಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದ್ದಾರೆ.
ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳು, ಇನ್ನಿತರ ಪ್ರವಾಸಿ ತಾಣಗಳಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಸಹಜವಾಗಿ ವ್ಯಾಪಾರ, ವಹಿವಾಟು ಬಿರುಸುಗೊಂಡಿರುವುದು ಕಂಡು ಬಂದಿದೆ.
ಶಕ್ತಿ ಯೋಜನೆ ಅನುಷ್ಠಾನವಾದ ನಂತರ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮಲೆ ಮಹದೇಶ್ವರಬೆಟ್ಟಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದು, ಅಮಾವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಸಂದರ್ಭಗಳಲ್ಲಂತೂ ಮಹಿಳಾ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎನ್ನುತ್ತಾರೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್.
ಚಾಮರಾಜನಗರ ಪಟ್ಟಣದಲ್ಲಿ ತೋಟದ ನಿರ್ವಹಣೆ ಕೆಲಸಕ್ಕಾಗಿ ಅರಕಲವಾಡಿ ಗ್ರಾಮದಿಂದ ಪ್ರತಿದಿನ ಬಸ್ಸಿನಲ್ಲಿ ಬಂದು ಹೋಗುತ್ತಿದ್ದೇನೆ. ಈ ಮೊದಲು ಬಸ್ ಪ್ರಯಾಣಕ್ಕಾಗಿ ಹಣ ನೀಡಬೇಕಿತ್ತು. ಸರ್ಕಾರದ ಶಕ್ತಿ ಯೋಜನೆಯಿಂದ ಉಚಿತವಾಗಿ ಓಡಾಡಲು ಅನುಕೂಲಕವಾಗಿದೆ. ಇದರಿಂದ ವೇತನದಲ್ಲಿ ನೀಡಬೇಕಿದ್ದ ಬಸ್ ದರ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಸುಧಾ.
ನಗರಕ್ಕೆ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಉಚಿತವಾಗಿ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೇನೆ. ಪುಣ್ಯ ಕ್ಷೇತ್ರಗಳಿಗೆ, ಶುಭ ಸಮಾರಂಭಗಳಿಗೆ, ನೆಂಟರು, ಬಂಧು ಬಳಗದವರ ಮನೆಗಳಿಗೆ ಹೋಗಿ ಬರಲು ನನಗೆ ಅನುಕೂಲವಾಗಿದೆ. ಸರ್ಕಾರ ಈ ಯೋಜನೆ ಜಾರಿಗೆ ತಂದಿದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎನ್ನುತ್ತಾರೆ ಚಾಮರಾಜನಗರ ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ರಾಜೇಶ್ವರಿ.