


ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಾಗಿ ಭಾಗಿಯಾಗುವುದು ಸಾಮಾನ್ಯವಾಗಿ ಕಂಡುಬರುವ ಅಂಶವಾಗಿದೆ. ತಮ್ಮ ತಮ್ಮ ಊರಿನ ಹಬ್ಬಗಳಿಗೆ ಯಾರು ಕೂಡ ಮಿಸ್ ಮಾಡಿಕೊಳ್ಳುವುದಿಲ್ಲ. ವರ್ಷ ವರ್ಷವೂ ಇನ್ನಿತರ ದೇವತೆಗಳ ಹಬ್ಬಗಳಿಗೆ ಒಂದು ರೀತಿಯಲ್ಲಿ ವಿಶೇಷ ಆಸಕ್ತಿ ಮತ್ತು ಶಕ್ತಿಯು ಕೂಡ ಇದೆ.
ಅದರಂತೆ ನಮ್ಮ ಸರಗೂರು ತಾಲೂಕಿನ ಕಾಳಿಹುಂಡಿ ಗ್ರಾಮದಲ್ಲಿ ಶನಿವಾರ ರಾತ್ರಿ11 ಗಂಟೆಯಿಂದ ಭಾನುವಾರದ ಮುಂಜಾನೆ 6.30 ರವರರೆಗೂ ಸಾಗಿ ಸಡಗರ ಸಂಭ್ರಮದಿಂದ ಶನಿ ದೇವರ ಉತ್ಸವ ಸಂಪನ್ನಗೊಂಡಿತು.
ಊರಿನ ಮಧ್ಯಭಾಗದಲ್ಲಿರುವ ಶನಿ ದೇವರ ದೇವಸ್ಥಾನ ಹಾಗೂ ಊರಿನ ರಸ್ತೆಯ ಎರಡು ಕಡೆಯೂ ಕೂಡ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಏಳು ಕುದುರೆಯ ಹೂವಿನ ಬೆಳ್ಳಿ ಪಲ್ಲಕ್ಕಿಯಲ್ಲಿ ದೇವಸ್ಥಾನದ ಮೂಲ ಬೆಳ್ಳಿ ವಿಗ್ರಹವನ್ನು ವರ್ಣರಂಜಿತವಾದ ಹೂಗಳಿಂದ ಸಿಂಗಾರ ಮಾಡಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಯಿತು. ನಂತರ ಮಂಗಳಾರತಿ ಪ್ರಸಾದ ವಿತರಣೆಯ ನಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕ ಇರುವ ಪುಟ್ಟತಾಯಮ್ಮ ರವರ ಮನೆಯ ಮುಂಭಾಗದಿಂದ ಉತ್ಸವ ಪ್ರಾರಂಭವಾಗಿ ಊರಿನ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಇಡೀ ಗ್ರಾಮವೇ ಎಚ್ಚರಗೊಂಡು ತಮ್ಮ ತಮ್ಮ ಮನೆಯ ಮುಂದೆ ಶನಿ ದೇವರ ಉತ್ಸವದ ಪಲ್ಲಕ್ಕಿ ಬಂದಾಗ ಭಯ- ಭಕ್ತಿಯಿಂದ ಪೂಜೆ ಮಾಡಿಸಿದರು.
ಇವೆಲ್ಲದರ ಜೊತೆಗೆ ಇಬ್ಜಾಲ ಗ್ರಾಮದ ಬಸವ ಕೂಡ ಆಕರ್ಷಕ ರೀತಿಯಲ್ಲಿ ಸಿಂಗಾರಗೊಂಡು ಹೂವಿನ ಪಲ್ಲಕ್ಕಿಯ ಮುಂಭಾಗದಲ್ಲಿ ಸಾಗಿದ್ದು ವಿಶೇಷವಾಗಿತ್ತು. ಅಲ್ಲದೆ ದಡದ ಮಾರಮ್ಮ, ಊರು ಮಾರಮ್ಮ ಮತ್ತು ಮಹಾದೇಶ್ವರ ಸತ್ತಿಗೆಗಳು ಕೂಡ ವರ್ಣರಂಜಿತ ಬಟ್ಟೆಗಳಿಂದ ಸಿಂಗಾರಗೊಂಡು ಭಕ್ತಾದಿಗಳ ಗಮನಸೆಳೆದವು.
ಮೆರವಣಿಗೆಯಲ್ಲಿ ತಮಟೆ ವಾದ್ಯ ನಗಾರಿ ಮುಂತಾದ ಮನರಂಜನಾ ಪರಿಕರಗಳೊಂದಿಗೆ ಕೂಡ ಅಳವಡಿಸಿ ಹಾಡುಗಳನ್ನು ಹಾಕಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಕೂಡ ಹಾಡಿಗೆ ಹೆಜ್ಜೆ ಹಾಕಿದರು.
ಅದರಲ್ಲೂ ಯುವ ಜನತೆ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಈ ಉತ್ಸವಕ್ಕೆ ಕಾಳಿಹುಂಡಿ ಗ್ರಾಮಸ್ಥರಲ್ಲಿ ಅಕ್ಕ ಪಕ್ಕದ ನೆಂಟರಿಷ್ಟರು, ಗ್ರಾಮಸ್ಥರು ಆಗಮಿಸಿದ್ದರು.
ಭಾನುವಾರ ಬೆಳಿಗ್ಗೆ ಎಲ್ಲರೆದುರು ಹುಂಡಿ ಪರ್ಕಾವಣೆ ಮಾಡಿ ಎಲ್ಲವನ್ನು ಲೆಕ್ಕ ಹಾಕಿ, ಆದಾಯ- ಖರ್ಚು ಲೆಕ್ಕ ಬರೆಯಲಾಯಿತು. ದೇವಸ್ಥಾನದಲ್ಲಿ ಪೂಜೆ ಮಾಡಿ ಪ್ರಸಾದ ವಿತರಿಸಲಾಯಿತು.
ಸೋಮವಾರ 24.03.2025 ಊರ ಮಾರಮ್ಮ ಹಬ್ಬ ನಡೆಯುತ್ತದೆ. ತಂಬಿಟ್ಟು ಇದರ ಜೊತೆಗೆ ಹಸಿ ಕಡಲೆ ಅಕ್ಕಿಯಿಂದ ಮಾಡಿದ ಮಿಶ್ರಣ. ಪೂಜೆ ಸಾಮಗ್ರಿಗಳ ಜೊತೆಯಲ್ಲಿ ಹರಕೆ ಹೊತ್ತುಕೊಂಡಿದ್ದರೆ ಅವರು ವಿಶೇಷವಾಗಿ ವಡೆ ಹಾರ, ಈರುಳ್ಳಿ ಹಾರವನ್ನು ಕೂಡ ಮಾರಮ್ಮನ ಮುಂದೆ ಅರ್ಪಿಸಿ ಪೂಜೆ ಮಾಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಹೆಂಗೆಳೆಯರು ವಿಶೇಷವಾಗಿ ಸಿಂಗಾರ ಮಾಡಿಕೊಂಡು ತಮ್ಮ ಕುಟುಂಬದವರೊಂದಿಗೆ ಊರು ಮಾರಮ್ಮನ ಮುಂದೆ ಹೋಗಿ ಪೂಜೆ ಮಾಡಿಸಿ, ಎಲ್ಲರ ಕಷ್ಟಗಳನ್ನ ಬಗೆಹರಿಸು ತಾಯಿ ಎಂದು ಬೇಡಿಕೊಂಡು ಅಲ್ಲಿಯೇ ತಿಂಡಿ ಪದಾರ್ಥಗಳನ್ನು ತಿಂದು ನೆಂಟರಿಷ್ಟದೊಂದಿಗೆ ತಮ್ಮ ತಮ್ಮ ಮನೆಗೆ ಸಾಗುತ್ತಾರೆ.
ಬುಧವಾರ 26.03.2025 ರ ಸಂಜೆ ದಡದ ಮಾರಮ್ಮನ ದೇವಸ್ಥಾನದಲ್ಲೂ ಕೂಡ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಅಂದು ರಾತ್ರಿ ಹನ್ನೊಂದು ಗಂಟೆಗೆ ಪಕ್ಕದಲ್ಲಿ ಹರಿಯುವ ಕಪಿಲ ನದಿಗೆ ಎಲ್ಲರೂ ಸಾಗಿ ದಡದ ಮಾರಮ್ಮನ ಮುಖವಾಡಕ್ಕೆ ನೀರಿನಿಂದ ನೈವೇದ್ಯ ಮಾಡಿ ಪೂಜೆ ಮಾಡಿದ ನಂತರ ವಾದ್ಯ ತಮಟೆಗಳೊಂದಿಗೆ ಗುರುವಾರ 27.03.2025 ರ ಬೆಳಿಗ್ಗೆ ಸುಮಾರು 3 ಗಂಟೆಗೆ ಬಂದ ನಂತರ ನಾಲ್ಕು ಗಂಟೆಯ ನಂತರ ದೇವಸ್ಥಾನದ ಮುಂದೆ ಮದ್ದು ಬಾಣಗಳಿಂದ ಕೂಡಿದ ಪಟಾಕಿಗಳನ್ನ ಒಂದೆಡೆ ಹಚ್ಚಿಸುತ್ತಾರೆ.
ಸುಮಾರು ಅರ್ಧ ಗಂಟೆಯ ಕಾರ್ಯಕ್ರಮ ಇದಾಗಿದ್ದು ಈ ಸಂದರ್ಭದಲ್ಲಿ ಊರಿನ ಎಲ್ಲಾ ಜನಾಂಗದವರು ಭಾಗವಹಿಸಿ ಸಂಭ್ರಮಿಸುತ್ತಾರೆ. ಬೆಳಿಗ್ಗೆಯೂ ಕೂಡ ದಡದ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಾರೆ. ಗುರುವಾರ ಪೂರ್ತಿ ಜಾತ್ರೆ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ.
ನಾವು ಕಾಳಿಹುಂಡಿಯಲ್ಲಿ ಶನಿವಾರದ ಶನಿ ದೇವರ ಉತ್ಸವದಿಂದ ಹಿಡಿದು ಗುರುವಾರದ ದಡದ ಮಾರಮ್ಮನ ಜಾತ್ರೆಯವರೆಗೂ ಕೂಡ ಸಡಗರ ಸಂಭ್ರಮದಿಂದ ವರ್ಷ ವರ್ಷವೂ ಕೂಡ ಭಾಗಿಯಾಗುತ್ತಿದ್ದ ನೆನಪು ನಮಗೆ ಇನ್ನೂ ಹಸಿರಾಗಿದೆ. ಈಗ ನಾವು ಬೆಳೆದು ದೊಡ್ಡವರಾಗಿದ್ದರು ಕೂಡ ಉದ್ಯೋಗ ನಿಮಿತ್ತ ಕೆಲಸ ಕಾರ್ಯಗಳ ನಿಮಿತ್ತ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದರೂ ಕೂಡ ವರ್ಷ ವರ್ಷವು ಊರಿನ ಕುಟುಂಬದವರೊಂದಿಗೆ ಒಟ್ಟಾಗಿ ಕಾಲ ಕಳೆಯುವ ರೋಮಾಂಚಕ ಕ್ಷಣಗಳು ಈಗಲೂ ಕೂಡ ಹಸಿ ಹಸಿಯಾಗಿದೆ.
ಇದು ಎಲ್ಲ ಊರುಗಳಲ್ಲೂ ಕಂಡುಬರುವ ಸಾಮಾನ್ಯ ಚಿತ್ರಣವಾಗಿರುತ್ತದೆ. ನಾವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಊರಿನಲ್ಲಿರುವ ಯಾವುದೇ ಸ್ವಾಮಿಯ ದೇವಾಲಯಗಳು ಭಕ್ತಿ ಭಾವದಿಂದ ಗ್ರಾಮಸ್ಥರೆಲ್ಲ ಸೇರಿಕೊಂಡು ಹಣ, ಆಹಾರ ಪದಾರ್ಥಗಳನ್ನ ಸಂಗ್ರಹಿಸಿ ಬೆರೆಯುವಂಥದ್ದು ಕಂಡುಬರುತ್ತದೆ.
ಎಲ್ಲಾ ಜನಾಂಗದ ಮುಖ್ಯಸ್ಥರು ಜೊತೆಗೆ ಊರಿನ ಜನರು ಮುಖ್ಯವಾಗಿ ಹಬ್ಬಕ್ಕೆ ಮುಂಚೆ ಮತ್ತು ಹಬ್ಬದ ನಂತರ ಒಂದೆಡೆ ಸೇರಿ, ಊರಿನ ಸಮಸ್ಯೆಗಳ ಬಗ್ಗೆ, ಜೊತೆಗೆ ಮಳೆ ಬೆಳೆಯ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತದೆ. ಜೊತೆಗೆ ಮುಂದಿನ ವರ್ಷ ನಮ್ಮ ಊರು ಹೇಗೆಲ್ಲಾ ಸಿದ್ಧವಾಗಬೇಕು, ಏನೇನು ಸಮಸ್ಯೆಗಳಿವೆ ಎಂಬುದನ್ನು ಕೂಡ ಪಟ್ಟಿ ಮಾಡುತ್ತಾರೆ.
ಹೀಗೆ ಪ್ರತಿಯೊಂದು ಗ್ರಾಮಗಳಲ್ಲೂ ಕೂಡ ಗ್ರಾಮ ದೇವತೆಯಿಂದ ಹಿಡಿದು ಇತರೆ ದೇವತೆಗಳ ದೇವಸ್ಥಾನಗಳಲ್ಲೂ ಕೂಡ ಹಬ್ಬದ ಸಂಭ್ರಮ ಮನೆ ಮಾತಾಗಿರುತ್ತದೆ. ಒಂದೊಂದು ಊರಿನಲ್ಲೂ ಒಂದೊಂದು ರೀತಿಯಲ್ಲಿ ವಿಶೇಷವಾಗಿ ಹಬ್ಬಗಳನ್ನ ಆಚರಿಸುತ್ತಾರೆ. ಈ ಹಬ್ಬ ಆಚರಿಸುವ ಸಂದರ್ಭದಲ್ಲಿ ಬೇಸಿಗೆ ರಜೆಯೂ ಕೂಡ ಬಂದಿರುವುದರಿಂದ ಮಕ್ಕಳಲ್ಲಿ ಹಬ್ಬದ ತಡಗರದ ವಾತಾವರಣ ಹೆಚ್ಚಿರುತ್ತದೆ.

ಕಾಳಿಹುಂಡಿ ಶಿವಕುಮಾರ್, ಮೈಸೂರು