
ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧಿ ಪಡೆದ ಲೇಖಕರ ಸಾಲಿನಲ್ಲಿ ಶ್ರೀಕೃಷ್ಣ ಆಲನಹಳ್ಳಿ ಅವರು ಕೂಡ ಒಬ್ಬರು. ಇವರು 03.04.1947 ರಂದು ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ (ಎಚ್ ಡಿ ಕೋಟೆ)ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದರು. ಅಖಿಲ ನಾಮಧಾರಿ ಗೌಡರ ಸಮಾಜಕ್ಕೆ ಸೇರಿದವರಾಗಿದ್ದಾರೆ.
ವೃತ್ತಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದರು. ಅಪಾರ ಶಿಷ್ಯ ವರ್ಗವನ್ನು ಸಂಪಾದಿಸಿದ್ದಾರೆ. ಇವರು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಉತ್ಕೃಷ್ಟ ಸಾಹಿತ್ಯ ಸುಧೆ ಹರಿಸಿದವರು.
ಅವರು ಬದುಕಿದ್ದು ನಲವತ್ತೆರಡು ವರ್ಷ ಮಾತ್ರ. ಅವರು ನಿಧನರಾದದ್ದು 04.01.1989 ರಲ್ಲಿ. ಅತೀ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಮಾತ್ರ ಅತ್ಯಂತ ಸ್ಮರಣೀಯವಾದದ್ದು.
ಆಲನಹಳ್ಳಿ ಕೃಷ್ಣರವರು ವಿದ್ಯಾರ್ಥಿ ಜೀವನದಲ್ಲೇ “ಸಮೀಕ್ಷಕ”- ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅಂದಿನ ದಿನ ಆ ಪತ್ರಿಕೆಯಲ್ಲಿ ಬರೆಯಿರಿ ಎಂದು ಅವರು ತಮ್ಮ ಗೆಳೆಯರನ್ನು ಎಷ್ಟು ಒತ್ತಾಯಿಸುತ್ತೆಂದರೆ, ಪಿ. ಲಂಕೇಶ್ ಅವರು ಅವರ ಒತ್ತಾಯದ ಕಾಟವನ್ನೇ ಒಂದು ಕವನದ ಸಾಲಾಗಿ “ನನ್ನ ಸುತ್ತಾ” ಎಂಬ ಅವರ ಪ್ರಸಿದ್ಧ ಕವನದಲ್ಲಿ ಬರೆದಿದ್ದರು.
ಇವರು ಅನೇಕ ಹಳೆಯ ಮತ್ತು ಹೊಸ ಸಾಹಿತಿಗಳೊಂದಿಗೆ ಸದಾ ಒಡನಾಟದಲ್ಲಿದ್ದರು. ಇವರ ಸಾಹಿತ್ಯದ ವಿಷಯದ ಬಗ್ಗೆ ಹೇಳುವುದಾದರೆ
ಶ್ರೀಕೃಷ್ಣ ಆಲನಹಳ್ಳಿ ಅವರ ಕವನ ಸಂಗ್ರಹ “ಮಣ್ಣಿನ ಹಾಡು” ಕೃತಿಗೆ ಮುನ್ನುಡಿಯಲ್ಲಿ ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ‘ಘಾತಪಲ್ಲಟ’ ಎಂದು ಬಣ್ಣಿಸಿದ್ದರು. ಅದು ದೊಡ್ಡ ಹೆಸರು ತಂದಿತು. ಎಷ್ಟು ಹೆಸರು ಎಂದರೆ ಅಂದು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, “ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ” ಎಂದು ತಮಾಷೆಯಾಗಿ ಹೇಳುತ್ತಿದ್ದರಂತೆ. ಆ ಮಾತು ನಿಜವೂ ಆಗಿತ್ತು.
ಇವರ ಸಾಹಿತ್ಯ ಕೃತಿಗಳ ಬಗ್ಗೆ:-
ಕವನ ಸಂಕಲನಗಳೆಂದರೆ….
ಮಣ್ಣಿನ ಹಾಡು,
ಕಾಡುಗಿಡದ ಹಾಡು ಪಾಡು,
ಡೋಗ್ರಾ ಪಹಾರಿ ಪ್ರೇಮಗೀತೆಗಳು.
ಕಥಾಸಂಕಲನಗಳೆಂದರೆ…..
ತಪ್ತ (8ಕಥೆಗಳು)
ಫೀನಿಕ್ಸ.
ಗೀಜಗನ ಗೂಡು.
ಕಾದಂಬರಿಗಳೆಂದರೆ…..
ಭುಜಂಗಯ್ಯನ ದಶಾವತಾರ,
ಕಾಡು,
ಪರಸಂಗದ ಗೆಂಡೆ ತಿಮ್ಮ.
ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಹಿಂದಿ ಚಲನಚಿತ್ರಗಳ ಖ್ಯಾತ ನಟ ಅಮರೀಶ ಪುರಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಿರೀಶ ಕಾರ್ನಾಡ ಚಲನಚಿತ್ರದ ನಿರ್ದೇಶಕರು.
‘ಪರಸಂಗದ ಗೆಂಡೆ ತಿಮ್ಮ’ ಈ ಚಲನಚಿತ್ರದಲ್ಲಿ ಕನ್ನಡಚಿತ್ರರಂಗದ ಚರಿತ್ರನಟ ಲೋಕೇಶ ಮುಖ್ಯ ಪಾತ್ರದಲ್ಲಿದ್ದಾರೆ. ‘ರಾ.ಶಿ.ಸಹೋದರರು’ ಈ ಚಿತ್ರದ ನಿರ್ಮಾಪಕರು.
ಭುಜಂಗಯ್ಯನ ದಶಾವತಾರ ಕಾದಂಬರಿಯು ಚಲನಚಿತ್ರವಾಗಿದೆ. ಗಿರಿಜಾ ಲೋಕೇಶ್ ಈ ಚಿತ್ರದ ನಿರ್ಮಾಪಕರಾಗಿದ್ದರೆ, ಲೋಕೇಶ ಚಿತ್ರವನ್ನು ನಿರ್ದೇಶಿಸಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.
‘ಕಾಡು’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ ‘ಮಣ್ಣಿನ ಹಾಡು’ ಕವಿತಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
‘ಕಾಡಿನ ಹುಡುಗ ಕೃಷ್ಣ’ ಇವರ ಅಭಿನಂದನ ಗ್ರಂಥ.
ಇವರ ಪ್ರಾರಂಭಿಕ ಶಿಕ್ಷಣ ಆಲನಹಳ್ಳಿಯ ಲಾಯಿತು. ಕ್ಯಾತನ ಹಳ್ಳಿಯಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಣ. ಮಹಾರಾಜ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕದೊಡನೆ ಬಿ.ಎ. ಪದವಿ ಮತ್ತು ಮಾನಸಗಂಗೋತ್ರಿಯಿಂದ ಎಂ.ಎ. ಪದವಿ ಪಡೆದರು. ಬಿ.ಎ. ಪದವಿಗಾಗಿ ಓದುತ್ತಿರುವಾಗಲೇ ‘ಸಮೀಕ್ಷಕ’ ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸತೊಡಗಿದರು. ಸೃಜನಶೀಲ ಬರಹಗಳಿಗೆ, ವಿಮರ್ಶೆಗಳಿಗೆ ಮೀಸಲಾದ ಪತ್ರಿಕೆಯು ಹಲವಾರು ಸಾಹಿತಿಗಳ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿಯೇ ಅವರ ‘ಮಣ್ಣಿನ ಹಾಡು’ ಕವನ ಸಂಕಲನವೂ ಪ್ರಕಟವಾಯಿತು. ಉದ್ಯೋಗಿಯಾಗಿ ಸೇರಿದ್ದು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ (1969) ಮಾನಸ ಗಂಗೋತ್ರಿಯ ಭಾಷಾ ಅಧ್ಯಯನ ಸಂಸ್ಥೆಯಲ್ಲಿಯೂ ಕೆಲಕಾಲ ನಿರ್ವಹಿಸಿದ ಅಧ್ಯಾಪಕ ವೃತ್ತಿ (1975-79). ನಂತರ ಪೂರ್ಣಾವಧಿಯ ಲೇಖಕರಾಗಿ ತೊಡಗಿಸಿಕೊಂಡದ್ದು ಸಾಹಿತ್ಯ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ಕೃಷಿ. ಮಹತ್ವಾಕಾಂಕ್ಷಿಯಾಗಿದ್ದ ಕೃಷ್ಣರವರು ಯಾವುದೇ ಕೆಲಸ ಸಾಧಿಸುವ ಶಕ್ತಿ ಅವರಲ್ಲಿತ್ತು.
ಕಾಡು (1971), ಪರಸಂಗದ ಗೆಂಡೆತಿಮ್ಮ (1974) ಮತ್ತು ಭುಜಂಗಯ್ಯನ ದಶಾವತಾರಗಳು (1982). ಹಲವಾರು ಮುದ್ರಣ ಕಂಡ ‘ಕಾಡು’ ಕಾದಂಬರಿಯು ಭಾರತೀಯ ಭಾಷೆಗಳಲ್ಲದೆ ಐರೋಪ್ಯ ಭಾಷೆಗಳಿಗೂ ಅನುವಾದಗೊಂಡಿದೆ. ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯು ಮಲಯಾಳಂಗೆ ಅನುವಾದಗೊಂಡಿದೆ.‘ಕಾಡು’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿದ್ದು (1974), ಗಿರೀಶ್ ಕಾರ್ನಾಡರು ನಿರ್ದೇಶಿಸಿದ್ದಾರೆ, ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯನ್ನು ಮಾರುತಿ ಶಿವರಾಂರವರು ನಿರ್ದೇಶಿಸಿದ್ದಾರೆ. (1978). ಎರಡೂ ಚಿತ್ರಗಳು ಯಶಸ್ವಿ ಚಿತ್ರಗಳೆನಿಸಿದ್ದವು. ದಟ್ಟವಾದ ಹಳ್ಳಿಯ ಅನುಭವವನ್ನೇ ಮೂಲದ್ರವ್ಯವಾಗಿ ಬಳಸಿಕೊಂಡು ರಚಿಸಿದ ಹಲವಾರು. ಕತೆಗಳು ‘ತಪ್ತ’ (1970), ಪ್ರಥಮ ಕಥಾಸಂಕಲನ ಮತ್ತು ‘ಫೀನಿಕ್ಸ್’ ಸಂಕಲನವು 1975ರಲ್ಲಿ ಪ್ರಕಟವಾಯಿತು.
ಸಣ್ಣ ಕತೆಗಳಲ್ಲಿ ‘ಫೀನಿಕ್ಸ್’ (1978-ಉಗ್ರನರಸಿಂಹ ನಿರ್ದೇಶನ), ‘ಗೀಜಗನ ಗೂಡು’ (1978-ಟಿ. ಎಸ್. ರಂಗಾ ನಿರ್ದೇಶನ), ಕುರುಬರ ಲಕ್ಕನೂ ಎಲಿಜಬೆತ್ ರಾಣಿಯೂ (1981-ಎಚ್.ಎಂ. ಕೃಷ್ಣಮೂರ್ತಿ ನಿರ್ದೇಶನ) ಚಲನಚಿತ್ರಗಳಾದವು.
ಹಳ್ಳಿಯ ಜೀವನವು ಆಧುನಿತೆಯ ಸಂಘರ್ಷಕ್ಕೆ ಸಿಕ್ಕಿ ಬದಲಾಗುತ್ತಿರುವ ಸಾಮಾಜಿಕ ಹಿನ್ನೆಲೆಯನ್ನು ಗದ್ಯದಲ್ಲಿ ಅಭಿವ್ಯಕ್ತಪಡಿಸಿದರೆ ಕವಿತೆಗಳಲ್ಲಿ ಕಾಮದ ವಿವಿಧ ನೆಲೆಗಳನ್ನು ಶೋಧಿಸಹೊರಟಿದ್ದಾರೆ. ‘ಮಣ್ಣಿನ ಹಾಡು’ (1966), ‘ಕಾಡುಗಿಡದ ಹಾಡು-ಪಾಡು’ (1973), ‘ಪ್ರಕಟಿಸಲಾಗದ ಪದ್ಯಗಳು’ ಎಂಬ ಮೂರು ಕವನ ಸಂಕಲನಗಳನ್ನು ನವ್ಯಕಾವ್ಯವು ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಪ್ರಕಟವಾದವು.
ಅನುವಾದದಲ್ಲಿಯೂ ವಿಶಿಷ್ಟ ಪ್ರತಿಭೆಯನ್ನು ತೋರಿರುವ ಕೃಷ್ಣರವರು ‘ಡೋಗ್ರಿ ಪಹಾಡಿ ಪ್ರೇಮಗೀತೆಗಳು’ (1975) ಎಂಬ ಸಂಕಲನದಲ್ಲಿ ಜಮ್ಮು-ಕಾಶ್ಮೀರಿ ಭಾಷೆಯಾದ ಡೋಗ್ರಿ-ಪಹಾಡಿ ಭಾಷೆಯಿಂದ ಡಾ. ಕರಣಸಿಂಗ್ರವರು ಇಂಗ್ಲಿಷ್ಗೆ ಅನುವಾದಿಸಿದ್ದನ್ನು ಆಲನಹಳ್ಳಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮಣ್ಣಿನ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ದೊರೆತಿದೆ.
ಹಳ್ಳಿ ಕೃಷ್ಣ ರವರು ಬರೆದಿದ್ದು ಕಡಿಮೆ ಸಾಹಿತ್ಯ ಆದರೂ ಕೂಡ ಅವುಗಳ ಮೌಲ್ಯ ಅಪರಿಮಿತವಾದದ್ದು ಅವರ ನಿಧನರಾಗಿ ಅನೇಕ ವರ್ಷಗಳು ಕಳೆದರೂ ಕೂಡ ಅವರ ಸಾಹಿತ್ಯವನ್ನು ಓದುವ ಓದುಗರು ಮಾತ್ರ ಕಡಿಮೆಯಾಗಿಲ್ಲ.

ಕಾಳಿಹುಂಡಿ ಶಿವಕುಮಾರ್ ಮೈಸೂರು.