ಸಿಮ್ಸ್ 4ನೇ ಘಟಿಕೋತ್ಸವ : 2019ನೇ ಬ್ಯಾಚ್‍ನ ‘ಅಭ್ಯುದಯನ್ಸ್’ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ (ಸಿಮ್ಸ್) ಕಾಲೇಜು ವತಿಯಿಂದ 2019ನೇ ಬ್ಯಾಚ್‍ನ "ಅಭ್ಯುದಯನ್ಸ್" ವಿದ್ಯಾರ್ಥಿಗಳಿಗೆ ಇಂದು ವೈದ್ಯಕೀಯ ಪದವಿ ಪ್ರದಾನ ಮಾಡಲಾಯಿತು. 

ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ನಡೆದ 4ನೇ ಘಟಿಕೋತ್ಸವದ ‘ಪರ್ವ’ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ 150 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ 2019ರ ಬ್ಯಾಚಿನ ಟಾಪರ್‍ಗಳಾಗಿ ಹೊರ ಹೊಮ್ಮಿದ ಡಾ. ಸಿ.ಜೆ. ಕೇಶವ್, ಡಾ. ಮೇಹಾ ಜೋಶಿಪುರ, ಡಾ. ಎನ್. ವಿನುತಾ, ಡಾ. ಪ್ರತೀಕ್ ಗೌಡ, ಡಾ. ಆರ್ ಸುಶ್ಮಿತ ಮತ್ತು ಡಾ. ಯು. ಸಹನಾ ಅವರಿಗೆ ಪದವಿ, ಪಾರಿತೋಷಕ ಮತ್ತು ವಿವಿಧ ವಿಷಯಗಳಲ್ಲಿ ಆರ್.ಜಿ.ಯು.ಹೆಚ್.ಎಸ್ ರಾಜ್ಯಮಟ್ಟದ ಶ್ರೇಣಿಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾ. ಬಿ.ಎಲ್. ಸುಜಾತ ರಾಥೋಡ್ ಅವರು ಮಾತನಾಡಿ ತಂದೆ-ತಾಯಿ ಪೋಷಕರ ಒತ್ತಾಸೆ ಮೇರೆಗೆ ವೈದ್ಯಕೀಯ ಪದವಿ ಪಡೆದು ಈ ಸಮಾಜದಲ್ಲಿ ಪ್ರಕೃತಿ ಸೇವೆ ಮಾಡಲು ಮುಂದೆ ಬಂದಿದ್ದೀರಿ, ನಿಮ್ಮ ಉದ್ದೇಶ, ಕನಸು ಸಾಕಾರಗೊಳ್ಳಲಿ. ವೈದ್ಯಕೀಯ ಸೇವೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಿ, ಆ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡಲು ಆದ್ಯತೆ ನೀಡುವಂತೆ ತಿಳಿಸಿದರು. 

ಜನರಿಗೆ ಸಹಾಯ ಹಸ್ತ ಚಾಚುವ ಗುಣ ಬೆಳೆಸಿಕೊಳ್ಳಬೇಕು. ಚಿಕಿತ್ಸಾ ಸಮಯದಲ್ಲಿ ಎಂತಹ ಕಠಿಣ ಸಂದರ್ಭ ಎದುರಾದರೂ ದೃತಿಗೆಡಬಾರದು. ಉತ್ತಮ ನಿರ್ಧಾರ ತೆಗೆದುಕೊಂಡು ಧೈರ್ಯದಿಂದ ಮುನ್ನೆಡೆಯಬೇಕು. ರೋಗಿಗಳನ್ನು ಪ್ರೀತಿಯಿಂದ ಉಪಚರಿಸಿ ಗೌರವದಿಂದ ಕಾಣಬೇಕು. ಅವರಿಗೆ ಆತ್ಮವಿಶ್ವಾಸ ತುಂಬಬೇಕು. ಡಿಜಿಟಲ್ ಟೆಕ್ನಾಲಜಿ, ಡಿಜಿಟಲ್ ಹೆಲ್ತ್ ಮಾದರಿಯಲ್ಲಿ ಜನರ ಜೀವನಶೈಲಿಯೂ ಡಿಜಿಟಲಿಕರಣಗೊಳ್ಳುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವೈದ್ಯಕೀಯ ಸೇವೆ ನೀಡಬೇಕಾದ ಅವಶ್ಯವಿದೆ. ಒತ್ತಡಗಳನ್ನು ನಿಭಾಯಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ನೂತನ ವೈದ್ಯರಿಗೆ ಡಾ. ಬಿ.ಎಲ್. ಸುಜಾತ ರಾಥೋಡ್ ಅವರು ಸಲಹೆ ಮಾಡಿದರು.
  
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ಭಾರತ ಶೇ. 80ರಷ್ಟು ಹಳ್ಳಿಗಳಿಂದ ಕೂಡಿರುವ ದೇಶವಾಗಿದೆ. ವೈದ್ಯಕೀಯ ಪದವಿ ಪಡೆದಿರುವ ನೂತನ ವೈದ್ಯರು ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ವೈದ್ಯರೆಂದ ಮೇಲೆ ಸೇವಾವಧಿಯಲ್ಲಿ ಮಾನಸಿಕ, ದೈಹಿಕ ಒತ್ತಡ ಸಹಜ. ಅದನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ವೃತ್ತಿಯಲ್ಲಿ ಮಾನವೀಯತೆ ಮೈಗೂಡಿಸಿಕೋಳ್ಳಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಹೆಚ್.ಜಿ ಮಂಜುನಾಥ್ ಅವರು ಮಾತನಾಡಿ ವೈದ್ಯಕೀಯ ಪದವಿ ಪಡೆದ ನಿಮ್ಮ ಸೇವೆಯ ಹೊಸ ಅಧ್ಯಾಯ ಇಂದಿನಿಂದ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯವಾಗಿದೆ. ದೇಶಕ್ಕೆ ಮಾದರಿಯಾಗುವಂತಹ ಆರೋಗ್ಯ ಸೇವೆ ನೀಡಿಕೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು. 

ವೈದ್ಯರಿಗೆ ಶಿಸ್ತು, ಸಂಯಮ, ದೃಢನಂಬಿಕೆ ಮುಖ್ಯವಾಗಿರಬೇಕು. ರೋಗಿಗಳೊಂದಿಗೆ ಉತ್ತಮ ಸಂವಹನ ಇರಬೇಕು. ವೈದ್ಯಕೀಯ ಜೀವನವನ್ನು ಸವಾಲಾಗಿ ಸ್ವೀಕರಿಸಬೇಕು. ಜತೆಗೆ ಸಾಂಸ್ಕøತಿಕ ಚಟುವಟಿಕೆಗಳು, ಕ್ರೀಡೆ ಇನ್ನಿತರೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮದರ್ ಥೇರೆಸಾ ಅವರನ್ನು ಮಾದರಿಯನ್ನಾಗಿಸಿ ಸಮಾಜಕ್ಕೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಡಾ. ಹೆಚ್.ಜಿ ಮಂಜುನಾಥ್ ಅವರು ಕಿವಿಮಾತು ಹೇಳಿದರು. 

ಇದೇ ವೇಳೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ (ಸಿಮ್ಸ್) ಕಾಲೇಜಿನ ಡಾ. ಪ್ರದೀಪ್ ಅವರು ನೂತನ ವೈದ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮುಖ್ಯ ಆಡಳಿತಾಧಿಕಾರಿಗಳಾದ ನಂಜುಂಡೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೆ.ಆರ್. ಮಹೇಶ, ಅರ್ಥೋಪೆಡಿಕ್ ವಿಭಾಗದ ಮುಖ್ಯಸ್ಥರಾದ ಡಾ. ಮಾರುತಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ರಾಜೇಶ್, ಡಾ. ದರ್ಶನ್, ಡಾ. ರಮೇಶ್, ಡಾ. ನವೀನ್, ಡಾ. ಮಹಮ್ಮದ್ ಶರೀಫ್, ಡಾ. ಪ್ರಭಾ, ಡಾ. ಅಭಿಷೇಕ್, ಡಾ. ತೃಪ್ತಿ, ಡಾ. ಚಂದ್ರಕಲಾ, ಡಾ. ದಮಯಂತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *