
ಗುಂಡ್ಲುಪೇಟೆ: ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಬೇಗೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ವೇಳೆ ವಿದ್ಯಾರ್ಥಿನಿಲಯಕ್ಕೆ ತೆರಳಿದ ಸಚಿವರು, ವಿದ್ಯಾರ್ಥಿಗಳ ವಾಸದ ಕೊಠಡಿ, ಶೌಚಾಲಯ ವೀಕ್ಷಿಸಿ ನೈರ್ಮಲ್ಯ ಪರಿಶೀಲಿಸಿದ ಸಂತರ ಶಾಲೆಯಲ್ಲಿ ದೊರಕುತ್ತಿರುವ ಸೌಲಭ್ಯಗಳು ಹಾಗೂ ಬೋಧನೆ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಶಿಕ್ಷಕರು ಉತ್ತಮವಾಗಿ ಕಲಿಸುತ್ತಿದ್ದಾರೆಯೇ? ರುಚಿಕರವಾದ ತಿಂಡಿ, ಊಟ ನೀಡುತ್ತಿದ್ದಾರಾ? ವಾಸದ ಕೊಠಡಿಯಲ್ಲಿ ಆರಾಮದಾಯಕವಾಗಿ ಇರಬಹುದಾ? ಶೌಚಾಲಯವು ಯಾವಾಗಲೂ ಶುಚಿತ್ವವಾಗಿರುತ್ತದಾ? ಏನಾದರೂ ಸಮಸ್ಯೆ ಇದೆಯಾ ಎಂದು ಮಕ್ಕಳನ್ನು ಪ್ರಶ್ನಿಸಿ, ಪ್ರತಿಕ್ರಿಯೆ ಪಡೆದರು.
ಬಳಿಕ ಭೋಜನಾಲಯಕ್ಕೆ ಭೇಟಿ ನೀಡಿ ದಾಸ್ತಾನು ಕೊಠಡಿ ಪರಿಶೀಲಿಸಿದರು. ಚಹಾ ಸವಿಯುತ್ತಾ ಮಾತನಾಡಿ, ಗ್ರಾಮೀಣ ಭಾಗದ ಅನೇಕ ಮಕ್ಕಳು ಕಲಿಯಲು ಇಲ್ಲಿಗೆ ಬರುತ್ತಾರೆ. ನಿಲಯಪಾಲಕರು ಪ್ರೀತಿಯಿಂದ ನೋಡಿಕೊಳ್ಳಬೇಕು. ಶಿಕ್ಷಕರು ತಮಗೆ ನೀಡಿರುವ ವಸತಿ ಗೃಹದಲ್ಲಿ ಕಡ್ಡಾಯವಾಗಿ ಇರಬೇಕು. ಮಕ್ಕಳ ಆರೋಗ್ಯದಲ್ಲಿ ಜಾಗರೂಕತೆ ವಹಿಸಬೇಕು ಎಂದು ಸೂಚಿಸಿದರು.

ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸುವಂತೆ ಪ್ರೇರಿಪಿಸಿ, ಮೆನು ಚಾರ್ಟ್ ಪ್ರಕಾರವೇ ಮಕ್ಕಳಿಗೆ ಊಟ, ತಿಂಡಿ ವಿತರಿಸಬೇಕು. ಒಟ್ಟಾರೆ ಮನೆಗಿಂತಲೂ ವಸತಿ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕೆಂದು ಸಲಹೆ ನೀಡಿದರು.

ವಸತಿ ಶಾಲೆಯ ಭೋಜನಾಲಯ, ಶೌಚಾಲಯಗಳು ಹಾಗೂ ಆವರಣವು ನೈರ್ಮಲ್ಯದಿಂದ ಕೂಡಿರಬೇಕು. ಪ್ರತಿದಿನ ಮುಂಜಾನೆ ಯೋಗ, ವ್ಯಾಯಾಮ, ಧ್ಯಾನವನ್ನು ಅಭ್ಯಾಸ ಮಾಡಿಸಬೇಕು. ಮಕ್ಕಳಿಗೆ ಆರೋಗ್ಯ ಕುರಿತು ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಗೋಪಾಲ್ ಹೊರೆಯಾಲ , ರವಿಕುಮಾರ್ ಉಪವಿಭಾಗಧಿಕಾರಿ ಮಹೇಶ್ ಆಪ್ತ ಸಹಾಯಕರಾದ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.