- ಇತಿಹಾಸಕಾರ ಧರ್ಮೇಂದ್ರ ಕುಮಾರ್ ಆರೇನಹಳ್ಳಿ ಬೇಸರ
- ಬಸವಮಾರ್ಗದಲ್ಲಿ ಕುಡಿತ ಬಿಡಿಸುವ ಶಿಬಿರ ಉದ್ಘಾಟನೆ

ಮೈಸೂರು : ಅಪರಾಧಿಗಳು, ಭಷ್ಟಚಾರಿಗಳನ್ನೂ ಬೇಕಾದರೂ ಈ ಸಮಾಜ ನಂಬುತ್ತದೆ. ಕ್ಷಮಿಸುತ್ತದೆ. ಆದರೆ ಕುಟಿತಕ್ಕೆ ದಾಸರಾದವರನ್ನು ಈ ಸಮಾಜ ನಂಬಿದ, ಕ್ಷಮಿಸಿದ ಉದಾಹರಣೆಗಳೇ ಇಲ್ಲ. ಹಾಗಾಗಿ ಸ್ವಾಭಿಮಾನದಿಂದ ಬದುಕಬೇಕು ಎಂದು ಇತಿಹಾಸಕಾರರಾದ ಧರ್ಮೇಂದ್ರ ಕುಮಾರ್ ಆರೇನಹಳ್ಳಿ ಅವರು ಸಲಹೆ ನೀಡಿದರು.
ಬಸವಮಾರ್ಗ ವ್ಯಸನಮುಕ್ತ ಕೇಂದ್ರದಿಂದ ಆಯೋಜಿಸಿರುವ 10 ದಿನಗಳ ಕುಡಿತ ಬಿಡಿಸುವ ಉಚಿತ ಶಿಬಿರದ ಹಿನ್ನೆಲೆಯಲ್ಲಿ
ನಗರದ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮಂಗಳವಾರ ಆಯೋಸಿದ್ದ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವ್ಯಸನಿಗಳ ಮೇಲೆ ಜನರು ನಂಬಿಕೆ ಇಡುತ್ತಿಲ್ಲ. ಅವರನ್ನು ಯಾರೂ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮಾಡುವ ಕೆಲಸವನ್ನೂ ಬಿಟ್ಟು, ಬಾರ್ಗಳ ಮುಂದೆ ನಿಲ್ಲುತ್ತಿದ್ದಾರೆ. ಪರಿಣಾಮ ಬಾಂಗ್ಲದೇಶದಿಂದ ಬಂದ ಜನರು ಇಂದು ನಮ್ಮ ಜಮೀನುಗಳಲ್ಲಿ ಭತ್ತ ನಾಟಿ ಮಾಡುತ್ತಿದ್ದಾರೆ. ಯೋಚನೆ ಮಾಡಿ ನಮ್ಮ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ಅತಾಶೆ ವ್ಯಕ್ತಪಡಿಸಿದರು.
ನಮ್ಮ ಮುಂದಿನ ಪೀಳಿಗೆ ಚೆನ್ನಾಗಿ ಇರಲಿ ಎಂದು ನಮ್ಮ ಪೂರ್ವಿವಿಕರು ಆಸ್ತಿ-ಪಾಸ್ತಿ ಮಾಡಿಟ್ಟು ಹೋಗಿದ್ದಾರೆ. ಆದರೆ ವ್ಯಸನಕ್ಕೆ ಬಲಿಯಾಗಿ ನಾವು ಏನು ಮಾಡಿಕೊಳ್ಳುತ್ತಿದ್ದೇವೆ. ಕುಡಿತಕ್ಕೆ ದುಡ್ಡು ಬೇಕು ಎಂದು ಇರುವ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಪೂರ್ವಿಕರ ಆತ್ಮ ಎಷ್ಟೊಂದು ನೊಂದುಕೊಳ್ಳುತ್ತಿರಬೇಕು ಯೋಚನೆ ಮಾಡಿ ಎಂದು ವಿಷಾಧಿಸಿದರು.
ಲೇಖಕಿ ಡಾ. ಶ್ವೇತಾ ಮಡಪ್ಪಾಡಿ ಮಾತನಾಡಿ, ನಾನಾ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಸ್ಥಿತಿ ಏನಾಗಿದೆ. ಅರ್ಥ ಮಾಡಿಕೊಳ್ಳಿ. ಇರುವ ಅವಕಾಶಗಳನ್ನು ಬದಿಗೊತ್ತಿ ವ್ಯಸನಕ್ಕೆ ಬಲಿಯಾಗುತ್ತಿದ್ದೇವೆ. ಇದರಿಂದ ನಿಮ್ಮ ಕುಟುಂಬದ ಪರಿಸ್ಥಿತಿ ಏನಾಗಬೇಕು. ಸಮಾಜ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹೇಗೆ ನೋಡುತ್ತದೆ ಎನ್ನುವ ಅರಿವು ನಿಮ್ಮಲ್ಲಿದೆಯೇ ಎಂದು ಎಚ್ಚರಿಸಿದರು.
ಜೀವನದಲ್ಲಿ ಏರುಪೇರಾಗುವುದು ಸಹಜ. ಆದರೆ ಅಲ್ಲೇ ಕುಳಿತು ಬಿಡುವುದು ನಮ್ಮ ಮೂರ್ಖತನ. ಅಲ್ಲಿಂದ ಬದಲಾವಣೆ ಕಡೆಗೆ ನಾವು ಮುಖ ಮಾಡಬೇಕು. ವ್ಯಸನ ಬಿಡುವುದಕ್ಕೆ ಬಸವಮಾರ್ಗದಂತಹ ಮತ್ತೊಂದು ವ್ಯಸನಮುಕ್ತ ಕೇಂದ್ರ ನಿಮಗೆ ಬೇಕಿಲ್ಲ. ಇಲ್ಲಿ ಸಿಗುವ ಮಾರ್ಗದರ್ಶನದಿಂದ ನೀವು ಹೊಸ ಬದುಕಿಗೆ ಮುನ್ನುಡಿ ಬರೆಯಬೇಕು ಎಂದು ಸಲಹೆ ನೀಡಿದರು.
ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯೇ ಕುಡಿತ ಒಂದು ಕಾಯಿಲೆ ಎಂದು ಘೋಷಣೆ ಮಾಡಿದೆ. ಈ ಕಾಯಿಲೆ ಬಗ್ಗೆ ಎಲ್ಲೆಡೆ ಅರಿವು ಮೂಡಿಸಬೇಕಾಗಿದೆ. ಕುಟಿತಕ್ಕೆ ದಾಸನಾದ ವ್ಯಕ್ತಿಯು ಸಮಾಜದಲ್ಲಿ ಎಲ್ಲ ಕಡೆಯಿಂದಲೂ ಅನ್ಯಾಯಕ್ಕೆ ಒಳಗಾಗುತ್ತಾನೆ. ಆತ ಯಾರಿಗೂ ಮೋಸ ಮಾಡುವುದಿಲ್ಲ, ಅನ್ಯಾಯಾ ಮಾಡುವುದಿಲ್ಲ. ಆದರೆ ಆತನೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾನೆ. ಇದು ಎಂತಹ ದುರ್ವಿಧಿ ಎಂದು ನೀವೆ ಯೋಚಿಸಿ ಬೇಸರಿಸಿದರು.
ನಾನು ಕೂಡ ಕುಡಿತದ ಚಟಕ್ಕೆ ಬಲಿಯಾಗಿ 17 ವರ್ಷಗಳ ಕಾಲ ಜೀವನವನ್ನೇ ನರಕ ಮಾಡಿಕೊಂಡಿದ್ದೆ. ಅದರಿಂದ ಹೊರ ಬಂದ ಮೇಲೆ ಕುಡಿತಕ್ಕೆ ಬಲಿಯಾದವರಿಗೆ ಸಮರ್ಪಕವಾದ ಸೂರು ಕಲ್ಪಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ ವ್ಯಸನಿಗಳನ್ನು ನಮ್ಮ ಅಣ್ಣ-ತಮ್ಮರಂತೆ ಕಾಣಲಾಗುತ್ತದೆ. ಅವರು ವ್ಯಸನದಿಂದ ಹೊರ ಬರಲು ಯೋಗ, ಸತ್ಸಂಗ, ಸಂಗೀತ, ಜಿಮ್, ವ್ಯಕ್ತಿತ್ವ ವಿಕಸನ ತರಗತಿ, ಕೌನ್ಸಲಿಂಗ್, ಸೂಕ್ತ ವೈದ್ಯಕೀಯ ಚಿಕಿತ್ಸೆ, ಸತ್ವ ಭರಿತ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ವ್ಯಸನಿಗಳಿಗಾಗೇ ದುಡಿಯುತ್ತೆನೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಬಾಲಸುಬ್ರಹ್ಮಣ್ಯಂ, ಎಚ್.ಪಿ.ನವೀನ್ ಕುಮಾರ್, ಸಂಜಯ್ ಗೌಡ ಸೇರಿದಂತೆ ಇತರರು ಇದ್ದರು.
ಮದ್ಯಪಾನವನ್ನು ಪ್ರೋತ್ಸಾಹಿಸುವ ಸರ್ಕಾರ ರಾಜ್ಯದ ಯಾವುದಾದರೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ತೆರೆದಿದೆಯೇ ? ಈ ಆರ್ಥಿಕ ವರ್ಷದಲ್ಲಿ ಇಂತಿಷ್ಟು ಮದ್ಯ ಮಾರಾಟ ಮಾಡಿ, ಇಂತಿಷ್ಟು ಕೋಟಿ ರೂಪಾಯಿಗಳನ್ನು ಲಾಭ ಗಳಿಸಬೇಕು ಎಂದು ಸರ್ಕಾರ ಹೇಳುತ್ತದೆ. ಹಾಗಾದರೆ ಇದರ ಒಳ ಅರ್ಥ ಏನು ಯೋಚನೆ ಮಾಡಬೇಕು. ಒಂದು ಕಡೆ ಮದ್ಯಪಾನ ಮಾರಾಟ ಮಾಡಿ ನಿಮ್ಮಿಂದ ಸುಲಿಗೆ ಮಾಡಿಸಿದರೆ ಮತ್ತೊಂದು ಕಡೆ ಡ್ರಿಂಕ್ ಆಂಡ್ ಡ್ರೈವ್ ಹೆಸರಿನಲ್ಲಿ ಫೈನ್ ಹಾಕಿ ಸುಲಿಗೆ ಮಾಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಶೇ. ರಷ್ಟು ಮಹಿಳೆಯರು ವಿಧವೆಯರಾಗಿದ್ದಾರೆ. ಇದಕ್ಕೆ ಕಾರಣ ಅವರ ಗಂಡಂದಿರ ಮಿತಿಮೀರಿದ ಮದ್ಯಪಾನ ಚಟ. ಈ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕು.
-ಧರ್ಮೇಂದ್ರ ಕುಮಾರ್ ಆರೇನಹಳ್ಳಿ, ಇತಿಹಾಸಕಾರ