




ಮೈಸೂರು: ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ ಶ್ರೀ ಭಗೀರಥ ಜಯಂತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಜಯಂತಿಯ ಅಂಗವಾಗಿ ಗ್ರಾಮದ ಮುಖ್ಯ ರಸ್ತೆಯಲ್ಲೆಲ್ಲ ಕೇಸರಿ ಬಣ್ಣದ ಬಂಟಿಂಗ್ಸ್ ಗಳು, ತಳಿರು ತೋರಣಗಳು ಹಾಗೂ ಶ್ರೀ ಭಗೀರಥ ಮಹರ್ಷಿಯವರ ಭಾವಚಿತ್ರವುಳ್ಳ ಫ್ಲೆಕ್ಸ್ ಗಳನ್ನು ಅಳವಡಿಸುವ ಮೂಲಕ ಇಡೀ ಗ್ರಾಮವೇ ಕೇಸರಿಮಯದಿಂದ ಕಂಗೊಳಿಸುತ್ತಾ ಎಲ್ಲರ ಗಮನ ಸೆಳೆಯಿತು. ಉಪ್ಪಾರ ಸಮುದಾಯದವರು ಸಡಗರ ಸಂಭ್ರಮದಿಂದ ಶ್ರೀ ಭಗೀರಥ ಜಯಂತಿಯ ಹಬ್ಬವನ್ನು ಅದ್ದೂರಿಯಾಗಿ ಹಾಗೂ ಧಾರ್ಮಿಕ ವಿಧಿ ವಿಧಾನಗಳಂತೆ ಆಚರಣೆ ಮಾಡಿದ್ದು ವಿಶೇಷವಾಗಿತ್ತು.
ಗ್ರಾಮದ ಮಾರಮ್ಮ ತಾಯಿ ದೇವಸ್ಥಾನದ ಬಳಿ ಗಂಗಾ ಪೂಜೆಯನ್ನು ನೆರವೇರಿಸಿ ಬೆಳ್ಳಿ ಪಲ್ಲಕ್ಕಿ ರಥದಲ್ಲಿ ಪೂರ್ಣ ಕುಂಭ ಕಳಸಗಳೊಂದಿಗೆ ಶ್ರೀ ಭಗೀರಥ ಮಹರ್ಷಿಗಳ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ಗ್ರಾಮದ ಮುಖ್ಯ ರಸ್ತೆಯಲ್ಲಿ ವೀರಗಾಸೆ, ದಸರಾ ಬೊಂಬೆಗಳು, ಅರಮನೆ ವಾದ್ಯಗೋಷ್ಠಿ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಭಗೀರಥ ಮಹರ್ಷಿಗಳ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯುದ್ಧಕ್ಕೂ ಯುವಕರು, ಮಕ್ಕಳು, ಸಾರ್ವಜನಿಕರು ವಾದ್ಯದ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಪಟಾಕಿಸಿಡಿಸಿ ಶ್ರೀ ಭಗೀರಥ ಮಹರ್ಷಿ ಅವರ ಜಯ ಘೋಷಣೆಗಳನ್ನು ಮೊಳಗಿಸಿದರು.
ಶ್ರೀ ಭಗೀರಥ ಜಯಂತೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಭಗೀರಥ ಉಪ್ಪಾರ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಯಜಮಾನರುಗಳು, ಮುಖಂಡರುಗಳು, ವಿವಿಧ ಸಂಘಟನೆಗಳವರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.