ಮೈಸೂರಿನಲ್ಲಿ ಮೇ 4ರಂದು ಅದ್ದೂರಿಯಾಗಿ ಶ್ರೀ ಭಗೀರಥ ಜಯಂತಿ ಆಚರಣೆ

ಮೈಸೂರು: ಜಿಲ್ಲಾ ಮಟ್ಟದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಮೇ 4ರ ಭಾನುವಾರದಂದು ನಗರದಲ್ಲಿ ಜಿಲ್ಲಾಡಳಿತದೊಂದಿಗೆ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಹೇಳಿದರು.

ಅವರು ಮೈಸೂರು ನಗರದ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಉಪ್ಪಾರ ಸಮಾಜದ ಮೂಲ ಕಸುಬಾದ ಉಪ್ಪು ತಯಾರಿಕೆಯನ್ನು ಬಿಂಬಿಸುವ “ಉಪ್ಪಿನ ರಾಶಿ ಮತ್ತು ಗಂಗಾ ಕಳಸಾ ಪೂಜೆಯನ್ನು ಮಾಡಿ ಪುಷ್ಪಾರ್ಚನೆಯೊಂದಿಗೆ “ಶ್ರೀ ಭಗೀರಥ ಮಹರ್ಷಿ” ಅವರ ಭಾವಚಿತ್ರವನ್ನು ಭವ್ಯವಾಗಿ ಅಲಂಕೃತಗೊಂಡ ವಾಹನದಲ್ಲಿ ಪ್ರತಿಷ್ಠಾಪಿಸಿ ಸತ್ತಿಗೆ, ಸುರಿಪಾನಿ, ಮಾರಿ ಕುಣಿತ, ಬೀಸು ಕಂಸಾಳೆ, ಡೊಳ್ಳು ವರಸೆ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ನಗರದ ಅರಮನೆ ಮುಂಭಾಗವಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ
ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ಕಲಾಮಂದಿರಕ್ಕೆ
ಕರೆತರಲಾಗುವುದು. ಅಲ್ಲಿ ವೇದಿಕೆಯ ಕಾರ್ಯಕ್ರಮವು ನಡೆಯಲಿದೆ ಎಂದರು.

ಸೂರ್ಯವಂಶ ಕ್ಷತ್ರಿಯರ ಅನುವಂಶಿಯರಾದ ಉಪ್ಪಾರ ಸಮಾಜದ ಆರಾಧ್ಯ ದೈವ ಶ್ರೀ ಭಗೀರಥ ಮಹರ್ಷಿಗಳು ಲೋಕ ಕಲ್ಯಾಣಾರ್ಥವಾಗಿ ಮನುಕುಲದ ಉದ್ದಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ದರಿಸಿ ಪಾವನಗೊಳಿಸಿದ್ದಾರೆ. ಈ ಸಾಧನೆಯು ಭಗೀರಥ ಪ್ರಯತ್ನ ಎಂದೆ ಪ್ರಖ್ಯಾತಿ ಹೊಂದಿರುತ್ತದೆ. ಶ್ರೀ ಭಗೀರಥ ಮಹರ್ಷಿಯವರ ಜಯಂತಿಯನ್ನು ಸರ್ಕಾರದ ವತಿಯಿಂದ ರಾಜ್ಯಾದ್ಯಂತ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ವಿವಿಧ ಕಾರಣಗಳಿಗಾಗಿ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಜಿಲ್ಲಾಡಳಿತದೊಂದಿಗೆ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯು ಕೈಜೋಡಿಸಿ ಮೈಸೂರು ಜಿಲ್ಲಾಮಟ್ಟದಲ್ಲಿ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಮೇ ನಾಲ್ಕರ ಭಾನುವಾರದಂದು ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಗೀರಥ ಪೀಠದ
ಡಾ.ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿಗಳು ವಹಿಸಲಿದ್ದು ಸಚಿವರು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಸೇರಿದಂತೆ ಹಲವು ಗಣ್ಯರುಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ಭಗೀರಥ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಭಾಗದ ಉಪ್ಪಾರ ಸಮಾಜದ ಯಜಮಾನರುಗಳು, ಜನಪ್ರತಿನಿಧಿಗಳು, ಮುಖಂಡರುಗಳು, ಸಂಘಟನೆಗಳವರು, ಯುವಕರು, ಮಹಿಳೆಯರು, ನೌಕರರು, ವೃತ್ತಿಪರರು ಸೇರಿದಂತೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯು ಹೊರತಂದಿರುವ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯ ಗೌರವ ಸಲಹೆಗಾರ ಕರಳಾಪುರ ನಾಗರಾಜು, ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಮರೀಶೆಟ್ಟಿ, ಆಹಾರ ಸಮಿತಿಯ ಅಧ್ಯಕ್ಷ ಡಾ.ಎ.ನಾಗರಾಜ್, ಮೆರವಣಿಗೆ ಸಮಿತಿ ಸದಸ್ಯರಾದ ಯೋಗೇಶ್ ಉಪ್ಪಾರ್, ಕನಕನಗರ ಮಹದೇವ್, ಪ್ರಚಾರ ಸಮಿತಿ ಸದಸ್ಯ
ಡಾ.ಎಂ.ಗೋವಿಂದರಾಜು, ಆಹಾರ ಸಮಿತಿ ಸದಸ್ಯ ಟಿ.ಎನ್.ಶಿವರಾಜ್ ಇದ್ದರು.

Leave a Reply

Your email address will not be published. Required fields are marked *