ಪರಿಶಿಷ್ಟರ ದೌರ್ಜನ್ಯಗಳ ತಡೆಗೆ ಪರಿಣಾಮಕಾರಿ ಅರಿವು ಮೂಡಿಸಲು ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್ ಸಲಹೆ

ಚಾಮರಾಜನಗರ : ಸರ್ಕಾರ ಜಾರಿಗೊಳಿಸಿರುವ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಪರಿಣಾಮಕಾರಿ ಅರಿವು ಮೂಡಿಸಿದರೆ ದೌರ್ಜನ್ಯಗಳನ್ನು ತಡೆಯಬಹುದಾಗಿದೆ ಎಂದು ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್ ಅವರು ಸಲಹೆ ಮಾಡಿದರು.
 
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಚಾಮರಾಜನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ್ರಜಾ ಪರಿವರ್ತನಾ ವೇದಿಕೆ ಸಹಯೋಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ-1989 ಮತ್ತು ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತ ವಿಚಾರ ಸಂಕಿರಣ ಮತ್ತು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ದೌರ್ಜನ್ಯ ತಡೆಯಲು ಸಂವಿಧಾನದ ಹಲವು ಅನುಚ್ಛೇದಗಳಡಿ ಸರ್ಕಾರ ಕಾನೂನುಗಳನ್ನು ರೂಪಿಸಿ ಜಾರಿಗೊಳಿಸಿದ್ದರೂ ದೇಶದ ಹಲವೆಡೆ ಪರಿಶಿಷ್ಟರ ಮೇಲೆ ದೌರ್ಜನ್ಯ ಆಗಾಗ್ಗೆ ಜರುಗುತ್ತಿವೆ. ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗ್ರಾಮ, ತಾಲೂಕು ಜಿಲ್ಲಾಮಟ್ಟದಲ್ಲಿ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವ್ಯಾಪಕ ಅರಿವು ಮೂಡಿಸಬೇಕಾದ ಅವಶ್ಯವಿದೆ ಎಂದರು.

ಪರಿಶಿಷ್ಟರಿಗೆ ಜಾತಿನಿಂದನೆ, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ, ವೈಯಕ್ತಿಕ ನಿಂದನೆ ಸೇರಿದಂತೆ ಹಲವಾರು ಬಗೆಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ದೇಶದಲ್ಲಿ ಪರಿಶಿಷ್ಟರ 57 ಸಾವಿರ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಪರಿಶಿಷ್ಟ ಪಂಗಡದ 10 ಸಾವಿರ ಪ್ರಕರಣಗಳಿವೆ. ಕರ್ನಾಟಕದಲ್ಲಿಯೂ ಸಹ 2 ಸಾವಿರ ಪ್ರಕರಣಗಳು ದಾಖಲಾಗಿದ್ದು, ಪರಿಶಿಷ್ಟರ ದೌರ್ಜನ್ಯಗಳ ತಡೆಗೆ ಜಾರಿಯಾಗಿರುವ ಪ್ರತಿಬಂಧಕ ಕಾನೂನುಗಳ ಅರಿವನ್ನು ಜನರಿಗೆ ಮೂಡಿಸಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್ ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಿ.ವೈ.ಎಸ್.ಪಿ. ಲಕ್ಷ್ಮಯ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್. ನಂಜಯ್ಯ ಹಾಗೂ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಿ. ಶೈಲೇಶ್‍ಕುಮಾರ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ-1989 ಮತ್ತು ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತ ಸವಿವರವಾಗಿ ವಿಷಯ ಮಂಡಿಸಿದರು.

ಟಿ. ನರಸೀಪುರ ತ್ರಿವೇಣಿನಗರದ ನಳಂದ ಬುದ್ಧ ವಿಹಾರದ ಪೂಜ್ಯ ಬಂತೆ ಬೋಧಿರತ್ನ  ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎನ್. ಮುನಿರಾಜು ಅವರು ಇಲಾಖೆಯಿಂದ ಪರಿಶಿಷ್ಟರಿಗೆ ದೊರೆಯುವ ಸೌಲಭ್ಯಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಿ. ಗಿರಿಜಾ ಅವರು ಮಾತನಾಡಿ ದೌರ್ಜನ್ಯ ಪ್ರಕರಣಗಳು ಜರುಗಿದ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಲಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ, ಪಿಂಚಣಿ, ಅಗತ್ಯವಿದ್ದರೆ ನೌಕರಿ ನೀಡಲಾಗುತ್ತದೆ. ಅಲ್ಲದೆ ದೌರ್ಜನ್ಯ ಪ್ರತಿಬಂಧಕ ಕಾನೂನುಗಳ ಜಾಗೃತಿಯನ್ನು ಸಾರ್ವಜನಿಕರಿಗೆ ಮೂಡಿಸಲಾಗುತ್ತದೆ ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಎನ್. ನಂಜುಂಡೇಗೌಡ, ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿ.ಎಂ. ಕೃಷ್ಣಮೂರ್ತಿ ತಾಲೂಕು ಸಂಯೋಜಕರಾದ ಮಹೇಶ್, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *