ಮುಂಗಾರಿನ ಮೊದಲ ಹಬ್ಬ: “ಮಣ್ಣೆತ್ತಿನ ಅಮಾವಾಸ್ಯೆ” ಆಚರಣೆಯ ಮಹತ್ವ


ಪೀಠಿಕೆ:-  (ನಿನ್ನೆ ತಾನೆ ನಾವು ಮಣ್ಣೆತ್ತಿನ ಅಮಾವಾಸ್ಯೆ ಯನ್ನ ಭಯ ಭಕ್ತಿಯಿಂದ ಆಚರಿಸಿದ್ದೇವೆ. ಅದರ ಆಚರಣೆ ಮಹತ್ವ ನಿಜಕ್ಕೂ ವಿಶಿಷ್ಟ ರೀತಿಯಲ್ಲಿ ಇದೆ. ನಾವು ಭೀಮನ ಅಮಾವಾಸ್ಯೆ..... ಎಳ್ಳ ಅಮಾವಾಸ್ಯೆ.... ತೈ/ ಅವರಾತ್ರಿ ಅಮಾವಾಸ್ಯೆ......ದೀಪಾವಳಿ ಅಮಾವಾಸ್ಯೆ.... ಮಹಾಲಯ ಅಮಾವಾಸ್ಯೆ..... ಛಟ್ಟಿ ಅಮಾವಾಸ್ಯೆ......ಯುಗಾದಿ ಅಮಾವಾಸೆ.... ಶಿವರಾತ್ರಿ ಅಮಾವಾಸ್ಯೆ..... ಅಕ್ಷಯ ಅಮಾವಾಸ್ಯೆ.... ಬಾದಾಮಿ ಅಮಾವಾಸ್ಯೆ.... ಆಷಾಡದ ಅಮಾವಾಸ್ಯೆ..... ಪಾಡ್ಯ ಅಮಾವಾಸ್ಯೆ.... ಹೀಗೆ ಆಯಾ ಕಾಲಮಾನಕ್ಕೆ ತಕ್ಕಂತೆ ಅಮಾವಾಸ್ಯೆಯನ್ನು ಆಚರಿಸುತ್ತಾರೆ. 
ಒಂದೊಂದು ಅಮಾವಾಸ್ಯೆ ಆಚರಣೆಯು ವಿಭಿನ್ನ, ವಿಶಿಷ್ಟವಾಗಿ ನಮ್ಮ ಜನಮನದ ಸಂಸ್ಕೃತಿಯಲ್ಲಿ ಮನೆಮಾಡಿಕೊಂಡಿದೆ. ಅವುಗಳ ಆಚರಣೆಗಳ ಬಗ್ಗೆ ಹಳ್ಳಿಯಿಂದ ಹಳ್ಳಿಗೆ.... ಜಿಲ್ಲೆಯಿಂದ ಜಿಲ್ಲೆಗೆ.... ರಾಜ್ಯದಿಂದ ರಾಜ್ಯಕ್ಕೆ..... ಹೀಗೆ ವಿಭಿನ್ನವಾಗಿ ಹಲವು ಕಡೆ ಆಚರಣೆಯಲ್ಲಿ ತೊಡಗುತ್ತಾರೆ. 
ಅವುಗಳ ಆಚರಣೆಯ ಬಗ್ಗೆ ಕೇಳುತ್ತಾ, ಓದುತ್ತ, ಹೋದಂತೆ, ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ಹಲವು ಅಂಶಗಳು ಕೂಡಾ ಜೊತೆ ಜೊತೆಯಲಿ ತೆರೆದುಕೊಳ್ಳುತ್ತಾ ಹೋಗುತ್ತದೆ..,....)

ರೈತನ ಸಂಗಾತಿಯಾದ ಎತ್ತುಗಳನ್ನು ಮಣ್ಣಿನಲ್ಲಿ ಮಾಡಿ ಪೂಜಿಸುವ ಸಂಪ್ರದಾಯ ಪ್ರಧಾನವಾಗಿರುತ್ತದೆ. ಇದು ಮುಖ್ಯವಾಗಿ ಮಣ್ಣೆತ್ತಿನ ಅಮಾವಾಸ್ಯೆ ಯಲ್ಲಿ ಕಂಡುಬರುತ್ತದೆ. ಮುಂಗಾರಿನ ಆರಂಭದ ಮಣ್ಣೆತ್ತಿನ ಅಮಾವಾಸ್ಯೆ ಯಲ್ಲಿ ಕಾರಹುಣ್ಣಿಮೆಯ ನಂತರ ಬರುವ ಹಬ್ಬವೇ ಇದಾಗಿದೆ. 
ರೈತಾಪಿ ವರ್ಗಕ್ಕೆ ಇದು ಎಲ್ಲಿಲ್ಲದ ಸಡಗರ, ಸಂಭ್ರಮ ತರುತ್ತದೆ. ಮುಖ್ಯವಾಗಿ ಇಲ್ಲಿ  ಗಮನಿಸಬೇಕಾದ ಅಂಶವೆಂದರೆ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ವಿಶಿಷ್ಟ ರೀತಿಯಲ್ಲಿ ಸಿಂಗರಿಸಿ, ಪೂಜೆ ಪುರಸ್ಕಾರ ಮಾಡಿ ಸಂಭ್ರಮ ಪಡುವ ಹಬ್ಬ.
ಮೊದಲು ನಿಜ ಎತ್ತುಗಳಿಗೂ ಸಹ ಪೂಜೆ ಮಾಡುತ್ತಾರೆ. ನಂತರ ಮಣ್ಣಿನಿಂದ ಮಾಡಿರುವ ಎತ್ತುಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ.
ಆರಂಭದ ವರ್ಷದಲ್ಲಿ ಐದು ಮುಖ್ಯ ಮಣ್ಣಿನ ಪೂಜೆಯನ್ನು ಮಾಡುವ ಸಂಪ್ರದಾಯ ಕೆಲವು ಕಡೆ ಇದೆ. ಆಷಾಢ, ಶ್ರಾವಣ, ಭಾದ್ರಪದ ಮಾಸಗಳು ಮಣ್ಣು ಪೂಜೆಗೆ ಪ್ರಮುಖವಾಗಿ ದ್ಯೋತಕವಾಗಿವೆ.
ಮಣ್ಣೆತ್ತು, ಗುಳ್ಳಪ್ಪ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ ಈ 5 ಮಣ್ಣಿನಿಂದಲೇ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ.  
ಕೃಷಿಕರ ಹೊಲ- ಗದ್ದೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಿಗೆ ಬರುವ ಎತ್ತುಗಳನ್ನು ಕಾರಹುಣ್ಣಿಮೆಯಲ್ಲಿ ವಿಶೇಷವಾಗಿ ತೊಳೆದು ಅವಕ್ಕೆ ವರ್ಣರಂಜಿತ ಬಣ್ಣಗಳನ್ನು ಹಚ್ಚಿ, ವಿವಿಧ ಪರಿಕರಗಳಿಂದ ಅಡಿಯಿಂದ ಮುಡಿ ವರೆಗೆ ಸಿಂಗಾರ ಮಾಡಿ, ಹೋಳಿಗೆ, ಕಡುಬು ಇನ್ನಿತರ ಸಿಹಿ ತಿಂಡಿಗಳನ್ನು ಮಾಡಿ, ಎಡೆ ಕೊಡುವ ಸಂಪ್ರದಾಯ ಇದೆ.      
ಇಂತಹ ಸಂದರ್ಭದಲ್ಲಿ ರೈತರುಗಳ..... ಇಡೀ ಊರಿನ ಎಲ್ಲಾ ಜನರುಗಳ ಸಂಭ್ರಮ ಹೇಳತೀರದು. 

ಕಾರಹುಣ್ಣಿಮೆ ಮುಗಿದ ನಂತರ ಬರುವ ಅಮಾವಾಸ್ಯೆ ಮಣ್ಣೆತ್ತಿನ ಅಮಾವಾಸ್ಯೆ ಆಗಿದೆ.
ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ದೇವರು ಎನ್ನುವ ಸಂಕೇತವಾದ ಎತ್ತುಗಳನ್ನು ದೊಡ್ಡ , ಸಣ್ಣ ಆಕಾರಗಳಲ್ಲಿ ತಮಗಿಷ್ಟ ಬಂದಂತೆ ತಯಾರಿಸುವ ಸಂಪ್ರದಾಯ ಪ್ರತಿಯೊಂದು ಕಡೆ ಬೇರೆಬೇರೆಯಾಗಿರುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ…… ಕೆಲವರು ಅವರೇ ಮಣ್ಣಿನಿಂದ ಎತ್ತುಗಳನ್ನು ತಮಗಿಷ್ಟ ಬಂದ ಆಕಾರದಲ್ಲಿ ಮಾಡಿ ಸಂಭ್ರಮ ಪಡುತ್ತಾರೆ. ಆದರೆ ಇನ್ನೂ ಕೆಲವರು ತಲೆಕೆಡಿಸಿಕೊಳ್ಳದೆ ಕುಂಬಾರರ ಮನೆಗಳಿಂದಲೂ ಕೂಡ ಮೊದಲೇ ತಯಾರಿಸಿಟ್ಟ ಜೋಡೆತ್ತುಗಳನ್ನು ತಮಗೆ ಬೇಕಾಗುವ ಆಕಾರಗಳಲ್ಲಿ ಪಡೆಯುತ್ತಾರೆ.
ಒಂದು ರೀತಿಯಲ್ಲಿ ಪೂಜ್ಯ ಭಾವ ಎಲ್ಲರಲ್ಲಿ ಮೂಡಿರುತ್ತದೆ. ಈ ಸಂದರ್ಭದಲ್ಲಿ ಅನೇಕ ಜನಪದ ಗೀತೆಗಳನ್ನು ಹಾಡುತ್ತಾರೆ.
ಮಾನವನ ಮಣ್ಣಿನಲ್ಲಿನ ಬದುಕು ನಿಜಕ್ಕೂ ವರ್ಣನಾತೀತ ಅನುಭವ ಕೊಡುತ್ತದೆ.
ಹುಟ್ಟಿದಾಗಿನಿಂದ ಸಾಯುವವರಿಗೆ ನಮ್ಮಗಳ ನಿರಂತರ ಪಯಣದಲ್ಲಿ ಮಣ್ಣು ಒಂದಲ್ಲ ಒಂದು ರೀತಿಯಲ್ಲಿ ನೆರವಿಗೆ ಬರುತ್ತದೆ…..
ವರ್ಷದ ಎಲ್ಲಾ ದಿನಗಳಲ್ಲಿ ದುಡಿಯುವ ತಮ್ಮ ಎತ್ತುಗಳಿಗೆ ಕೆಲವು ಸಮಯ ಬಿಡುವು ಕೊಡುವುದು ಇಲ್ಲಿ ಸೇರಿರುತ್ತದೆ. ಅದರಿಂದಲೇ ಹೆಚ್ಚು ಗೌರವಿಸುತ್ತಾರೆ.
ಮೊದಲೇ ಮಣ್ಣಿನಿಂದ ಮಾಡಿದ ಎತ್ತಿನ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು ಅಮಾವಾಸ್ಯೆ ದಿನ ಪೂಜಿಸುವರು. ಮರುದಿನ ಮತ್ತೆ ಪೂಜಿಸಿ ಸರಿ ಹೊಂದಿರುವಂತಹ ಪ್ರತಿಯೊಬ್ಬರೂ ಸಹ ಅವುಗಳನ್ನು ನಾಗರಪಂಚಮಿಯ ವರೆಗೂ ದಿನನಿತ್ಯ ಪೂಜಿಸುವ ಸಂಪ್ರದಾಯ ಇದೆ.
ಪಂಚಮಿಯ ನಂತರವೂ ಕೂಡ ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಿ ಒಂದು ಕಡೆ ಇಡುತ್ತಾರೆ.
ನೋಡಿ ಇಲ್ಲಿ ಪ್ರತಿಯೊಂದಕ್ಕೂ ಸಂಪ್ರದಾಯ ಇದೆ. ಅಂದರೆ ಬಿತ್ತಿದ ಫಸಲು ಚೆನ್ನಾಗಿ ಬರಲಿ ಎಂದು ಮನದಲ್ಲೇ ಪ್ರಾರ್ಥಿಸುತ್ತಾರೆ.
ಮುಂದುವರೆದು ತಮ್ಮ ರಾಸುಗಳಿಗೆ ಯಾವುದೇ ರೀತಿಯ ತೊಂದರೆಯೂ ಬಾರದಿರಲಿ ಎಂದು ದೇವರುಗಳನ್ನು ಭಯ-ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಅನಾದಿಕಾಲದಿಂದಲೂ ರೈತನಿಗೆ ಎತ್ತುಗಳು ಎಂದರೆ ಪಂಚಪ್ರಾಣ. ನೂರಾರು ದನಕರುಗಳನ್ನು ಸಾಕುತ್ತಾರೆ. ಅವುಗಳಿಗೆ ಅನೇಕ ಸವಲತ್ತು ಗಳು ಇವೆ. ವಿಶೇಷವಾದ ಕೊಠಡಿಯಲ್ಲಿ ಕಟ್ಟಿಹಾಕಿ ಅವುಗಳಿಗೆ ವಿಶೇಷ ಮೇವು, ನೀರು ನೀಡಿ, ಸ್ನಾನ ಮಾಡಿಸುತ್ತಾರೆ. ಮುಖ್ಯವಾಗಿ ಹೊಲವನ್ನು ಉಳುವುದಕ್ಕೆ ಮಾತ್ರ ಬಳಸುತ್ತಾರೆ. ಇನ್ನುಳಿದ ಎತ್ತುಗಳು ನೀರು ತರಲು, ಅಥವಾ ಸಣ್ಣಪುಟ್ಟ ಕೆಲಸ ಮಾಡಲು ಉಪಯೋಗಿಸುತ್ತಾರೆ.ನಮ್ಮದು ಕೃಷಿ ಪ್ರಧಾನ ಕುಟುಂಬ. ಕಾಳಿ ಹುಂಡಿಯಲ್ಲಿ ಜೊತೆಗೆ ಒಟ್ಟು ಕುಟುಂಬ ಇರುವುದರಿಂದ, ನಮ್ಮ ಮನೆಯ ಎಷ್ಟು ದೊಡ್ಡದಾಗಿದೆ ಅದರ ಎರಡರಷ್ಟು ದನಕರುಗಳ ಕೊಟ್ಟಿಗೆಯು ದೊಡ್ಡದಾಗಿದೆ!.
ನಾವು ಬೆಳಿಗ್ಗೆ ಬೇಗನೆ ಎದ್ದು ನಮಗೆ ಹಂಚಿರುವ ಕೊಟ್ಟಿಗೆಗಳನ್ನು ಪೈಪೋಟಿಯ ಮೇಲೆ ಸ್ವಚ್ಛಗೊಳಿಸಿ, ದನಕರುಗಳನ್ನು ಹೊರಗಡೆ ಕಟ್ಟಿಹಾಕಿ, ಅವಕ್ಕೆ ಹುಲ್ಲು ಹಾಕಿ, ನೀರು ಕುಡಿಸಿ, ನಂತರವೇ ನಾವು ಬೆಳಿಗ್ಗೆ ತಿಂಡಿ ತಿನ್ನುತ್ತಿದ್ದೆವು. ಇದು ನಮ್ಮ ಬಾಲ್ಯದ ದಿನಚರಿಯಾಗಿತ್ತು!.
ನಿಜಕ್ಕೂ ಬಾಲ್ಯ ಮತ್ತೆ ಮರುಕಳಿಸಬಾರದೇ ಎಂದನಿಸುತ್ತದೆ!. ನಮ್ಮ ಕಡೆ ಈ ಮಣ್ಣೆತ್ತಿನ ಅಮಾವಾಸ್ಯೆ ಯನ್ನು ಅಷ್ಟು ಕಟ್ಟುನಿಟ್ಟಾಗಿ ಆಚರಿಸುವುದಿಲ್ಲ. ಮನೆ ಮಟ್ಟಿಗೆ ಚಿಕ್ಕದಾಗಿ ಮಾಡಿ ಆ ದಿನದ ಮಹತ್ವವನ್ನು ಎಲ್ಲರೂ ಒಟ್ಟಾಗಿ ಕುಳಿತು ಒಂದು ಕಡೆ ಹಿರಿಯರಿಂದ ಪ್ರವಚನ ರೀತಿಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ಬಗ್ಗೆ ಮಾತುಕತೆ ಸಾಗುತ್ತದೆ.
ನಂತರ ಪ್ರಸಾದ ವಿತರಣೆ ಕೂಡ ನಡೆಯುತ್ತದೆ. ನಾವು ಇವೆಲ್ಲವನ್ನೂ ಕೇಳುತ್ತಿರಲಿಲ್ಲ. ನಮಗೇನಿದ್ದರೂ ತಿಂಡಿ ತೀರ್ಥಗಳ ಮೇಲೆ ಕಣ್ಣು!.
ಈ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮೈ ಮನಗಳಿಗೆ ಮುದನೀಡುತ್ತದೆ.
ನಗರ ಪ್ರದೇಶಗಳಲ್ಲೂ ಸಹ ಕುಂಬಾರರಿಗೆ ಸ್ವಲ್ಪ ಬೇಡಿಕೆ ಬರುತ್ತದೆ. ಮಣ್ಣಿನ ಎತ್ತುಗಳ ತಯಾರಿಕೆಯಲ್ಲಿ ತೊಡಗುತ್ತಾರೆ. ಅವರು ಕೂಡ ಇಂತಿಷ್ಟು ಹಣ ಎಂದು ನಿಗದಿಪಡಿಸಿರುತ್ತಾರೆ. ಅದರ ಜೊತೆಗೆ ಒಂದಿಷ್ಟು ಜೇಡಿಮಣ್ಣನ್ನು ಖರೀದಿದಾರರಿಗೆ ಕೊಡುತ್ತಾರೆ. ಅವರು ಆ ಮಣ್ಣನ್ನು ದೇವರ ಮುಂದೆ ಇಟ್ಟು ಕೂಡ ಪೂಜಿಸುತ್ತಾರೆ. ಪೂಜೆ ಮಾಡುವ ಸಂಪ್ರದಾಯ ಕೂಡ ಅನಾದಿಕಾಲದಿಂದ
ನಡೆದುಬರುತ್ತಿದೆ.
ಇವೆಲ್ಲವುಗಳ ಮಧ್ಯೆ ನಮ್ಮ ರೈತರು ಹಬ್ಬದ ಸಂಭ್ರಮ, ಸಡಗರ ನಿಜಕ್ಕೂ ವಿಶಿಷ್ಟ ರೀತಿಯಲ್ಲಿ ನಮ್ಮ ಮೈ-ಮನಗಳಿಗೆ ಮುದ ನೀಡುತ್ತದೆ.
ಗ್ರಾಮೀಣ ಜನರ ಬದುಕು, ಜೊತೆಗೆ ಜಾನಪದ ಶೈಲಿಯ ಪ್ರಕಾರಗಳು ಒಂದೊಂದಾಗಿ ವಿಶಿಷ್ಟ ರೀತಿಯ ಸಂಪ್ರದಾಯಗಳ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ.
ಮುಂಗಾರು ಮಳೆ ಪ್ರಾರಂಭವಾದ ನಂತರ ಹಲವು ಕಡೆ ಎತ್ತುಗಳಿಗೂ ಸಹ ಬಹಳ ಬೇಡಿಕೆ ಬರುತ್ತದೆ. ಕೆಲವು ಕಡೆ ತಾವು ಮನೆಯಲ್ಲಿ ಸಾಕಿದ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡುತ್ತಾರೆ. ಇನ್ನು ಕೆಲವರು ಮನೆಯಲ್ಲಿದ್ದರು ಸಹ ವರ್ಷಾರಂಭಕ್ಕೆ ದುಡ್ಡು ಕೊಟ್ಟು ಖರೀದಿಸುವ ಸಂಪ್ರದಾಯ ಕೂಡ ಇದೆ. ಮತ್ತೆ ವ್ಯವಸಾಯ ಮುಗಿದ ಮೇಲೆ ಮಾರುತ್ತಾರೆ!. ಎತ್ತುಗಳನ್ನು ತಮ್ಮ ಹಣದ ಅವಶ್ಯಕತೆಗೆ ತಕ್ಕಂತೆ ಖರೀದಿ ಮಾಡಲು ಹಲವು ಜಾತ್ರೆಗಳಿಗೆ ಹೋಗುವುದು ವಾಡಿಕೆ. ಉದಾಹರಣೆಗೆ ಚುಂಚನಕಟ್ಟೆ ಜಾತ್ರೆ, ತಲಕಾಡು, ಮುಡುಕುತೊರೆ ಜಾತ್ರೆ ಇನ್ನು ಮುಂತಾದವು. ಅಲ್ಲದೆ ಅನೇಕ ಸ್ಥಳೀಯ ಜಾತ್ರೆ ಗಳಲ್ಲೂ ಸಹ ಎತ್ತುಗಳ ಖರೀದಿ, ವೀಕ್ಷಣೆ ನಡೆಯುತ್ತದೆ. ಜೋಡೆತ್ತುಗಳು ಲಕ್ಷ ಮೀರಿದವು ಇರುತ್ತವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರೈತನ ಆರ್ಥಿಕ ಪರಿಸ್ಥಿತಿಯ ಮೇಲೆ ಈ ರೀತಿಯ ಕೆಲಸ ಕಾರ್ಯಗಳನ್ನು ಅವರು ಮಾಡುತ್ತಾರೆ.
ಮತ್ತೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಈ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ವಿಭಿನ್ನವಾಗಿರುತ್ತದೆ.
ಈಗ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಈಗ ರೈತನು ಎತ್ತುಗಳ ಮೂಲಕ ಹೊಲವನ್ನು ಉಳುವ ಕಡಿಮೆಯಾಗಿದೆ. ಜೊತೆಗೆ ಎತ್ತುಗಳು ದನಕರುಗಳು ಎಲ್ಲವನ್ನೂ ಹೆಚ್ಚೆಚ್ಚಾಗಿ ಸಾಕುತ್ತಿದ್ದ. ಅದರಿಂದ ಬರುವ ಸಗಣೆ, ಕಸಕಡ್ಡಿಗಳನ್ನು ತಿಪ್ಪೆಗೆ ಹಾಕುವುದರ ಮೂಲಕ ಒಂದೆಡೆ ಸಂಗ್ರಹಿಸಿ, ನಂತರ ಚೆನ್ನಾಗಿ ಕಳೆತು ಸೊಗಸಾದ ಗೊಬ್ಬರ ಆಗುತ್ತಿತ್ತು. ಅದನ್ನೇ ಸಾವಯವ ಗೊಬ್ಬರದಂತೆ ಜಮೀನಿಗೆ ಉಪಯೋಗಿಸುತ್ತಿದ್ದ. ತಾನು ಬಿತ್ತಿದ ಪಸಲು ಕೂಡ ಹುಲುಸಾಗಿ ಬೆಳೆಯುತ್ತಿತ್ತು. ಅಧಿಕ ವಿಲೇವಾರಿಯನ್ನು ಉತ್ಪತ್ತಿ ಮಾಡುತ್ತಿದ್ದ ಇದರಿಂದಾಗಿ ಆರ್ಥಿಕವಾಗಿ ಸಫಲನಾಗಿದ್ದ.ಆದರೆ ಈಗ ಎತ್ತು ಗಳಿರಲಿ, ಮನೆಯಲ್ಲಿ ದನಕರುಗಳನ್ನು ಸಾಕುವುದಿಲ್ಲ ಜೊತೆಗೆ ಜಮೀನು ಕೂಡ ಇರುವುದಿಲ್ಲ.
ನಗರೀಕರಣ ಜಾಗತೀಕರಣ ನೆಪದಲ್ಲಿ ಇರುವ ಹೊಲ-ಗದ್ದೆಗಳನ್ನು ಆರ್ಥಿಕವಾಗಿ ಲಾಭ ಪಡೆಯಲು ಮಾರುತ್ತಿದ್ದಾನೆ.
ವಿವಿಧ ರೀತಿಯ ಬೆಳೆಗಳನ್ನು ಉತ್ಪಾದಿಸುತ್ತಿದ್ದ ಹೊಲ-ಗದ್ದೆಗಳು ಈಗ ಕಾಂಕ್ರೀಟ್ ಕಾಡುಗಳಾಗಿದೆ. ಒಂದು ರೀತಿಯಲ್ಲಿ ಆರ್ಥಿಕವಾಗಿ ಅವನು ಸಫಲರಾಗಿದ್ದರು. ಮತ್ತೊಂದೆಡೆ ವಿಫಲ ಹಾದಿಗೂ ಕೂಡ ಮುನ್ನುಡಿಯಾಗಿದೆ.
ಎತ್ತುಗಳು ಉಳುತ್ತಿದ್ದ ಭೂಮಿಗೆ ಟ್ರ್ಯಾಕ್ಟರ್ ಗಳು, ಅತ್ಯಾಧುನಿಕ ಕೃಷಿ ಸಲಕರಣೆಗಳು ಬಂದಿವೆ. ತಿಪ್ಪೆ ಗೊಬ್ಬರದ ಬದಲು ಹಲವು ಬಗೆ ಬಗೆಯ ರಾಸಾಯನಿಕ ಗೊಬ್ಬರಗಳು ಬಂದಿವೆ. ಜೊತೆಗೆ ಅತ್ಯಾಧುನಿಕ ಬೆಲೆಯ ಎತ್ತುಗಳು ಕೂಡ ಜಾತ್ರೆಗಳಲ್ಲಿ ಸಿಗುತ್ತಿಲ್ಲ. ಒಂದು ರೀತಿಯಲ್ಲಿ ರೈತನು ತನ್ನ ಆಸಕ್ತಿಯನ್ನು ಕಳೆದುಕೊಳ್ಳುತ್ತ ಬರುತ್ತಿದ್ದಾನೆ. ಮಳೆಯನ್ನೇ ನಂಬಿಕೊಂಡು ಹಲವು ಬೆಳೆಗಳನ್ನು ಬೆಳೆಯುವ ಪರಿಸ್ಥಿತಿ ಬಂದಿರುವುದರಿಂದ ಮಳೆರಾಯನ ಕಣ್ಣಾಮುಚ್ಚಾಲೆಯಾಟ, ಕೃಷಿ ಸಲಕರಣೆಗಳ, ಕೃಷಿ ಕಾರ್ಮಿಕರ ದುಬಾರಿ ಖರ್ಚು, ಗಗನಕ್ಕೇರಿರುವ ಬಿತ್ತನೆ ಬೀಜ, ಔಷಧಿಯ ಉಪಕರಣಗಳು. ಹೀಗೆ ಒಂದಕ್ಕೊಂದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
ಇವೆಲ್ಲವನ್ನು ಮೀರಿ ಒಂದು ಬೆಳೆ ರೈತ ಕಷ್ಟಪಟ್ಟು ದುಡಿದು, ಬೆಳೆ ಬೆಳೆದರೂ ಕೂಡ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ.
ಒಟ್ಟಿನಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ರೈತರ ಜೀವನದಲ್ಲಿ ವಿಶಿಷ್ಟವಾಗಿ ಬಂದುಹೋಗುತ್ತದೆ. ಉತ್ತರ ಕರ್ನಾಟಕದ ಕಡೆ ಇದನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಮುಂಗಾರು ಮಳೆ ಬಂದು ಹೊಲ-ಗದ್ದೆಗಳು ಪುಷ್ಕಳವಾಗಿರುತ್ತವೆ.
ಈ ಸಂಸ್ಕೃತಿಯಿಂದಾಗಿ ಮಕ್ಕಳು ಕೂಡ ಮಣ್ಣಿನಲ್ಲಿ ಎತ್ತುಗಳನ್ನು ಮಾಡುವುದರಿಂದ ಕ್ರಿಯಾತ್ಮಕತೆಯ ಕಡೆಗೆ ಅವರ ದೃಷ್ಟಿ ಅರಿಯುತ್ತದೆ. ಜೊತೆಗೆ ಕುಂಬಾರರಿಗೂ ಸಹ ಅವರ ಜೀವನ ನಿರ್ವಹಣೆಗೆ ಸ್ವಲ್ಪ ಹಣ ಸಿಗುತ್ತದೆ.
ಹೀಗೆ ಹಬ್ಬಗಳ ಆಚರಣೆಗಳು, ಸಂಪ್ರದಾಯಗಳು ನಾಗರೀಕತೆಯ ಪ್ರತೀಕವಾಗಿವೆ. ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿವೆ. ಎಲ್ಲರಿಗೂ ಮಣ್ಣೆತ್ತಿನ ಅಮಾವಾಸ್ಯೆಯ ಶುಭಾಶಯಗಳು. ಎಲ್ಲರಿಗೂ ಒಳಿತಾಗಲಿ.


ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *