ಜನಪದ ಸಾಹಿತ್ಯವು ನಮ್ಮ ಜನಜೀವನದ ಪ್ರತಿಬಿಂಬ. ಅದರಲ್ಲಿ ಬಾರದ ವಿಷಯಗಳೇ ಇಲ್ಲ. ಇದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ. ಸಂಸ್ಕೃತದ ಹೊರೆಯಿಲ್ಲ. ಜನವಾಣಿಯ ಶೈಲಿಯಲ್ಲಿ ನಿರರ್ಗಳವಾಗಿ ಹರಿಯುತ್ತದೆ.

ಯಾವುದೇ ಸಂಸ್ಕೃತಿಯಾಗಲಿ, ಬದುಕಾಗಲಿ ನಿಂತ ನೀರಲ್ಲ. ಪ್ರತಿಯೊಂದೂ ಹರಿಯುವ ನದಿಯಿದ್ದಂತೆ. ಅದರಲ್ಲಿ ಪರಿವರ್ತನೆ ಸಹಜವಾದದ್ದೇ. ಅದೇ ರೀತಿ ಜಾನಪದದಲ್ಲಿಯೂ ಕೂಡ ಮೊದಲಿನ ರೂಪ ಹಲವು ಬದಲಾವಣೆಗಳಿಗೆ ಒಳಗಾಗಿರುವುದನ್ನು ನಾವು ಗಮನಿಸಬಹುದು.
“ಎಲ್ಲ ರಂಗದಲ್ಲಿಯೂ ಹೊಸ ನೀರು ಬರುವುದು, ಹಳೆಯ ನೀರು ಕೊಚ್ಚಿಕೊಂಡು ಹೋಗುವುದು ಸಾಮಾನ್ಯ. ಜಾನಪದವು ಇದರಿಂದ ಹೊರತಲ್ಲ. ಹಳೆಯದರಲ್ಲಿ ಕೆಲವು ಹಾಗೆಯೇ ಉಳಿದು ಬರಬಹುದು. ಇನ್ನೂ ಕೆಲವು ಮರುಹುಟ್ಟನ್ನು ಪಡೆಯಬಹುದು. ಅಂದಂದಿನ ಸಾಮಾಜಿಕ ಸಂಗತತೆಯ ಹಿನ್ನೆಲೆಯಲ್ಲಿ ಅವು ರೂಪಾಂತರ ಹೊಂದುತ್ತಾ ಮುನ್ನಡೆಯುತ್ತವೆ. ಇಂತಹ ಕಡೆಗಳಲ್ಲಿ ಹಳತು ಹೊಸತರ ಸಂಘರ್ಷ ಸದಾ ಇದ್ದೇ ಇರುತ್ತದೆ” ಎಂದಿರುವ ಮಾತು ಇಂದಿನ ವಾಸ್ತವ ಚಿತ್ರಣವನ್ನು ನಮ್ಮ ಕಣ್ಮುಂದೆ ತೆರೆದಿಡುತ್ತದೆ.
‘ಲಾವಣಿ’ಯು ಕಥನ ಗೀತೆಯ ಸ್ವರೂಪ ಪಡೆದುಕೊಂಡ ಜನಪದ ಸಾಹಿತ್ಯದ ಒಂದು ಪ್ರಕಾರ. ಇದರ ಸ್ವರೂಪದ ಬಗೆಗೆ ಕೆಲವು ಪ್ರಮುಖರ ಅಭಿಪ್ರಾಯಗಳು ಹೀಗಿವೆ:
-ಸಾರ್ಟೆಂಟ್ ಮತ್ತು ಕ್ರಿಟ್ರೆಡ್ಜ್ ಎಂಬ ಜನಪದ ವಿದ್ವಾಂಸರು ಲಾವಣಿಯನ್ನು “ಒಂದು ಕಥೆಯನ್ನು ಹೇಳುವ ಹಾಡು ಅಥವಾ ಹಾಡಿನಲ್ಲಿ ಹೇಳಲಾದ ಒಂದು ಕಥೆ” ಎಂದಿದ್ದಾರೆ.
ಡಾ. ಎಂ. ಎಂ. ಕಲಬುರ್ಗಿಯವರು “ಸಮೂಹ ಸೃಷ್ಟಿಯಾದ ಲಾವಣಿಯು ಎಲ್ಲರನ್ನೂ ಹೌದೆಂದು ಒಪ್ಪಿಸುತ್ತದೆ ಮತ್ತು ತನ್ನ ತನವನ್ನು ಉಳಿಸಿಕೊಂಡು ಕನ್ನಡ ಜಾನಪದದಲ್ಲಿ ಹಿರಿಮೆ ಪಡೆದಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಾ. ಸಿ.ಪಿ.ಕೆಯವರು “ಲಾವಣಿಗಳೆಲ್ಲಾ ಕಥನ ಗೀತೆಗಳು ನಿಜ. ಆದರೆ ಕಥನ ಗೀತೆಗಳೆಲ್ಲ ಲಾವಣಿಗಳಲ್ಲ. ಸುದೀರ್ಘವೂ ಕೆಲವು ವಿಶಿಷ್ಟ ಲಕ್ಷಣಗಳುಳ್ಳವೂ ಆದ ಕಥನ ಗೀತೆಗಳನ್ನು ಲಾವಣಿಗಳು ಎಂದು ಹೆಸರಿಸಿ ಒಂದು ಪ್ರತ್ಯೇಕವಾದ ಗುಂಪನ್ನಾಗಿ ಪರಿಗಣಿಸಬೇಕು” ಎಂದಿದ್ದಾರೆ.
ಪ್ರೊ. ಖೇರ್ ಅವರು “ಲಾವಣಿಯು ಕೇವಲ ಕಥೆಯನ್ನು ಹೇಳುವ ಒಂದು ಹಾಡಾಗಿ ಉಳಿಯದೆ ಕಾವ್ಯಸತ್ವದಿಂದ ಕೂಡಿದ ರಚನೆಯಾಗಿದೆ. ಅದು ಕಥೆಯನ್ನು ಹೇಳುವ ಭಾವಗೀತೆಯೆಂದೋ ಅಥವಾ ಭಾವಗೀತೆಯ ಸ್ವರೂಪದ ಒಂದು ಕಥನ ಗೀತೆಯೆಂದೋ ಗುರುತಿಸಲು ಸಾಧ್ಯ” ಎಂದಿದ್ದಾರೆ.
ಕ್ಯಾಸೆಲ್ಸ್ ಎನ್ಸೈಕ್ಲೋಪಿಡಿಯಾ ಆಫ್ ಲಿಟರೇಚರ್ನಲ್ಲಿನ “ಸಮಾಜದ ಮೂಲಾನುಭವವೇ ಲಾವಣಿ ಕರ್ತೃವಿನ ಸಾಮಗ್ರಿ” ಎಂಬ ಮಾತು ಇದನ್ನು ಅಭಿವ್ಯಕ್ತಿಸುತ್ತದೆ.
ಡಾ. ಹಾಮಾನಾ ಅವರು “ಲಾವಣಿಗಳು ಕಥನ ನಿರೂಪಣೆಯದು” ಎಂದು ಹೇಳಿ “ಲಾವಣಿಯನ್ನು ಇಂಗ್ಲಿಷಿನ Ballad ಅರ್ಥದಲ್ಲಿ ಉಪಯೋಗಿಸಿದೆ” ಎಂದಿದ್ದಾರೆ.
ವಿಶ್ವಕೋಶದಲ್ಲಿ “ನಿರ್ದಿಷ್ಟ ಕಥೆಯನ್ನು ಸಣ್ಣ ಸಣ್ಣ ಪದ್ಯಗಳಲ್ಲಿ ಮನಮುಟ್ಟುವಂತೆ ಹೇಳುವ ಲಘು ಕಾವ್ಯವೇ ಲಾವಣಿ. ಈ ಬಗೆಯ ರಚನೆಗಳು ಯುರೋಪಿನಲ್ಲಿ ಬೆಳವಣಿಗೆ ಹೊಂದಿ ‘ಬ್ಯಾಲೆಡ್’ ಎನ್ನುವ ಹೆಸರು ಪಡೆದುಕೊಂಡವು” ಎನ್ನಲಾಗಿದೆ.
ಇದನ್ನೆಲ್ಲಾ ಗಮನಿಸಿದಾಗ ಭಾವಗೀತೆಗಿಂತ ವಿಸ್ತಾರವಾದ, ಕಥನಾತ್ಮಕವಾದ, ವಿಶಿಷ್ಟ ಮಟ್ಟಿನಲ್ಲಿ ಹಾಡಲಾಗುವ ಸಾಂಪ್ರದಾಯಿಕ ಕಥನ ಕಾವ್ಯವನ್ನು ‘ಲಾವಣಿ’ ಎಂದು ಕರೆಯಲಾಗುವುದೆನ್ನಬಹುದು.
ಇದರ ಸ್ವರೂಪ ಭಾವಗೀತೆಗಿಂತ ಕ್ರಿಯಾತ್ಮಕವಾಗಿ ಸಾಗುವುದೇ ಆಗಿದೆ. ಇದರಲ್ಲಿ ಹೆಚ್ಚು ವರ್ಣನೆಗಳು ಬರುವುದಿಲ್ಲ. ಇದು ಮುಖ್ಯವಾಗಿ ಒಂದು ಹಾಡ್ಗತೆ. ಇದನ್ನು “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ” ಎನ್ನಬಹುದು.
ಲಾವಣಿ ಎಂದರೆ ಚಾರಿತ್ರಿಕ ಕಥನ ಎನ್ನುವುದು ಒಂದು ಅನುಭವವಾಗಿತ್ತು. ಆದರೆ ಇಂದು ಲಾವಣಿಯ ವಸ್ತು ಚಾರಿತ್ರಿಕವೇ ಆಗಬೇಕೆಂದಿಲ್ಲ. ಯಾವುದೇ ವಸ್ತು ಬೇಕಾದರೂ ಆಗಬಹುದು. ಲಾವಣಿಯ ಸ್ವರೂಪ ಕಾಲ ದೇಶಾನುಗುಣವಾಗಿ ಭಿನ್ನಭಿನ್ನವಾಗಿರುವುದುಂಟು. ಇದಕ್ಕೆ ಸಾಹಿತ್ಯಕ ಪ್ರಜ್ಞೆಯುಳ್ಳ ಕವಿಗಳ ಸೃಷ್ಟಿಗಳೆಂದೂ ಹೇಳಬಹುದಾಗಿದೆ. ಈ ನಿಟ್ಟಿನಲ್ಲಿ ಮಂಜುನಾಥ್ ಅವರ ಪ್ರಯತ್ನ ಪ್ರಶಂಸನೀಯವಾಗಿದೆ.
ಮಂಜುನಾಥ್ ಅವರು ಇಂದಿನ ಪ್ರಚಲಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡು “ನವಶೀಲ ಲಾವಣಿ”ಯಾಗಿ ರಚನೆ ಮಾಡಿರುವುದು ಸಹಜವೆಂಬಂತೆ ಕಂಡುಬರುತ್ತದೆ. ಇವರ ಲಾವಣಿಗಳು ಇಂದಿನ ವಾಸ್ತವ ಜೀವನದ ಸಮಸ್ಯೆಗಳ ಹಿನ್ನೆಲೆಯಲ್ಲಿ ರೂಪುಗೊಂಡಿದ್ದು, ಹಲವಾರು ಅರಿವಿನ, ಎಚ್ಚರಿಕೆಯ, ನೋವಿನ ಚಿತ್ರಣಗಳನ್ನೊಳಗೊಂಡಿವೆ.
“ಸಾಧಿಸುವ ಹಟವೊಂದು, ನಿಜದ ನೇರಕೆ ನಡೆವ ನಿಶ್ಚಲತೆಯೊಂದು- ಅವರ ವ್ಯಕ್ತಿತ್ವದ ಯಶಸ್ಸಿನ ಗುಟ್ಟಾಗಿದೆ. ಅನುಭವವನ್ನು ಹರಳುಗೊಳಿಸುತ್ತಾ ಅಭಿವ್ಯಕ್ತಿಯನ್ನು ಸಂವಹನಕ್ಕೆ ಒಡ್ಡುವ ಸೃಜನಶೀಲ ಶಕ್ತಿಯ ತರುಣ ಬರಹಗಾರರಲ್ಲಿ ಮಂಜುನಾಥ್ ಒಬ್ಬರಾಗಿದ್ದಾರೆ. ಇವರು ಸಹಜ ಪ್ರತಿಭೆ ಹಾಗೂ ಅವಿಶ್ರಾಂತ ದುಡಿಮೆಗಳಿಂದ ಗಮನಸೆಳೆದವರು. ಸ್ನೇಹ, ಸೌಜನ್ಯ, ಸಜ್ಜನಿಕೆಗಳಿಂದ ಕೂಡಿದವರು.
ಇವರದು ಬಹುಮುಖ ಪ್ರತಿಭೆ. ಇವರು ಹಲವಾರು ಲೇಖನಗಳನ್ನು, ವಿಮರ್ಶೆಗಳನ್ನು, ಕವನಗಳನ್ನು ಬರೆಯುವುದರ ಮೂಲಕ ಹಾಗೂ ಪತ್ರಿಕಾ ರಂಗದಲ್ಲಿಯೂ ವರದಿಗಾರರಾಗಿ ಕೆಲಸ ಮಾಡುತ್ತಾ ತಾವೊಬ್ಬ ಸಮರ್ಥ ಬರಹಗಾರರೆಂಬುದನ್ನು ಸಾಬೀತುಪಡಿಸಿದ್ದಾರೆ.
ಇವರಿಗೆ ‘ಯುವರತ್ನ’, ‘ಕಾವ್ಯಶ್ರೀ’ ಮೊದಲಾದ ಪ್ರಶಸ್ತಿಗಳು ಲಭಿಸಿರುವುದು ಇವರ ಪ್ರತಿಭೆಗೆ ಸಂದ ಗೌರವವಾಗಿದೆ.
ಇವರ “ನವಶೀಲ ಲಾವಣಿಗಳು” ಕೃತಿ ವಿಭಿನ್ನ ವಸ್ತು ವೈವಿಧ್ಯತೆ ಹೊಂದಿದ್ದು, ಸಾಹಿತ್ಯಲೋಕಕ್ಕೆ ಒಂದು ಉತ್ತಮವಾದ ಕೊಡುಗೆಯಾಗಬಲ್ಲುದು. ಇದು ಇವರ ‘ಚೊಚ್ಚಲ ಕೃತಿ’. ಇದರ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿ ಪರಿಚಿತರಾಗುತ್ತಿದ್ದಾರೆ.
ಇವರ ಇಂದಿನ ಪರಿಸ್ಥಿತಿಗೆ ಕಾರಣವಾದಂತಹ ಎಲ್ಲಾ ವಿಷಯಗಳು ಅಡಕಗೊಂಡಿವೆ. ಉದಾ: ಕಬಡ್ಡಿ, ಪಂಜಕುಸ್ತಿ, ಇಲ್ ಕಲ್ತು ಆಲ್ ಯಾಕ್ ಹೋದ್ರಿ (ಸ್ವದೇಶ ಮತ್ತು ವಿದೇಶಕ್ಕೆ ಹೋದವರನ್ನು ಕುರಿತು), ಯೂಟ್ಯೂಬ್, ಪ್ಲಾಸ್ಟಿಕ್ ಅಪಾಯ, ಪರಿಸರ, ಅಕ್ಷರ ಕಲಿಕೆ, ಬ್ಯಾಂಕಿನ ನೋಟೀಸ್, ಪ್ರೈವೇಟ್ ಫೈನಾನ್ಸ್, ಕೆಂಪೇಗೌಡರು, ಸಚಿನ್ ತೆಂಡೂಲ್ಕರ್, ಕುದ್ಮುಲ್ ರಂಗರಾವ್, ವರದಕ್ಷಿಣೆ, ವನ್ಯಜೀವನ, ಕರ್ನಾಟಕ ಅರಣ್ಯ ಇಲಾಖಾ ಇತಿಹಾಸ, ಯೋಗದ ಇತಿಹಾಸ, ಧ್ಯಾನ, ಪ್ರಾರ್ಥನೆ, ದಾನದ ತಾತ್ಪರ್ಯ, ಸರಕಾರಿ ಶಾಲಿ, ಆಯುರ್ವೇದದ ಇತಿಹಾಸ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಕನ್ನಡವೇ ನಮ್ಮವ್ವ, ಜೈವಿಕ ಇಂಧನ, ತ್ರಿವರ್ಣ ಧ್ವಜ, ರಾಷ್ಟ್ರಭಾಷೆ, ಮಾತೃ ಭಾಷೆ, ದೇಶಪ್ರೇಮ, ಭಾಷಾ ಅಂಧಾಭಿಮಾನ, ಪರಿಸರ ಮಾಲಿನ್ಯ, ಹೆಣ್ಣು ಭ್ರೂಣ ಹತ್ಯೆ, ಸಾವಯವ ಕೃಷಿ -ಇವೇ ಮೊದಲಾದವುಗಳು.
ಈ ಲಾವಣಿಗಳು ಸಮಕಾಲೀನ ಸಮಸ್ಯೆಗಳನ್ನು, ಘಟನೆ ಸನ್ನಿವೇಶಗಳನ್ನು ಕೇವಲ ವರದಿ ಮಾಡುವ, ಸಮೀಕ್ಷೆ ನಡೆಸುವ ಕ್ರಮವನ್ನು ಮೀರಿ ಆ ಸಂಬಂಧವಾದ ಅರಿವನ್ನು, ಜಾಗೃತಿಯನ್ನು ಮೂಡಿಸುವ ತುಡಿತ, ಆಶಯವನ್ನು ಹೊಂದಿವೆ.
ಇಲ್ಲಿಯ ಬರವಣಿಗೆ ಆತ್ಮವಿಶ್ವಾಸದಿಂದ ಕೂಡಿದ್ದು, ಜ್ಞಾನದಿಂದ ನೇಯ್ಕೆಗೊಂಡಿದೆ. ಜೀವಪರ ಕಾಳಜಿ, ಜನಪರ ಕಾಳಜಿ, ಸಾಮಾಜಿಕ ಪ್ರಜ್ಞೆ, ವಿಶ್ವಪ್ರಜ್ಞೆಗಳ ಆಶಯಗಳಿಂದ ಮೌಲಿಕವೂ, ಗಮನಾರ್ಹವೂ ಆಗಿದೆ. ಇವರು ಸಾಧನೆಯ ಹಲವು ಶಿಖರಗಳನ್ನು ಏರಬಲ್ಲರು. ಅದಕ್ಕೆ ಈ ಚೊಚ್ಚಲ ಕೃತಿ ಮೆಟ್ಟಿಲಾಗಲಿ ಎಂದು ಹಾರೈಸುತ್ತಾ, ಸಾರಸ್ವತ ಲೋಕಕ್ಕೆ ಅತ್ಯಂತ ಆತ್ಮೀಯವಾಗಿ ಇವರನ್ನು ಸ್ವಾಗತಿಸುತ್ತಾ, ಇಂತಹ ಭರವಸೆಯ ಲೇಖಕರಿಗೆ ನನ್ನ ಮುನ್ನುಡಿಯ ತೋರಣ ಕಟ್ಟಿರುವೆ.

ಡಾ. ಜೆ. ಲೋಹಿತ್
ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ, ಮೈಸೂರು