ಕನ್ನಡದ ಅಕ್ಷರ ಜ್ಯೋತಿಯನ್ನು ಪ್ರತಿಯೋರ್ವರ ಹೃದಯದಲ್ಲಿ ಬೆಳಗಿಸಿದ ಭಾವಗೀತೆಗಳ ಭಾವಜೀವ,
ನೊಂದ ಜೀವಗಳಿಗೆ ಕವನಗಳಲಿ ಸಂತೈಸುತ್ತಿದ್ದ ಸಂಜೀವ,
ಅವರು ಅದಮ್ಯ ಚೈತನ್ಯದ ಬೆಳಕು, ಅನುಸರಣೀಯವು ಅವರ ಆದರ್ಶನೀಯ ಬದುಕು,
ನೋವು ಬಸಿಯುತಿದೆ ಹೃದಯ ದರ್ಪಣ, ನಮ್ಮಿಂದ ದೂರಾದುದೇ ಕಾರ್ಯ-ಕಾರಣ,
ಅಕ್ಷರ ಉಳಿಸಿ-ಜೀವ ತ್ಯಜಿಸಿ ನಿಚ್ಚಳವಾಗಿ ನಮ್ಮ ಹೃದಯ ಮಂದಿರದಲ್ಲಿ ನೆಲೆಸಿ
ಭಾವಜೀವದ ಕವಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಸರ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರಿಗೆ ಭಾವಪೂರ್ಣ ಅಶ್ರುತರ್ಪಣವನ್ನು ಸಮರ್ಪಿಸುತ್ತಾ ಅವರ ಹೆಜ್ಜೆ ಗುರುತುಗಳ ಕುರಿತಾಗಿ ಒಂದಷ್ಟು ಸಂಗತಿಗಳನ್ನು ತಿಳಿಸುವುದರ ಮೂಲಕ ಅಕ್ಷರ ನಮನ ಸಲ್ಲಿಸಲು ಅವಕಾಶವನ್ನು ಮಾಡಿಕೊಂಡಿದ್ದೇನೆ.
೨೧ನೇ ಶತಮಾನದ ಹೃದಯವಂತ ಹಾಗೂ ಬಹುಮುಖ್ಯವಾದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರದು. ಭಾವಗೀತೆಯ ಬಾಂದಳದಿ ಸದಾ ಕಂಗೊಳಿಸುವ ಹೆಸರು ಕೂಡ ಅವರದು. ಎಚ್ಚೆಸ್ವಿ ಕವಿಯ ಕಾವ್ಯದ ಕಣಜವು ಕನ್ನಡ ಸಾಹಿತ್ಯಕ್ಕೆ ಬೆರಗು ಹುಟ್ಟಿಸುತ್ತದೆ. ಪರಂಪರೆಯನ್ನು ಜೀವಂತಗೊಳಿಸುವಂತಹದ್ದು.ಅವರ ಬರವಣಿಗೆಯಿಂದ ಜನುಮ ತಳೆದ ಸಾಹಿತ್ಯವು ಕನ್ನಡದ ಜಗತ್ತಿಗೆ ಶರಧಿಪ್ರಾಯವಾಗಿದೆ- ಆಸ್ತಿಯಾಗಿದೆ.
ಕನ್ನಡ ಮಾತೆಯು ಅದೆಷ್ಟೋ ಮಹಾತ್ಮರಿಗೆ ಜನ್ಮ ನೀಡಿ ಅವರನ್ನು ಲಾಲನೆ-ಪಾಲನೆಯಿಂದ ಸರ್ವಾಂಗಿವಾಗಿ ಬೆಳೆಸುವ ಕೆಲಸ ಮಾಡಿದ್ದಾಳೆ. ಅಂತಹ ಮಹಾತ್ಮರೂ ಕೂಡ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಬದುಕನ್ನು ತೆರದುಕೊಂಡು ತಮ್ಮದೇ ವಿಭಿನ್ನ ನೆಲೆಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿಕೊಳ್ಳುವಲ್ಲಿ ಸಫಲತೆಯನ್ನು ಕಂಡುಕೊಂಡಿದ್ದಾರೆ.
ಬಹುಶ್ರತತೆಗೆ ಹೆಸರಾದ ಎಚ್ಚೆಸ್ವಿ ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಕಾರ್ಯದಿಂದ ಸೃಷ್ಟಿಸಿದ ಸಾಹಿತ್ಯವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಹಾಗೂ ಅದ್ವಿತೀಯ ಕೊಡುಗೆಯಾಗಿದೆ. ಭಾವಗಳ ಕವಿ ಎಂದೇ ಸುಖ್ಯಾತರಾಗಿದ್ದ ವೆಂಕಟೇಶಮೂರ್ತಿ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ದುಡಿದಿದ್ದಾರೆ ತಮ್ಮದೇ ವಿಶಿಷ್ಟವಾದ ಅನುಸರಣೀಯ ಬದುಕನ್ನು ಉಳಿಸಿದ್ದಾರೆ.
ಡಾ.ಎಚ್.ಎಸ್. .ವೆಂಕಟೇಶ ಮೂರ್ತಿ ಅವರ ಬದುಕು-ಶಿಕ್ಷಣ
ಅವರು 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ತಮ್ಮ ಬಾಲ್ಯವನ್ನು ಗ್ರಾಮೀಣ ಪರಿಸರದಲ್ಲಿ ಕಳೆದಿದ್ದು, ಈ ಅನುಭವಗಳು ಅವರ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.
ಎಚ್ಎಸ್ವಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದಿದ್ದಾರೆ. ಅವರು ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. "ಕನ್ನಡದಲ್ಲಿ ಕಥನ ಕವನಗಳು" ಎಂಬ ಮಹಾಪ್ರಬಂಧಕ್ಕೆ ಪಿ.ಎಚ್. ಡಿ ಪದವಿಯನ್ನು ಪಡೆದುಕೊಂಡವರು. 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.
ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಸಾಹಿತ್ಯದ ಹೆಜ್ಜೆ ಗುರುತುಗಳು
ಅನುಭವವೇ ಸಾಹಿತ್ಯ ಅದು ಎಲ್ಲರ ಅಂತರಂಗದಲ್ಲು ಪ್ರವೇಶ ಪಡೆದಿರುತ್ತದೆ. ಕೆಲವರು ಅದರ ಜನುಮ ನೀಡುತ್ತಾರೆ ಇನ್ನು ಕೆಲವರು ಅದರ ಹೊರ ಪ್ರವೇಶಕ್ಕೆ ಅನುಮತಿಸದೆ ಗರ್ಭಪಾತ ಮಾಡಿ ಬಿಡುತ್ತಾರೆ. ನಮ್ಮ ಎಚ್ಚೆಸ್ವಿ ಅವರು ತಮ್ಮೆಲ್ಲಾ ಅನುಭವದ ಭಾವನೆಗಳನ್ನು ಸಾಹಿತ್ಯವಾಗಿಸುವ ನಿಟ್ಟಿನಲ್ಲಿ ಸಾಹಿತ್ಯ ವ್ಯವಸಾಯಕ್ಕೆ ಮುಂದಾದವರು. ಅವರ ಲೇಖನಿಯಿಂದ ಜನ್ಮತಾಳಿದರ ಅಕ್ಷರದ ರೂಪ ಇಂತಿದೆ.
ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ).
ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್.ಎಸ್. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಚಲನಚಿತ್ರ ಕ್ಷೇತ್ರಕೆ ಎಚ್ಚೆಸ್ವಿ ಅವರ ಕಾಣಿಕೆ
ನಮ್ಮೊಳಗೆ ಸಂಪನ್ಮೂಲವಿದ್ದರೆ ಎಲ್ಲಿ ಬೇಕಾದರೂ ಅದರ ಸದ್ಬಳಕೆಗೆ ಯೋಗ್ಯವಾದ ಮಾರ್ಗವನ್ನು ಕಂಡುಕೊಳ್ಳಬಹುದು. ಎಚ್ಚೆಸ್ವಿ ಅವರು ತಮ್ಮ ಹೃದಯದಿಂದ ಮೂಡುವ ಸಮೃದ್ಧಭಾವನೆಗಳ ಹಾಡುಗಳು ಇನಿಮಾ ಸಾಹಿತ್ಯಕ್ಕೆ ಪೂರಕವಾಗಿದ್ದುದು ಇಲ್ಲವೇ ಸಿನಿಮಾಕ್ಕಾಗಿಯೇ ಬರೆದ ಹಲವು ಗೀತೆಗಳು ಕೇಳುಗರ ಮನವನ್ನು ಹೃದಯವನ್ನು ತಣಿಸಿವೆ. ಈಗಾಗಿ ಎಚ್ಎಸ್ವಿ ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಅವರು “ಚಿನ್ನಾರಿ ಮುತ್ತ”, “ಕೋಟ್ರೇಶಿ ಕನಸು”, “ಅಮೆರಿಕಾ ಅಮೆರಿಕಾ”, “ಮೈತ್ರಿ”, “ಕಿರಿಕ್ ಪಾರ್ಟಿ” ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. “ಮುಕ್ತ”, “ಮಹಾಪರ್ವ” ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದಾರೆ. ಎಚ್ಎಸ್ವಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ “ಕಥನ ಕವನ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ (2013) ಲಭಿಸಿದೆ. ಅವರು ಕಲಬುರ್ಗಿಯಲ್ಲಿ ನಡೆದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ “ಹಸಿರು ರಿಬನ್” ಚಿತ್ರದ ಹಾಡಿಗೆ 66ನೇ ಫಿಲ್ಮ್ಫೇರ್ ದಕ್ಷಿಣ ಪ್ರಶಸ್ತಿಯಲ್ಲಿ ಕನ್ನಡ ವಿಭಾಗದ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ ಲಭಿಸಿದೆ. ಎಚ್ಎಸ್ವಿ ಅವರ ಸಾಹಿತ್ಯವು ಭಾವನಾತ್ಮಕತೆ, ಗ್ರಾಮೀಣ ಜೀವನದ ಚಿತ್ರಣ, ಭಾಷೆಯ ಸರಳತೆ ಮತ್ತು ಆಳವಾದ ಅರ್ಥವನ್ನೊಳಗೊಂಡಿದೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.
ಪ್ರಸಿದ್ಧಿ ಪಡೆದ ಹಾಡುಗಳು
“ಲೋಕದ ಕಣ್ಣಿಗೆ ರಾಧೆಯು ಕೂಡಾ” ಎಂಬ ಈ ಸುಂದರ ಭಾವಗೀತೆ ಕೂಡಾ ಎಚ್ಎಸ್ವಿ ಅವರ ಅತ್ಯಂತ ಖ್ಯಾತ ಭಾವಗೀತೆಗಳಲ್ಲಿ ಒಂದಾಗಿದೆ. ಸಿ. ಅಶ್ವಥ್ ಅವರು, ರಾಜು ಅನಂತಸ್ವಾಮಿ ಅವರು, ಎಂ.ಡಿ. ಪಲ್ಲವಿ ಅವರ ಸಿರಿಕಂಠದ ಗಾಯನದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಇದಲ್ಲದೆ ಅವರ ಭಾವಗೀತೆಗಳು ಮತ್ತು ಚಲನಚಿತ್ರ ಗೀತೆಗಳು ಕನ್ನಡಿಗರ ಹೃದಯದಲ್ಲಿ ಸದಾ ಜೀವಂತವಾಗಿವೆ.
ಹುಚ್ಚು ಕೋಡಿ ಮನಸು – ಈ ಹಾಡು ವೆಂಕಟೇಶಮೂರ್ತಿ ಅವರ ಕವನದಿಂದ ರೂಪುಗೊಂಡಿದ್ದು, ಸಿ. ಅಶ್ವಥ್ ಮತ್ತು ಚಾಯಾ ಅವರ ಗಾಯನದಲ್ಲಿ ಪ್ರಸಿದ್ಧಿ ಪಡೆದಿದೆ.
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ – ತಾಯಿ ಮಮತೆಯ ಭಾವವನ್ನು ತುಂಬಿಕೊಂಡ ಈ ಹಾಡು ಶ್ರೋತೃಗಳ ಮನಸ್ಸನ್ನು ತಟ್ಟುತ್ತದೆ.
ಐದು ಬೆರಳು ಕೂಡಿ ಒಂದು ಮುಷ್ಠಿಯು – ರಾಷ್ಟ್ರೀಯ ಭಾವನೆಗಳನ್ನು ಪ್ರತಿಬಿಂಬಿಸುವ ಈ ಹಾಡು ಸಿ. ಅಶ್ವಥ್ ಅವರ ಸಂಗೀತದಲ್ಲಿ ಜನಪ್ರಿಯವಾಗಿದೆ.
ಪ್ರೀತಿ ಕೊಟ್ಟ ರಾಧೆಗೆ – ಮೈಸೂರು ಅನಂತಸ್ವಾಮಿ ಮತ್ತು ರಾಜು ಅನಂತಸ್ವಾಮಿ ಅವರ ಗಾಯನದಲ್ಲಿ ಈ ಹಾಡು ಭಾವಗೀತೆ ಪ್ರಿಯರಲ್ಲಿ ಖ್ಯಾತಿ ಪಡೆದಿದೆ.
ಪ್ರಸಿದ್ಧವಾದ ಪ್ರಮುಖ ಚಲನಚಿತ್ರ ಗೀತೆಗಳು:
ಚಿತ್ರ:-ಅಮೆರಿಕಾ ಅಮೆರಿಕಾ ಬಾನಲ್ಲಿ ಓಡೋ ಮೇಘ”
ಚಿತ್ರ: ಕಿರಿಕ್ ಪಾರ್ಟಿ–”ತೂಗು ಮಂಚದಲ್ಲಿ ಕೂತು”
ಚಿತ್ರ: ಸಪ್ತ ಸಾಗರದಾಚೆ ಎಲ್ಲೊ–”ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ”
ಹೀಗೆ ಡಾ. ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಸಾಹಿತ್ಯ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಚಾಪನ್ನು ಮೂಡಿಸಿಕೊಂಡು ಹೃದಯ ಸಿರಿವಂತಿಕೆಯಿಂದ ಕನ್ನಡಿಗರ ಮನೋರಂಗದಲ್ಲಿ ನೆಲೆಯೂರಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಬೆಳಕು ನಮ್ಮನ್ನು ಅಗಲಿರುವುದು ಸಾಹಿತ್ಯ ಜಗತ್ತಿಗೆ ತುಂಬಲಾರದ ನಷ್ಟವೇ ಸರಿ. ಭಾವಜೀವದ ಕವಿಗೆ ಹೃದಯ ತುಂಬಿದ ಭಾವದ ಕಡಲಿಂದ ಭಾವಪೂರ್ಣ ಅಶ್ರುತರ್ಪಣ ಸಮರ್ಪಿಸಲಾಗುತ್ತಿದೆ ಆತ್ಮಚೇತನಕ್ಕೆ ಚಿರಶಾಂತಿ ಕೋರಲಾಗುತ್ತಿದೆ.

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,