- ಬಸವಮಾರ್ಗದಿಂದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ
- ವಿಶ್ವವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಿ

ಮೈಸೂರು : ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಹಾಗೂ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆ ವತಿಯಿಂದ ಗುರುವಾರ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಾಗೃತಿ ಜಾಥಾ, ಬೀದಿ ನಾಟಕ ಆಯೋಜಿಸಲಾಗಿತ್ತು.
ನಗರದ ಕುಕ್ಕರಹಳ್ಳಿಯಲ್ಲಿ ಇರುವ ಸರ್ಕಾರಿ ಶಾಲಾ ಆವರಣದಲ್ಲಿ ಪ್ರಾರಂಭಗೊಂಡ ಜಾಗೃತಿ ಜಾಥಾ ಕುಕ್ಕರಹಳ್ಳಿ, ಕುವೆಂಪು ನಗರ, ಸರಸ್ವತಿಪುರಂ ಬಡಾವಣೆಯ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿತು. ಸಾರ್ವಜನಿಕರಿಗೆ ಮಾಹಿತಿ ಒಳಗೊಂಡ ಒತ್ತಿಗೆಗಳನ್ನು ನೀಡಿ ಅರಿವು ಮೂಡಿಸಲಾಯಿತು. ಶಾಲೆಯ ಮಕ್ಕಳು ಮತ್ತು ಬಸವಮಾರ್ಗ ವ್ಯಸನಮುಕ್ತ ಕೇಂದ್ರದ ಶಿಬಿರಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಬ್ಯಾಂಡು, ಸೆಟ್ ಸದ್ದಿನೊಂದಿಗೆ ಹೆಚ್ಚೆ ಹಾಕಿದ ವಿದ್ಯಾರ್ಥಿಗಳು, ‘ಕೂಡಿಬಾಳಿದರೆ ಸ್ವರ್ಗ, ಕುಡಿದು ಬಾಳಿದರೆ ನರಕ’, ‘ದೂಮಪಾನ, ಮದ್ಯಪಾನ, ಆರೋಗ್ಯಕ್ಕೆ ಹಾನಿಕರ’, ‘ಮದ್ಯ ಮುಕ್ತರಾಗಿ ಬಾಳಿ’ ಎಂಬುದು ಸೇರಿದಂತೆ ಅರಿವು ಮೂಡಿಸುವ ನಾನಾ ಫಲಕಗಳನ್ನು ಕೈಯಲ್ಲಿ ಹಿಡಿದು ಬಿರುಸಾಗಿ ಸಾಗಿದರು. ‘ಯಮನ ವೇಷ ಧರಿಸಿದ್ದ ಇಬ್ಬರು ಕಲಾವಿದರ’ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು. ಮಾದಕ ವಸ್ತುಗಳಿಗೆ ದಾಸರಾಗದಂತೆ ಸಂದೇಶ ಸಾರಲಾಯಿತು. ಪ್ರಮುಖ ವೃತ್ತಗಳಲ್ಲಿ ನೃತ್ಯ ಮಾಡಿ, ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಜಾಥಾಕ್ಕೆ ಕಳೆ ತಂದರು.
ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದ ಅಧ್ಯಕ್ಷ ಎಸ್. ಬಸವರಾಜು, ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸದಸ್ಯ ಮಲ್ಲೇಶ್ ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಅಂತಃಕರಣ ತಟ್ಟಿದ ಬೀದಿ ನಾಟಕ: ಜಾಗೃತಿ ಜಾಥಾದೊಂದಿಗೆ ಕುಕ್ಕರಹಳ್ಳಿ ವೃತ್ತದ ಬಳಿ ಇರುವ ರಾಮ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೀದಿ ನಾಟಕ ಸಾರ್ವಜನಿಕರ ಅಂತಃಕರಣ ತಟ್ಟಿತು. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿಶ್ವನಾಥ್ ಅವರ ಮೈಸೂರು ಫೋಕ್ ಸ್ಟಾರ್ಸ್ ಬ್ಯಾಂಡ್ ತಂಡದ ಕಲಾವಿದರಾದ ರೂಬಿನ್ ಸಂಜಯ್, ಸಿಂಚನಾ, ಪುಷ್ಪಲತಾ, ಪ್ರಜ್ವಲ್ ಹಾಗೂ ವಿನೋದ್ ಮನಕಲಕುವಂತೆ ಅಭಿನಯಿಸಿದರು. ಕುಟುಂಬ, ಸಮಾಜ, ಆರೋಗ್ಯ ಹಾಗೂ ಮಕ್ಕಳು ಹಾಗೂ ಯುವಕರ ಮೇಲೆ ಕುಡಿತ ಹೇಗೆ ಪರಿಣಾಮ ಬೀರುತ್ತದೆ. ಅದರಿಂದ ಆಗುವ ತೊಂದರೆಗಳು ಏನು ಎಂಬುದರ ಕುರಿತು ಮನೋಜ್ಞವಾಗಿ ಅಭಿನಯಿಸಿದರು. ಆ ಮೂಲಕ ಆವರಣದಲ್ಲಿ ನೆರೆದಿದ್ದವರ ಕಣ್ಣು ತೆರೆಸಿದರು. ನೋಡುಗರಿಂದ ಸಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡು ಮೆಚ್ಚುಗೆ ಪಡೆದರು.
ಕುಕ್ಕರಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಅಧ್ಯಕ್ಷ ಎಸ್. ಬಸವರಾಜು ಅವರು, ಪ್ರತಿ ವರ್ಷ ಜೂನ್ 26 ರಂದು ವಿಶ್ವ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಗುತ್ತದೆ. ಸೆಪ್ಟೆಂಬರ್ 7, 1987 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ನಿರ್ದಿಷ್ಟ ಆಚರಣೆಯನ್ನು ಜಾರಿಗೆ ತರಬೇಕು ಎಂದು ನಿರ್ಣಯವನ್ನು ಅಂಗೀಕರಿಸಿತು. ಆ ಬಳಿಕ ಈ ದಿನವನ್ನು ಮೊದಲು 1989 ರಲ್ಲಿ ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇಂದಿನ ಶೇ.70ರಷ್ಟು ಯುವ ಜನಾಂಗವು ಹಲವಾರು ದುಶ್ಚಟಗಳಿಗೆ ಮಾರುಹೋಗುತ್ತಿದ್ದು, ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ. ವಿಶ್ವದಾದ್ಯಂತ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಇದು ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಮಾತನಾಡಿ, ವ್ಯಸನವು ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ಮಾದಕ ವಸ್ತುಗಳು ವ್ಯಸನಕ್ಕೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು . ಈ ದಿನದ ಪ್ರಮುಖ ಉದ್ದೇಶ ಜನರನ್ನು ಮಾದಕ ವಸ್ತುಗಳಿಂದ ದೂರವಿಡುವುದು ಮತ್ತು ಮಾದಕ ವಸ್ತು ಕಳ್ಳಸಾಗಣೆ ತಡೆಯುವುದು. ಈ ಕ್ರಮವು ಮಕ್ಕಳು ಮತ್ತು ಯುವ ಜನರ ಭವಿಷ್ಯವನ್ನು ಉಜ್ವಲವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಚಂದ್ರು ಮಾತನಾಡಿ, ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಕರು ತಮಗೆ ಅರಿವಿಲ್ಲದೇಯೆ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಾದಕ ವ್ಯಸನವು ವ್ಯಕ್ತಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಅಷ್ಟೆ ಅಲ್ಲದೇ ಅವನ ಜೀವನವನ್ನೆ ದುರಂತಕ್ಕೆ ತಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹನುಮಾನ್ ಫೌಂಡೇಷನ್ ಅಧ್ಯಕ್ಷ ಸ್ಕಂದ ಹನುಮಾನ್, ನಿವೃತ್ತ ಪೊಲೀಸ್ ಅಧಿಕಾರಿ ಶಾಂತಕುಮಾರ್ ಇತರರು ಇದ್ದರು.