ಪ್ರತಿದಿನ ಒಂದಲ್ಲ ಒಂದು ದಿನಾಚರಣೆಗಳನ್ನು ನಾವು ಆಚರಿಸಿಕೊಳ್ಳುತ್ತಾ ಬರುತ್ತಿದ್ದೇವೆ. ಹಲವು ದಿನಾಚರಣೆಗಳು ಮಹತ್ವವನ್ನು ಪಡೆದಿರುವುದಿಲ್ಲ. ಆದರೆ ಕೆಲವು ದಿನಾಚರಣೆಗಳು ಅವು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ, ಮಹತ್ವಪೂರ್ಣ ಅಂಶವನ್ನು ಒಳಗೊಂಡಿರುತ್ತವೆ. ಜೊತೆಗೆ ಜಾಗೃತಿಯನ್ನು ಕೂಡ ಮೂಡಿಸುತ್ತವೆ.
ಇವತ್ತು "ವಿಶ್ವ ಜಲ ದಿನ"- ನೀರು ಎಲ್ಲದಕ್ಕೂ ಕೂಡ ಮೂಲ. ಪಂಚಭೂತಗಳಲ್ಲಿ ಒಂದಾದ ನೀರು ಪ್ರಾಣಿ- ಪಕ್ಷಿಗಳು, ಮನುಷ್ಯನಿಗೆ ಎಲ್ಲರಿಗೂ ಕೂಡ ಅತ್ಯವಶ್ಯಕವಾಗಿ ಬೇಕೇ ಬೇಕು. ಗಿಡಗಳು ಬೆಳೆಯಲು ಒಟ್ಟಿನಲ್ಲಿ ಕೋಟ್ಯಾನುಕೋಟಿ ಜೀವಿಗಳಿಗೂ ಕೂಡ ನೀರು ಅಮೃತ ಸಮಾನವಾದದ್ದು.
ವಿಶ್ವ ಜಲ ದಿನದ ಸಂದರ್ಭದಲ್ಲಿ ನಾವು ನೀರನ್ನ ಹೇಗೆ ಮಿತವಾಗಿ ಬಳಸಬೇಕು, ಉಳಿಸಬೇಕು ಜೊತೆಗೆ ನಮ್ಮ ಸುತ್ತಮುತ್ತಲು ಯಾವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂಬೆಲ್ಲಾ ಅಂಶವನ್ನು ತಿಳಿದುಕೊಳ್ಳೋಣ.
ಹನಿ ಹನಿ ಗೂಡಿದರೆ ಹಳ್ಳ"- ಎನ್ನುವ ಮಾತೇ ಇದೆ. ಒಂದೊಂದು ಹನಿ ನೀರು ಕೂಡ ಈಗ ಉಳಿಸುವ ಕಾಲ ಬಂದಿದೆ!. ಮೊದಲು ನೀರನ್ನು ನಾವು ಬಳಸುತ್ತಿದ್ದ ಆ ಕಾಲಕ್ಕೂ, ಈಗ ಬಳಸುವ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ!.
ಒಂದು ಬಾಟಲಿಗೂ ಕನಿಷ್ಠ 10 ರೂಪಾಯಿ ನೀಡಿ ಕುಡಿಯುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಹಣ ಕೊಟ್ಟು ನೀರು ಕೊಂಡುಕೊಳ್ಳುತ್ತಿದ್ದರು ಕೂಡ ಬಾಟಲಿನಲ್ಲಿ ವ್ಯರ್ಥವಾಗಿ ನೀರನ್ನು ಅರ್ಧಂಬರ್ಧ ಉಳಿಸಿ ಬಿಡುತ್ತಿದ್ದೇವೆ. ಪ್ರಕೃತಿಯಲ್ಲಿ ಹೇರಳವಾಗಿ, ಉಚಿತವಾಗಿ ಸಿಗುತ್ತಿದ್ದ ನೀರಿಗೂ ಕೂಡ ಬೆಲೆ ಕಟ್ಟುವ ಕಾಲ ಬಂದಿದೆ!. ನೂರಾರು ಕಂಪನಿಗಳು ನಾಯಿ ಕೊಡಗಳಂತೆ ತಲೆಯೆತ್ತಿವೆ. ಪ್ರಕೃತಿಯಲ್ಲಿ ಸಿಗುವ ನೀರನ್ನೆ ಯಾವುದೇ ರೀತಿಯಲ್ಲಿ ಶುದ್ಧೀಕರಿಸಿದೆ, ಆರ್ಥಿಕ ಲಾಭದಿಂದಾಗಿ ಬಾಟಲ್ ಗಳ ಮೂಲಕ ನೀರನ್ನು ತುಂಬಿ, ಮಾರಿ ಲಾಭ ಪಡೆಯುತ್ತಿದ್ದಾರೆ. ಮೊದಲೇ ಕುಡಿಯುವ ನೀರು ಸಿಗುವ, ಅಪರೂಪವಾದ ಕಾಲದಲ್ಲಿ ನೀರಿಗೊಂದುಷ್ಟು ಹಣ ಜೊತೆಗೆ ಅದನ್ನ ಬಾಟಲಿನಲ್ಲಿ ಬಂಧಿಸಿ ನಂತರ ಮತ್ತೆ ಪ್ರಕೃತಿಗೆ ಬಾಟಲುಗಳನ್ನೇ ಹಾಕುತ್ತೇವೆ. ಹೀಗೆ ಒಂದು ಕಡೆ ಅಂತರ್ಜಲ ಕಡಿಮೆಯಾಗುತ್ತಿದೆ ಮತ್ತೊಂದೆಡೆ ಬಾಟಲಿ ಸಂಸ್ಕೃತಿಯು ತಲೆ ಎತ್ತುತ್ತಿದೆ!. ಹೀಗೆ ಒಂದನ್ನು ಮಾಡಲು ಹೋಗಿ ಇನ್ನೊಂದನ್ನು ಮಾಡುತ್ತಾ ಮನುಷ್ಯ ಬರುತ್ತಿದ್ದಾನೆ.
ಪ್ರಕೃತಿಗೆ ಪೂರಕವಾಗುವುದರ ಬದಲು ಮಾರಕವಾಗುತ್ತಿದ್ದಾನೆ. ಎಲ್ಲಾ ಕಡೆ ಪ್ಲಾಸ್ಟಿಕ್ ಇನ್ನಿತರ ಬಳಕೆಯಿಂದಾಗಿ ನಂತರ ಅದು ಭೂಮಿ ಸೇರಿ, ಮಳೆ ನೀರು ಬಂದಾಗ ನೀರು ಭೂಮಿಯಲ್ಲಿ ಇಂಗದೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ರೀತಿಯಿಂದಾಗಿ ಅಂತರ್ಜಲದ ನೀರಿನ ಮಟ್ಟ ಕುಸಿಯುತ್ತಾ ಬರುತ್ತಿದೆ. ಇದಕ್ಕೆ ಸ್ಪಷ್ಟ ಉದಾರಣೆ ಎಂದರೆ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸುವಾಗ ಮಹತ್ವದ ಅನುಭವವಾಗಿರುತ್ತದೆ. ಒಂದು ವರ್ಷ ಬೇಗ ಬರುವ ನೀರು ಮತ್ತೊಂದು ವರ್ಷ ಹಲವು ಅಡಿಗಳವರೆಗೂ ಕೊರೆಸಿದರು ಕೂಡ ಬರುವುದಿಲ್ಲ. ಅಂದರೆ ವರ್ಷದಿಂದ ವರ್ಷಕ್ಕೆ ಅಂತರ್ಜಲದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ಈ ರೀತಿ ಆಗುತ್ತಿದೆ. ಗಣಿ ಮತ್ತು ಭೂ ಮಾಪನ ಇಲಾಖೆಯೂ ಕೂಡ ಹಲವು ಬಾರಿ ನೀರಿನ ವಿಷಯ ಬಂದಾಗ ಎಚ್ಚರಿಕೆಯನ್ನು ನೀಡುತ್ತಲೇ ಬರುತ್ತಿದ್ದಾರೆ. ನೀರು ನಾನು ಮೊದಲೇ ಹೇಳಿದಂತೆ ಜೀವನಾಧಾರವಾಗಿದೆ. ಆದರೆ ಕುಡಿಯುವ ನೀರನ್ನು ನಾವು ಲೆಕ್ಕವಿಲ್ಲದಷ್ಟು ಮಲಿನ ಮಾಡುತ್ತಾ ಬರುತ್ತಿದ್ದೇವೆ. ಅದರ ಬಳಕೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇನ್ನೂ ಕೆಲವರು ಮುಂದುವರೆದು ನೀರಿಗೂ ಕೂಡ ದುಡ್ಡು ಕೊಟ್ಟು ತರುವುದನ್ನು ಕೂಡ ಕಡಿಮೆ ಮಾಡುತ್ತಿಲ್ಲ. ಹೇಗೋ ದುಡ್ಡು ಕೊಟ್ಟು ತಂದರೆ ಆಯಿತು ಎಂದು ಯಾವುದೇ ರೀತಿಯಲ್ಲಿ ಹಿಂದೆ ಮುಂದೆ ಯೋಚನೆ ಮಾಡುವುದೇ ಇಲ್ಲ. ನಾನೊಬ್ಬ ಬದುಕಿದರೆ ಸಾಕು ಎನ್ನುವ ಹಂತಕ್ಕೆ ಬಂದು ತಲುಪಿದ್ದಾನೆ.
ಪರಿಸ್ಥಿತಿ ಹೀಗಿರುವಾಗ ನಾವು ನೀರಿನ ಬಳಕೆಯ ಬಗ್ಗೆ ಅದರ ಮಹತ್ವದ ಬಗ್ಗೆ ಅಮೂಲಾಗ್ರವಾಗಿ ಚಿಂತಿಸುವ ಕಾಲ ಬಹಳ ಹತ್ತಿರವಾಗಿದೆ. ಸರಿಯಾದ ಸಮಯಕ್ಕೆ ಬರುತ್ತಿದ್ದ ಮಳೆಯೂ ಕೂಡ ಈಗ ಬರುತ್ತಿಲ್ಲ. ಮಳೆಯೂ ಹೆಚ್ಚಾಗಿ ಬರದೇ ಇರುವುದಕ್ಕೆ ಅರಣ್ಯವನ್ನ ಮನುಷ್ಯ ವರ್ಷದಿಂದ ವರ್ಷಕ್ಕೆ ನಾಶ ಮಾಡುತ್ತಲೇ ಬರುತ್ತಿದ್ದಾನೆ. ಹೀಗೆ ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನ ವನ್ನು ಮನುಷ್ಯ ನಡೆಸುತ್ತಿಲ್ಲ. ಒಂದು ರೀತಿಯಲ್ಲಿ ಕ್ರೌರ್ಯವಾಗಿ ವರ್ತಿಸುತ್ತಿದ್ದಾನೆ. ಅದರಿಂದಾಗಿ ಈ ಪ್ರಕೃತಿ ಹಲವು ಬಾರಿ ಮುನಿಸಿ ಬಿಸಿ ಮುಟ್ಟಿಸಿದರು ಕೂಡ ಮನುಷ್ಯ ಜಾಗೃತನಾಗುತಿಲ್ಲ!. ಸ್ವಾರ್ಥಕ್ಕಾಗಿ ಮನುಷ್ಯ ಮಾಡಿದ ತಪ್ಪಿಗಾಗಿ ಹಲವು ಪ್ರಾಣಿ ಪಕ್ಷಿಗಳು ಕೂಡ ಕನಿಷ್ಠ ಕುಡಿಯುವ ನೀರಿನಿಂದಲೂ ಕೂಡ ವಂಚಿತವಾಗುತ್ತಿವೆ. ಎಷ್ಟೋ ಕಡೆ ಪಕ್ಷಿಗಳು ಪ್ರಾಣಿಗಳು ಕುಡಿಯುವ ನೀರಿಗಾಗಿ ದಿನಂಪ್ರತಿ ಹಾಹಾಕಾರ ಪಡುತ್ತಾ ಬಂದಿದವೆ. ಅವುಗಳ ಮೂಕ ವೇದನೆಗೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ಕೆಲವರು ತಮ್ಮ ಮನೆಯ ಸುತ್ತಮುತ್ತ ಹಲವು ಮಾದರಿಯಲ್ಲಿ ದನಕರುಗಳಿಗೆ ಅಥವಾ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅದು ಈಗ ಸಾಲದಾಗಿದೆ.
ಅದರಲ್ಲೂ ಬೇಸಿಗೆಯಂತ ಈ ಕಾಲದಲ್ಲೂ ಕೂಡ ನೀರು ಮತ್ತಷ್ಟು ಮಹತ್ವವನ್ನ ಪಡೆದುಕೊಳ್ಳುತ್ತದೆ. ನಮ್ಮ ಊರಿನ ಅಕ್ಕಪಕ್ಕ ಹರಿಯುವ ಕೆರೆ ಕಾಲುವೆಗಳು, ನದಿಗಳು ಮಲಿನವಾಗುತ್ತಿವೆ. ನಗರದ ಸುತ್ತಮುತ್ತಲಿನ ಕೊಚ್ಚೆ ನೀರನ್ನು ನದಿ ಕೆರೆಗಳಿಗೆ ಬಿಡುತ್ತಿದ್ದೇವೆ. ಉದಾಹರಣೆಗೆ ಹೇಳುವುದಾದರೆ ಬೆಂಗಳೂರಿನಲ್ಲಿ ಹರಿಯುವ ವೃಷಭಾವತಿ ನದಿಯು ಇಡೀ ಬೆಂಗಳೂರಿನ ಕಶ್ಮಲ ನೀರನ್ನು ಜೊತೆಯಲ್ಲಿ ಕೊಂಡೊಯ್ಯುತ್ತಿದೆ.ಅದು ಕಾವೇರಿ ನದಿಯನ್ನ ಸೇರುತ್ತಿದೆ. ಹೀಗೆ ಇದೆಲ್ಲ ಮಾಮೂಲು ಎನ್ನುವಂತಾಗಿದೆ. ನಮ್ಮ ಸುತ್ತಮುತ್ತ ಅನೇಕ ಸ್ಥಳೀಯ ಸಂಸ್ಥೆಗಳು ಇದ್ದರೂ ಕೂಡ ಅಧಿಕಾರಿಯ, ಸಿಬ್ಬಂದಿ ವರ್ಗ ಜೊತೆಗೆ ಸಾರ್ವಜನಿಕರು ಇದ್ದಾಗಿಯೂ ಕೂಡ ಈ ರೀತಿಯ ಪರಿಸ್ಥಿತಿಯು ಪುನರಾವರ್ತನೆಯಾಗುತ್ತಿದೆ.
ನೋಡಿ ನೀರಿಗೆ ಬೇಗ ತಿಳಿಯಾಗುವ ಗುಣವು ಇರುವುದರಿಂದ ನಮಗೆ ಹಲವು ರೋಗಗಳು ಬರುತ್ತಿಲ್ಲ. ನಾವು ನೀರನ್ನು ಎಷ್ಟೇ ಕದಲಿದರೂ ಕೂಡ ಅದು ಸ್ವಲ್ಪ ಸಮಯದಲ್ಲಿ ಸ್ವಚ್ಛ ನೀರಾಗಿ ನಮಗೆ ಕಾಣಿಸುತ್ತದೆ. ಜೊತೆಗೆ ನೀರಿನಲ್ಲಿ ಹಲವು ಜೀವ ಮೂಲಗಳು ಕೂಡ ಅಡಗಿರುತ್ತವೆ. ಅವುಗಳಿಗೂ ಕೂಡ ನೀರೇ ಜೀವಧಾರ. ಭೂಮಿ ಮೇಲೆ ಸ್ವಲ್ಪ ನೀರು ಸಿಕ್ಕಿ, ಬದುಕುವ ಅನೇಕ ಪ್ರಾಣಿ- ಪಕ್ಷಿಗಳು ಇವೆ. ಆದರೆ ನೀರಿನಲ್ಲಿ ವಾಸಿಸುವ ಜಲಚರ ಗಳಿಗೆ ನೀರು ದಿನಂಪ್ರತಿ ಇರಲೇಬೇಕು.
ಪರಿಸ್ಥಿತಿ ಹೀಗಿರುವಾಗ ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಆದರೆ ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಅಷ್ಟೇ. ಅದರಿಂದಾಗಿ ನಾನು ಮೊದಲೇ ಹೇಳಿದಂತೆ ವರ್ಷದಿಂದ ವರ್ಷಕ್ಕೆ ಸಮಸ್ಯೆಗಳ ಸುಳಿಯಲ್ಲಿ ಮನುಷ್ಯ ಬದುಕು ಸಾಗುತಿಸುತ್ತಿದ್ದೇನೆ. ನಮ್ಮ ಈ ಕಾಲದಲ್ಲಿ ಪರಿಸ್ಥಿತಿಯು ಈ ರೀತಿ ಆಗಿರುವಾಗ ನಮ್ಮ ಮುಂದಿನ ಪೀಳಿಗೆಯವರು ನೀರನ್ನು ಅಥವಾ ಇನ್ನಿತರ ವಸ್ತುಗಳನ್ನ ಯಾವ ರೀತಿ ಬಳಸುತ್ತಾರೆ ಎನ್ನುವುದು ಯಕ್ಷಪ್ರಶ್ನೆಯಾಗಿ. ಉದಾಹರಣೆಗೆ ನಾವು ಮರದ ನೆರಳಿನಲ್ಲಿ ಇದ್ದಾಗ ತಂಪಾದ ವಾತಾವರಣ ನಮಗೆ ಸಿಗುತ್ತದೆ. ಅದೇ ಬಯಲಿನಲ್ಲಿ ನಿಂತರೆ ಬಿಸಿಯ ವಾತಾವರಣ ಆಗುತ್ತದೆ. ಗಿಡಮರಗಳನ್ನು ನಾವು ಹೆಚ್ಚಾಗಿ ಬೆಳೆಸುವುದರಿಂದ ಇಡೀ ವಾತಾವರಣವು ತಂಪಾಗಿರುತ್ತದೆ. ಜೊತೆಗೆ ಗಿಡಮರಗಳನ್ನು ಹೆಚ್ಚು ಮಳೆಯನ್ನ ಸುರಿಸಲು ಅಂದರೆ ಮೋಡವನ್ನು ಸೆಳೆಯಲು ಅವು ಕಾರಣಿಕರ್ತವಾಗಿವೆ. ಅದರಿಂದಾಗಿ ಹೆಚ್ಚು ಮರಗಳು ಇರುವ ಪ್ರದೇಶದಲ್ಲಿ ಮಳೆಯೂ ಕೂಡ ಹೆಚ್ಚಾಗಿ ಬರುತ್ತಿದೆ.
ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನ ನಿರಂತರವಾಗಿ ಕಡಿಯುತ್ತಾ ಬರುತ್ತಿದ್ದಾನೆ. ವ್ಯವಸಾಯವಾಗಿ ಬಳಸುತ್ತಿದ್ದ ಭೂಮಿಯನ್ನ ಸೈಟುಗಳನ್ನಾಗಿ ಪರಿವರ್ತಿಸಿ, ಕಾಂಕ್ರೀಟ್ ಕಾಡುಗಳನ್ನ ನಿರ್ಮಾಣ ಮಾಡುತ್ತಾ ಬರುತ್ತಿದ್ದಾನೆ. ಒಂದು ಗಮನಿಸಬೇಕಾದ ಮುಖ್ಯ ಅಂಶವೆಂದರೆ ನಗರ ಪ್ರದೇಶದಿಂದ ಕನಿಷ್ಠ 15 ಕಿ ಮೀ ವರೆಗೂ ಕೂಡ ಎಲ್ಲಿಯೂ ಕೂಡ ರೈತರು ಮೊದಲು ಬೆಳೆಯುತ್ತಿದ್ದ ಬೆಳೆಗಳನ್ನು ಈಗ ಬೆಳೆಯುತ್ತಿಲ್ಲ
ಏಕೆಂದರೆ ಅವನು ಹಣದಾಸೆಗಾಗಿ ಸೈಟ್ ಅನ್ನ ಮಾಡಿ ದಳ್ಳಾಳಿಗಳಿಗೆ ಮಾರುತಿದ್ದಾನೆ. ಅವರು ಆರ್ಥಿಕವಾಗಿ ಲಾಭ ಪಡೆದು ರೈತನಿಗೊಂದು ಇಷ್ಟು ಹಣ ನೀಡುವುದು ಇದು ನಡೆಯುತ್ತಲೇ ಬರುತ್ತಿದೆ.
ಈ ರೀತಿ ಅನೇಕ ಅಂಶಗಳು ಒಂದಕ್ಕೆ ಒಂದು ಲಿಂಕ್ ಮಾದರಿಯಲ್ಲಿ ನಮಗೆ ಕಾಣಸಿಗುತ್ತದೆ.
ಮುಖ್ಯವಾಗಿ ಇಂದು “ವಿಶ್ವ ಜಲ ದಿನ”ವಾಗಿರುವುದರಿಂದ ನಾವು ನೀರನ್ನು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಉಳಿಸುವ ಪ್ರಯತ್ನವನ್ನು, ಸಂಕಲ್ಪವನ್ನು ಮಾಡಲೇಬೇಕಾಗುತ್ತದೆ. ಮೊದಲು ನಮ್ಮ ಮನೆ ಮನೆಯಿಂದ ನೀರನ್ನು ಉಳಿಸುವ ಪ್ರಯತ್ನವನ್ನ ಮಾಡಬೇಕು. ನಂತರ ನಮ್ಮ ಬೀದಿಗಳಲ್ಲಿ ನೀರನ್ನು ಯಾವ ರೀತಿಯಲ್ಲಿ ವ್ಯರ್ಥವಾಗಿ ಪೋಲ್ ಮಾಡುತ್ತಿದ್ದಾರೆ, ಜೊತೆಗೆ ಅದನ್ನ ಬಳಸುವ ಕ್ರಮ ಇವುಗಳೆಲ್ಲದರ ಬಗ್ಗೆ ಜಾಗೃತಿ ಮೂಡಿಸಬೇಕು ನಂತರದಲ್ಲಿ ಇಡೀ ಊರು, ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಹಂತ ಹಂತವಾಗಿ ಜಾಗೃತಿ ಮೂಡಿಸುವ ಯೋಜನೆಗಳನ್ನು ಹಾಕಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಸರ್ಕಾರ ಅನೇಕ ನೀರಿನ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಕುಡಿಯುವ ನೀರಿನಿಂದ ಹಿಡಿದು ರೈತರಿಗೆ, ಭೂಮಿಗೆ ವ್ಯವಸಾಯಕ್ಕೆ ಹಲವು ಯೋಜನೆಗಳು ಇವೆ. ಎಲ್ಲವನ್ನು ಕೂಡ ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗಾಗಿ ತಮ್ಮ ಜಮೀನಿನಲ್ಲಿ ಜೊತೆಗೆ ಊರುಗಳಲ್ಲಿ ಇಂಗು ಗುಂಡಿಗಳನ್ನ ಮಾಡಿಕೊಡುವ ಯೋಜನೆಯು ಕೂಡ ಇದೆ.
ನಾವು ಹೆಚ್ಚಾಗಿ ನೀರು ನೆಲದಲ್ಲಿ ಹರಿಯುವುದರ ಬದಲು ಅದು ಒಂದು ಕಡೆ ಭೂಮಿಯನ್ನು ಸೇರುವಂತೆ ನೋಡಿಕೊಳ್ಳಬೇಕು. ಒಂದು ಮಳೆ ಬಂದಾಗ ನಿಮಗೆ ನೀರು ಎಲ್ಲಿ ಹರಿಯುತ್ತದೆ, ಹಳ್ಳ ಎಲ್ಲಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ, ಅಂತಹ ಜಾಗಕ್ಕೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆ ಮಾಡಬೇಕು. ಆಗ ನಿಮಗೆ ಗೊತ್ತಾಗುತ್ತದೆ ಒಂದು ಮಳೆಯಿಂದ ಎಷ್ಟು ನೀರು ನಿಮ್ಮ ಸುತ್ತಮುತ್ತಲಿನ ಗ್ರಾಮದಲ್ಲಿ ಸಂಗ್ರಹವಾಗುತ್ತದೆ ಎಂದು. ಇದೇ ಕೆಲಸವನ್ನು ನಿಮ್ಮ ಜಮೀನಿನ ಸುತ್ತಮುತ್ತ ಮಾಡಬೇಕು.
ಇನ್ನು ಅಂತಿಮವಾಗಿ ಹೇಳುವುದಾದರೆ ವಿಶ್ವ ಜಲ ದಿನದಂದು ನಾವು ಮಹತ್ವದ ಸಂಕಲ್ಪವನ್ನು ಮಾಡಲೇಬೇಕು. ನಾವು ಮನೆಯಲ್ಲಿ ನಲ್ಲಿ ನೀರನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕು. ನಲ್ಲಿಯ ನೀರು ಬಿಂದಿಗೆಯ ಮೂಲಕ ಮನೆಯ ಒಳಗೆ ಸೇರಬೇಕೆ ಹೊರತು ವ್ಯರ್ಥವಾಗಿ ಚರಂಡಿಯನ್ನು ಸೇರಬಾರದು. ಜೊತೆಗೆ ನಾವು ಮನೆಯಲ್ಲಿ ಬಟ್ಟೆ ಒಗೆಯುವಾಗ ಅಥವಾ ದಿನನಿತ್ಯದ ಕೆಲಸ ಮಾಡುವಾಗ ವ್ಯರ್ಥವಾಗಿ ಹರಿಯುವ ನೀರು, ಚರಂಡಿ ಸೇರುವುದರ ಬದಲು ನಮ್ಮ ಸುತ್ತಮುತ್ತಲ ಇರುವ ಗಿಡಗಳಿಗೆ ಅದು ಹರಿದು ಹೋಗುವಂತೆ ಮಾಡಬೇಕು.
ನಾವು ಪ್ರತಿ ದಿನ ಎಷ್ಟು ನೀರು ಬಳಸುತ್ತೇವೆ ಎನ್ನುವುದನ್ನು ಅಂದಾಜು ಮಾಡಿಕೊಂಡು, ಅದರ ಬಳಕೆಯ ಪ್ರಮಾಣವನ್ನ ಕಡಿಮೆ ಮಾಡಿಕೊಂಡು ವ್ಯರ್ಥವಾಗಿ ಹೋಗುವ ನೀರನ್ನು ಉಳಿಸಬೇಕು. ನಮ್ಮ ಮನೆಯಲ್ಲಿ ದನಕರುಗಳು, ದ್ವಿಚಕ್ರ ವಾಹನಗಳು, ಕಾರು ಇತ್ಯಾದಿಗಳನ್ನ ತೊಳೆಯುವಾಗ ನಾವು ಪೈಪಿನಲ್ಲಿ ಸರಾಗವಾಗಿ ಬಳಸುವುದರ ಬದಲು ಬಕೆಟ್ ನಲ್ಲಿ ನೀರು ತುಂಬಿಕೊಂಡು ಬಟ್ಟೆಯಲ್ಲಿ ವರೆಸಿ ನಂತರ ಮಿತವಾಗಿ ಬಳಸಬೇಕು. ನಾವು ಮೋಟಾರ್ ಅನ್ನು ಆನ್ ಮಾಡಿದಾಗ ಟ್ಯಾಂಕ್ ಯಾವಾಗ ತುಂಬುತ್ತದೆ ಎನ್ನುವುದನ್ನು ಸ್ವಲ್ಪ ಯಾರಾದರೂ ಗಮನಿಸಬೇಕು ಎಷ್ಟೋ ಬಾರಿ ಸುಮ್ಮನೆ ವ್ಯರ್ಥವಾಗಿ ಟ್ಯಾಂಕಿನಿಂದ ಸುರಿಯುತ್ತಾ ನೀರು ಭೂಮಿ ಸೇರುತ್ತದೆ.
ಇನ್ನು ಮುಖ್ಯವಾದ ಅಂಶವೆಂದರೆ ಶೌಚಾಲಯ ಗಳಲ್ಲಿ ನೀರನ್ನು ಕೂಡ ನಾವು ವ್ಯರ್ಥವಾಗಿ ಬಳಸುತ್ತಾ ಬರುತ್ತಿದ್ದೇವೆ. ನಲ್ಲಿಯನ್ನು ಆಫ್ ಮಾಡುವುದೇ ಇಲ್ಲ. ನೀರು ಪೋಲಾಗಿ ಸುರಿಯುತ್ತಾ ಇರುತ್ತದೆ. ಜೊತೆಗೆ ನಾವು ಸಿಂಕ್ ಗಳಲ್ಲಿ ಮುಖ ತೊಳೆಯುವಾಗ, ಬಕೆಟ್ ಮೂಲಕ ನೀರು ತೊಳೆಯಬೇಕು.
ಹೀಗೆ ನಾವು ನಮ್ಮ ದೈನಂದಿನ ದಿನಚರಿಯಲ್ಲಿ ನೀರನ್ನ ಯಾವ ರೀತಿಯಲ್ಲಿ ಉಳಿಸಬೇಕು ಎನ್ನುವ ಯೋಜನೆಯನ್ನು, ಸಂಕಲ್ಪವನ್ನು ಹಾಕಿಕೊಳ್ಳಬೇಕು. ಅದು ಒಂದೇ ದಿನ ನೆರವೇರದಿದ್ದರೂ ಹಂತ ಹಂತವಾಗಿ ನೀರನ್ನು ಹಿತಮಿತವಾಗಿ ಬಳಸುವ ಹಂತಕ್ಕೆ ನಾವು ತಲುಪುತ್ತೇವೆ.
ಮೊದಲು ನಾವು ಮನಸ್ಸು ಮಾಡಬೇಕು ವಿಶ್ವ ಜಲ ದಿನದಂದು ನಾವು ಅರ್ಥಪೂರ್ಣ ಸಂಕಲ್ಪಗಳನ್ನ ಮಾಡಿಕೊಂಡು ನೀರು ಅಮೂಲ್ಯವಾದ ಸಂಪತ್ತು ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಂಭವ ಇದೆ. ಆದುದರಿಂದ ನಾವು ನೀರನ್ನ ನಾವು ಮತ್ತು ನಮ್ಮ ಸುತ್ತಮುತ್ತ ಹಿತಮಿತವಾಗಿ ಬಳಸೋಣ. ಈ ನೀರಿನ ವಿಷಯಕ್ಕೆ ಬಂದಾಗ ನಾವು ಮುಖ್ಯವಾಗಿ ಶಾಲಾ- ಕಾಲೇಜು ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ದೊಡ್ಡವರಿಗೂ ಕೂಡ!. ಒಟ್ಟಿನಲ್ಲಿ ವಿಶ್ವ ಜಲ ದಿನದಂದು ನಾವು ನೀರಿನ ಬಗ್ಗೆ ನೀರಿನ ಉಪಯೋಗದ ಬಗ್ಗೆ ಮಾತನಾಡುವುದರ ಬದಲು ಅದನ್ನು ಜಾರಿಗೆ ತರಬೇಕು.

ಕಾಳಿಹುಂಡಿ ಶಿವಕುಮಾರ್ ಮೈಸೂರು.