ಉತ್ತನಹಳ್ಳಿ ಜಾತ್ರಾ ಮಹೋತ್ಸವ

ಸಾಂಸ್ಕೃತಿಕವಾಗಿ ಭಾರತ ಶ್ರೀಮಂತ ರಾಷ್ಟ್ರ ಹೇಗೋ ಹಾಗೆ ಹಳ್ಳಿಗಳಿಂದ ಕೂಡಿದ ರಾಷ್ಟ್ರ ವಾಗಿದೆ. ಹಳ್ಳಿಯಿಂದ ದಿಲ್ಲಿ ಎನ್ನುವ ಮಾತಿನಂತೆ ಹಳ್ಳಿಗಳು ಯಾವುದೇ ರಾಷ್ಟ್ರದ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಾಗಲಾರದು.ಮೊದಲು ಹಳ್ಳಿಗಳು ಜನಪದ ಕಲೆಗಳ ಕೆಲವು ಬೀಡಾಗಿ ದ್ದವು. ಆದರೆ ಆಧುನಿಕತೆಯಿಂದಾಗಿ ಹಳ್ಳಿಗಳ ಕೆಲವು ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ನಂಬಿಕೆ ಮುಂತಾದವುಗಳು ಮೂಲ ಸ್ವರೂಪ ವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. 

ಸಂಗತಿಯಾದರೂ, ಪ್ರಕೃತಿಯ ಪ್ರಕೃತಿ ಹಸಿರನ್ನೆ ತನ್ನ ಗರ್ಭದಲ್ಲಿ ಧರಿಸಿ ಚೈತನ್ಯಗೊಂಡು ಉತ್ತಮಿಕೆಯತ್ತ ದಾಪುಗಾಲ್ಲನ್ನು ಹಾಕುತ್ತಿರುವ ಉತ್ತನಹಳ್ಳಿ ಗ್ರಾಮವು ಹಳ್ಳಿಯಾದರು. ಪಟ್ಟಣದ ನಡೆ ನುಡಿ ಕಲಿತರು ತನ್ನ ತಲೆತಲಾಂತರದ, ಸಂಪ್ರದಾಯ, ಪರಂಪರೆ ಗಳನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದೆ. ಇಂತಹ ಆಚರಣೆಗಳಲ್ಲಿ ಗ್ರಾಮದ ದೇವತೆಯಾದೆ "ಉತ್ಸಳ್ಳಿ ಮಾರಮ್ಮನ ಜಾತ್ರೆಯು ಪ್ರಖ್ಯಾತಗೊಂಡಿದೆ. ಮೈಸೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಉತ್ತನಹಳ್ಳಿಯು ಮೈಸೂರಿನಿಂದ ಸುಮಾರು ೧೩ ಕಿ.ಲೋ. ಅಂತರದಲ್ಲಿದ್ದು, ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆಯುಳ್ಳ ನೆಲೆ ಬೀಡಾಗಿದೆ.

ಪೌರಾಣಿಕ ಹಿನ್ನೆಲೆಗೆ ನಾಡಿನ ಆರಸರ ಕುಲದೇವತೆ, ಜಗನ್ಮಾತೆ ಚಾಮುಂಡೇಶ್ವರಿಯ ಸಹೋದರಿಯಾದ ಜ್ವಾಲ ಮುಖಿ ತ್ರಿಪುರ ಸುಂದರಿ, ಉತ್ನಳ್ಳಿ ಹುರಿಕಾತಿ ಮಹಿಷಾಸುರನ ಸಂಹಾರಕ್ಕೆ ಅವತರಿಸಿ ಉತ್ತನಹಳ್ಳಿ ಗ್ರಾಮದಲ್ಲಿ ಮೂರ್ತಿವೆತ್ತಿ ಗ್ರಾಮದ ಜನತೆಯನ್ನು, ಸರ್ವ ಸದ್ಭಕ್ತರನ್ನು ಪೊರೆಯುತ್ತಿದ್ದಾಳೆ. "ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ" ಯಾದ ತಾಯಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈವರ್ಷವು ಫೆಬ್ರವರಿಯ ೧೬, ೧೭, ೧೮ರಂದು ಬಹಳ ವಿಜೃಂಭಣೆಯಿಂದ ಆಚರಣೆಗೊಳ್ಳುತ್ತಿರುವುದು. ದೈವ ಭಕ್ತಿ ಮತ್ತು ಗ್ರಾಮೀಣ ಭಾಗದ ಜನತೆಯ ನಂಬಿಕೆಯು ಆಗಿದೆ.

ಉಮ್ನಳ್ಳಮ್ಮ ಐತಿಹ್ಯ : ಸ್ಥಳೀಯ ವಕ್ತೃಗಳು ಹಾಗೂ ಐತಿಹ್ಯದ ಪ್ರಕಾರವಾಗಿ "ಮಹಿಷ ಮಂಡಲ" ಎಂಬ ರಾಜ್ಯದಲ್ಲಿ (ಪ್ರಕೃತ ಮೈಸೂರು) 'ಮಹಿಷಾಸುರ' ನೆಂಬ ರಾಕ್ಷಸ ನೆಲೆಸಿದ್ದನು. ಆ ಮಹಿಸುರ ಒಬ್ಬ ದುಷ್ಟ ರಾಕ್ಷಸನಾಗಿದ್ದು, ದಾನವ, ಋಷಿ ಮುನಿಗಳಿಗೆ ಕಂಟಕ ಪ್ರಾಯವಾಗಿ” ಋಷಿಗಳು ಯಜ್ಞಾ ಕಾರ್ಯಗಳಲ್ಲಿ ನಿರತರಾಗಿದ್ದಾಗ ವಿಘ್ನಪಡಿಸುತ್ತಿದ್ದನು. ಈತನನ್ನು ಕಂಡು ಭಯ ಭೀತರಾದ ದೇವಾನುದೇವತೆಗಳು ಚಿಂತಾಜನಕದ ಸ್ಥಿತಿಯಲ್ಲಿದ್ದಾಗ, ಇನ್ನೂ ಸಾಮಾನ್ಯ ಮಾನವರ ಗತಿ ಹೇಳತೀರದು. ಮೂಲ ದ್ರಾವಿಡನಾಗಿದ್ದ ಈತನ ಅಟ್ಟಹಾಸಕ್ಕೆ ಪಾರಮ್ಯವೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆತಂಕಗೊಂಡ ಋಷಿವರರು ಇವನನ್ನು ಸಂಹಾರ ಮಾಡಲು ದೇವತೆಗಳ ಮೊರೆ ಹೊಕ್ಕಿ ದೇವತೆಗಳಲ್ಲಿಯೆ 'ತ್ರಿಮೂರ್ತಿ'ಗಳೆಂದು ಕರೆಯಲ್ಪಡುವ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ತಮ್ಮ ದುಗುಡವನ್ನು ತೋಡಿಕೊಂಡರು. ಆಗ ಆತ್ರಿಮೂರ್ತಿಗಳು ತಮ್ಮ ಸಾಮರ್ಥ್ಯದ ಕೊರತೆಯನ್ನು ಬಿಚ್ಚಿಡುತ್ತಾರೆ. ಆದರೆ ಈ ಮಹಿಷಾಸುರನನ್ನು ಸಂಹಾರ ಮಾಡಲೇಬೇಕೆಂದರೆ ಅದು ಒಂದು ಹೆಣ್ಣಿನಿಂದ ಸಾಧ್ಯವಾಗುತ್ತದೆ ಎಂದು ತಿಳಿದಾಗ ಬ್ರಹ್ಮ, ವಿಷ್ಣು, ಇವರ ಪತ್ನಿಯರು ನಮ್ಮಿಂದ ಈ ಕಾರ್ಯ ಅಸಾಧ್ಯವೆಂದು ಹೇಳಿದಾಗ ಶಿವನ ಅರ್ಧಾಂಗಿಯಾದ ಪಾರ್ವತಿಯು ಭೂಲೋಕದ ಕಲ್ಯಾಣಕ್ಕಾಗಿ ತಾನು ಕಂಕಣಬದ್ದನಾಗಿದ್ದೇನೆ, ಮಹಿಷಾಸುರನನ್ನು ಸಂಹಾರ ಮಾಡುತ್ತೇನೆಂದು ಪಣ ತೊಡಲು, ದೇವಾನು ದೇವತೆಗಳೆಲ್ಲಾ ಪಾರ್ವತಿಯ ಧೈರ್ಯ, ಸಾಹಸವನ್ನು ಮೆಚ್ಚಿ ಭೂಲೋಕಕ್ಕೆ 'ಚಾಮುಂಡಿ' ಎಂಬ ಅಂಕಿತವನ್ನಿಟ್ಟು ತಮ್ಮ ಶಕ್ತಿಯನ್ನು ಧಾರೆ ಎರೆದು ಪ್ರಮುಖವಾದ ಆಯುಧಗಳನ್ನು ನೀಡುತ್ತಾರೆ. ಅವುಗಳೆಂದರೆ ರುದ್ರನು-ತ್ರಿಶೂಲ, ಇಂದ್ರ -ವಜ್ರಾಯುಧ, ವಿಷ್ಣು-ಚಕ್ರ ಬ್ರಹ್ಮ – ಕಮಂಡಲ ಮತ್ತು ಹಿಮಾಲಯದಲ್ಲಿ ವಿಹರಿಸಲು 'ಉಗ್ರ ಸಿಂಹ' ವನ್ನು ನೀಡುತ್ತಾರೆ. ಹೀಗೆ ನೀಡಿದ ಸಾಮೂಹಿಕ ಶಕ್ತಿಯ ಪ್ರತೀಕ ವಾಗಿ ತಾಯಿ ಚಾಮುಂಡಿ ಅವತಾರವೆತ್ತಿದ್ದಳು. ಅಸಾಮಾನ್ಯ ಶಕ್ತಿಯನ್ನು ಪಡೆದು ಮಹಾ ಕಾಳಿ ಯಂತೆ ಚಾಮುಂಡಿ ದುಷ್ಟ ರಾಕ್ಷಸನನ್ನು ಸಂಹಾರ ಮಾಡಲು ಕೋಪಾಗ್ನಿಯನ್ನು ಮೊಗದಲ್ಲಿ ಬೀರುತ್ತಾ ನಿಂತಿರಲು ಅಷ್ಟು ಸುಲಭವಾಗಿ ಮಹಿಷಾಸುರನನು ಸಂಹಾರ ಮಾಡಲು ಸಾಧ್ಯವಿಲ್ಲದಂತಾಗುತ್ತದೆ. ಏಕೆಂದರೆ ಮಹಿಷಾಸುರನ ಒಂದು ಹನಿ ರಕ್ತ ಮಣ್ಣಲ್ಲಿ ಬಿದ್ದರೂ ಸಹ ಆ ಒಂದು ಹನಿಯ ರಕ್ಷದಿಂದ ಸಾವಿರಾರು ರಾಕ್ಷಸರು ಉದ್ಭವಿಸುತ್ತಾರೆ. ಎಂಬ ಚಿಂತೆ ತಾಯಿಯನ್ನು ಕಾಡಿತು. ಕೊನೆಗೂ ಸಂಹರಿಸಲು ನಿಶ್ಚಯಿಸಿ ಮಹಿಷ ಮಂಡಲಕ್ಕೆ ಬರುತ್ತಾಳೆ. ದುಷ್ಟ ರಾಕ್ಷಸನನ್ನು ಸಂಹರಿಸಲು ಮುಂದಾದಾಗ ಪ್ರತಿ ರಕ್ತದ ಕಣ ಕಣದಿಂದಲೂ ರಾಕ್ಷಸರು ಜನ್ಮ ಪಡೆಯುತ್ತಿದ್ದುದನು ಕಂಡು ಭಯ ಭೀತಿ, ಆತಂಕ ಮತ್ತು ಆಯಾಸದಿಂದ ತನ್ನ ಮುಖದಿಂದ ಬರುತ್ತಿದ್ದ ಬೆವರನ್ನು ತೆಗೆದು ಬಿಸಾಡಲು ಈ ಬೆವರಿನಿಂದಲೇ ಮಾತೆ ಉತ್ತನಹಳ್ಳಿ ಹುರುಕಾತಿ ಅಥವಾ ಉತ್ನಹಳ್ಳಿ ಮಾರಮ್ಮ ಅವತರಿಸುತ್ತಾಳೆ. ಆಶ್ಚರ್ಯ ಚಕಿತಗೊಂಡ ತಾಯಿ ಚಾಮುಂಡಿಯು 'ನೀನು ಯಾರು? ಎಂದು ಕೇಳಿ ದಾಗ' ಅದಕ್ಕೆ ಮಾತೆ 'ನಾನು ನಿನ್ನ ಸಹೋದರಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಕ್ಕ ನಿನಗೆ 4 ಒದಗಿ ಬಂದ ಈ ನಿನ್ನ ದುಗುಡವನ್ನು ಪರಿಹರಿ ಸಲು ಉದ್ಭವಿಸಿದ್ದೇನೆ. ಮಹಿಷಾಸುರನನ್ನು ನೀನು ಈಗ ಕೊಲ್ಲು ನಾನು ಈ ರಾಕ್ಷಸನ ರಕ್ತ ನೆಲಕ್ಕೆ ಬೀಳದಂತೆ ನನ್ನ ಕೆನ್ನಾಲಿಗೆಯನ್ನು ಚಾಚುತ್ತೇನೆಂದು ಹೇಳುತ್ತಾಳೆ", ಸಹೋದರಿಯ ಅಣತಿಯಂತೆ ಜಗ ನ್ಮಾತೆ ಮಹಿಷಾಸುರನನ್ನು ಹುರುಕಾತಿಯ ನಾಲಿಗೆ ಮೇಲೆ ಕೊಲ್ಲುತ್ತಾಳೆ. ಜ್ವಾಲಾಮುಖಿ ದೇವಿಯು ಅವನ ರಕ್ತವನ್ನು ಕುಡಿದು ತೇಗುತ್ತಾಳೆ. ಹೀಗೆ ತನಗೆ ಸಹಾಯ ಮಾಡಿದ ಸಹೋದರಿಯನ್ನು ಚಾಮುಂಡಿಯು ಕೊಂಡಾಡುತ್ತಾಳೆ.

ಉತ್ತನಹಳ್ಳಿ ಗ್ರಾಮದ ಜವರಪ್ಪನವರ ಹೇಳಿದ ಪ್ರಕಾರವಾಗಿ ಚಾಮುಂಡಿಗೆ ನೆರವಾದ ಉತ್ನಳ್ಳಮ್ಮನು ಸಂಹಾರ ವಾದ ತದನಂತರ ಚಾಮುಂಡೇಶ್ವರಿಯು ಬೆಟ್ಟದಲ್ಲಿ ನೆಲೆಸಿ 'ಬೆಟ್ಟದ ತಾಯಿ' ಎಂದು ಪ್ರಸಿದ್ಧಿಯಾದರೆ, ಸಹೋದರಿಯಾದ ಉತ್ನಳ್ಳಮ್ಮ ತನ್ನ ಪಕ್ಕದಲ್ಲೆ ನೆಲೆಸು ಎಂದು ಎಷ್ಟೆ ಹೇಳಿದರು ಕೇಳದೆ ಬೆಟ್ಟದಲ್ಲಿಂದ ೫ ಬಳಪದ ಕಲ್ಲುಗಳನ್ನುಎತ್ತಿಕೊಂಡು ಬರುತ್ತಿರಬೇಕಾದರೆ ಚಾಮುಂಡೇ ಶ್ವರಿಯು ನೋಡುತ್ತಾಳೆ. ಎಷ್ಟೇ ತಡೆದರು ನಿಲ್ಲದೆ ಮಾರಮ್ಮನು ಓಡಿ ಬರಬೇಕಾದರೆ ಕಾಲಿಗೆ ಕಲ್ಲು ತಾಗಿ ಬೀಳುತ್ತಾಳೆ. ಇದನ್ನು ಇಂದು 'ಬಿದ್ ಬೆಟ್ಟ' ಎಂದು ಕರೆಯುತ್ತಾರೆ. ಹೇಗೋ ಎದ್ದು ನಡೆದು ಬಂದು ಬೆಟ್ಟ ತಪ್ಪಲಿನಲ್ಲಿರುವ ಗ್ರಾಮದಲ್ಲಿ ಬಂದು ನೆಲೆಸುತ್ತಾಳೆ. ಅಂದಿನಿಂದ ಈ ಉತ್ನಳ್ಳಮ್ಮನ ಹೆಸರಿನೊಂದಿಗೆ ಈ ಗ್ರಾಮ "ಉತ್ತನಹಳ್ಳಿ” ಎಂದು ರೂಢನಾಮವಾಗಿ ಕರೆಸಿಕೊಳ್ಳುತ್ತಿದೆ' ಎಂದು ಅವರು ತಿಳಿಸಿದರು.

ದೇವಾಲಯದ ಆಕರ್ಷಣೆ: ಉತ್ತನಹಳ್ಳಿ ಮಾರಮ್ಮನ ದೇವಾಲಯ ತುಂಬಾ ಪ್ರಸಿದ್ದಿ ಯನ್ನು ಪಡೆದಿದ್ದು, ದೇವಾಲಯವು ಗ್ರಾಮದ ಸಮೀಪದಲ್ಲಿ ಹೊಂದಿಕೊಂಡಂತೆ ಬೆಟ್ಟದ ತಪ್ಪಲಿನಲ್ಲಿ ಬೆಟ್ಟದ ಸ್ವರೂಪದಂತೆಯೇ ಇದೆ. ದೇವಾಲಯದ ಎರಡು ಕಡೆ ಪ್ರವೇಶ ದ್ವಾರ ಗಳಿವೆ. ಒಂದು ಕಡೆಯ ಪ್ರವೇಶ ದ್ವಾರವು ನೂರೊಂದು ಮೆಟ್ಟಿಲುಗಳನ್ನು ಒಳಗೊಂಡಿದೆ. ಮೂರ್ತಿಯ ಮಂಟಪದ ಸುತ್ತಲು ಸುತ್ತಣ ಗೋಡೆಯಿಂದ ಆವೃತಗೊಂಡಿದ್ದು, ಗೋಪುರ ವನ್ನು ಒಳಗೊಂಡಿದೆ. ಒಳಾಂಗಣದಲ್ಲಿರುವ ಪ್ರಸಿದ್ಧವಾದ ಇತರ ದೇವಾಲಯಗಳಿವೆ. ಮಾರಮ್ಮನ ಬಲಗಡೆ ಶಿವನ ಒಂದು ದೇವಾ ಲಯ, ಸಮೀಪದಲ್ಲಿ ಮಾರಮ್ಮನ ದೇವಾಲಯ ವನ್ನು ಹೊಂದಿಕೊಂಡಂತೆ ಭೈರವೇಶ್ವರ, ಸಿದ್ದೇಶ್ವರ ದೇವಾಲಯಗಳಿವೆ. ಇದೇ ದೇವಾಲಯದಲ್ಲಿ ಸಿಂಹಾದ್ರಿ ಸಿಂಹ, ಸೇವಂತಿಗೆ ಸೇವಂತಿಗೆಯಂತಹ ಶ್ರೇಷ್ಠ ಸಿನಿಮಾಗಳಲ್ಲಿ ತನ್ನ ಇರುವಂತಿಕೆಯನ್ನು ಹಾಗೂ ಗ್ರಾಮದ ಜೀವಾಳವನ್ನು ಸೆರೆ ಹಿಡಿದು ಜಗದ ಮನಸ್ಸುಗಳಗೆ ಹತ್ತಿರವಾಗಿಸುವ ಪ್ರಯತ್ನ ಸಾಗಿದೆ.

ಜಾತ್ರೆಗಳು: ಒಂದೊಂದು ದೈವದ ಜಾತ್ರೆಗೂ ಅದರದೇ ಆದ ಸಾಂಸ್ಕೃತಿಕ ವಿಶೇಷತೆಗಳು ಇರುತ್ತದೆ. ರಥೋತ್ಸವ, ಬೆಳ್ಳಿಪಲ್ಲಕ್ಕಿ, ಉತ್ಸವ, ಪೂಜಾವಿಧಿವಿಧಾನಗಳು ಒಂದು ಕಡೆಯಾದರೆ ಶಕ್ತಿದೇವತೆಗಳ ಜಾತ್ರೆಗಳಲ್ಲಿ ಸಿಡಿಯಾಟ, ಬಾಯಿಬೀಗ, ಕೊಂಡ ಆಯುವುದು, ಬಲಿ ನೀಡುವ ಪದ್ಧತಿಗಳು ಕ್ರಿಯಾವಿಧಿಗಳಾಗಿ ಕಂಡುಬರುತ್ತದೆ. ಈ ಜಾತ್ರೆಗಳು ಗ್ರಾಮದೇವತೆಗಳ ಉತ್ಸವಾದಿ ವಾರ್ಷಿಕ ಶುಭಸಮಾರಂಭಗಳಂತೆ ನೆರವೇರುತ್ತವೆ. ಇವು ಈ ನಾಡಿನ ಜನರ ಸಾಂಸ್ಕೃತಿಕ, ಸಾಮಾಜಿಕ, ಬದುಕಿನ ಮುಖ್ಯ ಭಾಗವಾಗಿ ಕಂಡುಬರುತ್ತವೆ. ವರ್ಷಕೊಮ್ಮೆಯಾದರೂ ಹೊಸ ಬಟ್ಟೆ ಧರಿಸಿ, ಮರೆಗೆಟ್ಟ ಮನಸ್ಸಿಗೆ ಪ್ರಫುಲತೆಯ ಜೀವನಂತಿಕೆ ತುಂಬಿ ಹೊಸ ಹುರುಪಿನಿಂದ ತಮ್ಮ ಇಷ್ಟ ದೈವದ ಸೇವೆಯನ್ನು ಮಾಡಿ ಜಡ್ಡುಗಟ್ಟಿದ ನಾಲಿಗೆಗೆ ರುಚಿಕರವಾದ ತಿಂಡಿ ತಿನಿಸು ತಿಂದು ತಮ್ಮ ಬಯಕೆಗಳನ್ನು ಈಡೇರಿಸಲು ಜಾತ್ರೆಗಳು ಸಾವಕಾಶ ಕಲ್ಪಿಸುತ್ತವೆ. ಉತ್ತನಹಳ್ಳಿ ಜಾತ್ರೆಯನ್ನು ಮಾರಿಹಬ್ಬ ಎಂದೂ ಕರೆಯುತ್ತಾರೆ. ಉತ್ನಳ್ಳಮ್ಮನಿಗಿರುವ ಇತರ ಹೆಸರುಗಳೆಂದರೆ ಉತ್ನಳ್ಳಿ ಉರುಕಾತಿ, ಜ್ವಾಲಾಮುಖಿ ತ್ರಿಪುರ ಸುಂದರಿ, ಗ್ರಾಮದ ಖ್ಯಾತಿ ನಿಂತಿರುವದೇ ತಾಯಿ ಉತ್ಕಳ್ಳಮ್ಮದೇವಿಯಿಂದ

ಉತ್ತನಹಳ್ಳಿ ಮಾರಮ್ಮನ ಜಾತ್ರೆಯ ಕ್ರಿಯಾ ವಿಧಿಗಳು: ಜಾತ್ರೆಯ ಸಂದರ್ಭದಲ್ಲಿ ವಿವಿಧ ರೀತಿಯ ಕ್ರಿಯಾ ವಿಧಿಗಳನ್ನು ಗ್ರಾಮದ ಜನತೆಯು ಕೈಗೊಳ್ಳುತ್ತಾರೆ. ಅವುಗಳ ಸ್ಥೂಲ ನೋಟವನ್ನು ನೋಡುವುದಾದರೆ ಪೀಡುಗಡೆಯುವುದು ಜಾತ್ರೆ ವಿಶೇಷವಾಗಿ ನಡೆಯುವ ಈ ಕಾರ್ಯ ಶುಕ್ರವಾರದ ರಾತ್ರಿ ಸರಿ ಸುಮಾರು ೮-೩೦ಕ್ಕೆ ಪ್ರಾರಂಭವಾಗುತ್ತದೆ. ಈ ಕ್ರಿಯೆಗೆ 'ಸೂಚಕ' ಕಳೆಯುವುದು ಎಂದು ಕರೆಯುತ್ತಾರೆ. ಆದಿಕರ್ನಾಟಕದವರಲ್ಲಿ ಒಬ್ಬನು ಗ್ರಾಮದ ಸಮಸ್ತ ಜನತೆಯ ಮನೆಗಳಿಗೆ ಹೋಗಿ ಬರುತ್ತಾನೆ. ಇವನು ಮನೆಯೊಳಕ್ಕೆ ಒಕ್ಕಿದರೆ ಇಲ್ಲಿಯವರೆಗೆ ಇದ್ದ ಸೂಚಕ, ದೋಷಗಳು ನಿವಾರಣೆಯಾಗುತ್ತವೆಂಬ ನಂಬಿಕೆ ಒಂದು ಕಡೆಯಾದರೆ ಬೇರೆ ದಿನಗಳಲ್ಲಿ ಮನೆಯ ಬಾಗಿಲ ಹತ್ತಿರ ಸೇರಿಸದವರು ಜಾತ್ರೆಯ ನೆಪದಿಂದಲಾದರು ಅವಕಾಶ ನೀಡಿ ಅವರ ಜೊತೆ ಬಾಂದವ್ಯ ಬೆಳೆಸುತ್ತಾರೆ. ಹೀಗೆ ಒಳಹೊಕ್ಕು ಹೊರಗಡೆ ಬರುತ್ತಿರುವಾಗ ಅವನ ಕಾಲಿಗೆ ಬೂದಿಯನ್ನು ಎರಚುತ್ತಾರೆ. ಇವನ ವೇಷ ಭೂಷಣಗಳನ್ನು ಕಂಡು ನಾಯಿಗಳು ಬೊಗಳಲು ಪ್ರಾರಂಭಿಸುತ್ತವೆ. ದನ, ಕರು ಕುರಿಗಳು ಬೆದರುತ್ತವೆ, ಹೈಕಳು, ಮಕ್ಕಳು ಹೆದರಿಕೊಳ್ಳುತ್ತವೆ. ಒಂದು ದುಡಿ, ಹಳೆಯ ಒಂದು ಅಂಗಿ, ಚಡ್ಡಿ, ಗೊಪ್ಪೆಯಾಗಿ ಒಂದು ಗೋಣಿಚೀಲ ಹಾಕಿಕೊಂಡು ಯಾ….. ಯು….. ಚು….ಬ್ಯಾ ಎಂದು ಪ್ರತಿ ಮನೆಗೂ ತಪ್ಪದೆ ನುಗ್ಗುತ್ತಾನೆ. ಈತನು ಹೊಕ್ಕು ಹೋದ ಅನಂತರ ಯಾವುದೇ ಮನೆಯಲ್ಲು ಮೆಣಸಿನ ಕಾಯಿ ಸುಡುವ, ಉಪ್ಪಿಟ್ಟು ಮಾಡುವ, ವಗ್ಗರಣೆ ಹಾಕುವ, ಈ ರೀತಿಯ ಕರ್ಕಲನ್ನು ಹಾಕುವ ಹಾಗಿಲ್ಲ. ನಾನು ಏಕೆ ಹೀಗೆ ಎಂದು ಕೇಳಿದಾಗ, 'ಇದುಸಂಪ್ರದಾಯ ಹಿರೀಕ್ರು ಹೀಗೆ ಮಾಡಿಕೊಂಡು ಬಂದ್ರು ಅದನ್ನೇ ನಾವು ಮಾಡುತ್ತಿದ್ದೇವೆ ನಮ್ಮೊಂದು ತಿಳಿಯದು' ಎಂದು ಹೇಳಿದರು.

ಹೊಸ ನೀರು (ಮೀಸಲು ನೀರು ತರುವುದು): ಈ ಕ್ರಿಯಾ ವಿಧಿಯು ಶನಿವಾರ ನಡೆಯುತ್ತದೆ. ಜಾತ್ರೆಯ ವಿಶೇಷದಂತೆ ಇದು ನೆರವೇರುತ್ತದೆ. ಮನೆಗಳಲ್ಲಿ ಧುಂಬು, ಧೂಳು ಗುಡಿಸಿ, ಸುಣ್ಣ-ಬಣ್ಣವನ್ನು ತುಂಬಿ ಕಿತ್ತಿರುವ ಗೋಡೆಗಳಿಗೆ 'ವರಮಣ್ಣು' ಕೊಟ್ಟು ತಾರಿಸಿ, ಗುಡಿಸಿ ಮಡಿವಂತಿಕೆಯಿಂದ ಎಲ್ಲರು ಸ್ನಾನ ಮಾಡಿ ಹೊಸ ನೀರನ್ನು (ಮೀಸಲು ನೀರು) ತರಲು ಸಿದ್ಧತೆ ಮಾಡುತ್ತಾರೆ. ಈ ಮಡಿಯ ನೀರನ್ನು ತಂದು ದೇವಿಯ ನೈವೇದ್ಯಕ್ಕೆಂದು ತಂಬಿಟ್ಟನ್ನು ಮಾಡುತ್ತಾರೆ. ಅಕ್ಕಿಯನ್ನು ನೆನೆಯಿಸಿ. ನೆನೆಯಿಸಿದ ಅಕ್ಕಿಯನ್ನು ಒಳ್ಳೆನಲ್ಲಿ ಹಾಕಿ ಸ್ನಾನ ಮಾಡಿ ಒಪ್ಪತ್ತು ಇರುವವರು ಒನಕೆಯಿಂದ ಬಡಿದು ಹಸೀಟು ಮಾಡಿಕೊಂಡ ನಂತರ ಒಲೆಯನ್ನು ಹಚ್ಚಿ ಪಾತ್ರೆಯನ್ನು ಇಟ್ಟು ಇಂತಿಷ್ಟು ನೀರು ಬೆಲ್ಲವನ್ನು ಹಾಕಿ ಪಾಕ ತೆಗೆಯುತ್ತಾರೆ. ಪಾಕ ಬಂದ ಮೇಲೆ ಅಕ್ಕಿಯ ಹಸೀಟನ್ನು ಅದರಲ್ಲಿ ಸುರಿದು ಹಿಟ್ಟಿನ ದೊಣ್ಣೆಯಿಂದ ತಿರುಗಿಸುತ್ತಾರೆ. ಗಟ್ಟಿಯಾದ ಆನಂತರ ತಮಗೆ ಬೇಕಾದ ಆಕಾರದಲ್ಲಿ ತಂಬಿಟ್ಟನ್ನು ಮಾಡುತ್ತಾರೆ.

ಕಣ್ಣ ಕನ್ನಡಿ: ಕಣ್ಣ ಕನ್ನಡಿಯ ಆಚರಣೆಯು ಭಕ್ತರಿಗೆ ದೇವಿಯನ್ನು ಸಾಂಕೇತಿಕ ರೂಪದಲ್ಲಿ ಪ್ರದರ್ಶಿಸುವುದಾಗಿದೆ. ಈ ಕಣ್ಣ ಕನ್ನಡಿಯ ಕ್ರಿಯಾವಿಧಿಯು ಭಾನುವಾರ ನೆರವೇರುತ್ತದೆ. ದೇವಾಲಯದಲ್ಲಿ ಉತ್ಸವ ಮೂರ್ತಿ ಇಲ್ಲದಿರುವುದರಿಂದ ಕಣ್ಣಕನ್ನಡಿಯನ್ನು ದೇವಾಲಯದ ಲಿಂಗಾಯಿತಿ ಆರ್ಚಕರು ತಮ್ಮ ಮನೆಯಲ್ಲಿಯ ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸುತ್ತಾರೆ. ಪೂಜೆಯಾದ ಮೇಲೆ ಗ್ರಾಮದ ಲಿಂಗಾಯಿತರ ಋತುಮತಿಯಾಗದ; ಅವಿವಾಹಿತ ಕನೈಯರು ಈ ಕಣ್ಣ ಕನ್ನಡಿಯನ್ನು ಕಬ್ಬಿಣದಿಂದ ಮಾಡಿದ ತೇರಿನ ಒಳಗಡೆ ಕೊಂಡೊಯ್ಯುತ್ತಾರೆ. ದೇವಾಲಯಕ್ಕೆ ಸಂಬಂಧಿಸಿದ ಆಗಸರು ಹಾಸಿಗೆ ನಾಡ ಮಡಿ ಹಾಸುತ್ತಾರೆ. ಇದರ ಮೇಲೆ ಕಾಲಿಟ್ಟು ಊರಿನ ಬಸವ ಅರ್ಚಕರು, ಕಣ್ಣ ಕನ್ನಡಿಯನ್ನು ಹೊತ್ತ ಕನೈಯರು ಸಾಗುತ್ತಾರೆ. ಪೂಜೆ ಮಾಡಿಸುವವರು ಎರಡು ಗ್ರಾಮದವರು ಮಾಡಿಸಬಹುದು. ಛತ್ರಿ ಚಾಮರಗಳನ್ನಿಡಿದು, ಕೊಂಬು ಕಹಳೆ ಊದುತ್ತಾ ಉತ್ತನಹಳ್ಳಿ, ಏಳಿಗೆಹುಂಡಿ ಎರಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ದೇವಿಯು ವಿದ್ಯುತ್, ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿರುತ್ತಾಳೆ. ಓಲಗದವರು ಓಲಗ ಬಾರಿಸುತ್ತಾ ಪೂಜಾ ಕುಣಿತ ಮತ್ತು ಜನಪದ ಹಾಡುಗಳನ್ನು ದೇವಿಯ ಕುರಿತಾಗಿ ಹಾಡುತ್ತಾರೆ. ಮದ್ದನ್ನು ಸುಡಲು ಪ್ರತ್ಯೇಕವಾದ ಒಂದು ಜನಾಂಗವೇ ಇದ್ದು 'ಇಂತಿಷ್ಟು ವರಿ' ಎಂದು ಸಂಗ್ರಹಿಸಿ ಕಣ್ಣ ಕನ್ನಡಿಯ ಮುಂದೆ ಮದ್ದನ್ನು ಸಿಡಿಸುತ್ತಾರೆ. ಹೀಗೆ ಕಣ್ಣ ಕನ್ನಡಿಯು ಸರಿ ಸುಮಾರು ರಾತ್ರಿ ೯ ಗಂಟೆಗೆ ಪ್ರಾರಂಭವಾಗಿ ಬೆಳಗಿನ ಪಾವ ೪ ಗಂಟೆಗೆ ಮುಕ್ತಾಯವಾಗುತ್ತದೆ. ಕಣ್ಣ ಕನ್ನಡಿಯ ದೇವತೆಯನ್ನು ಮೆರವಣಿಗೆ ಮಾಡಿ ದೇವಾಲಯಕ್ಕೆ ಒಯ್ದ ಕೂಡಲೇ ಈ ವಿಧಿಗೆ ತೆರೆ ಬೀಳುತ್ತವೆ.

ಬಾಯಿ ಬೀಗ : ಕಣ್ಣ ಕನ್ನಡಿ ಆಚರಣೆಯ ಮರುದಿನವಾದ ಸೋಮವಾರ ಬೆಳಿಗ್ಗೆ ಅಮ್ಮನ ದೇವಾಲಯದ ಪ್ರಾಕಾರದಲ್ಲಿ ಬಾಯಿ ಬೀಗದ ಆಚರಣೆ ನಡೆಯುತ್ತದೆ. ಬಾಯಿ ಬೀಗ ಹಬ್ಬವೆಂದರೆ ಬಾಯಿಗೆ ಬೀಗ ಹಾಕುವುದು ಹಾಗೂ ತೆಗೆಯುವುದು, ಭಯ ಉಳ್ಳವರಿಗೆ, ಮಕ್ಕಳಿಗೆ ಹಸುಗೂಸುಗಳಿಗೆ ಬಟ್ಟೆಗಳಿಗೆ ಬೀಗ ಹಾಕಿಸುತ್ತಾರೆ. ಇದನ್ನು ನೆರವೇರಿಸುವ ಭಕ್ತರು ಬೆಳಗಿನಿಂದ ಉಪವಾಸವಿದ್ದು ಹರಕೆ ಮುಗಿದ ಮೇಲೆಯೇ ನೈವೇದ್ಯವಾಗಿ ಮಡ ಅನ್ನವನ್ನು ಸ್ವೀಕರಿಸುತ್ತಾರೆ. ತಮಗೆ ಒದಗುವ ಹಲವಾರು ಕಷ್ಟಗಳಿಗೆ ದೇವತೆಯ ಮೊರೆ ಹೋಗಿ, ಹರಕೆಗಳನ್ನು ಹೊರುತ್ತಾರೆ. ಹೊತ್ತ ಹರಕೆಗಳನ್ನು ಜಾತ್ರೆಯ ಸಂದರ್ಭದಲ್ಲಿ ಪೂರೈಸುತ್ತಾರೆ. ನೆರೆಹೊರೆಯ ಗ್ರಾಮಗಳ ಭಕ್ತರು ಕೂಡ ಈ ಕ್ರಿಯಾ ವಿಧಿಯನ್ನು ನೆರವೇರಿಸುತ್ತಾರೆ.
ಬಾಯಿಗೆ ಬೀಗ ಹಾಕಿಸಿಕೊಳ್ಳುವ ಭಕ್ತರು ಬಹಳ ನಿಷ್ಠೆಯ ಭಕ್ತಿಯಿಂದಿದ್ದು ಸುಮಾರು ೧೧ ಗಂಟೆಗೆ ರಾಮಂದಿರದ ಹತ್ತಿರ ೧೦ ರೂ. ೨೦ರೂ. ೫೦ರೂ,ಗಳನ್ನು ಗ್ರಾಮದ ಮುಖಂಡನಿಗೆ ನೀಡಿ ಬೀಗಗಳನ್ನು ತೆಗೆದುಕೊಳ್ಳಬೇಕು. ಅನಂತರ ೧೧-೩೦ಕ್ಕೆ ದೇವಿಗೆ ಪೂಜೆ ಸಲ್ಲಿಸಲು ತಂಬಿಟ್ಟು, ಬಾಳೆಹಣ್ಣು, ಕಾಯಿ ಹೀಗೆ ಪೂಜಾ ಸಾಮಾನುಗಳನ್ನು ಹೊತ್ತು ಸಾಗುವಾಗ ಅವರ ಜೊತೆಯಲ್ಲಿಯೇ ಪಾವತಿ ಮಾಡಿ ತೆಗೆದುಕೊಂಡ ಬಾಯಿ ಬೀಗಗಳನ್ನು ಗುಡ್ಡಪ್ಪನವರಿಂದ ಹಾಕಿಸಿಕೊಳ್ಳುತ್ತಾರೆ. ಈ ಬೀಗವು ಬೆಳ್ಳಿಯ ತಂತಿಯಿಂದಚಚೌಕವಾಗಿದ್ದು ಇದರ ಒಂದು ತುದಿಯು ತೆಳ್ಳಗೆ ಚೂಪಾಗಿರುತ್ತದೆ. ಇನ್ನೊಂದು ತುದಿಯಿಂದ ಭಕ್ತರ ಗಲ್ಲಕ್ಕೆ ಚುಚ್ಚಿ, ಕೊಂಡಿಯಿದ್ದ ತುದಿಗೆ ಸೇರಿಸಿ ಬೀಗ ಹಾಕುತ್ತಾರೆ. ದೇವತೆಯ ಪೂಜೆ ಮುಗಿದ ನಂತರ ಪೂಜಾರಿಯು ಬೀಗವನ್ನು ಕಳೆದು ತನ್ನಲ್ಲಿಯೆ ಇರಿಸಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಒಳಾಂಗಣದಲ್ಲಿ ಸಾಲಾಗಿ ಪೂಜೆ ಸಲ್ಲಿಸುವವರ ಸಾಲು ಇದ್ದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಏಕಕಾಲವೆಂಬಂತೆ ದೇವಸ್ಥಾನದ ಹೊರಗಡೆ ವಿಶಾಲ ಪ್ರದೇಶದಲ್ಲಿ ನೆರವೇರಿಸುವ ಕ್ರಿಯಾ ವಿಧಿಯೇ ಮಡೆ ಹುಯ್ಯುವುದು.
ಮಡೆ ಹುಯ್ಯುವುದು: ಮಡೆ ಹುಯ್ಯುವ ಕ್ರಿಯಾ ವಿಧಿಯು ದೇವಿಯ ಮತ್ತೊಂದು ಜಾತ್ರಾ ವಿಶೇಷವಾಗಿದೆ. ಈ ಕ್ರಿಯಾ ವಿಧಿಯನ್ನು ಗ್ರಾಮದವರು ಮಾತ್ರವಲ್ಲದೆ ನೆರೆಯ ಹಳ್ಳಿಗಳಾದ ಹೊಸುಂಡಿ, ಗುಡುಮಾದನಹಳ್ಳಿ, ಹಡಜನ, ಮಾಕನುಂಡಿ, ಚಾಮುಂಡಿ ಬೆಟ್ಟದ ಬ್ರಾಹ್ಮಣೇತರ ಭಕ್ತರು ನೆರವೇರಿಸುತ್ತಾರೆ. ಬ್ರಾಹ್ಮಣೇತರರಲ್ಲಿಯೂ ಸಾಮಾನ್ಯವಾಗಿ ಶಿವಾರ್ಚಕರು ಹಾಗೂ ಲಿಂಗಾಯಿತರು ಈ ಕ್ರಿಯಾ ವಿಧಿಯನ್ನು ಆಚರಿಸುವುದಿಲ್ಲ. ಇದು ಮಧ್ಯಾಹ್ನ ೨-೩೦ಕ್ಕೆ ಸರಿಯಾಗಿ ದೇವಾಲಯದ ಹೊರ ಭಾಗದ ಪ್ರಶಸ್ತವಾದ ದಿಣ್ಣೆಯ ಮೇಲೆ ಒಲೆಗಳನ್ನು ಸಾಲು ಸಾಲಾಗಿ ಮೂರು ಕಲ್ಲುಗಳನ್ನು ಇಟ್ಟು ನಿರ್ಮಿಸುತ್ತಾರೆ. ಇದಕ್ಕೆ ಮೊದಲು ಬೆಳಿಗ್ಗೆಯೆ ಇದು ‘ನಮ್ಮದು ಒಲೆ’ ಎಂದು ಬೂದಿಯನ್ನು ಕೆರೆದು ಗುರುತು ಮಾಡಿ ಹೋಗಿರುತ್ತಾರೆ. ಮಡೆಯ ಪೂರ್ವ ತಯಾರಿಯಾಗಿ ಒಂದು ಪಿಂಡಿ ಸೌದೆ ಕಟ್ಟಿಕೊಂಡು ಒಂದು ಪಾತ್ರೆಯಲ್ಲಿ ನೀರು, ಅಕ್ಕಿಯನ್ನು ಹಾಕಿ ಸಿದ್ದಗೊಳಿಸಿಕೊಂಡು ಎಲ್ಲರು ಸಾಲಾಗಿ ತಲೆಯ ಮೇಲೆ ಪಾತ್ರೆಯನ್ನು ಹೊತ್ತು ತಂದು ಮೊದಲೇ ನಿರ್ಮಿಸಿದ ಒಲೆಯ ಮೇಲಿಟ್ಟು ಬೆಂಕಿ ಮಾಡಿ ನೈವೇದ್ಯ ತಯಾರಿಸುತ್ತಾರೆ. ತಯಾರಿ ಆದ ನೈವೇದ್ಯಕ್ಕೆ ತೀರ್ಥವನ್ನು ದೇವಸ್ಥಾನದ ಅರ್ಚಕರು ಪ್ರೋಕ್ಷಿಸುತ್ತಾರೆ. ಈ ಕ್ರಿಯಾವಿಧಿಗೆ ಮಡೆ ಹುಯ್ಯುವುದು ಅಥವಾ ವಿಧಿವಹಿತ ಅಡಿಗೆ ಮಾಡುವುದು ಎಂಬ ಹೆಸರು. ಮಡೆ ಸಿದ್ಧವಾದ ಬಳಿಕೆ ಮಹಿಳೆಯರು ಮತ್ತು ಪುರುಷರು ನೈವೇದ್ಯದೊಡಗೂಡಿದ ಪಾತ್ರೆಯನ್ನು ತಲೆಯ ಮೇಲೆ ಹೊತ್ತುಕೊಂಡು ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಮನೆಗೆ ತರುತ್ತಿದ್ದಂತೆ ಬಾಗಿಲ ಹೊರಗೆ ನಿಲ್ಲಿಸಿ ಪಾದವನ್ನು ತೊಳೆದು ಮಡೆಯನ್ನು ಒಳಕ್ಕೆ ತರುತ್ತಾರೆ. ಮತ್ತೆ ನೈವೇದ್ಯಕ್ಕೆ ಗಂಧದಕಡ್ಡಿ ಹಚ್ಚಿ ಪೂಜೆ ಸಲ್ಲಿಸಿ ಬಂದ ನಂಟರಿಷ್ಟರು, ಮನೆ ಮಂದಿಗಳೆಲ್ಲರು ಪ್ರಸಾದವೆಂದು ಸ್ವೀಕರಿಸುತ್ತಾರೆ. ಈ ನೈವೇದ್ಯ ಅನ್ನಕ್ಕಾಗಿ ಮನೆಯಲ್ಲಿ ಸಾಂಬಾರು ಮಾಡಿ ಜೊತೆಗೆ ಹಪ್ಪಳ, ಸೆಂಡಿಗೆ, ಚಕ್ಕುಲಿಯನ್ನು ಉಣಬಡಿಸುತ್ತಾರೆ. ಇಲ್ಲಿಗೆ ಈ ಕ್ರಿಯಾವಿಧಿಯು ಕೊನೆಗೊಳ್ಳುತ್ತದೆ. ಸಂಜೆ ಜಾತ್ರೆಯ ವಿಶೇಷವಾಗಿ ಮನರಂಜನ ಕಾರ್ಯವನ್ನು ಗ್ರಾಮದ ಸಂಘಗಳಾದ, ಕನಕದಾಸ ಯುವಕರ ಬಳಗ, ಸಂಗೊಳ್ಳಿರಾಯಣ್ಣ ಬಳಗ, ವಿಷ್ಣು ಸೇನಾ ಯುವಕರ ಬಳಗ ‘ರಸ ಮಂಜರಿ’ ಕಾರ್ಯಕ್ರಮವನ್ನು ಇಡಿಸುತ್ತಾರೆ. ಮತ್ತೊಂದು ಕಡೆ ನಾಟಕವನ್ನು ಅಂದರೆ ಸಾಮಾಜಿಕವಾಗಿರಬಹುದು ಅಥವಾ ಪೌರಾಣಿಕವಾಗಿರಬಹುದು ವೇದಿಕೆ ಸಿದ್ದಗೊಳಿಸಿ ಗ್ರಾಮದವರು ತಮಗೆ ಬೇಕಾದ ಪಾರ್ಟು/ಪಾತ್ರಗಳನ್ನು ಆರಿಸಿಕೊಂಡು ನಟಿಸಿ ಜಾತ್ರೆಗೆ ಆಗಮಿಸಿದ ಜನರ ಮನ ತಣಿಸುತ್ತಾರೆ.


ಜಾತ್ರೆಯ ವಿಶೇಷವಾಗಿ ಹಲವಾರು ರೀತಿಯ ಅಂಗಡಿ ಮುಂಗಟ್ಟುಗಳು ಜಾತ್ರೆಯ ೩, ೪ ದಿನಗಳ ಹಿಂದೆಯೇ ದೇವಾಲಯದ ಎರಡು ಕಡೆಯ ವಿಶಾಲ ಪ್ರದೇಶದಲ್ಲಿ ಟೆಂಟುಗಳನ್ನು ಹಾಕಿಕೊಂಡು ವ್ಯಾಪಾರದಲ್ಲಿ ತೊಡಗುತ್ತಾರೆ. ಇಲ್ಲಿಗೆ ಜಾತ್ರೆಯ ಆಚರಣೆಗಳೆಲ್ಲ ಮುಗಿದು ಜಾತ್ರೆಯ ಒಂದು ವಾರಕ್ಕೆ ಸರಿಯಾಗಿ ಮತ್ತೆ ದೇವಸ್ಥಾನದ ಮುಂದೆ ಮಡೆ ಹುಯ್ಯುತ್ತಾರೆ. ಪೂಜೆ ಸಲ್ಲಿಸುತ್ತಾರೆ. ಇಷ್ಟು ಜಾತ್ರೆಯ ವಿಚಾರಗಳಾಗಿವೆ.

ಪರಮೇಶ ಕೆ.ಉತ್ತನಹಳ್ಳಿ
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಹಿಂದೂಸ್ತಾನ್ ಪ್ರಥಮ ದರ್ಜೆ ಕಾಲೇಜು
ಹಾಗೂ ಹವ್ಯಾಸಿ ಬರಹಗಾರ, ಮೈಸೂರು.

Leave a Reply

Your email address will not be published. Required fields are marked *