ವಚನಗಳ ಮೂಲಕ ಜನರನ್ನು ಅರಿವಿನೆಡೆಗೆ ಕೊಂಡೊಯ್ದ ವಿಶ್ವಗುರು ಬಸವಣ್ಣನವರು : ಸುನಿಲ್ ಬೋಸ್

ಚಾಮರಾಜನಗರ: ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ ಕಾಯಕದ ಮಹತ್ವವನ್ನು ಪ್ರಸ್ತುತಪಡಿಸಿದ ಬಸವಣ್ಣನವರು ಜನರನ್ನು ಅರಿವಿನೆಡೆಗೆ ಕೊಂಡೊಯ್ದ ವಿಶ್ವಗುರುವಾಗಿದ್ದಾರೆ ಎಂದು ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ತಿಳಿಸಿದರು.

ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕøತಿಕ ನಾಯಕ, ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಢನಂಬಿಕೆ, ಜಾತೀಯ ಅಸಮಾನತೆ, ಧರ್ಮಾಚರಣೆ ಬಹಳ ಕಠಿಣವಾಗಿದ್ದ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲಾ ಶಿವಶರಣರಾದಿಯಾಗಿ ಕಾಯಕ ತತ್ವದ ಮೂಲಕ ಜನರನ್ನು ಬಡಿದೆಚ್ಚರಿಸಿದರು. 1500 ಸಾವಿರ ವಚನಗಳನ್ನು ಸರಳ ಭಾಷೆಯಲ್ಲಿ ರಚಿಸಿದ ಬಸವಣ್ಣನವರು ದಯೆ ಇಲ್ಲದ ಧರ್ಮ ಯಾವುದಯ್ಯ, ಇವನಾರವ, ಇವನಾರವ ಎನ್ನದಿರಿ ಎಲ್ಲರನ್ನು ನಮ್ಮವರೆನ್ನಿ ಎಂದು ಪ್ರತಿಪಾದಿಸಿದರು ಎಂದರು.

ಬಸವಣ್ಣನವರು ಸಾಮಾಜಿಕ ಅಸಮಾನತೆಯನ್ನು ಬೇರುಸಮೇತ ಕೀಳಲು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿದರು. ಬಸವಣ್ಣನವರು ಹೇಳಿದಂತೆ ದೇವರು ಎಲ್ಲರಲ್ಲಿಯೂ ಇದ್ದಾನೆ. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಸಂದೇಶ, ಅದರ್ಶ ಮೌಲ್ಯಗಳನ್ನು ಪಾಲಿಸಬೇಕು. ಅವರ ಹಾದಿಯಲ್ಲಿ ನಡೆಯಬೇಕು. ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಎಂದು ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣವನರನ್ನು ಒಳಗೊಂಡಂತೆ ಎಲ್ಲ ಶಿವಶರಣರು ವಚನಾಮೃತಗಳನ್ನು ಜನರಿಗೆ ಉಣಬಡಿಸಿದ್ದಾರೆ. ಎಲ್ಲರು ಎನಗಿಂತ ದೊಡ್ಡವರೆಂದು ಭಾವಿಸಿದ್ದ ಬಸವಣ್ಣನವರಿಗೆ ಯಾವುತ್ತೂ ಅಹಂ ಎಂಬುದು ಇರಲಿಲ್ಲ. ಸಮಾಜ ಸುಧಾರಣೆಗಾಗಿ ಜಾತೀಯತೆಯನ್ನು ಹೋಗಲಾಡಿಸಿ ಬಸವಣ್ಣನವರ ಅದರ್ಶ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅನುಸರಿಸೋಣ ಎಂದರು.

ಮುಖ್ಯಭಾಷಣ ಮಾಡಿದ ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಡಿ.ಎಸ್. ಸದಾಶಿವಮೂರ್ತಿ ಅವರು 12ನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಕಾರಕ ಬದಲಾವಣೆಯ ಹೆಜ್ಜೆಗಳು ಇಂದು ಸಹ ಪ್ರಸ್ತುತವಾಗಿವೆ. ಸರ್ಕಾರವು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಶಿವಶರಣರ ವಚನಗಳನ್ನು ಸಂಗ್ರಹಿಸಿ ಅವುಗಳ ಮಹತ್ವವನ್ನು ಜನರಿಗೆ ತಿಳಿಸಲು 15 ಸಂಪುಟಗಳನ್ನಾಗಿ ಹೊರತಂದಿದೆ. ಈ ಪೈಕಿ ಬಸವಣ್ಣನವರು ರಚಿಸಿದ 1500 ವಚನಗಳು ಇವೆ. ಈ ವಚನಗಳನ್ನು ಎಲ್ಲರೂ ಅಧ್ಯಯನ ಮಾಡುವ ಮೂಲಕ ವಚನಗಳ ತಿರುಳನ್ನು ಅರಿಯಬೇಕು ಎಂದರು.

ಇಂದು ಬಸವಣ್ಣನವರ 892ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಬಸವಣ್ಣನವರ ಸಾಮಾಜಿಕ ಬದಲಾವಣೆಯ ಸಂದೇಶಗಳು ಈ ಜಗತ್ತು ಇರುವವರೆಗೂ ಪ್ರಸ್ತುತವಾಗಿರಲಿವೆ. ಸಾಮಾಜಿಕ, ಸಾಹಿತ್ಯ, ಧಾರ್ಮಿಕ, ರಾಜಕೀಯ ಬದಲಾವಣೆಗೆ ಬಸವಣ್ಣನವರು ಕಾರಣರಾದರು. ಕಾಯಕ, ದಾಸೋಹ, ಅಸಮಾನತೆ, ಸ್ತ್ರೀ ಸಮಾನತೆ ಸೇರಿದಂತೆ ಹಕಲವು ಕ್ಷೇತ್ರಗಳ ಪರಿವರ್ತನೆಗೆ ನಾಂದಿ ಹಾಡಿದ ಬಸವಣ್ಣನವರನ್ನು ಸಮಗ್ರ ಯುಗಪುರುಷರೆಂದರೇ ತಪ್ಪಾಗಲಾರದು. ಜಾಗತಿಕ ಸಂಸ್ಕøತಿಗೆ ಘನತೆ ತಂದುಕೊಟ್ಟ ಬಸವಣ್ಣನವರನ್ನು ಸ್ಮರಿಸುವುದು ಇಂದಿನ ಅಗತ್ಯವಾಗಿದೆ ಎಂದು ಪ್ರೊ. ಡಿ.ಎಸ್. ಸದಾಶಿವಮೂರ್ತಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ ವಾಚನ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಸಂವಿಧಾನ ಪ್ರಸ್ತಾವನೆ ಬೋಧಿಸಿದರು.

ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ (ಮುನ್ನಾ), ನಗರಸಭೆ ಸದಸ್ಯರಾದ ಎಂ. ಕಲಾವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. . 

ಆರಂಭದಲ್ಲಿ ನಗರದ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಗಾಯನ ಪ್ರಸ್ತುತ ಪಡಿಸಲಾಯಿತು.

Leave a Reply

Your email address will not be published. Required fields are marked *