ಬಸವಮಾರ್ಗದಲ್ಲಿ‌ ವಿವೇಕಾನಂದ ಜಯಂತಿ ಆಚರಣೆ

*ಕುಡಿತದಿಂದ ಹೊರಬಂದು ಉತ್ತಮ ಸಮಾಜ ನಿರ್ಮಿಸಿ

*ಮೈಸೂರು ವಿಶ್ವವಿದ್ಯಾನಿಲಯದ ಐ.ಕ್ಯು.ಎ.ಸಿ. ಸಂಯೋಜಕರಾದ ಡಾ. ಜೆ. ಲೋಹಿತ್

ಮೈಸೂರು : ಜೀವನದಲ್ಲಿ ತಪ್ಪುಗಳು ಕಷ್ಟ ಪಡದಿದ್ದರೂ ಅಗುತ್ತದೆ. ಒಳ್ಳೆಯ ಕೆಲಸಕ್ಕೆ ಪರಿಶ್ರಮ ಪಡಲೇಬೇಕು. ವ್ಯಸನಿಗಳು ಕುಡಿತದಿಂದ ಹೊರಬಂದು ಉತ್ತಮ ಸಮಾಜ ನಿರ್ಮಿಸಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಐ.ಕ್ಯು.ಎ.ಸಿ. ಸಂಯೋಜಕರಾದ ಡಾ. ಜೆ. ಲೋಹಿತ್ ಸಲಹೆ ನೀಡಿದರು.

ಬಸವಮಾರ್ಗ ವ್ಯಸನಮುಕ್ತ ಹಾಗೂ ಪುನರ್ವಸತಿ ಕೇಂದ್ರದ ವತಿಯಿಂದ ಆಯೋಜಿಸಿರುವ 10 ದಿನಗಳ ಉಚಿತ ಕುಡಿತ ಬಿಡಿಸುವ ‌ಶಿಬಿರದ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಲಭವಾಗಿ ಯಾವುದೇ ಕೆಲಸ ಆಗುವುದಿಲ್ಲ. ಯಶಸ್ಸಿಗೆ ಶ್ರಮವಹಿಸಬೇಕು. ಜೀವನ ಕೆಡಿಸಿಕೊಳ್ಳುವುದು ಸುಲಭ, ಆದರೆ ಮತ್ತೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ ಸಿಕ್ಕಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ‌ ನೀಡಿದರು.

ಮನುಷ್ಯ ಇನ್ನೊಬ್ಬರ ಬಗ್ಗೆ ಬದುಕಿದಾಗ ತಪ್ಪುಗಳನ್ನು ಕಡಿಮೆ ಮಾಡುತ್ತಾನೆ. ತಾನು ಎನ್ನುವವನು ಮಾತ್ರ ಹೆಚ್ಚಾಗಿ ತಪ್ಪುಗಳನ್ನು ಮಾಡುತ್ತಾನೆ. ಮನುಷ್ಯ ಜನ್ಮ ದೊಡ್ಡದು. ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪದಿರ ಎಂದು ದೊಡ್ಡವರು ಹೇಳಿದ್ದಾರೆ. ದೊರಕಿರುವ ಈ ಮಾನವ ಜನ್ಮವನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬೇಕು. ಆ ಮೂಲಕ ಆರೋಗ್ಯ ‌ಪೂರ್ಣ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದು ಮಾರ್ಗದರ್ಶನ ಮಾಡಿದರು.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಚಟ ಇರುತ್ತದೆ. ಆದರೆ ಚಟ ನಮ್ಮ ಮತ್ತು ನಮ್ಮ ಕುಟುಂಬ ನೆಮ್ಮದಿಯ ವ್ಯವಸ್ಥೆಯನ್ನೇ ಹಾಳು ಮಾಡಬಾರದು. ಶಕ್ತಿಯೇ ಜೀವನ, ದೌರ್ಬಲ್ಯವ್ಯೇ ಮರಣ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನಿಮ್ಮನ್ನು ಸದೃಢರನ್ನಾಗಿಸುವ ವಿಷಯ ನರಕದಲ್ಲಿ ಇದ್ದರೂ ಹೋಗಿ ತೆಗೆದುಕೊಂಡು ಬನ್ನಿ. ಆದರೆ ನಿಮ್ಮನ್ನು ದುರ್ಬಲರನ್ನಾಗಿ ಮಾಡುವ ವಿಷಯ ಸ್ವರ್ಗದಲ್ಲಿ ಇದ್ದರೂ ಅದನ್ನೂ ಕಾಲಿನ ಕಿರು ಬೆರಳಿನಲ್ಲೂ ಮುಟ್ಟಬೇಡಿ ಎಂದು ಸಲಹೆ‌ ನೀಡಿದರು.

ಪ್ರತಿ ಹಂತದಲ್ಲೂ ಸವಾಲು, ಸೋಲು ಇದ್ದೆ ಇರುತ್ತದೆ. ಸಾಗರದಲ್ಲಿ ಒಂದು ಮೀನು ಸತ್ತರೆ ಸಮುದ್ರಕ್ಕೆ ನಷ್ಟವಿಲ್ಲ. ಹಾಗೇ ನಾವು ಸತ್ತರೆ ಜಗತ್ತಿಗೆ ಯಾವುದೇ ನಷ್ಟ ಇಲ್ಲ. ಆದರೆ ನಷ್ಟವಾಗುವುದು ನಮ್ಮನ್ನೇ ನೆಚ್ಚಿಕೊಂಡಿರುವ ಕುಟುಂಬಕ್ಕೆ ಮಾತ್ರ. ಇದರಿಂದ ವಿಚಲಿತವಾಗುವುದು ನಮ್ಮ ಕುಟುಂಬ. ಈ ಬಗ್ಗೆ ನಿಮಗೆ ಎಚ್ಚರಿಕೆ ಇರಲಿ. ಕ್ಷುಲ್ಲಕ ವಿಷಯಗಳಿಗೆ ಮನಸ್ಸುಗಳನ್ನು ಕೆಡಸಿಕೊಂಡು ಬದುಕನ್ನು ವ್ಯರ್ಥ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ತಿಳಿಸಿದರು.

ಮದ್ಯಪಾನ ಮಾಡುವುದರಿಂದ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಇದರಿಂದ ತನ್ನ ಕುಟುಂಬ ಹಾಗೂ ಸಮಾಜಕ್ಕೆ ಸಮಸ್ಯೆಯೇ ಹೆಚ್ಚು. ನಮ್ಮ ಮನಸ್ಸು ಹಾಗೂ ಆರೋಗ್ಯ ಹಾಳು ಮಾಡುವ ಸಾಕಷ್ಟು ವಿಷಯಗಳು ಸಮಾಜದಲ್ಲಿ ಹೇರಳವಾಗಿಯೇ ಇವೆ. ಆದರಲ್ಲೂ ಮದ್ಯಪಾನ, ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಿಮ್ಮ ಸಮಸ್ಯೆಗಳು ಕೇವಲ ನಿಮ್ಮನ್ನು ಮಾತ್ರ ಬಾಧಿಸುವುದಿಲ್ಲ. ನಿಮ್ಮ ಸಮಸ್ಯೆಗಳು ನಿಮ್ಮ ಮನೆಯವರನ್ನು ಬಾಧಿಸುತ್ತದೆ. ಈ ಎಚ್ಚರಿಕೆ ನಮ್ಮಲ್ಲಿ ಇರಬೇಕು. ನಿಮ್ಮ ಸಮಸ್ಯೆಗೆ ಉತ್ತರ ಸಿಗಬೇಕು ಎಂದರೆ ನಿರಂತರವಾಗಿ ಒಳ್ಳೆಯ ಹವ್ಯಾಸದಲ್ಲಿ ಇರಬೇಕು. ಬಸವಮಾರ್ಗ ಸಂಸ್ಥೆ ಈ ರೀತಿಯ ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಿದೆ. ಇದನ್ನು ಬಳಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಲ್ಲಿ ಜೀವನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕರಾದ ಬಸವಣ್ಣ, ಸಿಬ್ಬಂದಿ ಬಾಲಸುಬ್ರಹ್ಮಣ್ಯಂ, ಆನಂದ್, ಸಂಜಯ್ ಇತರರು ಇದ್ದರು.

Leave a Reply

Your email address will not be published. Required fields are marked *