ಚಾಮರಾಜನಗರ: ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳ್ಳಲು ಮತದಾನ ಪವಿತ್ರವಾದ ಕರ್ತವ್ಯವಾಗಿದ್ದು, ಯುವ ಜನಾಂಗ ಕಡ್ಡಾಯವಾಗಿ ನೋಂದಾಯಿಸಿಕೊಂಡು ಮತ ಹಾಕಬೇಕು ಎಂದು ಪದವಿ ಪೂರ್ವ ಶಿಕ್ಷಣಯ ಉಪ ನಿರ್ದೇಶಕ ಸಿ. ಮಂಜುನಾಥ ಪ್ರಸನ್ನ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಮತದಾರರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಟ್ಟು ನೀರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಐದು ವರ್ಷಕೊಮ್ಮೆ ನಡೆಯುವ ಚುನಾವಣೆಗಳಲ್ಲಿ ಮತದಾನದ ಮೂಲಕ ಆಯ್ಕೆ ಮಾಡುವ ಪದ್ದತಿ ಉತ್ತಮವಾಗಿದೆ. ಈ ಹಬ್ಬದಲ್ಲಿ ಎಲ್ಲರು ಭಾಗವಹಿಸಿ, ಮತ್ತುಷ್ಟು ಬಲಿಷ್ಠಗೊಳಿಸುವ ಮುಂದಾಗೋಣ ಎಂದರು.
ಈಶ್ವರಿ ಸೋಷಿಯಲ್ ಟ್ರಸ್ಟ್ನಿಂದ ಜಿಲ್ಲೆಯಾದ್ಯಂತ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಮೂಲಕ ಜಿಲ್ಲೆಯನ್ನು ಹಸಿರೀಕರಣ ಮಾಡಲು ಶ್ರಮಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಮಾಡಲು ಮುಂದಾಗಿದ್ದಾರೆ.
ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ, ಭಾರತ ಸಂವಿಧಾನವು ಪ್ರಜೆಗಳಿಗೆ ನೀಡಿರುವ ಅತ್ಯಮೂಲ್ಯ ಹಕ್ಕುಗಳಲ್ಲಿ ಮತದಾನವು ಶ್ರೇಷ್ಠವಾದದ್ದು, 18 ವರ್ಷ ತುಂಬಿದ ಭಾರತೀಯ ಪ್ರಜೆಗಳು ಮತದಾನದಲ್ಲಿ ನೋಂದಾಯಿಸಿಕೊಂಡು ಹಕ್ಕು ಚಲಾಯಿಸಬೇಕು. ಮತದಾರರು ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೇ ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು.
ಪರಿಸರ ಪ್ರೇಮಿ ಹಾಗೂ ಈಶ್ವರಿ ಸೋಷಿಯಲ್ ಟ್ರಸ್ಟ್ನ ಅಧ್ಯಕ್ಷ ಸಿ.ಎಂ. ವೆಂಕಟೇಶ್ ಮಾತನಾಡಿ, ಚಾಮರಾಜನಗರ ಜಿಲ್ಲಾ ಕೇಂದ್ರ ಪ್ರಮುಖ ರಸ್ತೆಗಳು ಹಾಗೂ ಕ್ರೀಡಾಂಗಣ ಸೇರಿದಂತೆ ಅನೇಕ ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹಸಿರೀಕರಣಗೊಳಿಸಲು ಶ್ರಮಿಸುತ್ತಿದ್ದೇನೆ. ಜಿಲ್ಲಾಡಳಿತ ಭವನ ಭವ್ಯದ ಕಟ್ಟಡ ನಿರ್ಮಾಣವಾಗಿದ್ದು, ಇದರ ಸುತ್ತಮುತ್ತಲು ಮರ ಗಿಡಗಳನ್ನು ಬೆಳೆಸಿ ಹಸಿರಿನ ಹೊದಿಗೆಯನ್ನು ನೀಡಿ, ಉತ್ತಮ ವಾತಾವರಣ ನಿರ್ಮಾಣ ಮಾಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಧನಾ ಸಂಸ್ಥೆಯ ಸುರೇÀಶ್, ಇಂಚರ ಗ್ರೂಪ್ಸ್ನ ಸ್ಟೈಲ್ ಮಂಜು, ಜಿ.ಬಂಗಾರು ಇತರರು ಇದ್ದರು.