ನಮ್ಮ ಜೀವನದ ನಿಜವಾದ ಶಿಲ್ಪಿಗಳು ನಾವೆ

ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಎ.ಆರ್. ಚೇತನ್ ರಾಮ್ ಅಭಿಮತ

ಬಸವಮಾರ್ಗದಲ್ಲಿ ವ್ಯಕ್ತಿತ್ವ ವಿಕಸನ ವಿಶೇಷ ಉಪನ್ಯಾಸ ಕಾರ್ಯಕ್ರಮ
ಮೈಸೂರು: ನಮ್ಮ ಜೀವನದ ನಿಜವಾದ ಶಿಲ್ಪಿಗಳು ನಾವೇ ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಎ.ಆರ್. ಚೇತನ್ ರಾಮ್ ಅಭಿಪ್ರಾಯ ಪಟ್ಟರು.

ಬಸವಮಾರ್ಗ ಸಂಸ್ಥೆ ವತಿಯಿಂದ ಶನಿವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಸಣ್ಣ, ಪುಟ್ಟ ಗುರಿಗಳನ್ನು ಇಟ್ಟುಕೊಳ್ಳುವುದು ದೊಡ್ಡ ಅಪರಾಧ. ದೊಡ್ಡ ದೊಡ್ಡ ಗುರಿ, ಉದ್ದೇಶಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಪರೋಪಕಾರ. ಈ ನಿಟ್ಟಿನಲ್ಲೇ ಸಮಾಜಮುಖಿ ಕೆಲಸ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಬೇಕು ಎಂದ ಅವರು, ದೊಡ್ಡ ಕನಸು, ದೊಡ್ಡ ಗುರಿಯಿಂದ, ದೊಡ್ಡ ಯಶಸ್ಸು, ಶ್ರೇಯಸ್ಸು ‌ಸಿಗುತ್ತದೆ ಎಂದು ಕಿವಿ ಮಾತು ಹೇಳಿದರು.

ಮನುಷ್ಯನಿಗೆ ಏನು ಮಾಡಬೇಕು ಎಂದು ತಿಳಿದಿರುವ ಜತೆಗೆ, ಏನು ಮಾಡಬಾರದು ಎನ್ನುವುದು ಕೂಡ ತಿಳಿದಿರಬೇಕು. ಮನುಷ್ಯ ಸದಾ ಪ್ರಜ್ಞೆ ಯಲ್ಲಿ ಇರಬೇಕು. ಪ್ರಜ್ಞೆ ಕಳೆದುಕೊಂಡರೆ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಯೋಚನೆ ಮಾಡಲೂ ಕೂಡ ನಮ್ಮಿಂದ ಸಾಧ್ಯವಾಗುವುದಿಲ್ಲ. ಕುಡಿತ ಮನುಷ್ಯನ‌ ಪ್ರಜ್ಞೆ ಕಸಿಯುತ್ತದೆ. ಆ ಕಾರಣದಿಂದ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಮಾರ್ಗದರ್ಶನ ಮಾಡಿದರು.

ಈ ಹುಟ್ಟಿಗೆ ಯಾವುದೋ ಒಂದು ಬಲವಾದ ಕಾರಣ ಇದೆ. ದೇವರು ಕೊಟ್ಟ ದೇಹ ಮತ್ತು ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು. ಎಲ್ಲ ಅಂಗವನ್ನು ಸುಸ್ಥಿತಿಯಲ್ಲಿ ಇಟ್ಟು ಪರಮಾತ್ಮ ನಮಗೆ ಜೀವ, ಜೀವನ ನೀಡುತ್ತಾನೆ. ಆದರೆ ನಾವೇನು ಮಾಡುತ್ತಿದ್ದೇವೆ ? ಬೇಡದ ಚಟಗಳಿಗೆ ದಾಸರಾಗಿ ದೇಹದ ಅಂಗಾಂಗಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದು ದೇವರಿಗೆ ನಾವು ಮಾಡುವ ದೊಡ್ಡ ದ್ರೋಹ. ಈ ಬಗ್ಗೆ ಆತ್ಮ ವಿಮರ್ಶೆ ತುರ್ತಾಗಿ ನಡೆಯಬೇಕಾಗಿದೆ ಎಂದು ತಿಳಿಸಿದರು.

ಮಹಾವೀರ, ಬುದ್ಧ, ಏಸು, ಬಸವಣ್ಣ, ಶಂಕರಾಚಾರ್ಯ, ವಿವೇಕಾನಂದರಂತ ಅನೇಕ ಮಹನೀಯರು ಕೂಡ ನಮ್ಮ, ನಿಮ್ಮಂತೆಯೇ ಸಾಮಾನ್ಯರೇ. ಆದರೆ ಅವರ್ಯಾಕೆ ಮಹನೀಯರಾದರೂ ನಾವ್ಯಾಕೆ ಇನ್ನೂ ಹಾಗೇ ಇದ್ದೇವೆ ಎನ್ನುವ ಬಗ್ಗೆ ಯೋಚನೆ ಮಾಡವೇಕು. ನಾವೆಲ್ಲ ದೇವರ ಅಂಶ ಇರುವ ಮನುಷ್ಯರು. ನಮ್ಮಲ್ಲೂ ಕೂಡ ಅಸಮಾನ್ಯ ಶಕ್ತಿ, ಸಾಮರ್ಥ್ಯ ಅಡಗಿದೆ. ವ್ಯಸನ ಎನ್ನುವ ಸಂಕೋಲೆಯನ್ನು ಕಳಚಿದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹುರಿ ದುಂಬಿಸಿದರು.

ಬಸವಮಾರ್ಗ ‌ಸಂಸ್ಥೆಯ ಸಂಸ್ಥಾಪಕ ಎಸ್.ಬಸವಣ್ಣ ಮಾತನಾಡಿ, ವ್ಯಸನಿಗಳ ಸೇವೆಯಲ್ಲಿ ಬಸವಮಾರ್ಗ ಸಂಸ್ಥೆಯು ತನ್ನನ್ನು ತಾನು ಅರ್ಪಿಸಿಕೊಂಡಿದೆ. ಪೌಷ್ಠಿಕ ಆಹಾರ, ವಿಹಾರ, ತರಗತಿ, ಯೋಗ, ಕ್ರೀಡೆ, ಪಾಠ, ಸ್ವಚ್ಛತೆ, ಚಿಕಿತ್ಸೆಯಲ್ಲಿ ಯಾವುದೇ ರಾಜಿ ನಮ್ಮಲ್ಲಿ ಇಲ್ಲ. ವ್ಯಸನಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವರ್ಷವಿಡೀ ಬಸವಮಾರ್ಗದಲ್ಲಿ ವಿನೂತನ, ವಿಭಿನ್ನ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಆ ಮೂಲಕ ವ್ಯಸನಿಗಳ ಸೇವೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು‌.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರು ಇದೆ. ಆದರೆ ವ್ಯಸನಕ್ಕೆ‌ ದಾಸರಾದವರಿಗೆ ಯಾವ ಸೂರಿದೆ. ಆತನಿಗೆ ಸಮರ್ಪಕವಾದ‌ ಸೂರು ಕಲ್ಪಿಸಿ, ಬದಲಾವಣೆಗೆ ಸೂಕ್ತ ಅವಕಾಶ, ವೇದಿಕೆ ಕಲ್ಪಿಸುವುದೇ ನಮ್ಮ‌ ಗುರಿ, ಉದ್ದೇಶವಾಗಿದೆ ಎಂದು ತಿಳಿಸಿದರು‌.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಾಲ ಸುಬ್ರಹ್ಮಣ್ಯ, ಯೋಗ ಶಿಕ್ಷಕ ಎಚ್.ಪಿ.ನವೀನ್ ಕುಮಾರ್, ಸಿಬ್ಬಂದಿ ಆನಂದ್, ಸಂಜಯ್ ಇತರರು ಇದ್ದರು.

Leave a Reply

Your email address will not be published. Required fields are marked *