ಮಹಿಳಾ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕು: ಯೋಜನಾ ನಿರ್ದೇಶಕರಾದ ಶ್ರೀಮತಿ ಸುಧಾ

ಉದ್ಯಾನವನಗಳ ನಿರ್ವಹಣೆ ಮತ್ತು ನೀರಿನ ಗುಣಮಟ್ಟತಾ ಪರೀಕ್ಷೆ ಕುರಿತ ತರಬೇತಿ ಕಾರ್ಯಕ್ರಮ

ಚಾಮರಾಜನಗರ: ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ತಮಗೆ ವಹಿಸಿರುವ ಪಾರ್ಕ್ ನಿರ್ವಹಣೆ ಹಾಗೂ ಕುಡಿಯುವ ನೀರಿನ ಗುಣಮಟ್ಟತಾ ಪರೀಕ್ಷೆ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ನಗರಸಭೆಗೆ ಹಾಗೂ ಜಿಲ್ಲಾಡಳಿತಕ್ಕೆ ಉತ್ತಮ ಹೆಸರನ್ನು ತರುವುದರ ಜೊತೆಗೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ಯೋಜನಾ ನಿರ್ದೇಶಕರಾದ ಶ್ರೀಮತಿ ಸುಧಾ ತಿಳಿಸಿದರು.

ನಗರದ ಸಿಡಿಎಸ್ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ನಗರಸಭೆ ಕಾರ್ಯಾಲಯ, ಜಿಲ್ಲಾ ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಜಂಟಿ ಸಹಯೋಗದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗತ ಜೀವನೋಪಾಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ರಚನೆಗೊಂಡಿರುವ ಮಹಿಳಾ ಸ್ವ-ಸಹಾಯ ಗುಂಪುಗಳ ಮುಖಾಂತರ ಅಮೃತ್ ಮಿತ್ರ ೨.೦ ಕಾರ್ಯಕ್ರಮದಡಿ ಉದ್ಯಾನವನಗಳ ನಿರ್ವಹಣೆ ಮತ್ತು ನೀರಿನ ಗುಣಮಟ್ಟತಾ ಪರೀಕ್ಷೆ ಕುರಿತಾಗಿ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಹೆಣ್ಣು ತನ್ನ ಮನೆ ಹಾಗೂ ಸಂಸಾರದ ಆಗುಹೋಗುಗಳು ಅಚ್ಚುಕಟ್ಟಾಗಿ ನಿರ್ವಹಿಸುವ ಕೀರ್ತಿ ಹೆಣ್ಣು ಮಕ್ಕಳಿಗೆ ಸಲ್ಲುತ್ತದೆ. ಅದೇ ರೀತಿಯಲ್ಲಿ ಸಮಾಜದಲ್ಲಿ ಕೂಡಾ ಮಹಿಳಾ ಶಕ್ತಿಗಳಾಗಳಾಗಿ ರೂಪುಗೊಂಡು ತಮಗೆ ವಹಿಸಿರುವ ಕಾರ್ಯವನ್ನು ನಿರ್ವಹಿಸುವ ಮೂಲಕ ಸಮಾಜಕ್ಕೆ ಕೀರ್ತಿ ತರಬೇಕು ಎಂದರು.
ತಾವು ಮಾಡುವ ಕೆಲಸಕಾರ್ಯಗಳು ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ತಮ್ಮ ಸ್ತ್ರೀ ಶಕ್ತಿ ಸಂಘಗಳ ಹೆಸರು ಅಜರಾಮಾರವಾಗಿ ಉಳಿಯುವಂತೆ ಕೆಲಸ ನಿರ್ವಹಿಸಬೇಕು ಎಂದು ಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು.
ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಮಾತನಾಡಿ,
ಹಲವಾರು ಅನುದಾನಗಳನ್ನು ತರುವ ಮೂಲಕ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ನಿರ್ವಹಣೆ ಕೊರತೆಯಾಗಿದೆ. ಪಾರ್ಕ್‌ಗಳ ನಿರ್ವಹಣೆಗಾಗಿ ಶ್ರೀಲಕ್ಷ್ಮೀ ಮಹಿಳಾ ಸ್ವಸಹಾಯ ಸಂಘಕ್ಕೆ ವಹಿಸಿದ್ದು, ಕುಡಿಯುವ ನೀರಿನ ಗುಣಮಟ್ಟತಾ ಪರೀಕ್ಷೆಗಾಗಿ ಶ್ರೀ ಮಹದೇಶ್ವರ ಮಹಿಳಾ ಸ್ವ ಸಹಾಯ ಸಂಘ ಹಾಗೂ ಶ್ರೀ ದುರ್ಗಾಶಕ್ತಿ ಮಹಿಳಾ ಸ್ವ ಸಹಾಯ ಸಂಘಕ್ಕೆ ವಹಿಸಲಾಗಿದೆ. ಒಟ್ಟಾರೆ ಈ ಕೆಲಸವನ್ನು ೩ ಗುಂಪುಗಳಿಗೆ ವಹಿಸಲಾಗಿದ್ದು, ೩೩ ಮಂದಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.
ಕುಡಿಯುವ ನೀರಿನ ನಿರ್ವಹಣೆಗೆ ವಾರ್ಷಿಕವಾಗಿ ೧೦ ಲಕ್ಷ ರೂ. ಹಾಗೂ ಪಾರ್ಕ್‌ಗಳ ನಿರ್ವಹಣೆಗೆ ೧೦ ಲಕ್ಷ ರೂ.ಗಳನ್ನು ನೀಡಲಾಗಿದ್ದು, ಇದರಲ್ಲಿ ಪಾರ್ಕ್ ನಿರ್ವಹಣೆಗೆ ಬೇಕಾಗುವ ಸಾಮಾಗ್ರಿಗಳು, ಕುಡಿಯುವ ನೀರಿನ ಗುಣಮಟ್ಟತಾ ಪರೀಕ್ಷೆ ಸಂಬಂಧಪಟ್ಟಂತ ಸಲಕರಣೆಗಳು ಹಾಗೂ ವೇತನ ಸೇರಿದಂತೆ ಹಾಗೂ ಒಟ್ಟಾಗಿ ೨೦ ಲಕ್ಷ ರೂ.ಗಳನ್ನು ನಿಗದಿಮಾಡಲಾಗಿದೆ. ಮಹಿಳಾ ಸಂಘಟನೆಗಳಿಗೆ ನಗರಸಭೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸ ಮೂಲಕ ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.
ನಂತರ ಪಾರ್ಕ್ ನಿರ್ವಹಣೆ ಹಾಗೂ ನೀರು ತಪಾಸಣೆ ಕುರಿತಂತೆ ಪ್ರಾತಕ್ಷಿಕೆಯನ್ನು ನೀಡಲಾಯಿತು.
ಈ ಸದರ್ಭದಲ್ಲಿ ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮೊಹಮ್ಮದ್ ಅಕ್ಬರ್, ಸಹಾಯಕ ನಿರ್ದೇಶಕ ಮಲ್ಲೇಶ್, ಅಭಿಯಾನ ವ್ಯವಸ್ಥಾಪಕರಾದ ಅಮ್ಜತ್ ಪಾಷಾ, ಅನ್ಸರ್ ಖಾನ್, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ನರ್ಗೀಸ್ ಬಾನು, ಜ್ಯೋತಿ, ರೂಪಾ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *