ಚಾ.ನಗರ ಲೋಕಸಭಾ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ
ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಡಲು ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಚಾ.ನಗರ ಲೋಕಸಭಾ ಕ್ಷೇತ್ರದÀ ಲೋಕಸಭಾ ಚುನಾವಣಾ ಸಹ ಪ್ರಭಾರಿ ಎಸ್. ವಿ. ಫಣೀಶ್ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಅವರು, ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸಿ, ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ದೇಶದ ಜನರು ಬಯಸಿದ್ದಾರೆ. ಹೀಗಾಗಿ ನಾವೆಲ್ಲರು ಒಗ್ಗಟ್ಟಿನಿಂದ ಪ್ರಧಾನಿ ಮೋದಿ ಅವರ ಹತ್ತು ವರ್ಷಗಳ ಸಾಧನೆಯನ್ನು ಪ್ರತಿ ಮನೆ ಹಾಗೂ ಮನಗಳಿಗೆ ತಲುಪಿಸುವ ಕೆಲಸವನ್ನು ಮಾಡೋಣ ಎಂದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಹೆಸರಿನಲ್ಲಿ ಓಟ್ ಬ್ಯಾಂಕ್ ಆಗಿದ್ದು, ಚಾ.ನಗರ ಲೋಕಸಭಾ ಕ್ಷೇತ್ರದಿಂದ ಯಾರು ಅಭ್ಯರ್ಥಿ ಎಂಬುವುದು ನಮಗೆ ಬೇಕಿಲ್ಲ. ಕಮಲ ಮತ್ತು ಮೋದಿ ಅವರನ್ನು ಗೆಲ್ಲಿಸಲು ಮತಯಾಚನೆ ಮಾಡಬೇಕು. ಚಾ.ನಗರ ಲೋಕಸಭಾ ಕ್ಷೇತ್ರ ಬಿಜೆಪಿ ಗೆಲುವ ಅವಕಾಶ. ಕಳೆದ ಬಾರಿ ಹಿರಿಯರಾದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಸ್ಪರ್ಧೆ ಮಾಡಿದ್ದರು. ಹೀಗಾಗಿ ಬಿಜೆಪಿ ಗೆಲ್ಲಲು ಹೆಚ್ಚಿನ ಶ್ರಮ ವಾಗಲಿಲ್ಲ. ಈ ಬಾರಿ ಚುನಾವಣಾ ಕಣಕ್ಕೆ ಹೊಸ ಮುಖವನ್ನು ಕಣಕ್ಕಿಳಿಸಬೇಕಾಗಿದೆ. ಪಕ್ಷದ ಕಾರ್ಯಕರ್ತರು , ಮುಖಂಡರು ಇನ್ನು ಮೂರು ತಿಂಗಳು ಕಾಲ ಪಕ್ಷದ ಸಂಘಟನೆ ಹಾಗೂ ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಎನ್ನದೇ ದುಡಿಯಬೇಕು ಎಂದರು.
ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸಾಧನೆ, ವರ್ಚಸ್ಸು ಹಾಗೂ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರದದಲ್ಲಿ ನೆಡ್ಡಾ ಹಾಗೂ ರಾಜ್ಯದಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಮತ್ತೇ ಮೋದಿ ಅವರು ಪ್ರಧಾನಿಯಾಗಬೇಕೆಂದು ವಿಶ್ವವೇ ಎದುರು ನೋಡುತ್ತಿದ್ದಾರೆ. ಈ ದೊಡ್ಡ ಸಮರದಲ್ಲಿ ಬಿಜೆಪಿ 400ರ ಗಡಿ ದಾಟಲು ರಾಜ್ಯದಲ್ಲಿಯು 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮೇಲ್ಲರದಾಗಿದೆ. ಚಾ.ನಗರ ಲೋಕಸಭಾ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಬೂತ್ಗಳಲ್ಲಿ ಬಹುಮತ ಪಡೆದು ಕೊಂಡು ಗೆಲ್ಲಿಸಲು ತಳ ಮಟ್ಟದಿಂದ ಪಕ್ಷವನ್ನು ಶ್ರಮಿಸೋಣ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವೈಫಲ್ಯವನ್ನು ಜನರಿಗೆ ತಿಳಿಸುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಾಧನೆಯನ್ನು ಮನದಟ್ಟು ಮಾಡಿಸೋಣ. ಗ್ಯಾರಂಟಿ ಯೋಜನೆಯ ನೆಪದಲ್ಲಿ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಅಭಿವೃದ್ದಿಯನ್ನು ಕಡೆಗಣಿಸಿದೆ. ಅಧಿಕಾರಕ್ಕೆ ಬಂದು 10 ತಿಂಗಳಾಗುತ್ತಿದ್ದು, ಕ್ಷೇತ್ರದಲ್ಲಿ ಒಂದೊಂದು ಅಭಿವೃದ್ದಿ ಕೆಲಸಗಳು ಆಗಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿ ಪರ್ವವೇ ನಡೆಯಿತು. ಆದರೆ ಈ ಸರ್ಕಾರ ಒಂದು ಪೈಸೆ ಬಿಡುಗಡೆ ಮಾಡುತ್ತಿಲ್ಲ. ಗ್ಯಾರಂಟಿಗೆ 54 ಸಾವಿರ ಕೋಟಿ ಬೇಕು ಎಂದು ಹಣ ಹೊಂದಿಸುವುದರಲ್ಲಿಯೇ ಕಾಲಾಹರಣ ಮಾಡುತ್ತಿದೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಶಾಸಕರಾದ ಎಸ್. ಬಾಲರಾಜು, ಹರ್ಷವರ್ಧನ್, ಕೇಂದ್ರ ಪರಿಹಾ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಎಸ್. ಮಹದೇವಯ್ಯ, ರಾಷ್ಟ್ರೀಯ ಓಬಿಸಿ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಮುಖಂಡರಾದ ಅಶೋಕ್, ಕೃಷ್ಣಪ್ಪಗೌಡ, ಗುಂಡ್ಲುಪೇಟೆ ಮಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುಡ್ನಾಕೂಡು ಪ್ರಕಾಶ್, ಪಿ. ವೃಷಬೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷೆ ಆಶಾ ನಟರಾಜು, ಮಾಜಿ ಉಪಾಧ್ಯಕ್ಷ ಸುಧಾ, ಸದಸ್ಯರಾದ ಮಮತಾ ಬಾಲಸುಬ್ರಮಣ್ಯ, ಕುಮುದಾ, ಮಂಡಲದ ಅಧ್ಯಕ್ಷ ಅರಕಲವಾಡಿ ಮಹೇಶ್, ನಗರ ಘಟಕದ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಇದ್ದರು.