ಹವಾಮಾನ ಬದಲಾವಣೆಯಲ್ಲಿ ವಿವಿಧ ಇಲಾಖೆಗಳು ವಹಿಸಬೇಕಾದ ಪಾತ್ರ ಕುರಿತ ಕಾರ್ಯಾಗಾರ

ಚಾಮರಾಜನಗರ: ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಕ್ರಿಯಾಯೋಜನೆ ತರಬೇತಿ ಕಾರ್ಯಕ್ರಮ ಹಾಗೂ ಹವಾಮಾನ ಬದಲಾವಣೆಯಲ್ಲಿ ವಿವಿಧ ಇಲಾಖೆಗಳು ವಹಿಸಬೇಕಾದ ಪಾತ್ರ ಕುರಿತ ಕಾರ್ಯಾಗಾರವನ್ನು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ನಗರದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿತ್ತು. 

ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತರಬೇತಿಯನ್ನು ಆಯೋಜಿಸಿದ್ದು ಸಂತಸ ತಂದಿದೆ. ಎಲ್ಲಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತರಬೇತಿಯ ಸದುಪಯೋಗ ಪಡಿಸಿಕೊಂಡು ತಮ್ಮ ಇಲಾಖಾ ಹಂತದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು. 

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರುತಿ ಡಿ.ಸಿ ಅವರು ಮಾತನಾಡಿ ಹವಾಮಾನ ಬದಲಾವಣೆಯ ಕುರಿತು ತರಬೇತಿಯ ಅವಶ್ಯಕತೆ ಮತ್ತು ಪ್ಲಾಸ್ಟಿಕ್‍ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಪರಿಸರವನ್ನು ಸಂರಕ್ಷಿಸಬೇಕು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಜೂನ್ 5 ರವರೆಗೆ ಪರಿಸರ ಮತ್ತು ಸ್ವಚ್ಛತಾ ಸಂಬಂಧಿತ ವಿವಿಧ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. 

ತರಬೇತಿ ಮುಖ್ಯಸ್ಥರಾದ ಎಂ.ಎಚ್. ಲತಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಹವಾಮಾನ ಬದಲಾವಣೆಯ ಮುಖ್ಯ ಅಂಶಗಳನ್ನು ತಿಳಿಸಿ ಹವಾಮಾನ ಬದಲಾವಣೆ, ಕರ್ನಾಟಕ ರಾಜ್ಯ ಯೋಜನೆ ಕುರಿತು ಸುದೀರ್ಘ ವಿವರಣೆ ನೀಡಿದರು ಹಾಗೂ ಕಾರ್ಯನೀತಿ ಕಾರ್ಯತಂತ್ರಗಳು ಮತ್ತು ವಿವಿಧ ಇಲಾಖೆಗಳ ಕರ್ತವ್ಯವನ್ನು ವಿವರಿಸಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥರು ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಶಿವರಾಜ್ ಅವರು ಮಾತನಾಡಿ ಜಾಗತಿಕ ಹವಾಮಾನದ ಬಗ್ಗೆ ಮತ್ತು ಸ್ಥಳೀಯ ಸ್ಥಿತಿಗತಿಯ ಬಗ್ಗೆ ಪ್ರಕರಣ ಅಧ್ಯಯನದ ಉದಾಹರಣೆಗಳೊಂದಿಗೆ ಶಿಬಿರಾರ್ಥಿಗಳಿಗೆ ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿ ದೀಪಾ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಸರಿತಾ ಬೋಯ,  ಎನ್.ಆರ್.ಡಿ.ಎಂ.ಎಸ್ ಪ್ರೋಜೆಕ್ಟ್ ಅಸೋಸಿಯೇಟ್ ಸಿ. ಕಾರ್ತಿಕ್, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *