ಇಂದು “ವಿಶ್ವ ಪುಸ್ತಕ ದಿನಾಚರಣೆ”
(ಈ "ಪುಸ್ತಕ" ಎನ್ನುವ ಮೂರಕ್ಷರ ಕೇಳಿದೊಡನೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ!.
ಏಕೆಂದರೆ ಪುಸ್ತಕಗಳು ಸ್ನೇಹಿತನಿದ್ದಂತೆ. ಪ್ರತಿಯೊಂದು ಪುಸ್ತಕಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡುವುದರ ಜೊತೆಗೆ, ನಮ್ಮ ಜ್ಞಾನಬಿಂದಿಗೆಯನ್ನು ತುಂಬಲು ಸಹಾಯಕವಾಗಿವೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದಲ್ಲ ಒಂದು ರೀತಿಯ ಪುಸ್ತಕಗಳು ಇದ್ದೇ ಇರುತ್ತವೆ. ಹಲವರು ತಮ್ಮ ಮನೆಗಳಲ್ಲಿ ಒಂದು ಮಿನಿ ಗ್ರಂಥಾಲಯವನ್ನೇ ಮಾಡಿರುತ್ತಾರೆ. ಸಮಯ ಸಿಕ್ಕಾಗ ಅದನ್ನು ಓದುತ್ತಾರೆ. ಪ್ರತೀ ಬಡಾವಣೆಗಳಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಇದ್ದೇ ಇರುತ್ತವೆ. ಜೊತೆಗೆ ಅನೇಕ ಸಾಂಸ್ಕೃತಿಕ ಉತ್ಸವಗಳಲ್ಲೂ ಕೂಡ ಪುಸ್ತಕ ಮಾರಾಟ ಮಳಿಗೆ ಇದ್ದೇ ಇರುತ್ತದೆ. ಜೊತೆಗೆ ನಗರ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳು ಕೂಡ ಸಿಗುತ್ತವೆ. ನಾವು ಪುಸ್ತಕಗಳನ್ನ ಮೊದಲು ತೆಗೆದುಕೊಳ್ಳಲು ಮನಸ್ಸು ಮಾಡಬೇಕು. ನಂತರ ಓದುವ ಪ್ರವೃತ್ತಿ ಮುಂದುವರೆಯುತ್ತದೆ!. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಪಠ್ಯ ವಿಷಯದ ಜೊತೆ ಜೊತೆಗೆ ನಾಡು- ನುಡಿ- ಸಂಸ್ಕೃತಿ ಬಗ್ಗೆ, ರಾಷ್ಟ್ರವನ್ನಾಳಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸೈನಿಕರ ಬಗ್ಗೆ, ರೈತರ ಬಗ್ಗೆ, ಹಬ್ಬ ಹರಿದಿನಗಳ ಬಗ್ಗೆ ಪುಸ್ತಕಗಳನ್ನು ಓದಲು ಸಲಹೆ ಮಾಡಬೇಕು. ಆಗ ಓದುವ ಸಂಸ್ಕೃತಿ ಮುಂದಿನ ಪೀಳಿಗೆಗೂ ಕೂಡ ಮುಂದುವರಿಯುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲೂ ಕೂಡ ಪುಸ್ತಕಗಳು ತನ್ನತನವನ್ನು ಕಾಯ್ದುಕೊಂಡಿವೆ. ಹುಟ್ಟುಹಬ್ಬ, ಸಭೆ- ಸಮಾರಂಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು. ಬನ್ನಿ ವಿಶ್ವ ಪುಸ್ತಕ ದಿನಾಚರಣೆ ಯಂದು ನಾವು ಪುಸ್ತಕ ಕೊಳ್ಳುವ, ಓದುವ ಸಂಕಲ್ಪ ಮಾಡೋಣ!.)
ಪ್ರತಿ ವರ್ಷದ ಏಪ್ರಿಲ್- 23 ರಂದು "ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ" (ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ). ಆಚರಿಸುತ್ತಾರೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) 1995ರಲ್ಲಿ ಮೊದಲ ಬಾರಿಗೆ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು.
ಇದು ಒಂದು ಹಂತದಲ್ಲಿ ಯಶಸ್ವಿ ಕೂಡ ಆಯಿತು. ಮುಂದುವರೆದಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೇಸ್ಕೊ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಅಥವಾ ಗಮ್ಮತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕನ್ನು ಗೌರವಿಸುವ ಹಂಬಲ ಹೊಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪುಸ್ತಕ ಎಂದೊಡನೆ ನಮಗೆ ಮೊದಲು ಪ್ರಕಾಶಕರು, ಲೇಖಕರು, ಓದುಗರು ನೆನಪಾಗುತ್ತಾರೆ.
ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಹೀಗೆ ಒಂದೇ ಎರಡೇ?
ಎಲ್ಲರೂ ಸೇರಿ ಈ ಪುಸ್ತಕ ಸಂಸ್ಕೃತಿಯನ್ನು ಪ್ರಚಾರ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬರುತ್ತಿದ್ದಾರೆ.
ಪುಸ್ತಕ ದಿನಾಚಾರಣೆಯಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವ ಸಾರಲಿವೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ದಿನದಂದು ವಿಲಿಯಮ್ ಶೇಕ್ಸ್ಪಿಯರ್ ರವರ ಪುಣ್ಯತಿಥಿಯನ್ನೂ ಸಹ ಆಚರಿಸುವರು.
ಪುಸ್ತಕಗಳನ್ನು ಯಾಕೆ ಓದಬೇಕು? ಎಂದು ಪ್ರಶ್ನಿಸುವವರು ಕೂಡ ಇದ್ದಾರೆ!!. ತಾವು ತೆಗೆದುಕೊಳ್ಳುವುದು ಇರಲಿ, ತೆಗೆದುಕೊಂಡ ಹಲವರನ್ನು ವ್ಯಂಗ್ಯವಾಗಿ ನೋಡುವುದು ಉಂಟು!. ಏನಪ್ಪಾ ಇಷ್ಟೊಂದು ಪುಸ್ತಕದ ಹುಚ್ಚು ಎನ್ನುತ್ತಾರೆ!. ಕೊಂಡುಕೊಂಡರೆ ಅವನನ್ನು ನೋಡುವ ದೃಷ್ಟಿಯೇ ಬೇರೆ. ಪುಸ್ತಕದ ಗತ್ತು ಗಮ್ಮತ್ತು ಕೊಂಡವನಿಗೆ ಗೊತ್ತಿರುತ್ತದೆ. ಜೊತೆಗೆ ಮನೆಯಲ್ಲಿ ಸ್ಥಳಾಭವಆಕಾಶ ಹೆಚ್ಚು. ಸುಸಜ್ಜಿತವಾಗಿ ವ್ಯವಸ್ಥೆಯನ್ನು ಕೂಡ ಮಾಡುವಲ್ಲಿ ಪ್ರೋತ್ಸಾಹ ನೀಡುವುದಿಲ್ಲ. ಇದು ನನ್ನ ಅನುಭವವೂ ಕೂಡ!.
ಪುಸ್ತಕಕ್ಕೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾನೆ ಎನ್ನುವ ಪ್ರಶ್ನೆಯನ್ನೇ ನನಗೆ ಹಲವಾರು ಹಾಕಿದ್ದಾರೆ. ನನ್ನ ಕಿಸೆಯಲ್ಲಿ ಒಂದಿಷ್ಟು ದುಡ್ಡು ಇದ್ದರೆ ಶೇಕಡ 30ರಷ್ಟು ಪುಸ್ತಕ ಕೊಂಡುಕೊಳ್ಳುತ್ತೇನೆ. ಇದರಿಂದಾಗಿ ನನ್ನಲ್ಲಿ ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಪುಸ್ತಕಗಳು ನಮ್ಮ ಮನೆಯ ಸಂಗ್ರಹಾಲಯದಲ್ಲಿ ಇವೆ. ಸಮಯ ಸಿಕ್ಕಾಗ ಅವುಗಳನ್ನು ಓದುವುದು ಒಂದು ರೀತಿ ಖುಷಿ ಸಿಗುತ್ತದೆ.
ಯಾವುದಾದರೂ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಹೋದಾಗ ಅಲ್ಲಿ ಕೂಡ ಪುಸ್ತಕಗಳು ಸಿಗುವುದರಿಂದ ಅವುಗಳನ್ನು ಕೊಂಡುಕೊಳ್ಳುತ್ತೇನೆ.
ಉದ್ಯಾನನಗರಿ ಮೈಸೂರು ಸೇರಿದಂತೆ ಹಲವು ಕಡೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನ ಹಲವು ಸ್ನೇಹಿತರು ಕರೆಯುತ್ತಾರೆ. ಹಲವು ಬಾರಿ ಪತ್ರಿಕೆಗಳಲ್ಲಿ ಓದಿಕೊಂಡು ನಾನು ಹೋಗುವುದು ಉಂಟು!. ಅಲ್ಲಿ ಪುಸ್ತಕ ಹೊಸದಾಗಿ ನನಗೆ ಸಿಗುವುದರ ಜೊತೆಗೆ ಆ ಒಂದು ಕಾರ್ಯಕ್ರಮದಲ್ಲಿ ಲೇಖಕರು, ಪ್ರಕಾಶಕರು ಮತ್ತು ಅನೇಕ ಓದುಗ ಸ್ನೇಹಿತರು ಸಿಗುತ್ತಾರೆ.
ಜೊತೆಗೆ ಅಲ್ಲಿ ಆ ಪುಸ್ತಕದ ಕುರಿತು ವಿಮರ್ಶೆ ನಡೆಯುತ್ತದೆ. ಪುಸ್ತಕದ ಬಗ್ಗೆ ಎರಡು ಮೂರು ಜನರು ಮಾತನಾಡುತ್ತಾರೆ. ಅವರ ಮಾತುಗಳು ಪುಸ್ತಕ ಓದಲು ನಮಗೆ ಮತ್ತಷ್ಟು ಪ್ರೇರೇಪಣೆ ನೀಡುತ್ತವೆ.
ಇದರಿಂದಾಗಿ ನಾನು ಪುಸ್ತಕ ಬಿಡುಗಡೆ ಸಮಾರಂಭವನ್ನು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ. ಅನ್ಯ ಕೆಲಸ ನಿಮಿತ್ತ ಕಾರ್ಯಕ್ರಮಕ್ಕೆ ಹೋಗಲು ಆಗುವುದಿಲ್ಲ ಅಷ್ಟೇ.
ಪುಸ್ತಕ ಓದುವುದು ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ಜ್ಞಾನ ಸಂಪಾದನೆಗೆ ಪ್ರಮುಖ ರಹದಾರಿ. ಗಮನಿಸಬೇಕಾದ ಅಂಶವೆಂದರೆ ಪ್ರತಿಯೊಬ್ಬ ಓದುಗನ ಅಭಿರುಚಿ ಭಿನ್ನವಾಗಿರಬಹುದು.
ಆದರೆ ಆ ಓದು ಆತನ ಜ್ಞಾನದಾಹವನ್ನು ತಣಿಸುತ್ತದೆ. ಪುಸ್ತಕ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚುವುದರ ಜತೆಯಲ್ಲಿ ಮನೋವಿಕಾಸಕ್ಕೆ ನೆರವಾಗುತ್ತದೆ.
ನಮ್ಮೆದುರು ಸಿಗುವ ಒಂದೊಂದು ಪುಸ್ತಕವು ತನ್ನದೇ ಆದ ವೈವಿಧ್ಯಮಯ ಕಥಾ ಮತ್ತು ಜ್ಞಾನ ಹಂದರವನ್ನು ಒಳಗೊಂಡಿದ್ದು, ಬೇರೆ ಬೇರೆ ಪ್ರಪಂಚದ ಅರಿವು ಮೂಡಿಸುತ್ತದೆ. ಒಬ್ಬ ಲೇಖಕನ ಪುಸ್ತಕಗಳು ಒಂದೊಂದು ರೀತಿಯ ಅನುಭವ ನೀಡುತ್ತವೆ. ಜೊತೆಗೆ ಅನೇಕರು ತಮ್ಮ ಜೀವನಾನುಭವವನ್ನು ಪುಸ್ತಕದಲ್ಲಿ ಬರೆದಿರುತ್ತಾರೆ. ಸಾಹಿತ್ಯದ ವಿವಿಧ ಪ್ರಕಾರಗಳು ಪುಸ್ತಕ ರೂಪದಲ್ಲಿ ಬರುತ್ತವೆ.
ಅಲ್ಲದೆ ಪುಸ್ತಕಗಳು ಆಯಾ ಭಾಗದ ಭಾಷೆಯ ಸಾಂಸ್ಕೃತಿಕ ಚೌಕಟ್ಟನ್ನು ಹೊಂದಿರುತ್ತವೆ. ಪ್ರತಿಯೊಂದು ಪುಸ್ತಕಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಜ್ಞಾನದ ದಾಹವನ್ನು ನೀಗಿಸುತ್ತವೆ. ಒಂದು ರೀತಿಯಲ್ಲಿ ಮುಗಿಯದ ಅಕ್ಷಯ ಪಾತ್ರೆ. ಹಲವರು ಒಂದೇ ಪುಸ್ತಕವನ್ನು ಹಲವು ಬಾರಿ ಓದುವುದು ಉಂಟು!. ಏಕೆಂದರೆ ಒಂದೊಂದು ಪುಸ್ತಕಗಳು ಒಂದೊಂದು ರೀತಿಯ ವಿಭಿನ್ನ ಆಲೋಚನೆ ನೀಡುತ್ತವೆ. ಪ್ರತಿ ಬಾರಿ ಓದಿದರೂ ಕೂಡ ಒಂದೊಂದು ಭಾವ ಮನದಲ್ಲಿ ಮೂಡುತ್ತದೆ.
ಜೊತೆಗೆ ಎಷ್ಟು ಬಾರಿ ಓದಿದರು ಮತ್ತಷ್ಟು ಓದಲು ಭರವಸೆ ಮೂಡಿಸುತ್ತವೆ.
ಒಟ್ಟಿನಲ್ಲಿ ಪುಸ್ತಕಗಳು ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಇವೆಲ್ಲವನ್ನು ಬೆಸೆಯುವ ಕೊಂಡಿಗಳಾಗಿರುತ್ತವೆ. ಸಾಹಿತ್ಯ, ಸಂಗೀತ, ರಾಜಕೀಯ, ನಾಡು- ನುಡಿ, ಸಂಸ್ಕೃತಿ, ಕೋಟೆ- ಕೊತ್ತಲಗಳು ಒಟ್ಟಾರೆಯಾಗಿ ಎಲ್ಲವನ್ನೂ ಕೂಡ ದಾಖಲಿಸುತ್ತವೆ!.
ಮೈಸೂರಿನಲ್ಲಿ ಅನೇಕ ಕಡೆ ಪುಸ್ತಕ ಓದುವ ಸದಾಭಿರುಚಿ ಉಳ್ಳವರು ಒಂದೆಡೆ ಸೇರಿ ತಿಂಗಳಿಗೆ ಒಂದೊಂದು ಪುಸ್ತಕವನ್ನು ಮೊದಲೇ ತಿಳಿಸಿ, ಆ ಪುಸ್ತಕದ ಬಗ್ಗೆ ಪ್ರತಿಯೊಬ್ಬರೂ ಕೂಡ ತಮಗನಿಸಿದ, ಅಭಿಪ್ರಾಯವನ್ನು ಎಲ್ಲರೂ ಒಟ್ಟಿಗೆ ಹಂಚಿಕೊಳ್ಳಬಹುದು. ಅದರಿಂದಾಗಿ ನಮ್ಮ ವಿಮರ್ಶೆಯ ಮಟ್ಟ ಏರುತ್ತದೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪುಸ್ತಕಗಳು ನಮ್ಮ ಪೂರ್ವಜರ ಅಸ್ತಿತ್ವಕ್ಕೆ ಸಾಕ್ಷಿಯಾಗಿ, ಹಲವು ತಲೆಮಾರುಗಳನ್ನು ನಮಗೆ ಪರಿಚಯಿಸಿ ಕೊಡುತ್ತವೆ. ಇದರಿಂದ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಪುಸ್ತಕಗಳಿಂದ ಆಗುತ್ತದೆ. ಗಮನಿಸಬೇಕಾದ ಅಂಶ ಇದಾಗಿದೆ.
ದೊಡ್ಡವರು ಪುಸ್ತಕ ಓದಿದರೆ ಸಾಲದು ನಮ್ಮ ಚಿಕ್ಕ ಮಕ್ಕಳಿಗೂ ಕೂಡ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಪುಸ್ತಕಗಳು ಮುಂದಿನ ಪೀಳಿಗೆಗೆ ಹೋಗಲು ನಮ್ಮ ಯುವ ಜನತೆ ಒಂದು ರೀತಿಯಲ್ಲಿ ಬೆಸುಗೆ. ಪುಸ್ತಕಗಳು ಹಿಂದಿನ ಮತ್ತು ಭವಿಷ್ಯದ ನಡುವಿನ ಕೊಂಡಿಯಾಗಿ, ತಲೆಮಾರುಗಳು ಮತ್ತು ಸಂಸ್ಕೃತಿಗಳ ನಡುವಿನ ಸೇತುವಾಗಿವೆ ಎಂದರೆ ತಪ್ಪಾಗಲಾರದು.
ಕೇವಲ ಪಠ್ಯ ಸಂಬಂಧಿ ಪುಸ್ತಕಗಳು ಮಕ್ಕಳ ಗಮನ ಸೆಳೆಯುತ್ತವೆ. ಇದು ಪರೀಕ್ಷೆಯ ದೃಷ್ಟಿಯಿಂದ ಅತಿ ಮುಖ್ಯ. ಆದರೆ ಪರೀಕ್ಷೆಯನ್ನು ಹೊರತುಪಡಿಸಿದ ಪುಸ್ತಕಗಳು ನಮ್ಮ ಜೀವನದ ಉದ್ದಕ್ಕೂ ಮಾರ್ಗದರ್ಶನ ನೀಡುತ್ತವೆ.
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಪುಸ್ತಕ ಉದ್ಯಮದ ಮೂರು ಪ್ರಮುಖ ಕೊಂಡಿಗಳಾದ ಪ್ರಕಾಶಕರು, ಪುಸ್ತಕ ಮಾರಾಟ ಗಾರರು ಮತ್ತು ಗ್ರಂಥಾಲಯಗಳನ್ನು ಪ್ರತಿನಿಧಿಸುವ ದಿನವಾಗಿದೆ. ನಾನು ಮೊದಲೇ ಹೇಳಿದಂತೆ ಎಲ್ಲರನ್ನು ಕೂಡ ನಾವು ನೆನಪಿಸಿಕೊಳ್ಳಲೇಬೇಕು.
ಪ್ರತಿಯೊಂದು ಪುಸ್ತಕಗಳನ್ನು ಓದುವುದರಿಂದ ಅವುಗಳ ಮಹತ್ವ ಅರಿಯಬಹುದು. ಅವು ಏನು ಸಂದೇಶ ನೀಡುತ್ತವೆ ಎನ್ನುವುದು ಕೂಡ ಗೊತ್ತಾಗುತ್ತದೆ.
ಇಂದಿನ ಆಧುನಿಕ ತಂತ್ರ ಜ್ಞಾನ ಜಗತ್ತಿನ ನಡುವೆಯೂ ಪುಸ್ತಕಗಳು ಉಳಿಸಿಕೊಂಡಿರುವ ಮಹತ್ವವನ್ನು ಸಾರುವ ದಿನ ಇದಾಗಿದೆ. ತಂತ್ರಜ್ಞಾನ ಈ ನಿಟ್ಟಿನಲ್ಲಿ ಎಷ್ಟೇ ಬೆಳೆದರೂ ಕೂಡ ಪುಸ್ತಕ ಓದುವವರು ಕೂಡ ಇದ್ದೇ ಇರುತ್ತಾರೆ. ಆದರೂ ಎಲ್ಲೋ ಒಂದು ಕಡೆ ತಂತ್ರಜ್ಞಾನ ಪುಸ್ತಕ ಸಂಸ್ಕೃತಿಯನ್ನು ಹತ್ತಿಕ್ಕುತಿದೆ ಎಂದು ಹೇಳಬೇಕು. ಬರಹಗಾರರು ಹೆಚ್ಚು ಇದ್ದರೂ ಪ್ರಕಾಶಕರು ಅವುಗಳನ್ನು ಮುದ್ರಿಸಲು ಮುಂದೆ ಬರುತ್ತಿಲ್ಲ.
ಈ ರೀತಿ ತಲುಪಲು ಪ್ರಮುಖ ಕಾರಣ ಎಂದರೆ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳನ್ನು ಸರ್ಕಾರ ಕೊಂಡುಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ. ಇದನ್ನು ಎಲ್ಲಾ ಪ್ರಕಾಶಕರು ಮುಂದೆ ನಿಂತು ಹೇಳುತ್ತಾರೆ.
ಮೊಬೈಲ್ ಬಂದ ಮೇಲೆ ಓದುವ ಸಂಸ್ಕೃತಿ ತೀರ ಕಡಿಮೆಯಾಗಿದೆ. ಮೊಬೈಲ್ಗಳಲ್ಲಿ ಕಥೆ, ಕವನ, ಲೇಖನ ಸೆಂಡ್ ಮಾಡುವುದರ ಮೂಲಕ ಸಾಹಿತ್ಯ ಸಾಗುತ್ತಿದೆ. ಇಲ್ಲೂ ಕೂಡ ನೂರಾರು ಓದುಗರು ಇದ್ದಾರೆ. ಇಂಟರ್ನೆಟ್ ಯುಗದಲ್ಲಿ ವಿಶ್ವವೇ ಒಂದು ಹಳ್ಳಿಯಾಗಿ ಮಾರ್ಪಟ್ಟಿರುವಾಗ ಈ ಪುಸ್ತಕಗಳ ಜಂಜಾಟ ಏಕೆಂದು ಹಲವು ಮಾರಾಟಗಾರರು ಕೂಡ ಹೇಳುತ್ತಾರೆ.
ಆದರೆ ಈ ತಂತ್ರಜ್ಞಾನಾಧರಿತ ಓದು ಮತ್ತು ಪುಸ್ತಕದ ಓದಿನ ಪರಿಣಾಮಗಳು ಮಾತ್ರ ವಿಭಿನ್ನ ಅನುಭವ ತರುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗ್ರಾಮ ಪಂಚಾಯಿತಿ ಹಂತದಲ್ಲಿ ಮತ್ತು ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರವೇ ಗ್ರಂಥಾಲಯಗಳನ್ನು ತೆರೆದಿದೆ.
ಅವುಗಳನ್ನು ಕೂಡ ನಾವು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅಲ್ಲಿ ವೈವಿಧ್ಯಮಯ ಪುಸ್ತಕಗಳು ಸಿಗುತ್ತವೆ. ಕೇವಲ ಲೇಖನ, ಕಥೆ, ಕವನ, ಪುಸ್ತಕಗಳು ಅಲ್ಲದೆ, ಸ್ಪರ್ಧಾತ್ಮಕ ದೃಷ್ಟಿಯಿಂದ ಹಲವು ಸ್ಪರ್ಧಾ ಪುಸ್ತಕಗಳು ಕೂಡ ಸಿಗುತ್ತವೆ. ಅವರು ಗ್ರಂಥಾಲಯಗಳನ್ನು ಉಪಯೋಗಿಸಿಕೊಂಡು, ಐಎಎಸ್, ಕೆ ಎ ಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉದ್ಯೋಗಕ್ಕೆ ಸೇರಿದ್ದಾರೆ.
ಈ ಪುಸ್ತಕ ಓದುವ ಸಂಸ್ಕೃತಿ ಮನೆಯಿಂದ ಪ್ರಾರಂಭವಾಗಬೇಕು. ಹಲವು ಸ್ಪರ್ಧೆಗಳಲ್ಲಿ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ಉಚಿತವಾಗಿ ಉಡುಗೊರೆಯ ರೂಪದಲ್ಲಿ ಕೊಡಬೇಕು. ದೊಡ್ಡವರು ಮೊದಲು ಪುಸ್ತಕ ಓದಬೇಕು ನಂತರ ಚಿಕ್ಕವರು ಕೂಡ ಓದುತ್ತಾರೆ. ಜೊತೆಗೆ ಈ ಮೊಬೈಲ್ ಸಂಸ್ಕೃತಿಯಿಂದ ದೂರ ಸರಿಯಬೇಕು. ಪ್ರತಿಯೊಂದು ಮನೆಯಲ್ಲೂ ಕೂಡ ಮಿನಿ ಗ್ರಂಥಾಲಯ ನಿರ್ಮಿಸಬೇಕು. ಸ್ವಲ್ಪ ಮಟ್ಟಿಗಾದರೂ ಕೂಡ ನಾವು ಪುಸ್ತಕಗಳನ್ನು ಕೊಂಡು ಓದೋಣ. ನಿಮ್ಮ ಪ್ರಯಾಣದ ಅವಧಿಯಲ್ಲಿ ಒಂದು ಪುಸ್ತಕವು ನಿಮ್ಮ ಬ್ಯಾಗಿನಲ್ಲಿರಲಿ. ಜೊತೆಗೆ ರಾತ್ರಿಯ ಸಮಯ ಯಾವುದಾದರೂ ಒಂದು ಪುಸ್ತಕದ ಏಳೆಂಟು ಪುಟಗಳನ್ನು ಓದಿ ಮಲಗಿದರೆ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ. ಈ ಪುಸ್ತಕ ಓದುವ ಸಂಸ್ಕೃತಿಯು ನಮ್ಮ ಕಾಲಕ್ಕೆ ನಿಲ್ಲಬಾರದು. ಅದು ನಮ್ಮ ಮುಂದಿನ ಪೀಳಿಗೆಗೂ ಕೂಡ ಮುಂದುವರಿಯಬೇಕು.
ನಾವು ಸದಾ ಮೊಬೈಲ್ ನೋಡಿದರೆ ತಲೆತಗ್ಗಿಸುವಂತೆ ಮಾಡುತ್ತದೆ. ಆದರೆ ಅದೇ ಪುಸ್ತಕಕ್ಕೆ ನಾವು ಹೆಚ್ಚಿನ ಸಮಯ ಮೀಸಲಿಟ್ಟರೆ ತಲೆಯೆತ್ತಿ ನಡೆಯಲು ನೆರವು ನೀಡುತ್ತದೆ. ಇಲ್ಲಿಯೇ ಪುಸ್ತಕದ ಮಹತ್ವವನ್ನು ಅರಿಯಬಹುದಾಗಿದೆ. ಕೆಲವು ಮುಖಪುಟದ ಪುಸ್ತಕಗಳೇ ನಮ್ಮನ್ನು ಸೆಳೆಯುತ್ತವೆ. ಜೊತೆಗೆ ಖ್ಯಾತ ಸಾಹಿತಿಗಳು ಕೂಡ ಬೆನ್ನುಡಿ, ಮುನ್ನುಡಿ ಬರೆದಿರುತ್ತಾರೆ. ಈಗಲೂ ಕೂಡ ನಮ್ಮ ಯುವಜನತೆ ಅನೇಕ ಸದಾಭಿರುಚಿಯ ಪುಸ್ತಕಗಳನ್ನು ಬರೆದಿದ್ದಾರೆ. ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು.
ಬನ್ನಿ ಇವತ್ತಿನಿಂದಾದರೂ ಒಂದಷ್ಟು ಪುಸ್ತಕಗಳನ್ನು ಕೊಂಡುಕೊಂಡು ಓದೋಣ.
ಎಲ್ಲರಿಗೂ ವಿಶ್ವ ಪುಸ್ತಕ ದಿನಾಚರಣೆ ಹಾರ್ದಿಕ ಶುಭಾಶಯಗಳು.
ಕಾಳಿಹುಂಡಿ ಶಿವಕುಮಾರ್ ಮೈಸೂರು. 9844883581.