ಪ್ರಕೃತಿಯೊಂದಿಗೆ ನಾವು ವಿಶೇಷವಾಗಿ ಆಚರಿಸುವ ಹಬ್ಬವೇ “ಯುಗಾದಿ”!.

ಮೊದಲಿಗೆ "ದ ರಾ ಬೇಂದ್ರೆ"ಯವರು ಬರೆದಿರುವ "ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ...." ಕವನವನ್ನ ಪೂರ್ತಿ ಓದೋಣ......

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.
ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ.
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ.
ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ.
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ.
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ.

ನಿಜಕ್ಕೂ ಈ ಕವನವನ್ನು ನಾವು ಒಮ್ಮೊಮ್ಮೆ ಓದಿದರೂ ಒಂದೊಂದು ರೀತಿಯಲ್ಲಿ ಭಾವ ನಮ್ಮ ಮನದಲ್ಲಿ ಮೂಡುತ್ತದೆ. ಏಕೆಂದರೆ ದ ರಾ ಬೇಂದ್ರೆಯವರು ಎಂದೋ ಬರೆದ ಈ ಕವನದ ಪ್ರತಿಯೊಂದು ಸಾಲುಗಳು ಕೂಡ ಅರ್ಥಪೂರ್ಣವಾಗಿ, ಮೌಲಿಕವಾಗಿ ಸದಾ ಹೊಸ ಹೊಸ ಸಂದೇಶವನ್ನು ಸಾರುತ್ತದೆ.

ಅದರಲ್ಲೂ ಈ ಯುಗಾದಿ ಹಬ್ಬ ಬಂತೆಂದರೆ ಸಾಕು ಈ ಒಂದು ಕವನದ ಸಾಲುಗಳು ನಮಗೆ ಕ್ಷಣಾರ್ಧದಲ್ಲಿ ನೆನಪಾಗುತ್ತವೆ!. ಜೊತೆಗೆ ಈ ಕವನ ನಮ್ಮ ಬಾಲ್ಯದ ದಿನಗಳನ್ನು ಕೂಡ ನೆನಪಿಸುತ್ತದೆ!!. ಏಕೆಂದರೆ ನಮ್ಮ ಪಠ್ಯ ವಿಷಯವಾಗಿ ಈ ಕವನ ನಮಗೆ ಇತ್ತು. ಅಂದು ಓದಿದ ಈ ಕವನದ ಸಾಲುಗಳು ಇವತ್ತಿಗೂ ಕೂಡ ನಮಗೆ ನೆನಪಾಗಿ ಬರುತ್ತವೆ.

ಬಂದಿತು ಬಂದಿತು ಹೊಸ ಯುಗಾದಿ, ತಂದಿತು ತಂದಿತು ಸಂಭ್ರಮದ ಆಚರಣೆಯ ನಮ್ಮ ಮನೆ- ಮನದಲ್ಲಿ. ನಿಜಕ್ಕೂ ಈ ಆಚರಣೆ ಎನ್ನುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅತಿ ಹೆಚ್ಚಾಗಿ ಇದೆ. ಅದರಿಂದಾಗಿ ನಮ್ಮ ಸಂಪ್ರದಾಯದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಗಳು ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಜೊತೆಗೆ ಹಬ್ಬಕ್ಕೆ ತನ್ನದೇ ಆದ ಇತಿಹಾಸ, ಪುರಾಣ ಕಥೆಗಳು ಎಲ್ಲವೂ ಇದೆ.

ಒಂದೊಂದು ಹಬ್ಬಗಳು ಕೂಡ ಒಂದೊಂದು ವಿಭಿನ್ನ ರೀತಿಯಲ್ಲಿ ನಮ್ಮ ಜೀವನದೊಂದಿಗೆ ಹಾಸುಹೊಕ್ಕಾಗಿವೆ. “ಯುಗದ ಆದಿ, ಈ ಯುಗಾದಿ”- ಆಗಿದೆ.

ಕಾಲ ಗಣನೆಯಲ್ಲಿ ಮುಖ್ಯವಾಗಿ ನಾವು ಇವತ್ತಿಗೂ ಕೂಡ ಎರಡು ಪದ್ಧತಿಗಳನ್ನು ಆಚರಿಸುತ್ತಾ, ಅಳವಡಿಸಿಕೊಳ್ಳುತ್ತಾ ಬಂದಿದ್ದೇವೆ. ಮೊದಲನೆಯದಾಗಿ ಚಂದ್ರನ ಚಲನವಲನವನ್ನ ಗಮನಿಸಿ ಅಂದರೆ ಅಂದರೆ ತಿಥಿ, ಪಕ್ಷ, ಮಾಸ ಇತ್ಯಾದಿ. ಈ ರೀತಿ ನಿರ್ಧರಿಸುವುದೇ ಚಾಂದ್ರಮಾನ ವಾಗಿದೆ. ಇನ್ನು ಎರಡನೇದಾಗಿ ಸೂರ್ಯನ ಗತಿಯನ್ನ ಪರಿಗಣಿಸುತ್ತ ಇವನ್ನೆಲ್ಲಾ ಲೆಕ್ಕ ಹಾಕುವುದೇ ಸೌರಮಾನವಾಗಿದೆ ಅದರಲ್ಲೂ ಚಾಂದ್ರಮಾನ ಯುಗಾದಿಯು ಚೈತ್ರ ಶುದ್ಧ ಪಾಡ್ಯದಂದು ಬಂದರೆ ಸೌರಮಾನ ಯುಗಾದಿಯು “ವಿಷು” ಎಂದು ಕರೆಯಲಾಗುತ್ತದೆ. ಇದಕ್ಕೆ ತನ್ನದೇ ಆದ ಅರ್ಥ ಇದೆ. ಸೂರ್ಯನು ಮೇಷ ಅಥವಾ ತುಲಾ ಸಂಕ್ರಾಂತಿ ದಿನ ಆ ರಾಶಿಗಳನ್ನು ಪ್ರವೇಶಿಸುವ ಆರಂಭದ ಬಿಂದು. ಸೂರ್ಯನು ಭೂಮಧ್ಯ ರೇಖೆಯನ್ನು ಹಾಯುವ ಕಾಲವಾಗಿರುತ್ತದೆ. ಅಲ್ಲದೆ ರಾತ್ರಿ ಮತ್ತು ಹಗಲು ಒಂದೇ ಪ್ರಮಾಣದಲ್ಲಿರುವ ಕಾಲ ಇದಾಗಿದೆ.
ಆದುದರಿಂದಾಗಿ ಸೌರಮಾನವು “ವಿಷು” ಅಂದರೆ…. ಸಮಾನವಾದದ್ದು, ಹೆಚ್ಚು ಕಡಿಮೆ ಇಲ್ಲದ್ದು ಎಂಬ ಅರ್ಥ ಬರುತ್ತದೆ. ಒಂದು ನಂಬಿಕೆಯ ಪ್ರಕಾರ ಬ್ರಹ್ಮನು ಕೃತ ಯುಗ ಅಥವಾ ಸತ್ಯಯುಗದಲ್ಲಿ ಸೃಷ್ಟಿಯನ್ನ ಆರಂಭ ಮಾಡಿದ ದಿನವೂ ಇದಾಗಿದೆ.

ಚಾಂದ್ರಮಾನದ ಪ್ರಕಾರ 60 ವರ್ಷದ ಚಕ್ರ ಇದೆ. 60ಕ್ಕೂ ಕೂಡ ಬೇರೆ ಬೇರೆ ರೀತಿಯಲ್ಲಿ ಹೆಸರುಗಳಿವೆ. ಅಂದರೆ 60 ಸಂವತ್ಸರ ಚಕ್ರ. ನಮ್ಮ ಪೂರ್ವಿಕರು ಅನಾದಿಕಾಲದಿಂದಲೂ ಕೂಡ ಪ್ರಕೃತಿಯನ್ನು ಪೂಜಿಸುತ್ತಾ ಪ್ರಕೃತಿಗೆ ತನ್ನದೇ ಆದ ಗೌರವವನ್ನು ನೀಡುತ್ತಾ ಬಂದಿರುವುದು ಪ್ರತೀತಿ. ಅದು ನಮಗೆಲ್ಲರಿಗೂ ಕೂಡ ತಿಳಿದಿರುವ ವಿಷಯವಾಗಿದೆ.

ಆದುದರಿಂದಾಗಿ ಪ್ರಕೃತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಜೀವನದ ಜೊತೆ ಅಳವಡಿಸಿಕೊಂಡು ಪೂಜಿಸುತ್ತಾ ಭಯ- ಭಕ್ತಿಯಿಂದ ದಿನವನ್ನು ದೂಡುವ, ಸಂಗತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಆದುದರಿಂದಾಗಿ ಶಿಶಿರ ಋತುವು ಹಳೆಯ ಜಡತ್ವವನ್ನೆಲ್ಲ ತೊರೆದು ಹೊಸ ಹುರುಪಿನೊಂದಿಗೆ ಪ್ರಕೃತಿಯ ಹೊಸತನದೊಂದಿಗೆ ನಮ್ಮ ಜೊತೆಜೊತೆಗೆ ಸಾಗುತ್ತದೆ. ಅಂದರೆ ಈ ಸಂದರ್ಭದಲ್ಲಿ ಇರುತ್ತದೆ. ಅಂದರೆ ಪ್ರತಿ ಗಿಡದಲ್ಲೂ ಕೂಡ ಹೊಸದಾದ ಚಿಗುರು, ಹೊಸದಾದ ಎಲೆ, ಹೊಸದಾದ ಹೂವು ಕಂಡುಬರುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ದುಂಬಿಗಳ ಝೇoಕಾರ ಕೂಡ ಇಂಪಾದ ಸಂಗೀತದಂತೆ ನಮಗೆ ಕೇಳಿಸುತ್ತದೆ. ಅಂದರೆ ಇಡೀ ಪ್ರಕೃತಿಯೇ ಸೃಜನಶೀಲತೆಯಿಂದ ಕೂಡಿರುತ್ತದೆ. ಚೈತ್ರ ಮಾಸದಲ್ಲಿ, ವಸಂತ ಋತುವಿನಲ್ಲಿ ಪ್ರಕೃತಿ ಹೊಸತನದಿಂದ ನಮಗೂ ಕೂಡ ಮುದ ನೀಡುತ್ತದೆ. ಹೊಸದಾದ ಬಟ್ಟೆಯನ್ನು ತೊಟ್ಟು, ದೇವರ ಪೂಜೆ ಪ್ರಸಾದ ಎಲ್ಲವನ್ನ ಸ್ವೀಕರಣೆ ಮಾಡಿ, ಧಾರ್ಮಿಕವಾಗಿ ಭಯ- ಭಕ್ತಿಯಿಂದ ಭಜನೆ ಮುಂತಾದ ಒಂದು ಸಂಪ್ರದಾಯದಲ್ಲಿ ತೊಡಗಿ, ಸಾಮೂಹಿಕವಾಗಿ ಭೋಜನವನ್ನು ಸವಿದು, ಸಂಭ್ರಮಿಸುವ ಹಬ್ಬಗಳು ಎಂದರೆ ಎಲ್ಲರಿಗೂ ಕೂಡ ಪಂಚಪ್ರಾಣ. ದೇವಮಂದಿರದಲ್ಲಿ ಭಜನೆಗಳು ನಡೆಯುತ್ತವೆ. ಪೂಜೆ ಪ್ರಸಾದಗಳು ಸಾಗುತ್ತಲೇ ಇರುತ್ತವೆ. ಒಂದೊಂದು ಹಬ್ಬ ಒಂದೊಂದು ರೀತಿಯಲ್ಲಿ ಇರುತ್ತದೆ. ಅದಕ್ಕಲ್ಲವೇ ಡಿವಿಜಿಯವರು ಅರ್ಥಪೂರ್ಣ ಮಾತನ್ನು ಹೇಳಿದ್ದಾರೆ…….. “ದೇವಮಂದಿರ, ಭಜನೆ, ಪೂಜೆ, ಪ್ರಸಾದಗಳು ಜೀವನದ ಅಲಂಕಾರ, ಮನಸ್ಸಿನ ಉದ್ದಾರ”- ಎಂದಿದ್ದಾರೆ.

ಯುಗಾದಿ ಹಬ್ಬ ಬಂತಂದರೆ ನಮಗೆ ಬೇವು- ಬೆಲ್ಲದ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಅಂದರೆ ಹಬ್ಬದಂದು ಬೇವು ಜೊತೆಗೆ ಬೆಲ್ಲವನ್ನು ಸವಿದು ಅಂದರೆ ನಮಗೆ ಈ ಯುಗಾದಿಯಿಂದ ಮುಂದಿನ ಯುಗಾದಿಯವರೆಗೆ ನಮ್ಮ ಜೀವನದಲ್ಲಿ ಕಷ್ಟ- ಸುಖಗಳು ಸಮ ಪ್ರಮಾಣದಲ್ಲಿ ಇರಲಿ ಎನ್ನುವುದೇ ಇದರ ಮುಖ್ಯ ಸಂದೇಶವಾಗಿದೆ.

ಮನುಷ್ಯನ ಜೀವನದಲ್ಲಿ ಸುಖ ದುಃಖಗಳು ಒಂದಲ್ಲ ಒಂದು ರೀತಿಯಲ್ಲಿ ಬಂದೇ ಬರುತ್ತವೆ. ಅದನ್ನ ನಾವು ಸಮಪ್ರಮಾಣದಲ್ಲಿ ಸ್ವೀಕರಿಸಬೇಕು. ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ಬಂದ ಸಮಸ್ಯೆಯನ್ನ ಹೇಗೆ ಪರಿಹರಿಸಬೇಕು? ಎನ್ನುವುದನ್ನು ಪ್ರಕೃತಿಯೇ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಕಲಿಸಿ ಬಿಟ್ಟಿರುತ್ತದೆ!. ಅದನ್ನು ನಾವು ರೂಡಿಸಿಕೊಂಡು ಮುಂದೆ ಮುಂದೆ ಸಾಗಬೇಕು. ಅದೇ ಜೀವನ.
ಮಾಲತಿ ಪಟ್ಟಣಶೆಟ್ಟಿ ಅವರು ತಮ್ಮ ಚಿಂತನದಲ್ಲಿ ಪ್ರಕೃತಿಯ ಬಗ್ಗೆ ಈ ರೀತಿ ದಾಖಲಿಸುತ್ತಾರೆ……….

ಗಿಡ ಮರದಲ್ಲಿ ನಸುಗೆಂಪಿನ ಚಿಗುರು ಮೂಡಿದಾಗ,
ದುಂಡು ಮಲ್ಲಿಗೆಯ ಕಂಪು ಚಿಟ್ಟೆಯನ್ನು ಕರೆದಾಗ,
ಮಾವಿನ ಮರದಲಿ ಮಾವಿನ ಕಾಯಿ ತೂಗಿದಾಗ,
ಎಲ್ಲಿಂದಲೋ ಬಂದ ಕೋಗಿಲೆಯ ಕೂಗು ಕಿವಿಗೆ ಇಂಪಾಗಿ ಕೇಳಿದಾಗ, ಈ
ಯುಗಾದಿಯು ಬಂತು ಎನ್ನುತ್ತಾರೆ.

ನಿಜಕ್ಕೂ ಈ ಸಾಲುಗಳು ಎಷ್ಟೊಂದು ಅರ್ಥಪೂರ್ಣ ಅಲ್ಲವೇ ಇವೆಲ್ಲವೂ ಕೂಡ ನಮಗೆ ಗೊತ್ತಿರುವ ವಿಷಯ ಅಂದರೆ ನಾವು ಪ್ರತಿಯೊಬ್ಬರಲ್ಲೂ ಈ ರೀತಿಯ ಹಬ್ಬಕ್ಕೆ ತಕ್ಕಂತಹ ಪ್ರಕೃತಿಯ ಚಿತ್ರಣವನ್ನು ನಮ್ಮ ಕಣ್ಮುಂದೆ ಕಾಣುತ್ತೇವೆ, ಅನುಭವಿಸುತ್ತೇವೆ. ಆದರೆ ಅದನ್ನ ತಾಳ್ಮೆಯಿಂದ ಆಚರಿಸುವ ಸಂಪ್ರದಾಯವನ್ನು ಮರೆಯುತ್ತಾ ಬರುತ್ತಿದ್ದೇವೆ. ಇದೊಂದು ಗಮನಿಸಬೇಕಾದ ಅಂಶ.

ಪ್ರಕೃತಿ ನಮಗೆ ಅನೇಕ ಸಂದೇಶಗಳನ್ನ, ಎಚ್ಚರಿಕೆ ಪಾಠವನ್ನು ದಿನದಿಂದ ದಿನಕ್ಕೂ ಕಲಿಸುತ್ತಾ ಬರುತ್ತಿದೆ. ಆದರೆ ನಾವು ನಾವು ಅದರಿಂದ ಪಾಠ ಕಲಿಯುತ್ತಿಲ್ಲ. ಪರಿಣಾಮವಾಗಿ ಅನೇಕ ಸಮಸ್ಯೆಗಳನ್ನು ಕೂಡ ನಾವು ಎದುರಿಸುತ್ತಾ ಬರುತ್ತಿದ್ದೇವೆ.

ಈ ಯುಗಾದಿ ಹಬ್ಬ ಬಂತೆಂದರೆ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೈಮನಗಳು ರೋಮಾಂಚನ ನೀಡುತ್ತದೆ. ಏಕೆಂದರೆ ಹಬ್ಬದ ಸಂಭ್ರಮವೇ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಕ್ಯಾಲೆಂಡರ್ ಪ್ರಕಾರ ಜನವರಿ ಒಂದು ಹೊಸ ವರ್ಷ ಆದರೂ ಕೂಡ, ಹಿಂದುಗಳಿಗೆ ಯುಗಾದಿ ಹಬ್ಬದಂದೆ ಹೊಸ ವರ್ಷ ಪ್ರಾರಂಭವಾಗುತ್ತದೆ. ಯುಗಾದಿಯು ವರ್ಷದ ಮೊದಲ ಹಬ್ಬವಾಗಿದೆ. ಹಳೆಯ ವರ್ಷ ವನ್ನು ಬೀಳ್ಕೊಡುವ, ಹೊಸ ವರ್ಷವನ್ನ ಸ್ವಾಗತಿಸುವ ದಿನ ಆಗಿದೆ. ಇದಕ್ಕೆಲ್ಲ ಈ ಸುಂದರ ವಿಶಿಷ್ಟ ಪ್ರಕೃತಿಯು ಸಾಕ್ಷಿಯಾಗಿರುತ್ತದೆ. ನಾವು ಪ್ರಕೃತಿಯೊಂದಿಗೆ ಬೆರೆತು, ಅರಿತು ಪ್ರಕೃತಿಯನ್ನ ಪೂಜಿಸುತ್ತಾ ಬರುವ ಹಬ್ಬಗಳನ್ನು ಆಚರಿಸುವ ಸಂಪ್ರದಾಯವನ್ನು ಮರೆಯದೆ ವರ್ಷದಿಂದ ವರ್ಷಕ್ಕೆ ಬರುತ್ತಿದ್ದೇವೆ.

ಆದರೆ ಎಲ್ಲೋ ಒಂದು ಕಡೆ ನಾವು ಆಚರಿಸುವ ಹಬ್ಬಗಳು ತನ್ನತನವನ್ನು ಕಳೆದುಕೊಳ್ಳುತ್ತಿವೆ ಎಂದೇ ಹೇಳಬೇಕು. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಪ್ರದಾಯಗಳನ್ನ ಮರೆಯುತ್ತ ಬರುತ್ತಿದ್ದೇವೆ. ಮುಖ್ಯವಾಗಿ ನಾವು ನಮ್ಮ ಮುಂದಿನ ಪೀಳಿಗೆಯ ಕೊಂಡಿಯುಂತಿರುವ ಯುವ ಜನತೆಗೆ ಹಬ್ಬದ ಮಹತ್ವವನ್ನು ಸಾರಬೇಕು. ಪ್ರತಿಯೊಂದು ಹಬ್ಬಗಳು ಕೂಡ ವೈವಿಧ್ಯಮಯವಾಗಿ ನಮ್ಮ ಮನದಲ್ಲಿ ಭಾವನೆಯನ್ನು ಮೂಡಿಸುತ್ತವೆ.
ಶ್ಯಾವಿಗೆ ಪಾಯಸ, ಹೋಳಿಗೆ ಎಲ್ಲವನ್ನ ಸವಿದು ಅದಕ್ಕೂ ಮುಂಚೆ ಎಣ್ಣೆ ಮಜ್ಜನ ಮಾಡುವುದು, ಹೊಸದಾದ ಬಟ್ಟೆಗಳನ್ನ ಧರಿಸುವುದು, ಬಂಧು ಬಾಂಧವರೊಂದಿಗೆ ಒಟ್ಟಾಗಿ ಸಂಭ್ರಮಿಸುವುದು, ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿ ನಂತರ ಪ್ರಸಾದ ಸ್ವೀಕರಿಸುವುದು, ಅಲ್ಲದೆ ಈ ಸಂಭ್ರಮದ ಜೊತೆ ಜೊತೆಯಲ್ಲೇ ನಾವು ಸುತ್ತಮುತ್ತಲು ಸಿಗುವ ಹೂವುಗಳನ್ನ ತೆಗೆದುಕೊಂಡು ಮನೆಯ ಮುಂದೆ ಸಿಂಗಾರ ಮಾಡುವುದು ಜೊತೆಗೆ ಮನೆಯ ಮುಂದಿನ ಭಾಗದಲ್ಲಿ ರಂಗೋಲಿ ಹಾಕುವುದು ಸ್ವಲ್ಪ ಬಿಡುವು ಮಾಡಿಕೊಂಡು ಪಂಚಾಂಗ ವಾಚನ ಮಾಡುವುದು ಅಂದರೆ ಈಗಲೂ ಕೂಡ ಅನೇಕ ಹಳ್ಳಿಗಳಲ್ಲಿ ಹಬ್ಬದ ನಡುವೆ ಪಂಚಾಂಗ ಶ್ರವಣ ಮಾಡುವುದು ಕೂಡ ಕಂಡುಬರುತ್ತದೆ. ಅಂದರೆ ಹಿರಿಯರು ಪಂಚಾಂಗವನ್ನು ಓದಿ ಕಿರಿಯರಿಗೆ ತಿಳಿಸುತ್ತಾರೆ. ಅಂದರೆ ಸುಖ- ದುಃಖದ ಬಗ್ಗೆ ಮುಂದಿನ ಯುಗಾದಿಯವರಿಗೆ ಏನೆಲ್ಲ ಕಾರ್ಯಗಳನ್ನು ನಾವು ಕೈಗೊಳ್ಳಬಹುದು. ಮಳೆ ಬೆಳೆ ದಿನಗಳ ಮಹತ್ವ, ರಾಶಿಗಳ ಬಗ್ಗೆ ಜೊತೆಗೆ ಪ್ರತಿಯೊಂದು ವಿಷಯಗಳ ಬಗ್ಗೆಯೂ ಕೂಡ ತಿಳಿಸುತ್ತಾರೆ.

ಆದುದರಿಂದಾಗಿ ಚಾಂದ್ರಮಾನ ಮತ್ತು ಸೌರಮಾನ ಯುಗಾದಿಯು ನಮಗೆ ಗೊತ್ತಿಲ್ಲದ ರೀತಿಯಲ್ಲಿ ಸಂದೇಶವನ್ನ ಸಾರುವುದರ ಜೊತೆಗೆ ಹೊಸದಾದ ಬೆಳಕನ್ನು ಕೂಡ ಮನದಲ್ಲಿ ಮೂಡಿಸುತ್ತದೆ. “ಕತ್ತಲೆಯ ವಾತಾವರಣದಲ್ಲಿ ಬೆಳಕಿನ ಹೊಳಪು ಹೆಚ್ಚಾಗುವಂತೆ, ಕಷ್ಟಗಳನ್ನ ಅನುಭವಿಸಿದ ನಂತರ ಸುಖವು ಬರುವಂತೆ”- ಈ ಯುಗಾದಿಯು ಕಷ್ಟ ಮತ್ತು ಸುಖಗಳ ಸಮ್ಮಿಶ್ರಣ ವಾಗಿದೆ.

ಆದುದರಿಂದಾಗಿ ಪ್ರತಿಯೊಂದು ಹಬ್ಬಗಳು ಕೂಡ ತನ್ನದೇ ಆದ ಮೌಲ್ಯ ಅಂಶವನ್ನು ಒಳಗೊಂಡಿರುತ್ತವೆ. ಈಗ ಬಂದಿರುವ ಯುಗಾದಿಯನ್ನು ಎಲ್ಲರೂ ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ಹಿಂದುಗಳ ಪವಿತ್ರ ಮೊದಲ ಹಬ್ಬವಾದ ಯುಗಾದಿ ಎಲ್ಲರ ಸಂಕಷ್ಟಗಳನ್ನ ನಿವಾರಿಸುವ ಶಕ್ತಿಯನ್ನು ನೀಡಲಿ. ಜೊತೆಗೆ ನಮ್ಮ ರಾಜ್ಯಕ್ಕೆ, ರಾಷ್ಟ್ರಕ್ಕೆ ಒಳಿತಾಗಲಿ.

ಜೊತೆಗೆ ಮುಖ್ಯವಾಗಿ ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಕಲಿತುಕೊಳ್ಳೋಣ. ಈ ಸುಂದರ ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ಯಾವುದನ್ನು ನೀಡುತ್ತಿಲ್ಲ!!. ಪ್ರಕೃತಿ ಕೊಡುವ ಪ್ರತಿಯೊಂದು ಸವಲತ್ತುಗಳನ್ನ ಪಡೆದುಕೊಳ್ಳುತ್ತಿದ್ದೇವೆ ಹೊರತು ಪ್ರಕೃತಿಗೆ ನಾವು ಮರು ಕಾಣಿಕೆಯನ್ನು ನೀಡುತ್ತಿಲ್ಲ. ಅಂದರೆ ಪ್ರಕೃತಿಯನ್ನು ನಾವು ಕಾಪಾಡಬೇಕು. ಗಿಡಗಳನ್ನು ಹೆಚ್ಚೆಚ್ಚು ನೀಡಬೇಕು. ಮತ್ತು ಪ್ರಕೃತಿಯೊಂದಿಗಿನ ಸುಮಧುರ ಬಾಂಧವ್ಯವಿದ್ದರೆ ನಾವು ಕೂಡ ಅದರ ಜೊತೆ ಜೊತೆಯಲ್ಲಿ ಮತ್ತಷ್ಟು ಸಂಭ್ರಮದಿಂದ ಸಾಗಬಹುದು.

ಕಾಳಿಹುಂಡಿ ಶಿವಕುಮಾರ್ ಮೈಸೂರು.

Leave a Reply

Your email address will not be published. Required fields are marked *