ಚಾಮರಾಜನಗರ, ಸೆ. 28-ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿರಾಜೇಂದ್ರಸ್ವಾಮಿಗಳ 108ನೇ ಜಯಂತಿ ಮಹೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಅಚರಣೆ ಮಾಡಲಿದ್ದು, ಅ. 2 ಮತ್ತು 3 ರಂದು ಎರಡು ದಿನಗಳ ಬೃಹತ್ ಆರೋಗ್ಯತಪಾಸಣೆ ಶಿಬಿರ, 108 ಮಂದಿಯಿಂದ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ಜಯಂತೋತ್ಸವ ಆಚರಣೆ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಭಕ್ತವೃಂದ, ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅಕ್ಟೋಬರ್ 2 ರಂದು ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀಗಳ ಜಯಂತಿಯ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಬೃಹತ್ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ.
ಅ. 3 ರ ಮಂಗಳವಾರ ಬೆಳಗ್ಗೆ 10.30ಕ್ಕೆ ರಾಜೇಂದ್ರಶ್ರೀಗಳ 108ನೇ ಜಯಂತಿ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸುವವರು, ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಮಾರಂಭ ಉದ್ಗಾಟಿಸುವರು. ನಿವೃತ್ತ ಸೈನಿಕರಿಗೆ ಸಂಸದ ವಿ. ಶ್ರೀನಿವಾಸಪ್ರಸಾದ್ ಸನ್ಮಾನ ಮಾಡಲಿದ್ದಾರೆ.
ಶಾಸಕ ಸಿ. ಪುಟ್ಟರಂಗಶೆಟ್ಟಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಿದ್ದಾರೆ. ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ. ಸೋಮಶೇಖರ್ ನುಡಿ ನಮನ ಸಲ್ಲಿಸುವವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್ ಭಾಗವಹಿಸಲಿದ್ದಾರೆ. ಎಂದು ತಿಳಿಸಿದರು.
ಅ.2 ರಂದು ಆರೋಗ್ಯತಪಾಸಣೆ ಶಿಬಿರ : ಬೆಳಗ್ಗೆ 9 ಗಂಟೆಗೆ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಅವರಣದಲ್ಲಿ ಮೈಸೂರು ಜೆಎಸ್ಎಸ್ ಅಸ್ಪತ್ರೆಯ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಗುತ್ತದೆ. ಸಾಮಾನ್ಯ ರೋಗಗಳಿಗೆ ಸಲಹೆ, ಸ್ತ್ರೀ ರೋಗ ತಪಾಸಣೆ, ಮೂಳೆ, ಶ್ವಾಸಕೋಸ, ನರ, ಸಂದಿವಾತ, ಕ್ಯಾನ್ಸರ್, ಮಕ್ಕಳು , ಹೃದಯ ಸಂಬಂಧಿ ಸಮಸ್ಯೆಗಳು, ಕಿವಿ ಮೂಗು ಗಂಟಲು ತೊಂದೆಗಳು ಚರ್ಮ, ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಸೇರಿದಂತೆ ನಾನಾ ರೋಗಗಳಿಗೆ ತಜ್ಞ ವೈದ್ಯರು ಒಂದೇ ಸೂರಿನಲ್ಲಿನಡಿಯಲ್ಲಿ ಲಭ್ಯವಿದ್ದು, ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲಿದ್ದಾರೆ ಮುಖಂಡ ದೊಡ್ಡರಾಯಪೇಟೆ ಗಿರೀಶ್ ತಿಳಿಸಿದರು.
ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರದ ಶ್ರೀ ರಾಜೇಂದ್ರಸ್ವಾಮಿಗಳ 108ನೇ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಬಹಳ ಅದ್ದೂರಿಯಾಗಿ ಸೇವಾ ಕಾರ್ಯಕ್ರಮದೊಂದಿಗೆ ಏರ್ಪಡಿಸಲಾಗಿದೆ. ಜಾತ್ಯತೀತ, ಧರ್ಮಾತೀತವಾಗಿ ಎಲ್ಲಾ ವರ್ಗ ಜನರಿಗೆ ಶಿಕ್ಷಣ, ಆರೋಗ್ಯ ಹಾಗೂ ದಾಸೋಹವನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದರು. ಅವರ ಜಯಂತಿ ಮಹೋತ್ಸವಕ್ಕೆ ಎಲ್ಲರು ಸಹ ಭಾಗವಹಿಸಿ, ಸೇವಾ ಕಾರ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ನಗರಸಭಾ ಸದಸ್ಯೆ ಚಿನ್ನಮ್ಮ, ಮಾಜಿ ಸದಸ್ಯ ಮಹಮದ್ ಆಸ್ಗರ್, ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಇದ್ದರು.