ಪ್ರವಾಸಿಗರನ್ನು ಸೆಳೆಯಲು ಫಲ ಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು
ಮೈಸೂರು ಅರಮನೆಯ ಆವರಣದಲ್ಲಿ ಆಯೋಜಿಸಿರುವ ಮಾಗಿ ಉತ್ಸವಕ್ಕೆ ಭೇಟಿ ನೀಡಿದ್ದೆ.
ಟಿಕೆಟ್ ಕೌಂಟರ್ ಗೇಟ್ ನ ಮೂಲಕ ಒಳ ಪ್ರವೇಶ ಮಾಡಿ ಬಲಭಾಗದಲ್ಲಿದ್ದ ಶ್ವೇತ ವರಾಹ ಸ್ವಾಮಿ ದೇವಸ್ಥಾನಕ್ಕೆ ಮನಸ್ಸಿನಲ್ಲಿ ನಮಿಸುತ್ತಾ ಸ್ವಲ್ಪ ಮುಂದೆ ಬಲ ಭಾಗಕ್ಕೆ ಹೋದಾಗ ಹೂವುಗಳಿಂದ ಸೃಷ್ಟಿಯಾಗಿರುವ ಪುಷ್ಪಲೋಕಕ್ಕೆ ಸ್ವಾಗತ ನೀಡುವ ಕಮಾನ್ ಮೂಲಕ ಸಾಗಿದೆವು. ದೃಷ್ಟಿ ಹರಿಸಿದ ಎಲ್ಲಾ ಕಡೆ ಪುಷ್ಪಗಳದ್ದೇ ಕಾರುಬಾರು!.

ವರ್ಷಾರಂಭಕ್ಕೆ ಮುನ್ನ ಅರಮನೆಯ ಆವರಣದಲ್ಲಿ “ಮಾಗಿ ಉತ್ಸವದ” ರಂಗು. ಲಕ್ಷಾಂತರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅರಮನೆ ಮಂಡಳಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. (ಅರಮನೆ ನೋಡಲು ಹಣ ಪಾವತಿಸಬೇಕು. ಆದರೆ ಅರಮನೆಯ ಆವರಣಕ್ಕೆ ಯಾವುದೇ ಹಣ ಪಾವತಿಸುವಂತಿಲ್ಲ.)

ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಮನಸ್ಸಿನಲ್ಲಿಟ್ಟುಕೊಂಡು ಅಂಬಾವಿಲಾಸ ಅರಮನೆಯಲ್ಲಿ ಮಾಗಿಯ ಚಳಿಯಲ್ಲಿ ಒಂದೆಡೆ ಪುಷ್ಪಗಳ ಲೋಕದಲ್ಲಿ ವಿವಿಧ ಕಲಾ ಕೃತಿಗಳು, ವಿವಿಧ ಗಣ್ಯರು. ಮತ್ತೊಂದೆಡೆ ಅರಮನೆಯ ಮುಂದೆ ಇರುವ ವೇದಿಕೆಯಲ್ಲಿ ವಿಶಿಷ್ಟ ಸಂಗೀತೋತ್ಸವ ಕಾರ್ಯಕ್ರಮ ಆಬಾಲವೃದ್ಧರಾದಿಯಾಗಿ ಎಲ್ಲರ ಮನವನ್ನು ಸೂರೆಗೊಳ್ಳುತ್ತದೆ.
ಕಳೆದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹತ್ತು ದಿನದ ಈ ಉತ್ಸವಕ್ಕೆ ಚಾಲನೆ ನೀಡಿದರು. ಇನ್ನೇನು ಕೆಲವೇ ದಿನ ಬಾಕಿ ಇದೆ.
ಶ್ವೇತ ವರಾಹ ಸ್ವಾಮಿಯ ದೇವಸ್ಥಾನದಿಂದ ಹೊರಟ ರಥೋತ್ಸವ ಅರಮನೆಯ ಆವರಣದಲ್ಲಿ ನಾಡ ದೇವತೆ ಚಾಮುಂಡಿ ಮಾತೆಯ ಮೆರವಣಿಗೆ, ದೇವಿಗೆ ಪುಷ್ಪಾರ್ಚನೆ ಯೊಂದಿಗೆ ಅದ್ದೂರಿಯಾಗಿ ನೆರವೇರಿತು. ಇದರೊಂದಿಗೆ ನಂದಿ ಕಂಬ, ಮಂಗಳವಾದ್ಯ, ಪೊಲೀಸ್ ವಾದ್ಯಗೋಷ್ಠಿ, ರಾಜ ಪರಂಪರೆ ನೆನಪಿಸುವ ಪೋಷಾಕು ದಾರಿಗಳು, ಕಹಳೆ, ಛತ್ರಿ, ಚಾಮರ, ಭರತನಾಟ್ಯ, ಇನ್ನಿತರ ಕಲಾತಂಡಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದವು. ಅರಮನೆ ಆನೆಗಳಾದ ಚಂಚಲ ಮತ್ತು ಪ್ರೀತಿ ಇವರಿಬ್ಬ ಇಂದ ಗಣ್ಯರಿಗೆ ಹೂ ಮಳೆ.

ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅದು ಈಗ ಯಶಸ್ವಿಯಾಗಿದೆ. ಉದ್ಘಾಟನೆ ಆದಾಗಿನಿಂದ ಇವತ್ತಿನವರೆಗೂ ಕೂಡ ಪ್ರವಾಸಿಗರ ದಂಡೇ ಬರುತ್ತಿದೆ.
ಮೊದಲೇ ವರ್ಷದ ಕೊನೆಯ ರಜೆಗಳು ಜೊತೆಗೆ ಹೊಸ ವರ್ಷ ಸಂಭ್ರಮವನ್ನು ಆಚರಿಸಲು ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುತ್ತಿದೆ.

ಈ ಒಂದು ಮಾಗಿಯ ಉತ್ಸವದ ಪುಷ್ಪಲೋಕದಲ್ಲಿ ಹಲವಾರು ವಿಶೇಷತೆಗಳಿವೆ.
ಮಾನವ ವನ್ಯಪ್ರಾಣಿ ಸಂಘರ್ಷ ನೆನಪಿಸುವ ಕಬ್ಬು, ಬಾಳೆ ತೋಟದಲ್ಲಿದ್ದ ತಾಯಿ, ಮರಿಯನೆಗಳ ಮಾದರಿ ಚಿತ್ರಣ ಕಣ್ಮನ ಸೆಳೆಯುತ್ತದೆ. ಹುಲಿಯ ಮೇಲೆ ಕುಳಿತ ಶ್ರೀ ಮಲೆ ಮಹದೇಶ್ವರ ಸ್ವಾಮಿ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಪ್ರಸಕ್ತ ಸಾಲಿನಲ್ಲಿ ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸೋಮನಾಥಪುರ ಚೆನ್ನಕೇಶವ ದೇವಾಲಯದ ಹೂವಿನಂದಲಂಕೃತ ಚಿತ್ರಣ ಹೃದಯಸ್ಪರ್ಶಿಯಾಗಿದೆ.

ಗುಲಾಬಿ, ಚೆಂಡು ಹೂವು ಅಲ್ಲದೇ ಇನ್ನಿತರ ಬಗೆ ಬಗೆಯ ಹೂಗಳಿಂದ ಅಲಂಕೃತಗೊಂಡಿದೆ. 50 ಅಡಿ ಅಗಲ 20 ಅಡಿ ಉದ್ದ 28 ಅಡಿ ಎತ್ತರದ ಮಾದರಿಯ ನಿರ್ಮಾಣ ಇದಾಗಿದೆ.
ಇನ್ನು ಸಿರಿಧಾನ್ಯ ವರ್ಷವಾದ್ದರಿಂದ ಹಂಪಿಯ ಏಕಶಿಲಾ ಕಲ್ಲಿನ ರಥ, ವಿರೂಪಾಕ್ಷ ಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್, ರಾಣಿ ಕೆಂಪ ನಂಜಮ್ಮಣಿ ಆಕೃತಿ.

ಇನ್ನು ಕರ್ನಾಟಕ ರಾಜ್ಯ ನಾಮಕರಣಗೊಂಡ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಮಾದರಿಯ ಚಿತ್ರ. ಸಂವಿಧಾನ ಪೀಠಿಕೆಯ ಮಾದರಿ, ಶಿವಲಿಂಗ, ನವಿಲು ಒಂದೇ ಎರಡೇ?.
ಇತ್ತೀಚೆಗೆ ತಾನೇ ನಿಧನವಾದ ಅರ್ಜುನ ಆನೆಯ ಚಿತ್ರಣಗಳು ಕಣ್ಮನ ತುಂಬುತ್ತದೆ. ಓರೆಯದ ಹೂಕುಂಡ, ಸ್ಲ್ಯಾಂಟಿಂಗ್ ಫ್ಲವರ್ ಪಾರ್ಕ್, ಬೈನಾಕುಲರ್, ಹಳೆಯ ಟಾಂಗ ಗಾಡಿ. ಜೊತೆಗೇ ಕಾಮನಬಿಲ್ಲು ಚಿತ್ರದಲ್ಲಿ ಬರುವ “ಉಳುವಾ ಯೋಗಿಯ ನೋಡಲ್ಲಿ..” ಎಂಬ ಗೀತೆಯನ್ನು ನೆನಪಿಸುವ ವರ ನಟ ಡಾ ರಾಜಕುಮಾರ್ ಅವರೊಂದಗಿನ ಜೋಡೆತ್ತುಗಳ ಚಿತ್ರಣ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಮತ್ತೊಂದು ಕಡೆ ದಸರಾ ಗೊಂಬೆಗಳ ಬಗೆ-ಬಗೆಯ ನೂರಾರು ಚಿತ್ರಗಳು. ಅಡಿಯಿಂದ ಮುಡಿವರೆಗೆ ಗಮನ ಸೆಳೆಯುತ್ತವೆ.
ಶ್ರೀ ಜಯಚಾಮರಾಜ ಒಡೆಯರ್ ರವರ ಕೃತಿಗಳು, ದಸರಾ ಅಂದು- ಇಂದು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಮೈಸೂರು ಅರಮನೆಯ ಕುರಿತು ವಿಡಿಯೋ ಚಿತ್ರೀಕರಣ ವನ್ನು ಕುಳಿತುಕೊಂಡು ವೀಕ್ಷಣೆ ಮಾಡಬಹುದು.
ಮೈಸೂರು ಅರಮನೆ ಮಂಡಳಿಯು ರಾಜ ಮನೆತನಕ್ಕೆ ಸೇರಿದ ಆಯ್ದ ಹಳೆಯ ಸಂಗ್ರಹ ಯೋಗ್ಯ ಛಾಯಾಚಿತ್ರಗಳ ಪ್ರದರ್ಶನದಲ್ಲಿ ಅಪರೂಪದ ಫೋಟೋಗಳು, ಮಾಹಿತಿಗಳು ನೂರಾರು ಕಥೆ ಹೇಳುತ್ತವೆ. ಜೊತೆಗೆ ಇತಿಹಾಸವನ್ನು ಮತ್ತೆ ನೆನಪಿಸುತ್ತವೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಎಂಟು ಬಾರಿ ಅಂಬಾರಿಯ ಮೂಲಕ ದಸರಾದಲ್ಲಿ ಭಾಗವಹಿಸಿದ್ದ ಅರ್ಜುನ ಆನೆಯ ನೆನಪು ಮನದಲ್ಲಿ ಮತ್ತೆ ಮರುಕಳಿಸುವಂತೆ ಮಾಡುವಂತಹ ವಿಶೇಷ ಪ್ರದರ್ಶನ ಹಲವರ
ಗಮನಸೆಳೆಯುತ್ತದೆ. ಅಲ್ಲಿ ಅರ್ಜುನ ಆನೆಯ ಕಾಡಿನ ಹಾಗೂ ನಾಡಿನ ಹಲವು ಅಪರೂಪದ ಚಿತ್ರಣ ಸಂಗ್ರಹ ಯೋಗ್ಯವಾಗಿದೆ.
ಅಲ್ಲದೇ ಬಾಬಾ ಸಾಹೇಬ್ ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ಮಹಾರಾಣಿ ವಾಣಿವಿಲಾಸ ಸನ್ನಿಧಾನ, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಗಣ್ಯರ ಕಲ್ಲಂಗಡಿ ಹಣ್ಣಿನಿಂದ ತಯಾರಿಸಿದ ಭಾವಚಿತ್ರ.

ಮುಂದುವರೆದಂತೆ ಸೆಲ್ಫಿ ಪಾಯಿಂಟ್ ಗಳ ಹಲವು ತಾಣಗಳು ಚಿಕ್ಕ ಮತ್ತು ದೊಡ್ಡದಾದ ಎರಡು ಮಾದರಿಯ ಬಟರ್ಫ್ಲೈ ಆಕೃತಿಯ ಮುಂದೆ ಜನಜಂಗುಳಿಯೋ ಜನಜಂಗುಳಿ. ಅಲ್ಲದೆ ಹಾರ್ಟ್ ಮಾದರಿಯ ಸೆಲ್ಫಿ ಪಾಯಿಂಟ್ ಛೋಟಾ ಭೀಮ್ ಗ್ರಾಂಡ್, ಮೈಸೂರು ಲೋಗೋ, ಪೋಕಿಮಾನ್, ಸೈಡರ್ ಮ್ಯಾನ್, ಡಾಲ್ಫಿನ್, ಅಣಬೆ ಆಕೃತಿಗಳು ಪುಟಾಣಿಗಳ ಮನಸೆಳೆಯುತ್ತವೆ.
ಇವುಗಳೆಲ್ಲದರ ಜೊತೆಗೆ 25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂ ಕುಂಡಗಳು, ಬೋನ್ಸಾಯಿ ಗಿಡಗಳು, 30ಕ್ಕೂ ಹೆಚ್ಚು ವಿವಿಧ ಜಾತಿಯ ಹೂ ಗಿಡಗಳು. ಹೀಗೆ ಎಲ್ಲೆಲ್ಲಿ ನೋಡಿದರೂ ಹೂಗಳು.
ಒಂದಲ್ಲ ಒಂದು ರೀತಿಯಲ್ಲಿ ಒತ್ತಡದ ಜೀವನ ದಿಂದ ಬಸವಳಿದಿದ್ದ ಎಲ್ಲರ ಮನಕ್ಕೆ ತಂಪಾದ ತಂಗಾಳಿಯಲ್ಲಿ ಮುದ ನೀಡುತ್ತವೆ.
ಇವೆಲ್ಲ ಒಂದೆಡೆಯಾದರೆ ಈ ಹೂಗಳ ಲೋಕದ ಅನತಿ ದೂರದಲ್ಲಿರುವ ಅರಮನೆಯ ಮುಂದೆ ಒಂದು ಸಾಂಸ್ಕೃತಿಕ ಲೋಕದ ದರ್ಶನವಾಗುತ್ತದೆ!. ಅಲ್ಲಿ ಪ್ರತಿದಿನ ಸಂಜೆ ಅನೇಕ ಗಾಯಕ- ಗಾಯಕಿಯರಿಂದ ಸುಗಮ ಸಂಗೀತ, ಚಿತ್ರಗೀತೆಗಳ ಸುಗ್ಗಿ !.

ಈಗಾಗಲೇ ಮನು, ಹೇಮಂತ್, ಶಮಿತಾ ಮಲ್ನಾಡ್ ಕಾರ್ಯಕ್ರಮ ನೀಡಿದ್ದಾರೆ. ಜೊತೆಗೆ ಎಂಡಿ ಪಲ್ಲವಿ ತಂಡದಿಂದ ಸುಗಮ ಸಂಗೀತ. ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಸಂಜೆಯಲ್ಲಿ ವಿಹರಿಸಿ ಮೈಮರೆಯುವ ವಾತಾವರಣ ಅರಮನೆಯ ಆವರಣದಲ್ಲಿ ಸೃಷ್ಟಿಯಾಗಿದೆ.
ಇನ್ನು ಅಂತಿಮವಾಗಿ ಹೇಳುವುದಾದರೆ ಹೊಸ ವರ್ಷ ಆಚರಣೆಯ ಪ್ರಯುಕ್ತ ವಿವಿಧ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ದರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿದೆ. ಕಾರ್ಯಕ್ರಮ 31ರ ರಾತ್ರಿ 12 ಗಂಟೆಯಿಂದ 12: 15ರವರೆಗೆ ನಡೆಯುತ್ತದೆ.
ಪ್ರತಿದಿನವೂ ಸಂಜೆ ಅರಮನೆಯಲ್ಲಿ ವಿದ್ಯುತ್ ದೀಪಲಂಕಾರ ವಿರುತ್ತದೆ. ಒಟ್ಟಿನಲ್ಲಿ ಕಳೆದ ತಿಂಗಳು ದಸರಾ ಮುಗಿದಿದ್ದರೂ ಕೂಡ ದಸರಾದ ಮಾದರಿಯನ್ನೇ ಹೋಲುವಂತಹ ಮಾಗಿ ಉತ್ಸವದ ಫಲಪುಷ್ಪ ಪ್ರದರ್ಶನದ ಈ ಕಾರ್ಯಕ್ರಮ ಹೊಸ ವರ್ಷದ ಅಂಚಿನಲ್ಲಿರುವ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಮೈಮನಗಳಿಗೆ ಮುದ ನೀಡುತ್ತದೆ.
ಈ ತಿಂಗಳ 31ನೇ ದಿನಾಂಕದವರೆಗೆ ಈ ಮಾಗಿ ಉತ್ಸವ ಅರಮನೆಯ ಆವರಣದಲ್ಲಿ ನಡೆಯಲಿದೆ.
-ಕಾಳಿಹುಂಡಿ ಶಿವಕುಮಾರ್, ಮೈಸೂರು.