ಚಾಮರಾಜನಗರ: ಅಸಂಘಟಿತ ವಲಯ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ನೋಂದಾಯಿಸಿಕೊಳ್ಳುವಂತೆ ಕಾರ್ಮಿಕ ಇಲಾಖೆ ಮನವಿ ಮಾಡಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಸಂಗ್ರಹಿಸಲು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು, ಸದರಿ ತಂತ್ರಾಂಶಕ್ಕೆ ಆಗಸ್ಟ್ ೨೬ರಂದು ಚಾಲನೆ ನೀಡಲಾಗಿದೆ. ಈ ಪೋರ್ಟಲ್ ನಲ್ಲಿ ಸುಮಾರು ೩೭೯ ವರ್ಗಗಳ ಅಸಂಘಟಿತ ಕಾರ್ಮಿಕರ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸದರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಅಸಂಘಟಿತ ವರ್ಗದ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದು.
ನೋಂದಣಿಯಾದ ಕಾರ್ಮಿಕರಿಗೆ ೨ ಲಕ್ಷ ವರೆಗಿನ ಉಚಿತ ವಿಮೆ ಹಾಗೂ ೨ ಲಕ್ಷ ರೂ. ವರೆಗೆ ಉಚಿತ ಆರೋಗ್ಯ ಸೌಲಭ್ಯ ಸಿಗಲಿದೆ. ಕಾರ್ಮಿಕ ಇಲಾಖೆಯಿಂದ ದೊರೆಯುವ ಶೈಕ್ಷಣಿಕ ಸಹಾಯಧನ, ಉಚಿತ ಸೈಕಲ್ ಮತ್ತು ಹೊಲಿಗೆ ಯಂತ್ರ ಪಡೆಯಲು ಅವಕಾಶವಿದೆ. ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಬಹುದಾಗಿದೆ. ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯಕವಾಗಲಿದೆ.
ಇ-ಶ್ರಮ್ ಯೋಜನೆಯಡಿ ನೋಂದಣಿಗೆ ೧೮ ರಿಂದ ೫೯ರ ವಯೋಮಾನದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯ ನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.
ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಪುಸ್ತಕ, ನಾಮ ನಿರ್ದೇಶಿತರ ಹೆಸರು ಮತ್ತು ಜನ್ಮದಿನಾಂಕದ ಅವಶ್ಯಕ ದಾಖಲಾತಿಗಳನ್ನು ನೀಡಬೇಕು.
ಇ-ಶ್ರಮ್ ಪೋರ್ಟಲ್ www.eshram.gov.in ಸ್ವಯಂ ನೋಂದಣಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್ಸಿ) ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಉಚಿತವಾಗಿದ್ದು, ಯಶಸ್ವಿ ನೋಂದಣಿ ನಂತರ ಫಲಾನುಭವಿಗಳು ಸ್ಥಳದಲ್ಲೇ ಗುರುತಿನ ಚೀಟಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ೧೫೫೨೧೪, ಇ-ಶ್ರಮ್ ಸಹಾಯವಾಣಿ ೧೪೪೩೪ ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿ, ಹಿರಿಯ/ಕಾರ್ಮಿಕ ನಿರೀಕ್ಷಕರ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.