ಕಡ್ಲೆಪುರಿಯೆಂಬ ಒಪ್ಪೊತ್ತಿನ ಊಟ…!

✍️ಜಿ.ಎಂ. ರೈಟಪ್ಸ್…

ಬಹುಶಃ ತೊಂಬತ್ತರ ಕಾಲಘಟ್ಟ ಅಥವಾ ಅದಕ್ಕೂ ಹಿಂದಿನ ತಲೆಮಾರಿನ ಜನರಿಗೆ ಈ ಕಡ್ಲೆಪುರಿ ಅಥವಾ ಕಳ್ಳಪುರಿ ಅತ್ಯಂತ ಪ್ರಿಯವಾದ ಹಾಗೂ ಕಡಿಮೆ ಖರ್ಚಿನಲ್ಲಿ ಹೊಟ್ಟೆ ಹಸಿವನ್ನು ಮೆತ್ತಗೆ ಮಾಡಬಲ್ಲ ತಿನಿಸಾಗಿತ್ತು. ಇಂದು ಇದು ಹೆಚ್ಚಿನ ಮಂದಿಗೆ ಟೈಂಪಾಸ್ ತಿನಿಸಾದರೆ ಆ ಕಾಲಕ್ಕೆ ಅದೆಷ್ಟೋ ಜನರಿಗೆ ಒಂದೊತ್ತಿನ ಊಟವೂ ಆಗಿತ್ತು!

ಅದು 90 ರ ದಶಕ. ನಾವಿನ್ನೂ ಬಾಲ್ಯದಲ್ಲಿದ್ದ ಕಾಲ. ಬೆಳಗಿನ ಉಪಹಾರ ಅಂದ್ರೇನು ಅಂತಾನೆ ಗೊತ್ತಿರಲಿಲ್ಲ. ಇಡ್ಲಿ, ದೋಸೆ ಕಾಣಬೇಕಾದರೆ ಯುಗಾದಿ ಹಾಗೂ ದೀಪಾವಳಿ ಬರಬೇಕಿತ್ತು. ಇಲ್ಲಂದ್ರೆ ಹುಷಾರಿಲ್ಲ ಎಂದು ನಾಟಕ ಮಾಡ್ಕೊಂಡು ಮಲ್ಕೊಂಡ್ರೆ ಒಂದು ರೂಪಾಯಿಗೆ ನಾಲ್ಕು ಇಡ್ಲಿ ತಂದು ಕೊಡ್ತಾ ಇದ್ರು ಮನೆಯಲ್ಲಿ. ಇನ್ನು ಉಪ್ಪಿಟ್ಟು ಕೇಸರಿ ಬಾತು ವರ್ಷಕ್ಕೊಮ್ಮೆ ಅಥವಾ ಅದಕ್ಕಿಂತಲೂ ಅಪರೂಪ ಇದ್ದಿರಬಹುದು. ಹೀಗಿರುವಾಗ ರಾತ್ರಿ ಅಡುಗೆಗೆ ಮಾಡಲಾದ ರಾಗಿ ಮುದ್ದೆಯೇ ಎಷ್ಟೋ ದಿನ ಬೆಳಗಿನ ಉಪಹಾರವಾಗಿರುತ್ತಿತ್ತು!!

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಮನೆಯ ಬೆಳಗಿನ ತಿಂಡಿ ಅಂದ್ರೆ ಇದೇ ಕಡ್ಲೆಪುರಿ, ಬಿಸಿಯಾದ ಟೀ. ಎರಡು ಲೋಟ ಟೀ ಕುಡಿದು ಒಂದು ಬೊಗಸೆ ಕಡ್ಲೆಪುರಿ ಮುಕ್ಕಿದರೆ ಬೆಳಗಿನ ಉಪಹಾರ ಶಾಸ್ತ್ರ ಮುಗೀತಾ ಇತ್ತು. ಒಂದು ದೊಗಳೆ ಬ್ಯಾಗ್ ನೇತಾಕ್ಕೊಂಡ್ ಸ್ಕೂಲಿಗೆ ಹೋಗ್ತಾ ಇದ್ವಿ. ಈಗಿನಂತೆ ಶಾಲೆಗಳಲ್ಲಿ ಆಗ ಮದ್ಯಾಹ್ನದ ಬಿಸಿಯೂಟದ ಯೋಜನೆ ಇರಲಿಲ್ಲ. ಆಗೇನಿದ್ರೂ ಕಡ್ಲೆ ಹಿಟ್ಟಿನ ಉಂಡೆ ಕೊಡೋರು. ಕೆಲವೊಮ್ಮೆ ಅದನ್ನೂ ಅರ್ಧಂಬರ್ಧ ಕಲಸಿ ಕೊಡೋರು. ಇದರಿಂದಾಗಿ ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳೋದು. ಆ ವಿಚಾರದಲ್ಲಿ ಈಗಿನ ಮಕ್ಕಳು ಮಹಾನ್ ಪುಣ್ಯವಂತ್ರು ಬಿಡಿ.

ಹ್ಞಾಂ, ಮತ್ತೆ ಕಡ್ಲೆಪುರಿ ವಿಚಾರಕ್ಕೆ ಬರ್ತೀನಿ. ಹೇಗೋ ಕಷ್ಟಪಟ್ಟು ಪ್ರೌಢಶಾಲೆ ಶಿಕ್ಷಣ ಮುಗಿಸಿ ಪಿಯುಸಿ ಕಲಿಯಲು ಯಳಂದೂರು ಪಟ್ಟಣಕ್ಕೆ ಸೇರ್ಕೊಂಡ್ವಲ್ಲ, ಆ ಸಂದರ್ಭಕ್ಕೆ ಮನೆಗಳಲ್ಲಿ ಊಟ, ತಿಂಡಿ ವಿಚಾರವಾಗಿ ಸ್ವಲ್ಪ ಸುಧಾರಣೆಯಾಗಿತ್ತು. ಆದರೆ ದಿನವೂ ಹೋಗುವಾಗ ಎಂಟು, ಬರುವಾಗ ಎಂಟು ಕಿ.ಮೀ ಬೈಸಿಕಲ್ ತುಳಿದು ಹೈರಾಣಾಗಿ ಬಿಡ್ತಾ ಇದ್ವಿ. ಬೆಳಿಗ್ಗೆ 8 ರಿಂದ 11.30 ರವರೆಗಿದ್ದ ಕಾಲೇಜು ಟೈಮಿಂಗ್ ನಲ್ಲಿ ಬದಲಾವಣೆ ಆಯಿತು. ಬೆಳಿಗ್ಗೆ 10 ರಿಂದ ಮದ್ಯಾಹ್ನ 2 ಗಂಟೆವರೆಗೆ ತರಗತಿಗಳು ನಡೆಯುವಂತಾಯಿತು. ಆಗ ನಮ್ಮೂರು ಗೌಡಹಳ್ಳಿಗೆ ಬೆಳಿಗ್ಗೆ 8.45 ಕ್ಕೆ ಮಹದೇಶ್ವರ ಬಸ್ ಬರ್ತಾ ಇತ್ತು. ಅದರಲ್ಲಿ ಹೊರಟರೆ 9.30 ಕ್ಕೆ ಯಳಂದೂರು ತಲುಪ್ತಾ ಇದ್ವಿ, ತರಗತಿಗೆ ಹೋಗಲು ಸರಿಯಾಗುತ್ತಿತ್ತು. ಆದರೆ ಮದ್ಯಾಹ್ನ 2 ಗಂಟೆಗೆ ತರಗತಿ ಮುಗಿದರೆ 4 ಗಂಟೆವರೆಗೆ ಯಾವುದೇ ಬಸ್ಸುಗಳು ಇರ್ತಾ ಇರಲಿಲ್ಲ. ಇದೊಂದೇ ನೋಡಿ ನಮಗೆ ತಲೆನೋವಾಗಿದ್ದು.

ಮನೆಯಲ್ಲಿ ದಿನವೊಂದಕ್ಕೆ ಬಸ್ ಚಾರ್ಜ್ ಗೆಂದು ಕೊಡ್ತಾ ಇದ್ದಿದ್ದು 5 ರೂಪಾಯಿ. ಅದರಲ್ಲಿ ನಾಲ್ಕು ರೂಪಾಯಿ ಬಸ್ ಚಾರ್ಜ್ ಗೆಂದು ಖರ್ಚಾದರೆ ಇನ್ನು ಒಂದು ರೂ. ಉಳಿತಾ ಇತ್ತು. ಆ ಒಂದು ರೂಪಾಯಿನಲ್ಲಿ ಒಂದು ಬನ್ ತಿಂದು ನೀರು ಕುಡಿದರೆ ಮಧ್ಯಾಹ್ನದ ಊಟದ ಶಾಸ್ತ್ರ ಮುಗೀತಾ ಇತ್ತು. ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ರೆ ಎಲ್ಲರೂ ಒಂದೊಂದು ರೂಪಾಯಿ ಶೇರ್ ಹಾಕ್ತಾ ಇದ್ವಿ. ಆ ಹಣದಲ್ಲಿ ಯಳಂದೂರಿನ ಚಂದ್ರಮೌಳಿ ಅಂಗಡಿಯಲ್ಲಿ ಕಡ್ಲೆಪುರಿ ತಗೊಂಡು ಜಹಗೀರ್ದಾರ್ ಬಂಗಲೆಯ ಟೆರೆಸ್ ಅಥವಾ ಬಳೆಮಂಟಪದ ಮರಗಳ ಕೆಳಗೆ ಕುಳಿತು ಕಡ್ಲೆಪುರಿ ತಿಂದು ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡ ದಿನಗಳಿಗೆ ಲೆಕ್ಕವಿಲ್ಲ. ಅದಾದ ನಂತರವಾದರೂ ಕಡ್ಲೆಪುರಿ ನಮಗೆ ಬರೀ ಟೈಂಪಾಸ್ ತಿನಿಸಾಗಲಿಲ್ಲ. ಬದಲಿಗೆ ಪದವಿ ಓದುವಾಗ, ಸುತ್ತೂರಿನಲ್ಲಿ ಶಿಕ್ಷಕ ತರಬೇತಿಯಲ್ಲಿದ್ದಾಗಲೂ ರೂಮಿನಲ್ಲಿ ಅಡುಗೆ ಮಾಡದ ಅದೆಷ್ಟೋ ದಿನಗಳಲ್ಲಿ ಈ ಕಡ್ಲೆಪುರಿ ಹೊಟ್ಟೆ ತುಂಬಿಸಿದ್ದನ್ನು ಮರೆಯುವಂತಿಲ್ಲ.

2018 ರಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ನಡೆದ ಘನಘೋರ ದುರಂತವಾದ ವಿಷಪ್ರಸಾದ ಪ್ರಕರಣ ಸಂದರ್ಭದಲ್ಲಿ ವಾರಗಟ್ಟಲೇ ಸುದ್ದಿಗಾಗಿ ಅಲ್ಲೇ ಇರಬೇಕಿತ್ತು. ಆ ಸಂದರ್ಭದಲ್ಲಿ ಮಾರ್ಟಳ್ಳಿಯ ಹೋಟೆಲ್ ಗಳಲ್ಲೂ ಊಟ ಸಿಗದೇ ಚಿಲ್ಲರೆ ಅಂಗಡಿಗಳಲ್ಲಿ ಇರುತ್ತಿದ್ದ ಇದೇ ಕಡ್ಲೆಪುರಿ ನಮ್ಮ ಹಸಿವನ್ನು ನೀಗಿಸಿದ್ದು ಉಂಟು. ಇಂದು ಪ್ರತಿದಿನವೂ ಬಗೆಬಗೆಯಾದ ಮೃಷ್ಟಾನ್ನ ತಿನ್ನುತ್ತಿದ್ದರೂ ವಾರದಲ್ಲಿ ಒಮ್ಮೆಯಾದರೂ ಬಾಯಿ ರುಚಿಗಾಗಿ ಈ ಕಡ್ಲೆಪುರಿ ತಿನ್ನಬೇಕೆನಿಸುತ್ತದೆ. ದಕ್ಷಿಣದ ಜಿಲ್ಲೆಗಳಲ್ಲಿ ನಿತ್ಯವೂ ಚುರುಮುರಿ ಹೆಸರಿನಲ್ಲಿ ಕಡ್ಲೆಪುರಿ ಬಾಯಿರುಚಿ ತಣಿಸುತ್ತಿದ್ದರೆ, ಉತ್ತರದ ಜಿಲ್ಲೆಗಳಲ್ಲಿ ಮಂಡಕ್ಕಿ ಮಿರ್ಚಿ ಹೆಸರಿನಲ್ಲಿ ಅಲ್ಲಿನ ಜನಜೀವನದ ನಿತ್ಯದ ತಿನಿಸಾಗಿದೆ.

ಒಟ್ನಲ್ಲಿ ಶುಕ್ರವಾರ ಬಂತೆಂದರೆ ಶಾಲೆಗಳಲ್ಲಿ ಸರಸ್ವತಿ ಫೋಟೋ ಗೆ ಪೂಜೆ ಮಾಡಿ ಕೊಡುತ್ತಿದ್ದ ಕಡ್ಲೆಪುರಿ, ಊರುಕೇರಿಗಳ ದೇವಸ್ಥಾನಗಳಲ್ಲಿ ಫಲಾರದ ಹೆಸರಿನಲ್ಲಿ ಕೊಡುತ್ತಿದ್ದ ಕಡ್ಲೆಪುರಿ ತಾತ್ಕಾಲಿಕವಾಗಿ ಹಸಿವು ಶಮನ ಮಾಡಿದ್ದನ್ನ ಯಾರೂ ಮರೆಯುವಂತಿಲ್ಲ. ಸರ್ಕಾರಗಳು ಕೊಡುತ್ತಿರುವ ಅನ್ನಭಾಗ್ಯದಿಂದಾಗಿ ಹಸಿವಿನ ಸಮಸ್ಯೆ ಗ್ರಾಮೀಣ ಭಾಗದಲ್ಲಿ ಕಡಿಮೆ ಆಗಿರುವುದರಿಂದ ಬೆಳಗಿನ ತಿಂಡಿಯ ಜವಾಬ್ದಾರಿಯಿಂದ ಕಡ್ಲೆಪುರಿ ನುಣುಚಿಕೊಂಡಿರುವುದು ಸುಳ್ಳಲ್ಲ ಅಲ್ವ?
✍️ ಗೌಡಹಳ್ಳಿ ಮಹೇಶ್

Leave a Reply

Your email address will not be published. Required fields are marked *